ಯಾರನ್ನು ನೇಣಿಗೆ ಹಾಕುವಿರಿ ಬಿಜೆಪಿ: ಕಾಂಗ್ರೆಸ್ ಪ್ರಶ್ನೆ!
ಬೆಂಗಳೂರು: ಬಿಜೆಪಿ ರಾಜ್ಯ ಘಟಕ ಹೀನಾಯ ಸೋಲಿನ ನಂತರ ಆಂತರಿಕ ಕಚ್ಚಾಟದಲ್ಲಿ ತೊಡಗಿದೆ. ಈ ಅಸ್ತ್ರ ಕಾಂಗ್ರೆಸ್ ನಾಯಕರಿಗೆ ವರವಾಗಿದ್ದು, ನಿನ್ನೆಯಷ್ಟೇ ಬಿಜೆಪಿ ಸಂಸದ ನೀಡಿದ್ದ ಹೇಳಿಕೆ ಇಟ್ಟುಕೊಂಡು ಈಗ ಕಾಂಗ್ರೆಸ್ ಸವಾಲು ಹಾಕಿದೆ. ನೇಣು ಹಾಕುವ ಬಗ್ಗೆ ಸ್ವತಃ ಬಿಜೆಪಿ ಸಂಸದರು ಮಾತನಾಡಿದ್ದು ಇದೀಗ ಬಿಜೆಪಿಗೆ ದೊಡ್ಡ ಹಿನ್ನಡೆ ತಂದಿದೆ.
ಅಂದಹಾಗೆ 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ BJP ಗುಜರಾತ್ ಮಾಡೆಲ್ ಅಂತಾ ಹೊಸ ಪ್ರಯೋಗಕ್ಕೆ ಕೈಹಾಕಿತ್ತು. ಆದರೆ ಗುಜರಾತ್ ಮಾಡೆಲ್ ಕರ್ನಾಟಕದಲ್ಲಿ ಮಕಾಡೆ ಮಲಗಿತ್ತು. ಹೀಗಿದ್ದಾಗ ಹೊಸಬರಿಗೆ ಟಿಕೆಟ್ ಕೊಡಿ ಎಂದು ಬಿಜೆಪಿ ಹೈಕಮಾಂಡ್ಗೆ ಯಾರು ಐಡಿಯಾ ಕೊಟ್ಟಿದ್ದಾರೋ ಗೊತ್ತಿಲ್ಲ. ಅವರನ್ನು ನೇಣಿಗೆ ಬೇಕಾದರೂ ಹಾಕಿ, ಅವರ ಕಾಲನ್ನಾದರೂ ಕಡಿಯಿರಿ ಎಂದು ಬಿಜೆಪಿ ಪಕ್ಷದವರೇ ಆದ ವಿಜಯಪುರದ ಸಂಸದ ರಮೇಶ ಜಿಗಜಿಣಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಕಮಲ ಪಾಳಯದ ವಿರುದ್ಧ ಕಾಂಗ್ರೆಸ್ ಹೊಸ ಅಸ್ತ್ರವನ್ನೇ ಪ್ರಯೋಗಿಸಿದೆ, ಯಾರನ್ನ ನೇಣಿಗೆ ಹಾಕುತ್ತೀರಿ? ಎಂದು ಪ್ರಶ್ನಿಸಿದೆ.

ಬಿಜೆಪಿಗೆ ಕಾಂಗ್ರೆಸ್ ನೇಣಿನ ಪ್ರಶ್ನೆ!
ಆಡಳಿತ ವಿರೋಧಿ ಅಲೆ ಅಪ್ಪಳಿಸಿದ್ದರೂ, ಗೆಲ್ಲುವ ಅತಿಯಾದ ಆತ್ಮವಿಶ್ವಾಸದಲ್ಲಿ ಬಿಜೆಪಿ ನಾಯಕರು ಇದ್ದರು. ಹೀಗಾಗಿಯೇ ಸೋಲು ಎದುರಾಯ್ತು ಅನ್ನೋ ಮಾತು ಸ್ವಪಕ್ಷದಲ್ಲೇ ಕೇಳಿಬರುತ್ತಿದೆ. ಹೀಗಿರುವಾಗ ತಪ್ಪು ಸರಿ ಮಾಡಿಕೊಳ್ಳುವ ಬದಲು ಬಿಜೆಪಿ ನಾಯಕರೆಲ್ಲಾ ತಮ್ಮೊಳಗೆ ಕಿತ್ತಾಡುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಟ್ವೀಟ್ ಮಾಡಿ, 'ಹೊಸಬರಿಗೆ ಟಿಕೆಟ್ ನೀಡಿದವರನ್ನು ನೇಣಿಗೆ ಹಾಕಿ ಅಂದಿದ್ದಾರೆ ಬಿಜೆಪಿ ಸಂಸದ. ಈಗ ಯಾರನ್ನು ನೇಣಿಗೆ ಹಾಕುವಿರಿ @BJP4Karnataka? ಅಮಿತ್ ಷಾರವರನ್ನೋ? ಬಿ.ಎಲ್. ಸಂತೋಷರನ್ನೊ? ಪ್ರಹ್ಲಾದ್ ಜೋಶಿಯವರನ್ನೋ ? ಮೋದಿಯವರನ್ನೋ? ಬೊಮ್ಮಾಯಿಯವರನ್ನೋ? ಹೊಣೆ ಯಾರು, ನೇಣುಗಂಬ ಯಾರಿಗೆ? ಸೋಲಿನ ನಾಯಕತ್ವ ವಹಿಸಿಕೊಳ್ಳುವವರು ಯಾರು? ಬಿಜೆಪಿಯಿಂದ ಉತ್ತರ ನಿರೀಕ್ಷಿಸಬಹುದೇ?' ಎಂದು ಸವಾಲು ಹಾಕಿದೆ.
ಹೊಸಬರಿಗೆ ಟಿಕೆಟ್ ನೀಡಿದವರನ್ನು ನೇಣಿಗೆ ಹಾಕಿ ಅಂದಿದ್ದಾರೆ ಬಿಜೆಪಿ ಸಂಸದ.
— Karnataka Congress (@INCKarnataka) June 14, 2023
ಈಗ ಯಾರನ್ನು ನೇಣಿಗೆ ಹಾಕುವಿರಿ @BJP4Karnataka?
ಅಮಿತ್ ಷಾರವರನ್ನೋ?
ಬಿ ಎಲ್ ಸಂತೋಷರನ್ನೊ?
ಪ್ರಹ್ಲಾದ್ ಜೋಶಿಯವರನ್ನೋ ?
ಮೋದಿಯವರನ್ನೋ?
ಬೊಮ್ಮಾಯಿಯವರನ್ನೋ?
ಹೊಣೆ ಯಾರು, ನೇಣುಗಂಬ ಯಾರಿಗೆ? ಸೋಲಿನ ನಾಯಕತ್ವ ವಹಿಸಿಕೊಳ್ಳುವವರು ಯಾರು?
ಬಿಜೆಪಿಯಿಂದ ಉತ್ತರ… pic.twitter.com/siPebUNZia
ಸಂಸದ ರಮೇಶ ಜಿಗಜಿಣಗಿ ಆಕ್ರೋಶ
ಹೌದು, ಕೇಂದ್ರದ ನಾಯಕರು & ಗುಜರಾತ್ ಮಾಡೆಲ್ ಎಂದು ಕರ್ನಾಟಕದಲ್ಲಿ ಹೊಸ ಮುಖಗಳಿಗೆ ಮಣೆ ಹಾಕಿದರವರ ವಿರುದ್ಧ ರೊಚ್ಚಿಗೆದಿದ್ದಾರೆ ಸಂಸದ ರಮೇಶ ಜಿಗಜಿಣಗಿ. ಅದರಲ್ಲೂ 70ಕ್ಕೂ ಹೆಚ್ಚು ಜನ ಹೊಸಬರಿಗೆ ಟಿಕೆಟ್ ನೀಡಿದ್ದು, ಗೆದ್ದವರು ಬೆರಳಣಿಕೆಯಷ್ಟು ಜನ ಎಂದಿದ್ದಾರೆ. ಈ ಮೂಲಕ ಕೇಂದ್ರದ ನಾಯಕರು & ವರಿಷ್ಠರು ಅನ್ನಿಸಿಕೊಂಡವರ ಎಡವಟ್ಟಿನಿಂದ ಬಿಜೆಪಿ ಸೋತಿದೆ ಎಂಬುದನ್ನ ಪರೋಕ್ಷವಾಗಿಯೇ ಹೇಳಿದ್ದಾರೆ. ಜೊತೆಗೆ ಹಿರಿಯರಿಗೆ ಟಿಕೆಟ್ ಕೊಟ್ಟಿದ್ದರೆ ಎಲ್ಲರೂ ಗೆಲ್ಲುತ್ತಿದ್ದರು. 130ಕ್ಕೂ ಹೆಚ್ಚು ಸೀಟ್ಗಳಲ್ಲಿ ಬಿಜೆಪಿ ಗೆದ್ದು ಬಹುಮತ ಸಾಧಿಸುತ್ತಿತ್ತು. ಹೊಸಬರಿಗೆ ಬಿಜೆಪಿ ಟಿಕೆಟ್ ಕೊಡುವ ಔಚಿತ್ಯ ಇರಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಶೆಟ್ಟರ್, ಸವದಿ ಪರ ಜಿಗಜಿಣಗಿ ಬ್ಯಾಟಿಂಗ್!
ಹಾಗೇ ಇನ್ನೊಂದ್ಕಡೆ ಚುನಾವಣೆಯ ಕೊನೆಯ ಕ್ಷಣದಲ್ಲಿ ಬಿಜೆಪಿ ತೊರೆದವರ ಬಗ್ಗೆ ಕೂಡ ಜಿಗಜಿಣಗಿ ಪ್ರಸ್ತಾಪ ಮಾಡಿದ್ದಾರೆ. ಉತ್ತರ ಕರ್ನಾಟಕದ ಪ್ರಭಾವಿ ನಾಯಕರಾದ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಪಕ್ಷ ಬಿಟ್ಟು ಹೋಗಿದ್ದು, ಕಾಂಗ್ರೆಸ್ನ ಗ್ಯಾರಂಟಿ ಅಬ್ಬರದ ಹಿನ್ನೆಲೆ ಬಿಜೆಪಿಗೆ ಹಿನ್ನಡೆಯಾಗಿದೆ ಎಂದು ಸಂಸದ ರಮೇಶ್ ಜಿಗಜಿಣಗಿ ಪ್ರಸ್ತಾಪ ಮಾಡಿದ್ದಾರೆ. ಆದ್ರೆ ಕಾಂಗ್ರೆಸ್ನ ಗ್ಯಾರಂಟಿ ಲೋಕಸಭೆ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವವೇ ಇಲ್ಲ. ಆ ಹುಡುಗ, ಆ ಹುಡುಗಿ ಅವರೇನು ನಾಯಕರೇ ಎಂದು ಪರೋಕ್ಷವಾಗಿ ರಾಹುಲ್, ಪ್ರಿಯಾಂಕಾ ಗಾಂಧಿ ವಿರುದ್ಧ ವ್ಯಂಗ್ಯವಾಡಿದರು. ಇದೇ ಹೇಳಿಕೆ ಈಗ ಕಾಂಗ್ರೆಸ್ಗೆ ಅಸ್ತ್ರವಾಗಿ ಸಿಕ್ಕಂತಾಗಿದೆ.

ಒಟ್ನಲ್ಲಿ ಬಿಜೆಪಿ & ಕಾಂಗ್ರೆಸ್ ಪಕ್ಷಗಳ ನಡುವೆ ತೀವ್ರ ತಿಕ್ಕಾಟ ನಡೆಯುತ್ತಿದೆ. ಅದರಲ್ಲೂ ಲೋಕಸಭೆ ಚುನಾವಣೆ ಹತ್ತಿರ ಬರ್ತಿದ್ದಂತೆ ಎರಡೂ ಪಕ್ಷಗಳ ಮಧ್ಯೆ ಗ್ಯಾರಂಟಿ ಜಟಾಪಟಿ ಜೋರಾಗುತ್ತಿದೆ. ಈ ನಡುವೆ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ನೀಡಿರುವ ಹೇಳಿಕೆ BJP ರಾಜ್ಯ ಘಟಕದಲ್ಲಿ ಎಲ್ಲವೂ ಸರಿ ಎಲ್ಲ ಎಂಬುದನ್ನ ಹೊರ ಜಗತ್ತಿಗೆ ತೋರಿಸಿದಂತೆ ಇದೆ. ಹೀಗಾಗಿ ಕೇಂದ್ರದ ಬಿಜೆಪಿ ವರಿಷ್ಠರು ಏನ್ ಮಾಡ್ತಾರೋ, ಕಾದು ನೋಡಬೇಕಿದೆ.












Click it and Unblock the Notifications