'ಡಿಕೆಶಿ-ಸಿದ್ದರಾಮಯ್ಯ ಮನಸ್ತಾಪದ ಪಿಸುಮಾತು ರಾಜ್ಯಕ್ಕೆ ಕೇಳಿಸುತ್ತಿತ್ತು'
ಬೆಂಗಳೂರು, ಮೇ 24: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ನಡುವಿನ ಮನಸ್ತಾಪದ ಬೇಗುದಿ ದೆಹಲಿಯ ಹೈಕಮಾಂಡಿಗೂ ತಟ್ಟಿದೆ ಎಂದು ಕರ್ನಾಟಕ ಬಿಜೆಪಿ ಐಟಿ ಸೆಲ್ ಲೇವಡಿ ಮಾಡಿದೆ.
ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿ ಆಯ್ಕೆಯ ಸಂಬಂಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ರಾಜಧಾನಿಯಲ್ಲಾಗಲಿ, ರಾಜಸ್ಥಾನದಲ್ಲಾಗಲಿ ಎಷ್ಟೇ ಫೋಟೋ ಶೂಟ್ ನಡೆಸಿದರೂ, ಇಬ್ಬರ ನಡುವಿನ ಶೀತಲ ಸಮರ ಕಮ್ಮಿಯಾಗುವುದೇ? ಎಂದು ಪ್ರಶ್ನಿಸಿದೆ.
ಟಿಪ್ಪು ಸುಲ್ತಾನ್ ಮತ್ತು ಶಾಲಾ ಪಠ್ಯಪುಸ್ತಕದ ವಿಚಾರದಲ್ಲೂ ಸಿದ್ದರಾಮಯ್ಯ ಕಾಲೆಳೆದಿರುವ ಬಿಜೆಪಿಯ ಐಟಿ ಘಟಕ, "ಟಿಪ್ಪು ಸುಲ್ತಾನ್ ಮತಾಂಧನಲ್ಲ ಎನ್ನುವ "ಜಾಣಕುರುಡುತನ ಮತ್ತು ಜಾಣಕಿವುಡುತನ" ಕಾಂಗ್ರೆಸ್ ನಾಯಕರನ್ನು ಆವರಿಸಿಕೊಂಡಿದೆ. ಕೊಡಗಿನ ನರಮೇಧ, ಮೇಲುಕೋಟೆಯ ಮಂಡ್ಯ ಅಯ್ಯಂಗಾರರ ಹತ್ಯೆ, ನೆತ್ತರಕೆರೆಯ ಹತ್ಯಾಕಾಂಡ, ಮೈಸೂರು ಒಡೆಯರ ಮೇಲಿನ ದಾಳಿ, ದುರ್ಗದ ಪಾಳೆಯಗಾರರ ಮೇಲಿನ ದಾಳಿ - ಇವೆಲ್ಲ ಯಾವುದರ ಸಂಕೇತ?" ಎಂದು ಪ್ರಶ್ನೆ ಮಾಡಿದೆ.
ಮುಂದಿನ ತಿಂಗಳು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿ ಆಯ್ಕೆಯ ಸಂಬಂಧ, ಡಿ. ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಪ್ರತ್ಯೇಕ ಪಟ್ಟಿಯ ಶಿಫಾರಸನ್ನು ಮಾಡಿದ್ದರು ಎಂದು ವರದಿಯಾಗಿತ್ತು. ಈ ಹಿನ್ನಲೆಯಲ್ಲಿ ಬಿಜೆಪಿ ಸರಣಿ ಟ್ವೀಟ್ ಅನ್ನು ಮಾಡಿದೆ.

ಟಿಪ್ಪು ಕೇವಲ ಮತಾಂಧನಷ್ಟೇ ಅಲ್ಲ, ಬದಲಾಗಿ ಕನ್ನಡ ದ್ವೇಷಿ
"ಟಿಪ್ಪು ಕೇವಲ ಮತಾಂಧನಷ್ಟೇ ಅಲ್ಲ, ಬದಲಾಗಿ ಕನ್ನಡ ದ್ವೇಷಿ ಕೂಡ. ಕನ್ನಡ ಅಸ್ಮಿತೆಯ ಬಗ್ಗೆ ಮಾತನಾಡುವ ಮುನ್ನ ಸಿದ್ದರಾಮಯ್ಯ ತಮ್ಮ ಇಬ್ಬಂದಿತನಕ್ಕೆ ಔಷಧಿ ಕಂಡುಕೊಳ್ಳಲಿ.
ಕಂದಾಯ ದಾಖಲೆಗಳಿಂದಲೂ ಕನ್ನಡ ಅಳಿಸಿ ಪರ್ಷಿಯನ್ ಜಾರಿಗೊಳಿಸಿದ ಜಿಹಾದಿ ಮನಸ್ಥಿತಿಯ ಟಿಪ್ಪುವಿನ ಬಗ್ಗೆ ಕಾಂಗ್ರೆಸ್ಸಿಗರಿಗೆ ಯಾಕಿಷ್ಟು ಪ್ರೀತಿ?"ಎಂದು ಕರ್ನಾಟಕ ಬಿಜೆಪಿ ಐಟಿ ಘಟಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದೆ.

ಮೇಕೆದಾಟು ಪಾದಯಾತ್ರೆಯಲ್ಲಿ, ಬೆಂಗಳೂರಿನ ರಸ್ತೆಗಳಲ್ಲಿ
"ಮೇಕೆದಾಟು ಪಾದಯಾತ್ರೆಯಲ್ಲಿ, ಬೆಂಗಳೂರಿನ ರಸ್ತೆಗಳಲ್ಲಿ, ರಾಜಸ್ಥಾನದ ಚಿಂತನಾ ಶಿಬಿರದಲ್ಲಿ, ರಾಷ್ಟ್ರ ರಾಜಧಾನಿಯಲ್ಲಿ ಒಟ್ಟಿಗೆ ನಿಂತು ಎಷ್ಟೇ ಫೋಟೋಶೂಟ್ ಮಾಡಿಸಿಕೊಂಡರೂ, ಒಳ ಬೇಗುದಿ ಶಮನವಾಗುವುದೇ?".
"ಕೈ ಹಿಡಿತಕ್ಕಾಗಿ ಕೈ ನಾಯಕರು ಕೈಪಾಳಯದಲ್ಲಿ ಕೈ ಕೈ ಮಿಲಾಯಿಸುತ್ತಾರೆ. ಆದರೆ, 2023 ಚುನಾವಣೆಯ ನಂತರ ಕಾಂಗ್ರೆಸ್ ಖಾಲಿ ಖಾಲಿ" ಎಂದು ಬಿಜೆಪಿ ಟ್ವೀಟ್ ಮೂಲಕ ರಾಜ್ಯ ಕಾಂಗ್ರೆಸ್ ಘಟಕವನ್ನು ಲೇವಡಿ ಮಾಡಿದೆ.

"ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವಿನ ಮನಸ್ತಾಪಕ್ಕೆ ಎಷ್ಟೊಂದು ಕಾರಣಗಳಿವೆ
"ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವಿನ ಮನಸ್ತಾಪಕ್ಕೆ ಎಷ್ಟೊಂದು ಕಾರಣಗಳಿವೆ, ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿ, ವಿಧಾನಸಭೆಯ ವಿಪಕ್ಷ ಉಪ ನಾಯಕರ ಸ್ಥಾನ, ಸಿಎಂ ಅಭ್ಯರ್ಥಿ ಘೋಷಣೆ, ಎಂಎಲ್ಸಿ ಅಭ್ಯರ್ಥಿ".
"ಒಡೆದ ಮನೆ @INCKarnataka ಪಕ್ಷದಲ್ಲಿ ಮೊದಲೆಲ್ಲಾ @DKShivakumar ಹಾಗೂ @siddaramaiah ನಡುವಿನ ಮನಸ್ತಾಪದ ಪಿಸುಮಾತು ರಾಜ್ಯಕ್ಕೆ ಕೇಳಿಸುತ್ತಿತ್ತು. ಈಗ ಅದರ ಸದ್ದು, ದೆಹಲಿವರೆಗೂ ಕೇಳಿಸುತ್ತಿದೆ. ಕೈ ಕಮಾಂಡ್ ತೇಪೆ ಹಚ್ಚುವ ವ್ಯರ್ಥ ಪ್ರಯತ್ನ ಮಾಡುತ್ತಿದೆ. ಇವರ ಒಳಜಗಳದಿಂದಲೇ ರಾಜ್ಯ ಕಾಂಗ್ರೆಸ್ ಮುಕ್ತವಾಗಲಿದೆ" ಎಂದು ಬಿಜೆಪಿ ಟ್ವೀಟ್ ಮಾಡಿದೆ.
|
ಸಿದ್ದರಾಮಯ್ಯನವರು ಗೋಮಾಂಸ ಭಕ್ಷಣೆಯ ಪರವಾಗಿ ವಾದಮಂಡನೆ
"ಅಹಿಂದದ ಸೂತ್ರ ಪಠಿಸುವ ಅಹಿಂದು ಲಾಯರಿ ಸಿದ್ದರಾಮಯ್ಯನವರು ಗೋಮಾಂಸ ಭಕ್ಷಣೆಯ ಪರವಾಗಿ ವಾದಮಂಡನೆ ಮಾಡಿ ಕಾಂಗ್ರೆಸ್ ಪಕ್ಷದ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ. ಸಂವಿಧಾನದ ಬಗ್ಗೆ ಪುಂಖಾನುಪುಂಖವಾಗಿ ಪುಂಗುವ ಇವರು ಒಂದು ವಿಶೇಷ ಸಮುದಾಯವನ್ನು ಅಸಾಂವಿಧಾನಿಕ ರೀತಿಯಲ್ಲಿ ಓಲೈಸಿಕೊಂಡು ಬರುತ್ತಿರುವ ಕಾರಣವೇನು ಎಂದು ಸ್ಪಷ್ಟ ಪಡಿಸಲೇಬೇಕು"ಎಂದು ಬಿಜೆಪಿ ಟ್ವೀಟ್ ಮಾಡಿದೆ.












Click it and Unblock the Notifications