ಡಿ.ಕೆ.ಸುರೇಶ್ಗೆ ಬಿಜೆಪಿ ಮುಖಂಡರು ನೀಡಿದ್ದಾರಂತೆ ಆಫರ್
ಬೆಂಗಳೂರು, ನವೆಂಬರ್ 07: ಡಿಕೆ ಸುರೇಶ್ ಅವರು ಇಂದು ಹಠಾತ್ ಆಗಿ ಸುದ್ದಿಗೋಷ್ಠಿ ನಡೆಸಿದ್ದು, ತಮಗೆ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಬಿಜೆಪಿ ಮುಖಂಡರು ಪಕ್ಷಕ್ಕೆ ಬರುವಂತೆ ಆಮೀಷಗಳನ್ನು ಒಡ್ಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿ ಪಕ್ಷಕ್ಕೆ ಬಂದರೆ ಇಡಿ, ಸಿಬಿಐ, ಐಟಿ ಪ್ರಕರಣಗಳಿಂದ ಮುಕ್ತಿ ಕೊಡಿಸುತ್ತೇವೆ ಎಂದು ಬಿಜೆಪಿಯ ಮುಖಂಡರು ನಮ್ಮನ್ನು ಕರೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ನಾವು ಪಕ್ಕಾ ಕಾಂಗ್ರೆಸ್ಸಿಗರು ಕಾನೂನಿಗೆ ತಲೆ ಬಾಗುತ್ತೇವೆ ಆದರೆ ಪ್ರಕರಣಗಳಿಗೆ ಹೆದರಿ ಪಕ್ಷ ಬಿಡುವುದಿಲ್ಲ, ನಮ್ಮನ್ನು ಜೈಲಿಗೆ ಹಾಕಿದರೂ ಸಹ ನಾವು ಪಕ್ಷ ಬಿಡುವುದಿಲ್ಲ ಎಂದು ಡಿ.ಕೆ.ಸುರೇಶ್ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಪ್ರಬಲರಾಗಿರುವರನ್ನೇ ಸಾಮಾನ್ಯವಾಗಿ ಟಾರ್ಗೆಟ್ ಮಾಡಲಾಗುತ್ತದೆ ಹಾಗಾಗಿಯೇ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರನ್ನು ಬಿಜೆಪಿ ಟಾರ್ಗೆಟ್ ಮಾಡುತ್ತಿದೆ ಎಂದ ಅವರು ತಮ್ಮನ್ನು ಬಿಜೆಪಿಗೆ ಕರೆದ ನಾಯಕರ ಹೆಸರನ್ನು ಬಹಿರಂಗ ಪಡಿಸಲಿಲ್ಲ.

'ಡಿಕೆಶಿ ಜೈಲಿಗೆ, ಶಾಂತಾ ದೆಹಲಿಗೆ' ಎಂದಿದ್ದರು ರಾಮುಲು
'ಡಿಕೆಶಿ ಜೈಲಿಗೆ, ಶಾಂತಾ ದೆಹಲಿಗೆ' ಎಂದು ಶ್ರೀರಾಮುಲು ಹೇಳಿದ್ದರು ಇದು ಅವರ ವೈಯಕ್ತಿಕ ಹೇಳಿಕೆ ಅಲ್ಲ, ಬಿಜೆಪಿ ಮುಖಂಡರು ಅವರಿಂದ ಹೇಳಿಸಿದ ಮಾತಿದು, ರಾಜಕೀಯವಾಗಿ ನಮ್ಮನ್ನು ಹಣಿಯಲಾಗದೆ ತನಿಖಾ ಸಂಸ್ಥೆಗಳನ್ನು ಬಳಸಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಸಿಬಿಐ, ಇಡಿ ಸಂಸ್ಥೆಗಳು ಬಿಜೆಪಿಯ ಮೋರ್ಚಾ
ಸಿಬಿಐ, ಇಡಿ ಸಂಸ್ಥೆಗಳು ಬಿಜೆಪಿಯ ಮೋರ್ಚಾ ಆಗಿ ಕಾರ್ಯನಿರ್ವಹಿಸುತ್ತಿವೆ ಎಂದು ಆರೋಪಿಸಿದ ಅವರು, ಸ್ವತಂತ್ರ್ಯ ತನಿಖಾ ಸಂಸ್ಥೆಗಳನ್ನು ಬಿಜೆಪಿಯು ತಮ್ಮ ಅಡಿಯಾಳಾಗಿ ಪರಿವರ್ತಿಸಿಕೊಂಡಿದೆ ಎಂದು ಹೇಳಿದರು.

ಇಡಿ ನಿರ್ದೇಶಕರ ಭೇಟಿಗೆ ಅವಕಾಶ ಸಿಕ್ಕಿಲ್ಲ
ಇದೇ ವಿಷಯವಾಗಿ ಚರ್ಚೆ ಮಾಡಲು ನರೇಂದ್ರ ಮೋದಿ ಅವರ ಕಾಲಾವಕಾಶ ಕೇಳಿದೆವು ಅದು ದೊರಕಲಿಲ್ಲ, ಇಡಿ ನಿರ್ದೇಶಕರ ಭೇಟಿಗೆ ಕಳೆದ ಒಂದುವರೆ ತಿಂಗಳಿನಿಂದಲೂ ಯತ್ನಿಸಿದೆವು ಅವಕಾಶ ನೀಡಲಿಲ್ಲ ಅವರ ಮೇಲೆ ಯಾರ ಒತ್ತಡ ಇತ್ತೋ ಗೊತ್ತಿಲ್ಲ ಎಂದು ಅವರು ಹೇಳಿದರು.

ಹೊಸ ನಿರ್ದೇಶಕರು ಬಂದಿದ್ದಾರೆ
ಈಗ ಇಡಿಗೆ ಹೊಸ ನಿರ್ದೇಶಕರು ಬಂದಿದ್ದಾರೆ ಅವರ ಬಳಿಯೂ ಭೇಟಿಗೆ ಅವಕಾಶ ಕೇಳಲಾಗಿದೆ ಆದರೆ ಅವರು ಯಾವಾಗ ಅವಕಾಶ ನೀಡುತ್ತಾರೆಯೋ ಗೊತ್ತಿಲ್ಲ. ನಮಗೆ ಕೆಲವು ಅನುಮಾನಗಳು ಮತ್ತು ಸಮಸ್ಯೆಗಳಿವೆ ಅದನ್ನು ಅವರ ಬಳಿ ಹೇಳಿಕೊಳ್ಳಬೇಕಿದೆ ಎಂದು ಅವರು ಹೇಳಿದರು.












Click it and Unblock the Notifications