ಸಿದ್ದರಾಮಯ್ಯ ಬಗ್ಗೆ ಜೋಕೆ: ಡಿಕೆಶಿಗೆ ಮಗುದೊಮ್ಮೆ ಬಿಜೆಪಿ ಬುದ್ದಿಮಾತು
ಬೆಂಗಳೂರು, ಜೂನ್ 1: ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ದಿನಾಂಕ ಮುಗಿದ ನಂತರ, ರಾಜ್ಯ ರಾಜಕಾರಣದ ಕುತೂಹಲ ಇನ್ನೊಂದು ಮಜಲಿಗೆ ತಿರುಗಿದೆ. ಅದರಲ್ಲೂ ಪ್ರಮುಖವಾಗಿ, ಕಾಂಗ್ರೆಸ್ ತನ್ನ ಎರಡನೇ ಅಭ್ಯರ್ಥಿಯನ್ನು ಕೊನೆಯ ಕ್ಷಣದಲ್ಲಿ ನಿಲ್ಲಿಸಿದ ನಂತರ ಲೆಕ್ಕಾಚಾರ ಕುತೂಹಲ ಮೂಡಿಸಿದೆ.
ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸುತ್ತಿದ್ದಂತೆಯೇ ಸಾಲುಸಾಲು ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು, ವಿರೋಧ ಪಕ್ಷದ ನಾಯಕರನ್ನು ಬಿಜೆಪಿಯ ಬಿಟೀಂನ ನಾಯಕ ಎಂದು ವ್ಯಂಗ್ಯವಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ನಡುವಿನ ಶೀತಲ ಸಮರದ ವಿಚಾರದಲ್ಲಿ ಮತ್ತೊಮ್ಮೆ ಅಣಕವಾಡಿರುವ ರಾಜ್ಯ ಬಿಜೆಪಿ ಐಟಿ ಸೆಲ್, ಸಿದ್ದರಾಮಯ್ಯನವರ ಬಗ್ಗೆ ಎಚ್ಚರ ಎಂದು ಡಿಕೆಶಿಗೆ ಬುದ್ದಿಮಾತಿನ ಅಣಕವಾಡಿದೆ.
ಕಾಂಗ್ರೆಸ್ಸಿನ ಡಿಜಿಟಲ್ ಸದಸ್ಯತ್ವ, ಮುಖಂಡರು ಕಾಂಗ್ರೆಸ್ ತೊರೆಯುತ್ತಿರುವ ವಿಚಾರದಲ್ಲೂ ಬಿಜೆಪಿ ಟ್ವೀಟ್ ಮಾಡಿದ್ದು, ಮುಖ್ಯಮಂತ್ರಿ ಚಂದ್ರು ಮತ್ತು ಬ್ರಿಜೇಶ್ ಕಾಳಪ್ಪ ಇದಕ್ಕೆ ಹೊಸ ಸೇರ್ಪಡೆಯೆಂದು ಹೇಳಿದೆ.

ಭಾರತ್ ಜೋಡೋ ಅಭಿಯಾನ ಮತ್ತು ಸದಸ್ಯತ್ವ ಅಭಿಯಾನ ಹೇಗಿದೆ?
"ಕೆಪಿಸಿಸಿ ಅಧ್ಯಕ್ಷರೇ, ನಿಮ್ಮ ಭಾರತ್ ಜೋಡೋ ಅಭಿಯಾನ ಮತ್ತು ಸದಸ್ಯತ್ವ ಅಭಿಯಾನ ಹೇಗಿದೆ? ಅಭಿಯಾನದ ಮೂಲಕ ಕಾಂಗ್ರೆಸ್ ಸೇರಿದವರ ಸಂಖ್ಯೆ ಹೆಚ್ಚೋ ಅಥವಾ ಕಾಂಗ್ರೆಸ್ ತ್ಯಜಿಸಲಿರುವವರ ಸಂಖ್ಯೆ ಹೆಚ್ಚೋ? ಕಪಿಲ್ ಸಿಬಲ್, ಆರ್ ಪಿಎನ್ ಸಿಂಗ್, ಅಶ್ವಿನಿ ಕುಮಾರ್, ಹಾರ್ದಿಕ್ ಪಟೇಲ್, ಸಿಎಂ ಇಬ್ರಾಹಿಂ, ಪ್ರಮೋದ್ ಮಧ್ವರಾಜ್, ಮುಖ್ಯಮಂತ್ರಿ ಚಂದ್ರು... ಈಗ ಬ್ರಿಜೇಶ್ ಕಾಳಪ್ಪ! ಕಾಂಗ್ರೆಸ್ಸಿಗರೇ, ನಿಮ್ಮದು ಭಾರತ್ ಜೋಡೋ ಅಭಿಯಾನವೋ"ಎಂದು ಬಿಜೆಪಿಯ ಐಟಿ ಸೆಲ್ ವ್ಯಂಗ್ಯವಾಡಿದೆ.

ಟಿವಿ, ಫ್ರಿಡ್ಜ್, ಫೋನ್ ಆಮಿಷ ಒಡ್ಡಲಾಗಿತ್ತು
"ಕಾಂಗ್ರೆಸ್ ಪಕ್ಷ ಯಾವ ದಯನೀಯ ಸ್ಥಿತಿ ತಲುಪಿದೆ ಎಂದರೆ ಡಿಜಿಟಲ್ ಸದಸ್ಯತ್ವ ಅಭಿಯಾನಕ್ಕೆ ಸಂಖ್ಯೆ ತೋರಿಸಲು ಟಿವಿ, ಫ್ರಿಡ್ಜ್, ಫೋನ್ ಆಮಿಷ ಒಡ್ಡಲಾಗಿತ್ತು. ಈಗ ಹತ್ತಾರು ವರ್ಷ ಕಾಂಗ್ರೆಸ್ ಪಕ್ಷಕ್ಕೆ ದುಡಿದವರು ಪಕ್ಷ ತ್ಯಜಿಸುತ್ತಿದ್ದಾರೆ. ನಕಲಿ ಗಾಂಧಿಗಳ ನಾಯಕತ್ವಕ್ಕೆ ಕಾರ್ಯಕರ್ತರೇ ಬೇಸತ್ತಿದ್ದಾರೆ!"ಎಂದು ರಾಜ್ಯ ಬಿಜೆಪಿ ಐಟಿ ಘಟಕ ಟ್ವೀಟ್ ಮಾಡಿದೆ.

ಕೆಪಿಸಿಸಿ ಅಧ್ಯಕ್ಷರು ಸಿದ್ದರಾಮಯ್ಯ ಬಣದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ
"ರಾಜಸ್ಥಾನದ ಚಿಂತನ ಶಿಬಿರದ ಬಳಿಕ ಕಾಂಗ್ರೆಸ್ ಖಾಲಿಯಾಗುತ್ತಿದೆ, G23 ಗುಂಪಿನ ಸಂಖ್ಯೆ ಕರಗುತ್ತಿದೆ. ಕಾರಣ ಸ್ಪಷ್ಟ, ನಕಲಿ ಗಾಂಧಿ ಕುಟುಂಬದ ನಾಯಕತ್ವವನ್ನು ಕಾಂಗ್ರೆಸ್ ಕಾರ್ಯಕರ್ತರೇ ಒಪ್ಪುತ್ತಿಲ್ಲ. ರಾಜ್ಯದಲ್ಲೂ ಕಾಂಗ್ರೆಸ್ ಚಿಂತನಾ ಶಿಬಿರ ಹಮ್ಮಿಕೊಂಡಿದೆ, ಅದರ ಮುನ್ನವೇ ರಾಜಿನಾಮೆ ಪರ್ವ ಆರಂಭಗೊಂಡಿದೆ. ಪರಿಷತ್ ಟಿಕೆಟ್, ರಾಜ್ಯಸಭಾ ಟಿಕೆಟ್, ಪದಾಧಿಕಾರಿಗಳ ಪಟ್ಟಿ ಹೀಗೆ ಪಕ್ಷದ ವಿಚಾರದಲ್ಲಿ ಸಿದ್ದರಾಮಯ್ಯ ಛಾಪು ಎದ್ದು ಕಾಣುತ್ತಿದೆ. ಕೆಪಿಸಿಸಿ ಅಧ್ಯಕ್ಷರು ಸಿದ್ದರಾಮಯ್ಯ ಬಣದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ಮುಂದೊಂದು ದಿನ ಕಾಂಗ್ರೆಸ್ ತ್ಯಜಿಸಬಹುದಾದ ದಿನ ದೂರವೇನು ಇಲ್ಲ. ಎಚ್ಚರ ಡಿಕೆಶಿ ಎಚ್ಚರ!"ಎಂದು ಬಿಜೆಪಿಯ ಐಟಿ ಘಟಕ ಟ್ವೀಟ್ ಮಾಡಿದೆ.

ಬಸವಣ್ಣ ಅವರ ತತ್ವಾದರ್ಶಗಳನ್ನು ಪಾಲಿಸುವುದು ಒತ್ತಟ್ಟಿಗಿರಲಿ
"ಬಸವಣ್ಣ ಅವರ ತತ್ವಾದರ್ಶಗಳನ್ನು ಪಾಲಿಸುವುದು ಒತ್ತಟ್ಟಿಗಿರಲಿ, ಅವರನ್ನು ಪಠ್ಯದಲ್ಲೇ ಪೂರ್ಣ ಪ್ರಮಾಣದಲ್ಲಿ ಅಳವಡಿಸಲು ಕಾಂಗ್ರೆಸ್ ನಿರಾಕರಿಸಿತ್ತು. ಕಾಯಕ ಯೋಗಿಯ ಹೆಸರಿನಲ್ಲಿ ರಾಜಕೀಯ ಮಾಡುವ ವಿಪಕ್ಷಗಳ ದುಷ್ಟ ಸಂಚನ್ನು ಬಯಲು ಮಾಡಲು ಇದು ಸಕಾಲ" ಎಂದು ರಾಜ್ಯ ಬಿಜೆಪಿ ಐಟಿ ಸೆಲ್ ಟ್ವೀಟ್ ಮಾಡಿದೆ.












Click it and Unblock the Notifications