ಸಂಪುಟ ವಿಸ್ತರಣೆ ಕಿರಿಕ್ : ಮೂಲ ಬಿಜೆಪಿಗರ ಅಪಸ್ವರದ ಹಿಂದೆ ಪ್ರಭಾವಿ ಕಾಂಗ್ರೆಸ್ ಮುಖಂಡರ ಕೈವಾಡ?
ಆಪರೇಷನ್ ಕಮಲದ ಮೂಲಕ ಸರಕಾರ ರಚಿಸಿದರೆ ಅದರ ಆಫ್ಟರ್ ಎಫೆಕ್ಟ್ ಹೇಗಿರುತ್ತೆ ಎನ್ನುವುದರ ಅನುಭವ ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ಮುಖಂಡರಿಗೆ ಮತ್ತೊಮ್ಮೆ ಆಗುತ್ತಿರಬಹುದು.
ಸಂಪುಟ ರಚನೆಯ ವಿಚಾರದಲ್ಲಿ ಒಂದು ಮುಗಿದರೆ ಇನ್ನೊಂದರಂತೆ ಸಮಸ್ಯೆಗಳು ಎದುರಾಗುತ್ತಲೇ ಇದೆ. ಇದಕ್ಕೆ ಹೊಸ ಸೇರ್ಪಡೆ, ಸಿ.ಪಿ.ಯೋಗೀಶ್ವರ್ ಅವರನ್ನು ಸಂಪುಟಕ್ಕೆ ಸೇರಿಸುವ ವಿಚಾರದಲ್ಲಿ ಎದುರಾಗುತ್ತಿರುವ ವಿರೋಧ.
ಸಂಪುಟ ವಿಸ್ತರಣೆ: ಮೂಲ ಬಿಜೆಪಿಗರಲ್ಲಿ ಹತ್ತು ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ದ ಸೋತಿದ್ದ ಯೋಗೀಶ್ವರ್ ಗೆ ಸಚಿವ ಸ್ಥಾನ ನೀಡುವುದಕ್ಕೆ ಯಡಿಯೂರಪ್ಪನವರ ಆಪ್ತಬಣದಲ್ಲೇ ಗುರುತಿಸಿಕೊಂಡಿರುವ ಮುಖಂಡರಿಂದಲೇ ಅಪಸ್ವರ ಜೋರಾಗುತ್ತಿದೆ.
ಸೋತ ಯೋಗೇಶ್ವರ್ ಗೆ ಮಂತ್ರಿಗಿರಿ 'ಬಹುಮಾನ'?: ಚುನಾವಣೆ ಗೆದ್ದವರ ಗತಿಯೇನು?
ಅಥಣಿಯಲ್ಲಿ ಸೋತ ಲಕ್ಷ್ಮಣ ಸವದಿಗೆ ಉಪಮುಖ್ಯಮಂತ್ರಿ ಹುದ್ದೆ ಕೊಟ್ಟಾಗಲೇ ಬೇಸರ ವ್ಯಕ್ತಪಡಿಸಿದ್ದ ಬಿಜೆಪಿ ಮುಖಂಡರು, ಈಗ ಯೋಗೀಶ್ವರ್ ಗೆ ಸಚಿವ ಸ್ಥಾನ ಕೊಡುವುದನ್ನು ಜೀರ್ಣಿಸಿಕೊಳ್ಳಲು ತಯಾರಿಲ್ಲ. ಜೊತೆಗೆ, ಪ್ರಭಾವೀ ಕಾಂಗ್ರೆಸ್ ಮುಖಂಡರೊಬ್ಬರ ಅಣತಿಯಂತೆ ಈ ವಿರೋಧ ನಡೆಯುತ್ತಿದೆ ಎನ್ನುವ ಮಾತು ಜೋರಾಗಿ ಕೇಳಿಬರುತ್ತಿದೆ.
ಕೊನೆಯ ಕ್ಷಣದಲ್ಲಿ ಸಿ,ಪಿ.ಯೋಗೀಶ್ವರ್ ಈ ಪಟ್ಟಿಗೆ ಹೊಸದಾಗಿ ಸೇರ್ಪಡೆ
ನೂತನ ಶಾಸಕರ ಹೊರತಾಗಿ, ಮೂಲ ಬಿಜೆಪಿಗರಲ್ಲಿ ಕನಿಷ್ಠ ಎಂಟು ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಕೊನೆಯ ಕ್ಷಣದಲ್ಲಿ ಸಿ,ಪಿ.ಯೋಗೀಶ್ವರ್ ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ದೆಹಲಿಯಲ್ಲಿ ಸಿಎಂ ಅವರನ್ನು ಭೇಟಿಯಾದಾಗಲೇ ಯೋಗೀಶ್ವರ್ ಕೂಡಾ ಆಕಾಂಕ್ಷಿ ಎನ್ನುವುದು ಮೂಲ ಬಿಜೆಪಿಗರಿಗೆ ಅರಿವಾಗಿದ್ದು.
ರೇಣುಕಾಚಾರ್ಯ, ರಾಜುಗೌಡ ಶೆರಿ, ಹತ್ತು ಶಾಸಕರು ಪ್ರತ್ಯೇಕ ಸಭೆ
ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬರಲು ಕಾರಣ ಯೋಗೀಶ್ವರ್ ಕೂಡಾ ಒಬ್ಬರು. ಹಾಗಾಗಿ, ಎಷ್ಟೇ ವಿರೋಧ ಎದುರಾದರೂ, ಅವರು ಸಂಪುಟಕ್ಕೆ ಸೇರುವುದು ಖಚಿತ ಎನ್ನುವ ವೇಳೆಯಲ್ಲಿ ಸಿಎಂ ಆಪ್ತವಲಯದ ರೇಣುಕಾಚಾರ್ಯ, ರಾಜುಗೌಡ ಮುಂತಾದವರು ತಿರುಗಿಬಿದ್ದಿದ್ದಾರೆ. ಹತ್ತು ಶಾಸಕರು ಪ್ರತ್ಯೇಕ ಸಭೆಯನ್ನೂ ನಡೆಸಿದ್ದಾರೆ. ಈ ಬೆಳವಣಿಗೆಯ ಹಿಂದೆ, ರಾಜ್ಯದ ಪ್ರಭಾವೀ ಕಾಂಗ್ರೆಸ್ ಮುಖಂಡರೊಬ್ಬರಿದ್ದಾರೆ ಎನ್ನುವ ಮಾತು ಚಾಲ್ತಿಯಲ್ಲಿದೆ.
ಯೋಗೀಶ್ವರ್ ಸೇರ್ಪಡೆ ವಿರುದ್ದ ಬಿಜೆಪಿಗರನ್ನು ಎತ್ತಿ ಕಟ್ಟುತ್ತಿರುವ ಕಾಂಗ್ರೆಸ್ ಮುಖಂಡ
ರಾಜಕೀಯ ನಿಂತ ನೀರಲ್ಲ, ನಮ್ಮ ನೆರಳೇ ನಮ್ಮನ್ನು ಹಿಂಬಾಲಿಸಿಕೊಂಡು ಬರುವುದಿಲ್ಲ ಎಂದು ಆವಾಗಾವಾಗ ಹೇಳುವ ಕಾಂಗ್ರೆಸ್ ಮುಖಂಡರೊಬ್ಬರು, ಬಿಜೆಪಿಯ ಮುಖಂಡರ ಜೊತೆಗೂ ಉತ್ತಮ ಸಂಬಂಧವನ್ನೂ ಹೊಂದಿದ್ದಾರೆ. ಆ ನಾಯಕರ ಮೂಲಕ, ಯೋಗೀಶ್ವರ್ ಗೆ ಸಚಿವ ಸ್ಥಾನ ಸಿಗದಂತೇ ಶತಪ್ರಯತ್ನ ಮಾಡುತ್ತಿದ್ದಾರೆಂದು ಹೇಳಲಾಗುತ್ತಿದೆ.
ಎಂ.ಟಿ.ಬಿ ನಾಗರಾಜ್ ಮತ್ತು ಎಚ್.ವಿಶ್ವನಾಥ್ ಅವರಿಗೂ ಸಚಿವಸ್ಥಾನ ಕೊಡಿ
ರಾಜಕೀಯವಾಗಿ ಯೋಗೀಶ್ವರ್ ಗೆ ಬದ್ದವೈರಿಯಾಗಿರುವವರೊಬ್ಬರು (ಕಾಂಗ್ರೆಸ್ ನಲ್ಲಿ) ಅವರ ರಾಜಕೀಯ ಅತಂತ್ರತೆ ಮುಂದುವರಿಯಬೇಕು ಎನ್ನುವ ನಿಟ್ಟಿನಲ್ಲಿ ಈ ಬೆಳವಣಿಗೆಗಳ ರೂವಾರಿಯಾಗಿದ್ದಾರೆ. ಇದರ ಪರಿಣಾಮವೇ, ಸೋತವರಿಗೆ ಸಚಿವ ಸ್ಥಾನ ಕೊಟ್ಟರೆ, ಎಂ.ಟಿ.ಬಿ ನಾಗರಾಜ್ ಮತ್ತು ಎಚ್.ವಿಶ್ವನಾಥ್ ಅವರಿಗೂ ಸಚಿವಸ್ಥಾನ ಕೊಡಿ ಎಂದು ರೇಣುಕಾಚಾರ್ಯ ಮುಂತಾದ ನಾಯಕರು ನೇರವಾಗಿ ಹೇಳಿಕೆಯನ್ನು ನೀಡಿರುವುದು ಎಂದು ಹೇಳಲಾಗುತ್ತಿದೆ.