ಬಿಜೆಪಿಯ ಜನಸ್ಪಂದನ ಕಾರ್ಯಕ್ರಮ: ಮುಸಿಮುಸಿ ನಕ್ಕ ಕಾಂಗ್ರೆಸ್
ಬಸವರಾಜ ಬೊಮ್ಮಾಯಿ ಸರಕಾರದ ಒಂದು ವರ್ಷದ ಸಾಧನೆಯನ್ನು ಮುಂದಿಟ್ಟುಕೊಂಡು ಬಿಜೆಪಿ ದೊಡ್ಡಬಳ್ಳಾಪುರದಲ್ಲಿ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮ ಫೇಲ್ ಆಯಿತೇ?. ಖಾಲಿ ಕುರ್ಚಿಯಿರುವ ಇಮೇಜ್/ ವಿಡಿಯೋಗಳನ್ನು ಕೆಪಿಸಿಸಿಯ ಸಾಮಾಜಿಕ ಘಟಕ ಮುಂದಿಟ್ಟುಕೊಂಡು ಲೇವಡಿ ಮಾಡುತ್ತಿದೆ.
ಬಿಜೆಪಿ ನಾಯಕರು ಕಾರ್ಯಕ್ರಮ ಅದ್ದೂರಿಯಾಗಿ ಯಶಸ್ವಿಯಾಗಿದೆ ಎಂದು ಹೇಳಿಕೊಂಡರೆ, ಇದೊಂದು ಕಾರ್ಯಕರ್ತರ ನಿರುತ್ಸಾಹದ ಕಾರ್ಯಕ್ರಮ ಎಂದು ಕಾಂಗ್ರೆಸ್ ವ್ಯಂಗ್ಯವಾಡುತ್ತಿದೆ.
ಸಚಿವ ಸುಧಾಕರ್ ಶಕ್ತಿ ಪ್ರದರ್ಶನಕ್ಕೆ ಬಿಜೆಪಿ ನಾಯಕರೇ ಬೇಸ್ತು
ಖಾಲಿ ಕುರ್ಚಿಯನ್ನು ಉದ್ದೇಶಿಸಿ ಮಾತನಾಡಿದ್ದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಾಧನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಕಾರ್ಯಕ್ರಮಕ್ಕೆ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಂ ಆಗಿತ್ತು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಹೇಳಿದ್ದಾರೆ.
ಕೆಪಿಸಿಸಿಯ ಸಾಮಾಜಿಕ ಜಾಲತಾಣ ಈ ಬಗ್ಗೆ ಸಾಲುಸಾಲು ಟ್ವೀಟ್ ಗಳನ್ನು ಮಾಡಿದ್ದು, ನಲವತ್ತು ಪರ್ಸೆಂಟ್ ವಿಚಾರವನ್ನು ಮುಂದಿಟ್ಟುಕೊಂಡು ಟೀಕಿಸಿದೆ. ಕರ್ನಾಟಕ ಕಾಂಗ್ರೆಸ್ ಮಾಡಿರುವ ಕೆಲವೊಂದು ಟ್ವೀಟ್ ಗಳು ಹೀಗಿವೆ:
ಧಮ್ ಎಂದರೆ ಧಮ್ ಬಿರಿಯಾನಿಯೇ?, ಬೊಮ್ಮಾಯಿಗೆ ಸಿದ್ದರಾಮಯ್ಯ ಪ್ರಶ್ನೆ
ಕಾರ್ಯಕ್ರಮದ ಗುತ್ತಿಗೆದಾರರಿಗೆ 40% ಹಣ ನೀಡಿದರೆ ಸಾಕು
#BJPBrashtotsava ಎನ್ನುವ ಹ್ಯಾಷ್ ಟ್ಯಾಗ್ ನಲ್ಲಿ ಕಾಂಗ್ರೆಸ್ ಟ್ವೀಟ್ ಮಾಡಿದ್ದು ಹೀಗೆ, "ಬಿಜೆಪಿ ಸರ್ಕಾರ ಸಮಾವೇಶಗಳಿಗೆ ಹೆಚ್ಚು ಖರ್ಚು ಮಾಡುವ ಅಗತ್ಯವಿಲ್ಲ. ಕೇವಲ 40% ಕುರ್ಚಿಗಳನ್ನು ತರಿಸಿದರೆ ಸಾಕು. 40% ಶಾಮಿಯಾನ ಮಾತ್ರ ಹಾಕಿದರೆ ಸಾಕು. ಏಕೆಂದರೆ ಕುರ್ಚಿಗಳು ತುಂಬುವುದು 40% ಮಾತ್ರ! ಲೂಟಿ ಹಣವನ್ನು ಅನಗತ್ಯ ಖರ್ಚು ಮಾಡುವುದಕ್ಕಿಂತ ಕಾರ್ಯಕ್ರಮದ ಗುತ್ತಿಗೆದಾರರಿಗೆ 40% ಹಣ ನೀಡಿದರೆ ಸಾಕು!" ಎಂದು ಕೆಪಿಸಿಸಿ ಅಣಕವಾಡಿದೆ.
|
ಇದು ಜನಸ್ಪಂದನೆಯಲ್ಲ, ಖಾಲಿ ಕುರ್ಚಿಗಳ ಸ್ಪಂದನೆ!
ಇನ್ನೊಂದು ಟ್ವೀಟ್ ಅನ್ನು ಮಾಡಿ, "ಇದು ಜನಸ್ಪಂದನೆಯಲ್ಲ, ಖಾಲಿ ಕುರ್ಚಿಗಳ ಸ್ಪಂದನೆ! ಇದು ಜನೋತ್ಸವವಲ್ಲ, ಖಾಲಿ ಕುರ್ಚಿಗಳ ಉತ್ಸವ! ರಾಜ್ಯಕ್ಕೆ ದ್ರೋಹವೆಸಗಿ ಪೊಳ್ಳು ಸಮಾವೇಶ ಮಾಡಿದ್ದಕ್ಕೆ ಜನತೆ ತಕ್ಕ ಉತ್ತರ ಕೊಟ್ಟಿದ್ದಾರೆ @BJP4Karnatakaಗೆ. @BSBommai ಅವರ ಒಂದು ವರ್ಷದ ಸಾಧನೆ ಏನೆಂದು ಈ ಖಾಲಿ ಕುರ್ಚಿಗಳೇ ಹೇಳುತ್ತಿವೆ!" ಎಂದು ಕೆಪಿಸಿಸಿಯ ಐಟಿ ಸೆಲ್ ವ್ಯಂಗ್ಯವಾಡಿದೆ.
ಹಗರಣಗಳ ಹರಿಕಾರ ಸಿಎಂ ಬಸವರಾಜ ಬೊಮ್ಮಾಯಿ
"ವೈಫಲ್ಯಗಳ ಸರದಾರ, ಹಗರಣಗಳ ಹರಿಕಾರ @BSBommai ಅವರಿಗೆ ಮಂಡ್ಯದ ನಂತರ ದೊಡ್ಡಬಳ್ಳಾಪುರದಲ್ಲೂ ಖಾಲಿ ಕುರ್ಚಿಗಳ ಮೂಲಕ ದೊಡ್ಡ ಹಿನ್ನಡೆ ಕಂಡಿದೆ. ಈ ಖಾಲಿ ಕುರ್ಚಿಗಳು 'ಜನಾಕ್ರೋಶ'ವನ್ನು ಸಾರುತ್ತಿವೆ. ಜನತೆಗೆ ಸರ್ಕಾರ ಸ್ಪಂದಿಸದಿರುವಾಗ ಜನತೆ ಸ್ಪಂದಿಸುವುದು ಸಾಧ್ಯವಿಲ್ಲ ಎಂಬುದು @BJP4Karnatakaಗೆ ಅರ್ಥವಾಗಲಿ"ಎಂದು ಕರ್ನಾಟಕ ಕಾಂಗ್ರೆಸ್ಸಿನ ಐಟಿ ಘಟಕ ಸರಕಾರದ ಕಾಲೆಳೆದಿದೆ. ದಮ್ಮು ತಾಕತ್ತು ಇದ್ದರೆ ತಡೆಯಿರಿ' ಎಂದಿರುವ @BSBommai ಅವರೇ, ಯಾರೂ ನಿಮ್ಮ ಸಮಾವೇಶ ತಡೆಯಬೇಕಿಲ್ಲ, ಜನರೇ ತಡೆಯುತ್ತಾರೆ. ಜನರೂ ಇಲ್ಲ, ಉತ್ಸವವೂ ಇಲ್ಲ, ಜನರ ಸ್ಪಂದನೆಯೂ ಇಲ್ಲ, ಬಿಜೆಪಿಗೆ ಉತ್ಸಾಹವೂ ಇಲ್ಲ. ಭ್ರಷ್ಟಾಚಾರದ ಉತ್ಸವ ನಡೆಸುತ್ತಿರುವ ಸರ್ಕಾರಕ್ಕೆ ಖಾಲಿ ಕುರ್ಚಿಗಳು ಉತ್ತರ ಹೇಳುತ್ತಿವೆ.
ಜನರೆಲ್ಲ ಮಳೆ ನೀರಲ್ಲಿ ಮುಳುಗಿರುವಾಗ ಸ್ಪಂದನೆ ಇಲ್ಲದ ಸರ್ಕಾರ
"ಜನರೆಲ್ಲ ಮಳೆ ನೀರಲ್ಲಿ ಮುಳುಗಿರುವಾಗ ಸ್ಪಂದನೆ ಇಲ್ಲದ ಸರ್ಕಾರಕ್ಕೆ ಜನ ಉತ್ತರಿಸಿದ್ದಾರೆ. ಬಿಜೆಪಿಯ ಜನನಿಂದನೆ, ಜನಮರ್ದನ, ಜನ ರೋಧನೆ, ಜನ ವೇದನೆ ಆಗಿರುವಾಗ, ಜನರಿಗೆ ಸರ್ಕಾರದ ಸ್ಪಂದನೆ ಶೂನ್ಯವಾಗಿರುವಾಗ ಜನ ಸ್ಪಂದನೆಯೂ ಶೂನ್ಯ. ಇದು ಜನಸ್ಪಂದನೆಯೂ ಅಲ್ಲ, ಜನೋತ್ಸವವೂ ಅಲ್ಲ, ಖಾಲಿ ಕುರ್ಚಿ ಉತ್ಸವ ಮಾತ್ರ!. ಕಾರ್ಯಕ್ರಮದ ಸಲುವಾಗಿ 6 ಕಿ.ಮಿ ಟ್ರಾಫಿಕ್ ಜಾಮ್ ಆಗಿದೆ ಎಂದಿರುವ @CTRavi_BJP ಅವರೇ. ಟ್ರಾಫಿಕ್ ಜಾಮ್ ಆಗಿದ್ದಲ್ಲ, ಎಣ್ಣೆ ಜಾಮ್ ಆಗಿದೆ! ಬಿರಿಯಾನಿ, ಮದ್ಯ, ಬಸ್ಸುಗಳನ್ನು ಕೊಟ್ಟು ಕರೆತಂದರೂ ಕುರ್ಚಿ ಖಾಲಿಯಾಗಿರುವ ಅಸಲಿ ಕಾರಣ ಇಲ್ಲಿದೆ!" ಎಂದು ಕೆಪಿಸಿಸಿ ಟ್ವೀಟ್ ಮೂಲಕ ಬಿಜೆಪಿಯನ್ನು ಲೇವಡಿ ಮಾಡಿದೆ.