ಸಿದ್ದರಾಮಯ್ಯ ಸರ್ಕಾರ ಮುಂದೆ ಹಾಕುವ ಷರತ್ತುಗಳ ಲಿಸ್ಟ್ ನೋಡಿ!
ಬೆಂಗಳೂರು, ಜೂನ್ 23: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಗಿದು ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂದಿದೆ. ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳು ಕಳೆದಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ. ಕೆ. ಶಿವಕುಮಾರ್ ಸರ್ಕಾರ ನಡೆಸುತ್ತಿದ್ದಾರೆ.
ಪ್ರತಿಪಕ್ಷ ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಟ್ವೀಟ್ ಮೂಲಕ ಟೀಕೆ ಮಾಡಿದೆ. ಅದರಲ್ಲೂ 5 ಗ್ಯಾರಂಟಿ ಯೋಜನೆಯನ್ನು ಮುಂದಿಟ್ಟುಕೊಂಡು ಟ್ವೀಟ್ ಬಾಣ ಬಿಟ್ಟಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಯಾವ-ಯಾವ ಷರತ್ತುಗಳನ್ನು ಜನರಿಗೆ ಹಾಕಲಿದೆ ಎಂದು ಪಟ್ಟಿಯನ್ನು ನೀಡಿದೆ.

ಶುಕ್ರವಾರ ಟ್ವೀಟ್ ಮಾಡಿರುವ ಬಿಜೆಪಿ, 'ಎಲ್ಲಾ ಬಸ್ಸುಗಳಲ್ಲಿ ಎಲ್ಲಾ ಮಹಿಳೆಯರಿಗೂ ಎಲ್ಲೆಡೆಗೂ ಫ್ರೀ - ಇದು ಕರ್ನಾಟಕ ಕಾಂಗ್ರೆಸ್ ಚುನಾವಣೆಗೂ ಮೊದಲು ನೀಡಿದ ಗ್ಯಾರಂಟಿ. ಆಮೇಲೆ ಒಂದೊಂದೇ ಕಂಡೀಶನ್ಸ್ ಅಪ್ಲೈ' ಎಂದು ಹೇಳುವ ಮೂಲಕ ಕಾಂಗ್ರೆಸ್ನ 'ಶಕ್ತಿ' ಯೋಜನೆಯನ್ನು ಟೀಕಿಸಿದೆ. ಸರ್ಕಾರಿ ಬಸ್ಗಳಲ್ಲಿ ಮಹಿಳೆಯರು ಉಚಿತವಾಗಿ ಸಂಚಾರ ನಡೆಸಲು ಹಾಕಿರುವ ಷರತ್ತುಗಳನ್ನು ಲೇವಡಿ ಮಾಡಿದೆ.
ಬಿಜೆಪಿ ತನ್ನ ಟ್ವೀಟ್ನಲ್ಲಿ
* ಕಂಡೀಶನ್ 1: ಐರಾವತ, ರಾಜಹಂಸ ಬಸ್ಸುಗಳಲ್ಲಿ ಫ್ರೀ ಇಲ್ಲ
* ಕಂಡೀಶನ್ 2: ಅಂತಾರಾಜ್ಯ ಮತ್ತು ಕೆಲವು ಮಾರ್ಗಗಳಲ್ಲಿ ಫ್ರೀ ಇಲ್ಲ ಎಂದು ಮತ್ತೆ ಕಂಡೀಶನ್
* ಕಂಡೀಶನ್ 3: ಶೇ.50 ಮಾತ್ರ ಮಹಿಳೆಯರಿಗೆ ಎಂಬ ಕಂಡೀಶನ್
* ಕಂಡೀಶನ್ 4: ನಂತರ ಸ್ಟಿಕ್ಕರ್ ಹಾಕಿದ ಬಸ್ಸುಗಳಲ್ಲಿ ಮಾತ್ರ ಎಂಬ ಕಂಡೀಶನ್ ಎಂದು ಲೇವಡಿ ಮಾಡಿದೆ.
ಮುಂದುವರೆದು ಮುಂದೆ @siddaramaiah ಅವರ ಸರ್ಕಾರ ಹಾಕಲಿರುವ ಕಂಡೀಶನ್ ಎಂದು ಮತ್ತೊಂದು ಪಟ್ಟಿಯನ್ನು ನೀಡಿದೆ. ಇದರಲ್ಲಿ
* ನಿಂತ ಬಸ್ಸಿನಲ್ಲಿ ಮಾತ್ರ ಉಚಿತ.
* ಎಂಜಿನ್ ಇಲ್ಲದ ಬಸ್ಸಿನಲ್ಲಿ ಮಾತ್ರ ಉಚಿತ.
* ಚಕ್ರ ಇಲ್ಲದ ಬಸ್ಸಿನಲ್ಲಿ ಮಾತ್ರ ಉಚಿತ.
* ಚಾಲಕನ ಹಿಂಬದಿ ನಾಲ್ಕು ಸೀಟುಗಳು ಮಾತ್ರ ಮಹಿಳೆಯರಿಗೆ ಉಚಿತ ಎಂದು ಟ್ವೀಟ್ ಮೂಲಕ ಟೀಕೆ ಮಾಡಿದೆ.
ಮತ್ತೊಂದು ಟ್ವೀಟ್; ಕರ್ನಾಟಕ ಬಿಜೆಪಿ ಮತ್ತೊಂದು ಟ್ವೀಟ್ನಲ್ಲಿ, 'ಜನರಿಗೆ ಗ್ಯಾರಂಟಿಗಳ ಆಸೆ ತೋರಿಸಿ ಗದ್ದುಗೆ ಏರಿದ ಸಿದ್ದರಾಮಯ್ಯ ಅವರ ಸರ್ಕಾರ, ಬಾರುಗೋಲಿನಿಂದ ಜನರಿಗೆ ತೆರಿಗೆಯ ಛಾಟಿ ಏಟು ಕೊಟ್ಟದೆ. ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ಅಣತಿಯಂತೆ ಯಾವುದೇ ಇಲಾಖೆ, ನಿಗಮಗಳನ್ನು ಬಿಡದೆ ಬೆಲೆ ಏರಿಕೆ ಮಾಡಿ ತೆರಿಗೆ ಸಂಗ್ರಹಕ್ಕೆ ಮುಂದಾಗಿದೆ. ಅವಶ್ಯಕತೆಗಿಂತ ದುಪ್ಪಟ್ಟು ತೆರಿಗೆ ಹಾಕಿ #ATMSarkara ವಸೂಲಿಗೆ ಇಳಿದಿದೆ. ಬಡವರಿಗೆ ತಿನ್ನೋಕೆ ಅನ್ನವಿರಲಿ, ಒಂದು ಹೊತ್ತಿನ ಗಂಜಿಗೂ ಪರದಾಡುವ ದಿನಗಳು ದೂರ ಉಳಿದಿಲ್ಲ..!' ಎಂದು ಹೇಳಿದೆ.
ವಿದ್ಯುತ್ ದರ ಏರಿಕೆಯ ಬಗ್ಗೆ ಬಿಜೆಪಿ ಮತ್ತೊಂದು ಟ್ವೀಟ್ ಮಾಡಿದೆ. 'ವಿದ್ಯುತ್ ದರ ಏರಿಸಿ ಎಲ್ಲರಿಗೂ ಬರೆ ಎಳೆದ #ATMSarkara ದ ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ. ರಾಜ್ಯಾದ್ಯಂತ ಉದ್ಯಮಿಗಳು ನೋವಿನಿಂದ ಪ್ರತಿಭಟಿಸಿದರೂ ಅವರ ಕಷ್ಟಗಳನ್ನು ಕೇಳುವ ವ್ಯವಧಾನ ಸಿದ್ದರಾಮಯ್ಯ ಅವರ ಸರ್ಕಾರಕ್ಕಿಲ್ಲ. ಅಧಿಕಾರಿಗಳನ್ನು ತಮ್ಮ ಕಲೆಕ್ಷನ್ ಏಜೆಂಟ್ ಎದುರು ಕೂರಿಸಿ ಸಭೆ ಮಾಡುವ ಮನೋವೃತ್ತಿಯ ಇವರಿಗೆ ಉದ್ಯಮಗಳು ಬೀಗ ಜಡಿಯುವ ಹಂತಕ್ಕೆ ಬಂದರೂ ಕಾಣುತ್ತಿಲ್ಲ. ಈ ಸರ್ವಾಧಿಕಾರಿ ಧೋರಣೆಯ ಕಾಂಗ್ರೆಸ್ ಸರ್ಕಾರದಿಂದಾಗಿ ರಾಜ್ಯಕ್ಕೆ ಉಳಿಗಾಲವಿಲ್ಲ' ಎಂದು ಬಿಜೆಪಿ ಆರೋಪಿಸಿದೆ.
ಕಾಂಗ್ರೆಸ್ ನೀಡಿರುವ 5 ಗ್ಯಾರಂಟಿ ಯೋಜನೆಗಳು, ಅನ್ನಭಾಗ್ಯ ಯೋಜನೆಯಡಿ ಕೇಂದ್ರದಿಂದ ಅಕ್ಕಿ ಪೂರೈಕೆ ಮಾಡಲು ನಿರಾಕರಣೆ, ವಿದ್ಯುತ್ ದರ ಏರಿಕೆ ಮುಂತಾದ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಮತ್ತು ಕಾಂಗ್ರೆಸ್ ಜಟಾಪಟಿ ನಡೆಸುತ್ತಿವೆ.












Click it and Unblock the Notifications