ಬೋಗಸ್ ಸಮೀಕ್ಷೆ ನಂಬಿ ಟಿಕೆಟ್ ನೀಡಲು ಹಿಂಜರಿಯುತ್ತಿದ್ದಾರೆ: ಹಾಲಪ್ಪ
ಬೆಂಗಳೂರು, ಮಾರ್ಚ್ 31: ಮಾಜಿ ಸಚಿವ, ಬಿಜೆಪಿಯ ಹರತಾಳು ಹಾಲಪ್ಪ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ, ಬಿಜೆಪಿಯು ಹಾಲಪ್ಪ ಅವರ ಬದಲಿಗೆ ಬೇಳೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್ ನೀಡಲಿದೆ ಎಂಬ ಸುದ್ದಿ ಕ್ಷೇತ್ರದಲ್ಲಿ ಹರಿದಾಡುತ್ತಿದೆ. ಜೊತೆಗೆ ಹಾಲಪ್ಪ ಕಾಂಗ್ರೆಸ್ ಸೇರುತ್ತಾರೆ ಎಂಬ ಸುದಿಯೂ ಇದೆ. ಹಾಲಪ್ಪ ಅವರ ಹೇಳಿಕೆಯೂ ಇದಕ್ಕೆ ಪುಷ್ಟೀಕರಣ ನೀಡಿವೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
'ನಾನು ಸಾಗರದಲ್ಲಿ ಗೆಲ್ಲುವುದಿಲ್ಲ ಎಂಬ ಯಾವುದೋ ಬೋಗಸ್ ಸಮೀಕ್ಷೆ ನಂಬಿ ನನಗೆ ಟಿಕೆಟ್ ನಿರಾಕರಿಸಲು ಚಿಂತಿಸಲಾಗುತ್ತದೆ' ಎಂದು ಹಾಲಪ್ಪ ಅವರು ಹೇಳಿದ್ದಾರೆ.
ಬಸವೇಶ್ವರನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಕ್ಷೇತ್ರವಾರು ಮಾಡಿರುವ ಸಮೀಕ್ಷೆಗಳೆಲ್ಲವೂ ಸುಳ್ಳು, ಯಾರು ಹಣ ಕೊಡುತ್ತಾರೋ ಅವರ ಪರವಾಗಿ ಸಮೀಕ್ಷೆ ಬರುವಂತೆ ನೋಡಿಕೊಳ್ಳಲಾಗಿದೆ. ಆದರೆ ಇದನ್ನ ನಂಬಿ ಸಾಗರ ಕ್ಷೇತ್ರದಲ್ಲಿ ಮೂರನೇ ಸ್ಥಾನದಲ್ಲಿ ಸೋತವರಿಗೆ ಬಿಜೆಪಿಯವರು ಟಿಕೆಟ್ ಕೊಡುತ್ತಾರಂತೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಬೇರೆ ಪಕ್ಷದವರು ಈಗಾಗಲೇ ತಮ್ಮನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿರುವುದಾಗಿ ಹೇಳಿದ ಹಾಲಪ್ಪ, 'ಇನ್ನು ಕೆಲವೇ ದಿನಗಳಲ್ಲಿ ನಿರ್ಧಾರ ಪ್ರಕಟಿಸುತ್ತೇನೆ' ಎಂದು ಬೇರೆ ಪಕ್ಷ ಸೇರುವ ಮುನ್ಸೂಚನೆಯನ್ನೂ ನೀಡಿದರು.
ಬೇಳೂರು ಗೋಪಾಲಕೃಷ್ಣ ಅವರ ವಿರುದ್ಧ ಪರೋಕ್ಷವಾಗಿ ಹರಿಹಾಯ್ದ ಅವರು 'ಆರ್ಎಸ್ಎಸ್ ವಿರುದ್ಧ ಮಾತನಾಡಿದ, ಶೋಭಾ ಕರಂದ್ಲಾಜೆ -ಯಡಿಯೂರಪ್ಪ ಅವರ ನಡುವೆ ಸಂಬಂಧ ಕಲ್ಪಿಸಿದವರಿಗೆ ಇಂದು ಬಿಜೆಪಿ ಟಿಕೆಟ್ ನೀಡಲಾಗಿದೆ ಎಂದು ಹರಿಹಾಯ್ದರು.
ಯಡಿಯೂರಪ್ಪ ಅವರು ಬಿಜೆಪಿ ತೊರೆದಾಗ ನಾನು ಅವರ ಜೊತೆಗೆ ಇದ್ದೆ, ನಾವೆಲ್ಲರೂ ಅವರನ್ನೇ ನಂಬಿದ್ದವರು, ಎಂಥದ್ದೇ ಸಂದರ್ಭದಲ್ಲೂ ಅವರ ಬೆನ್ನಿಗೆ ನಿಂತವರು. ಈ ಬಗ್ಗೆ ಅವರಾಗಿಯೇ ಕರೆದು ಮಾತನಾಡಿದರೆ ಹೋಗುತ್ತೇನೆ ಇಲ್ಲವಾದರೆ ಹಿತೈಷಿಗಳ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ತೇನೆ ಎಂದು ಅವರ ಮುಂದಿನ ನಡೆ ಬಗ್ಗೆ ಕುತೂಹಲ ಮೂಡಿಸಿದರು.












Click it and Unblock the Notifications