ಸಿಎಂ ರಾಜೀನಾಮೆ ಕೇಳುವ ಕಾಂಗ್ರೆಸ್ ಮುಖಂಡರದ್ದು ಹುಡುಗಾಟಿಕೆಯ ವರ್ತನೆ: ಎನ್.ರವಿಕುಮಾರ್
ಬೆಂಗಳೂರು, ನವೆಂಬರ್ 17: ಪ್ರತಿ ವಿಷಯಕ್ಕೂ ಸಿಎಂ ರಾಜೀನಾಮೆ ಕೇಳುವುದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಬಾಲಿಶ ವರ್ತನೆ, ಇದು ಕಾಂಗ್ರೆಸ್ ಪಕ್ಷದ ಟೂಲ್ಕಿಟ್ನ ಒಂದು ಭಾಗ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಖಂಡಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮುಖ್ಯಮಂತ್ರಿ ರಾಜೀನಾಮೆ ಕೇಳುವುದು ಹುಡುಗಾಟಿಕೆಯೇ ಎಂದು ಪ್ರಶ್ನಿಸಿದ್ದಾರೆ. ಮತದಾರರ ಜಾಗೃತಿ ಮತ್ತು ಮಾಹಿತಿ ಸಂಗ್ರಹಕ್ಕೆ ಸಂಬಂಧಿಸಿದ ವಿಷಯದಲ್ಲಿ ಮುಖ್ಯಮಂತ್ರಿಯವರ ರಾಜೀನಾಮೆ ನೀಡುವುದು ಅಥವಾ ಕೇಳುವುದು ದೂರದ ಸಂಗತಿ ಎಂದು ಸ್ಪಷ್ಟಪಡಿಸಿದರು.
ಮತದಾರರ ಮಾಹಿತಿ ಸಂಗ್ರಹ ಮತ್ತು ಮತದಾರರ ಜಾಗೃತಿಯ ಕಾರ್ಯವನ್ನು 'ಚಿಲುಮೆ' ಸಂಸ್ಥೆಗೆ 2018ರಲ್ಲಿ ಸಮ್ಮಿಶ್ರ ಸರಕಾರ ಕೊಟ್ಟಿತ್ತು. ಟೆಂಡರನ್ನು ಕರೆಯದೆ ಈ ಕೆಲಸವನ್ನು ನೀಡಲಾಗಿತ್ತು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಈ ಕೆಲಸ ನೀಡಿದ್ದು, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.

ಹಾಗಿದ್ದರೆ ರಾಜೀನಾಮೆ ಕೊಡಬೇಕಾದವರು ಯಾರು? ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ರಾಜೀನಾಮೆ ಕೊಡಬೇಕು. ಇದರಲ್ಲೇನೂ ಅವ್ಯವಹಾರ ಆಗಿಲ್ಲ. ಬಿಎಲ್ಒಗಳಿಗೆ ಐಡಿ ಕೊಟ್ಟ ವಿಚಾರ ಗೊತ್ತಾದೊಡನೆ ಚಿಲುಮೆ ಸಂಸ್ಥೆಗೆ ಕೊಟ್ಟಿದ್ದ ಆದೇಶವನ್ನು ಬಿಬಿಎಂಪಿ ಹಿಂದಕ್ಕೆ ಪಡೆದಿದೆ ಎಂದು ಸ್ಪಷ್ಟಪಡಿಸಿದರು.
2018ರಲ್ಲಿ ಒಂದು ದಿನಕ್ಕೆ 5 ಸಾವಿರ ರೂಪಾಯಿಯಂತೆ ಈ ಸಂಸ್ಥೆಗೆ ಕೊಟ್ಟಿದ್ದಾರೆ. ಬಿಬಿಎಂಪಿ ಕಡೆಯಿಂದ ಲ್ಯಾಪ್ ಟಾಪ್ ಕೊಟ್ಟಿದ್ದು, ಜಾಗೃತಿ ಮೂಡಿಸಲು ಬೇಕಿದ್ದ ಕರಪತ್ರಗಳು, ಬ್ಯಾನರ್ ಗಳು, ಶಾಮಿಯಾನ ಮೈಕ್ ವ್ಯವಸ್ಥೆಗೆ ಸ್ವಲ್ಪ ಹಣ ಖರ್ಚು ಮಾಡಿದ್ದಾರೆ. ಇದರಲ್ಲಿ ಅವ್ಯವಹಾರ ಆಗಿದ್ದರೆ, ನ್ಯೂನತೆ ಇದ್ದರೆ ಪೊಲೀಸ್ ಕಮೀಷನರ್ ಗೆ ದೂರು ಕೊಡಲಾಗುತ್ತದೆ. ಅಗತ್ಯ ಕ್ರಮ ತೆಗೆದುಕೊಳ್ಳಲು ಸರಕಾರ ನಿರ್ಧರಿಸಿದೆ ಎಂದು ವಿವರಿಸಿದರು.
2018ರಲ್ಲಿ ಆದೇಶ ನೀಡಿದಾಗ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಬಾಳೆಹಣ್ಣು ತಿನ್ನುತ್ತಿದ್ದರೇ ಎಂದೂ ಅವರು ಪ್ರಶ್ನಿಸಿದರು. ಅಕ್ರಮದ ತನಿಖೆ ಆಗಲಿ, ಉಪ್ಪು ತಿಂದವನು ನೀರು ಕುಡಿಯಲಿ ಎಂದರು.

ಇನ್ನೂ ಮೈಸೂರಿನ ಪ್ರತಾಪಸಿಂಹ ಮತ್ತು ರಾಮದಾಸ್ ಅವರ ಕುರಿತ ಅನೇಕ ವಿಚಾರಗಳು ರಾಜ್ಯಾಧ್ಯಕ್ಷರ ಗಮನಕ್ಕೆ ಬಂದಿವೆ ಅವರೊಂದಿಗೆ ಮಾತನಾಡಿ ಸಮಸ್ಯೆಯನ್ನು ಪರಿಹರಿಸಲಿದ್ದಾರೆ ಎಂದರು.
ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಮತದಾರರ ಪಟ್ಟಿ ಎಂಬುದು ಸಾರ್ವಜನಿಕ ದಾಖಲೆ. ಇದರಲ್ಲಿ ಮಾಹಿತಿ ಸೋರಿಕೆ ಆಗಲು ಏನಿದೆ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ನಿನ್ನೆ ಆದೇಶ ಹಿಂಪಡೆದ ಮೇಲೆ ಇವತ್ತು ಪತ್ರಿಕಾಗೋಷ್ಠಿ ಮಾಡಿದ್ದಾರೆ ಎಂದು ಅವರು ಟೀಕಿಸಿದರು. ಸರಕಾರ ಆದೇಶ ರದ್ದು ಮಾಡಿದ್ದನ್ನು ಮೆಚ್ಚಿಕೊಳ್ಳಬೇಕಿತ್ತು. ಅದರ ಬದಲಾಗಿ ರಾಜೀನಾಮೆ ಕೊಡಲು ಕೇಳುತ್ತಿದ್ದಾರೆ ಎಂದರು. ಈ ವಿಷಯದಲ್ಲಿ ನಾವು ತನಿಖೆ ಮಾಡುತ್ತೇವೆ ಎಂದ ಅವರು, ಮಾತು ಮಾತಿಗೆ 40 ಶೇಕಡಾ ಎನ್ನುವ ನಿಮ್ಮ ಯೋಗ್ಯತೆಗೆ ಅದನ್ನು ಪ್ರೂವ್ ಮಾಡಲು ಸಾಧ್ಯವಾಯಿತೇ ಎಂದು ಕೇಳಿದರು.
ಸಿದ್ದರಾಮಯ್ಯರನ್ನು ಮೊದಲು ಬಂಧಿಸಲು ಒತ್ತಾಯ
2018ರಲ್ಲಿ ಮೊದಲು ಆದೇಶ ಕೊಟ್ಟಿದ್ದು, ಅದನ್ನು ಮುಂದುವರಿಸಿಕೊಂಡು ಬಂದಿದ್ದಾರೆ ಎಂದ ಛಲವಾದಿ ನಾರಾಯಣಸ್ವಾಮಿ ಅವರು, ಸಿದ್ದರಾಮಯ್ಯರವರು ಜಾತಿ ಗಣತಿಗೆ ರೂ. 200 ಕೋಟಿ ಕೊಟ್ಟಿದ್ದೇನೆ ಎಂದಿದ್ದರು. 158 ಕೋಟಿ ಖರ್ಚಾಗಿದೆ. ಆದರೆ, ಆ ವರದಿಯನ್ನೇ ಅಂಗೀಕರಿಸಿಲ್ಲ. ಅದು ಏನಾಗಿದೆ? ಇದು ಜನರ ಹಣ. ಸಿದ್ದರಾಮಯ್ಯರನ್ನು ಮೊದಲು ಬಂಧಿಸಿ ಎಂದು ಮುಖ್ಯಮಂತ್ರಿಯವರನ್ನು ಆಗ್ರಹಿಸಿದರು. ಆಗ ಎಲ್ಲವೂ ಹೊರಗೆ ಬರುತ್ತದೆ ಎಂದರು.
ಪುರಾವೆ ಇಲ್ಲದೆ ಮಾತನಾಡುತ್ತಾರೆ. ಸಿದ್ದರಾಮಯ್ಯ ಅವರು ನಿರುದ್ಯೋಗಿಯಾಗಿ ಬಹಳ ಬಿಡುವಾಗಿದ್ದಾರೆ. ಅವರ ಅಲೆಮಾರಿತನಕ್ಕೆ ನಾವೇನು ಮಾಡಲು ಸಾಧ್ಯ? ಅವರು ಕಂಗೆಟ್ಟು ಏನೇನೋ ಆಪಾದನೆ ಮಾಡುತ್ತಾರೆ. ಇದೊಂದು ಟೂಲ್ ಕಿಟ್. ಈ ಟೂಲ್ ಕಿಟ್ ಗೆ ನಾವು ಬೆದರುವುದಿಲ್ಲ. ಹೆದರುವವರೂ ಅಲ್ಲ, ಇದಕ್ಕೆ ಜನರೇ ಉತ್ತರ ಕೊಡುತ್ತಾರೆ.
ಮುಖ್ಯಮಂತ್ರಿಯವರು ಯಾರ ಕಣ್ತಪ್ಪಿಸಿ ಎಲ್ಲೂ ಹೋಗಲಾಗುವುದಿಲ್ಲ. ಸಿಎಂ ಅವರು 24-7 ಕೆಲಸ ಮಾಡುತ್ತಾರೆ. ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಎಲ್ಲಿ ಇರುತ್ತಿದ್ದರೆಂದು ಎಲ್ಲರಿಗೂ ಗೊತ್ತಿದೆ. ಮುಕುಡಪ್ಪ ಅವರು ಎಲ್ಲ ಹೇಳಿದ್ದಾರೆ. ವೈಯಕ್ತಿಕ ವಿಚಾರಗಳಿಗೆ ನಾವು ಹೋಗುವುದಿಲ್ಲ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.












Click it and Unblock the Notifications