ಜಿಲ್ಲಾ ಉಸ್ತುವಾರಿ ಅಸಮಾಧಾನದ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷರನ್ನು ಭೇಟಿ ಮಾಡಿದ ಸಚಿವ ಆನಂದ್ಸಿಂಗ್
ಬೆಂಗಳೂರು, ಜ. 31: ಜಿಲ್ಲಾ ಉಸ್ತುವಾರಿಗಳ ಖಾತೆ ಹಂಚಿಕೆ ಬೆನ್ನಲ್ಲೇ ಸರ್ಕಾರದ ಹಲವು ಸಚಿವರಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ಈ ಮಧ್ಯೆ ಪ್ರವಾಸೋದ್ಯ ಸಚಿವ ಆನಂದ್ ಸಿಂಗ್ ಅವರು ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಬಿಜೆಪಿಯ ಕೆಲವು ಶಾಸಕರು ಸಂಪರ್ಕದಲ್ಲಿದ್ದಾರೆ. ಮುಂದಿನ ಚುನಾವಣೆ ವೇಳೆಗೆ ಕಾಂಗ್ರೆಸ್ ಸೇರುತ್ತಾರೆ ಎಂದು ಡಿ.ಕೆ. ಶಿವಕುಮಾರ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಬಿಜೆಪಿ, ಕಾಂಗ್ರೆಸ್ ಸಂಪರ್ಕದಲ್ಲಿರುವ ಶಾಸಕರ ಹೆಸರು ಹೇಳಲಿ ಎಂದು ಸವಾಲು ಹಾಕಿತ್ತು. ಈ ಮಧ್ಯೆ ರಾಜ್ಯ ಸಂಪುಟದ ಸಚಿವರೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಿರುವುದು ಬಿಜೆಪಿಯೊಳಗೆ ಎಲ್ಲವೂ ಸರಿಯಿಲ್ಲ ಎಂಬ ಸಂದೇಶವನ್ನು ನೀಡಿದಂತಾಗಿದೆ.
ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರದ ನಿವಾಸಕ್ಕೆ ಖಾಸಗಿ ಕಾರಿನಲ್ಲಿ ಬಂದು ಭೇಟಿ ಮಾಡಿದ ಸಚಿವ ಆನಂದ್ ಸಿಂಗ್ ಕೆಲ ಕಾಲ ಮಾತುಕತೆ ನಡೆಸಿದರು. ಇದಕ್ಕೆ ರಾಜಕೀಯ ಬಣ್ಣ ಕಲ್ಪಿಸಬೇಡಿ ಎಂದು ಉಭಯ ನಾಯಕರು ಹೇಳಿದರೂ ಸಹ, ಸುಮಾರು ಅರ್ಧ ತಾಸಿಗೂ ಹೆಚ್ಚಿನ ಕಾಲ ನಡೆದ ಮಾತುಕತೆ ಏನಿರಬಹುದು ಎಂದು ಹಲವರಲ್ಲಿ ಪ್ರಶ್ನೆ ಮೂಡಿಸಿರುವುದು ಸಹಜ.
ಸಚಿವರಲ್ಲಿ ಅಸಮಾಧಾನ:
ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕದ ನಂತರ ಸರ್ಕಾರದಲ್ಲಿ ಸಾಕಷ್ಟು ಅಸಮಾಧಾನ ಹೊಗೆಯಾಡುತ್ತಿದೆ. ಕೆಲವುರ ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದ್ದಾರೆ. ಸಚಿವರಾದ ಆರ್. ಅಶೋಕ್, ಜೆ.ಸಿ. ಮಾಧುಸ್ವಾಮಿ ತಮಗೆ ಉಸ್ತುವಾರಿ ಸಿಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ವಿಜಯನಗರ ಜಿಲ್ಲೆಯ ರಚನೆಗೆ ಶ್ರಮಿಸಿದ ಸಚಿವ ಆನಂದ್ ಸಿಂಗ್ ಅವರಿಗೆ ಕೊಪ್ಪಳ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ. ಈ ಬಗ್ಗೆ ಬಹಿರಂಗವಾಗಿ ಯಾವುದೇ ಅಸಮಾಧಾನ ಇಲ್ಲ ಎಂದು ಬಹಿರಂಗವಾಗಿ ಹೇಳಿಕೊಂಡರೂ ಸಹ ವಿಜಯನಗರ ಜಿಲ್ಲೆಯ ಉಸ್ತುವಾರಿ ಕೊಡದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಅಲ್ಲದೆ, ಕೊಪ್ಪಳದಲ್ಲಿ ಮಾತನಾಡಿದ್ದ ಆನಂದ್ ಸಿಂಗ್, 'ಕೊಪ್ಪಳ ಜಿಲ್ಲೆಯ ಉಸ್ತುವಾರಿ ನೀಡಿರುವುದಕ್ಕೆ ನನಗೆ ಬೇಸರ ಇಲ್ಲ. ಒಂದು ವೇಳೆ ಯಾರಿಗಾದರೂ ಅನುಮಾನ ಇದ್ದವರು ನನ್ನ ಮಂಪರು ಪರೀಕ್ಷೆ ಮಾಡಬಹುದು' ಎಂದು ಹೇಳಿದ್ದರು. ಅಲ್ಲದೆ, ಬಿಜೆಪಿಯಿಂದ ಕಾಂಗ್ರೆಸ್ ಸೇರುವವರು ಯಾರೂ ಇಲ್ಲ, ಕಾಂಗ್ರೆಸ್ನಿಂದಲೇ ಬಿಜೆಪಿ ಸೇರುವವರು ಇದ್ದಾರೆ ಎಂದು ಹೇಳಿಕೆ ನೀಡಿದ್ದರು. ಹೀಗೆ ಮಾತನಾಡಿದ್ದ ಆನಂದ್ ಸಿಂಗ್ ಈಗ ಅವರೇ ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ಆನಂದ್ ಸಿಂಗ್ ಭೇಟಿ ಹಿಂದೆ ರಾಜಕೀಯ ಇಲ್ಲ:
ಸಚಿವ ಆನಂದ್ ಸಿಂಗ್ ಅವರ ಭೇಟಿ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, 'ನಾನು ಬಳ್ಳಾರಿ ಉಸ್ತುವಾರಿ ಸಚಿವನಾಗಿದ್ದಾಗ ತುಂಗಾರತಿ ಮಾಡಲಾಗಿತ್ತು. ಅದೇ ರೀತಿ ಮೇಕೆದಾಟು ಸಂಗಮದಲ್ಲಿ ಕಾವೇರಿ ಆರತಿ ಮಾಡಬೇಕು, ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆಯಿಂದ ಮಾಡಲು ಸಾಧ್ಯವೇ ಎಂದು ನಾನು ಸಚಿವರಲ್ಲಿ ಮನವಿ ಮಾಡಿದ್ದೇನೆ. ಅವರು ಇದಕ್ಕಾಗಿ ಒಂದು ತಂಡ ಕಳುಹಿಸಿಕೊಡುವುದಾಗಿ ಹೇಳಿದ್ದಾರೆ. ನಮ್ಮಲ್ಲಿ ಪ್ರವಾಸೋದ್ಯಮಕ್ಕೆ ಸಾಕಷ್ಟು ಪ್ರೋತ್ಸಾಹ ನೀಡಬೇಕಾಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಚರ್ಚಿಸಿದ್ದೇನೆ. ಅವರು ಭೇಟಿಯಾಗಿರುವುದಕ್ಕೆ ಬೇರೆ ಯಾವ ರೆಕ್ಕೆ-ಪುಕ್ಕವೂ ಬೇಡ' ಎಂದು ಹೇಳಿದರು.
ಅವರು ಸಚಿವರಾಗಿದ್ದು, ರಾಜಕಾರಣ ಮಾಡಬೇಕಾದರೆ ನಮ್ಮ ಮನೆಗೆ ಬರುವ ಅಗತ್ಯವಿರಲಿಲ್ಲ. ರಾಜಕಾರಣ ಮಾಡುವುದಾದರೆ ಗೆಸ್ಟ್ ಹೌಸ್, ಹೊಟೇಲ್ ಗಳಲ್ಲಿ ಮಾಡುತ್ತೇವೆ. ಮನೆಯಲ್ಲಿ ರಾಜಕಾರಣ ಮಾಡುವುದಿಲ್ಲ. ಈ ಒಂದು ಸಾಮಾನ್ಯ ಪರಿಜ್ಞಾನ ಎಲ್ಲರಿಗೂ ಇರಬೇಕು. ಅವರು ಸಚಿವರಾಗಿದ್ದರೂ ಧೈರ್ಯವಾಗಿ ವಿರೋಧ ಪಕ್ಷದ ನಾಯಕರೊಬ್ಬರ ಮನೆಗೆ ಬರುತ್ತಾರೆ ಎಂದರೆ ಅದರಲ್ಲಿ ರಾಜಕಾರಣ ಹುಡುಕಲು ಬರುವುದಿಲ್ಲ. ನಾನು ಈ ಭಾಗದ ನಾಯಕನಾಗಿರುವ ಹಿನ್ನೆಲೆಯಲ್ಲಿ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಏನೆಲ್ಲಾ ಅಗತ್ಯವಿದೆ ಎಂಬುದನ್ನು ಚರ್ಚೆ ಮಾಡಿ ತಿಳಿಯಲು ಬಂದಿದ್ದಾರೆ' ಎಂದು ಸ್ಪಷ್ಟಪಡಿಸಿದರು.