ರಾಜೀನಾಮೆ ಕೊಟ್ಟ ಬಿಜೆಪಿ ಪದಾಧಿಕಾರಿಗಳು ಏನಂದ್ರು ಗೊತ್ತಾ?
ಕುಂದಾಪುರ ಏಪ್ರಿಲ್ 11: ಕುಂದಾಪುರದ ವಾಜಪೇಯಿ ಎಂದೇ ಪ್ರಸಿದ್ಧರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ವಿರುದ್ಧ ಮೂಲ ಬಿಜೆಪಿಗರು ತಿರುಗಿ ಬಿದ್ದಿದ್ದಾರೆ. ಬೂದಿ ಮುಚ್ಚಿದ ಕೆಂಡದಂತಿದ್ದ ಹಾಲಾಡಿ ವಿರುದ್ಧದ ಅಸಮಾಧಾನ ಇದೀಗ ಸ್ಫೋಟಗೊಂಡಿದೆ. ಭಿನ್ನಮತ ಭುಗಿಲೆದ್ದ ಕಾರಣ ಏಳು ಜನ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ.
ಬಗೆಹರಿಯದ ಒಡಕು...
ಬಿಜೆಪಿ ಮೊದಲ ಪಟ್ಟಿಯಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಟಿಕೇಟ್ ಘೋಷಣೆಯಾಗಿದ್ದು, ಇದರಿಂದ ಮೂಲ ಕಾರ್ಯಕರ್ತರಿಗೆ ಅಸಮಾಧಾನ ಉಂಟಾಗಿದೆ. ಎರಡು ದಿನಗಳ ಹಿಂದೆಯಷ್ಟೇ ನಡೆದ ಬಿಜೆಪಿ ಪರಿವರ್ತನಾ ರಾಲಿಯಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಮ್ಮುಖ ಭುಗಿಲೆದ್ದ ಬಿಜೆಪಿ ಬಣ ರಾಜಕೀಯ ದಟ್ಟವಾಗುತ್ತಿದೆ. ಶ್ರೀನಿವಾಸ ಶೆಟ್ಟಿ ಅವರ ವಿರುದ್ಧ ಮಾತನಾಡುವವರನ್ನು ಪಕ್ಷದಿಂದ ಗೇಟ್ ಪಾಸ್ ನೀಡುವೆ ಎಂಬ ಬಿಎಸ್ವೈ ಅವರ ಆದೇಶದ ನಡುವೆಯೂ ಒಡಕು ಬಗೆಹರಿದಿಲ್ಲ.
ರಾಜೀನಾಮೆ ಕೊಟ್ರು ಪದಾಧಿಕಾರಿಗಳು
ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹಾಗೂ ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್, ಸೇರಿದಂತೆ ಸತೀಶ್ ಹೆಗ್ಡೆ, ಚಂದ್ರಮೋಹನ್ ಪೂಜಾರಿ, ರವೀಂದ್ರ ದೊಡ್ಮನಿ, ವಿಟಲ್ ಪುಜಾರಿ ಮತ್ತು ಶ್ರೀನಿವಾಸ್ ಮಾರ್ಕಲಾ ಎಂಬ ಪದಾಧಿಕಾರಿಗಳು ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ನೀಡಿದ ಪದಾಧಿಕಾರಿಗಳು ಹಾಲಾಡಿ ವಿರುದ್ಧ ಕೆಲಸ ಮಾಡುವುದಾಗಿ ಘೋಷಣೆ ಸಹ ಮಾಡಿದ್ದಾರೆ. ಇದೆ ವೇಳೆ ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಅವರ ವಿರುದ್ಧ ಕಾರ್ಯಕರ್ತರು ಕಿಡಿಕಾರಿದ್ದಾರೆ. ಬಿಜೆಪಿಯಲ್ಲಿ ಪಕ್ಷ ತೊರೆದು ಬಂದವರಿಗೆ ಮಾತ್ರ ಅವಕಾಶ, ಸ್ಥಾನಮಾನದ ಹುದ್ದೆ ಸಿಗುತ್ತೆ. ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಲಾಡಿ ವರ್ಸಸ್ ಹೆಗ್ಡೆ
ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಅಭ್ಯರ್ಥಿಯಾಗಬೇಕೆಂದು ಬಹುತೇಕ ಸ್ಥಳೀಯ ಮುಖಂಡರು, ಮಂಡಲದ ಪದಾಧಿಕಾರಿಗಳ ಅಭಿಪ್ರಾಯ. ಇತ್ತೀಚೆಗಷ್ಟೇ ಶ್ರೀನಿವಾಸ ಶೆಟ್ಟಿ ಅವರು ಅಭ್ಯರ್ಥಿ ಎಂಬ ನೆಲೆಯಲ್ಲಿ ಒಂದಿಷ್ಟು ಬಿಜೆಪಿ ಕಾರ್ಯಕರ್ತರು ಕೆಲಸ ಆರಂಭಿಸಿದ್ದರೆ, ಮೂಲ ಬಿಜೆಪಿಗರು ಜಯಪ್ರಕಾಶ್ ಹೆಗ್ಡೆ ಅಭ್ಯರ್ಥಿ ಎಂದು ಮನೆ ಮನೆ ಭೇಟಿ ಆರಂಭಿಸಿ ಕುಂದಾಪುರ ಕ್ಷೇತ್ರದ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸಿದ್ದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಈ ಹಿಂದೆ ಬಿಜೆಪಿಗೆ ಸೆಡ್ಡು ಹೊಡೆದು ಪಕ್ಷೇತರರಾಗಿ ಗೆಲುವು ಸಾಧಿಸಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತೆ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.












Click it and Unblock the Notifications