ಕಾರ್ಯಕರ್ತ ಸಿಡಿದೆದ್ದರೆ ಹುಲ್ಲುಕಡ್ಡಿ ಅಲ್ಲಾಡಿಸಲೂ ಸಾಧ್ಯವಿಲ್ಲ!
Recommended Video
ಬೆಂಗಳೂರು, ನವೆಂಬರ್ 6 : 150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಗುರಿಯೊಂದಿಗೆ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ ಆರಂಭಸಿರುವ ಕರ್ನಾಟಕ ಬಿಜೆಪಿಗೆ ಅಸಮಾಧಾನದ ಬಿಸಿ ತಟ್ಟಿದೆ. ಪಕ್ಷದೊಳಗೆ ಭಿನ್ನಮತದ ಚಟುವಟಿಕೆಗಳಿಗೆ ಮತ್ತೆ ಜೀವ ಬಂದಿದೆ. ಯಾತ್ರೆ ಆರಂಭಗೊಂಡ ಮೂರು ದಿನದಲ್ಲಿಯೇ ಬಣ ರಾಜಕೀಯ, ಒಳಜಗಳ ಬಹಿರಂಗವಾಗಿದೆ.
ಬಿಜೆಪಿ ಪರಿವರ್ತನಾ ರಥಯಾತ್ರೆ ಮೇಲೆ ಕಲ್ಲೆಸೆತ
ಯಡಿಯೂರಪ್ಪ ಅವರು ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಳಿಕ ಪಕ್ಷದಲ್ಲಿ ಭಿನ್ನಮತೀಯ ಚಟುವಟಿಕೆಗಳು ಆರಂಭವಾಗಿತ್ತು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಆರ್ಎಸ್ಎಸ್ ನಾಯಕರ ಮಧ್ಯಸ್ಥಿಕೆಯಿಂದ ಎಲ್ಲವೂ ತೆರೆಮರೆಗೆ ಸರಿದಿದ್ದವು. ಎಲ್ಲಾ ನಾಯಕರು ಒಟ್ಟಾಗಿ ನಾವೆಲ್ಲ ಒಂದೇ ಎಂದು ಸಮಾವೇಶಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ.
ಪರಿವರ್ತನಾ ಯಾತ್ರೆ ಬಳಿಕ ತುಮಕೂರು ಬಿಜೆಪಿ ಅಸಮಾಧಾನ ಸ್ಫೋಟ!
ನವ ಕರ್ನಾಟಕ ನಿರ್ಮಾಣ ಪರಿವವರ್ತನಾ ಯಾತ್ರೆ ಉದ್ಘಾಟನಾ ಸಮಾವೇಶ ಆಯೋಜನೆ ವಿಚಾರದಲ್ಲಿ ಉಂಟಾದ ಗೊಂದಲ ಮುಂದುವರೆದಿದೆ. ಯಾತ್ರೆ ಬೆಂಗಳೂರು ಬಿಟ್ಟು ತುಮಕೂರು ತಲುಪುತ್ತಿದ್ದಂತೆ ಅಸಮಾಧಾನ ಬಹಿರಂಗವಾಗಿದೆ. ಪಕ್ಷದ ನಾಯಕರ ವಿರುದ್ಧವೇ ಮಾಜಿ ಸಚಿವ ಸೊಗಡು ಶಿವಣ್ಣ ಆರೋಪ ಮಾಡಿದ್ದು, 'ಇದು ಬಿಜೆಪಿ ಯಾತ್ರೆಯಲ್ಲ, ಕೆಜೆಪಿ ಯಾತ್ರೆ' ಎಂದು ಅಸಮಾಧಾನ ಹೊರಹಾಕಿದ್ದಾರೆ.
ಭ್ರಷ್ಟಾಚಾರದ ಸರ್ವ ದಾಖಲೆ ಮುರಿದ ಸಿದ್ದರಾಮಯ್ಯ : ಅಮಿತ್ ಶಾ ವಾಗ್ದಾಳಿ
ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಕಡೆಗಣಿಸಬಾರದು. ಬಿ.ಎಸ್.ಯಡಿಯೂರಪ್ಪ ಸುತ್ತ-ಮುತ್ತಲಿರುವ ನಾಯಕರು ತಮ್ಮ ವರ್ತನೆಯನ್ನು ತಿದ್ದಿಕೊಳ್ಳಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಯಾತ್ರೆ ಆರಂಭವಾಗಿ ಇನ್ನೂ ಮೂರು ದಿನ ಕಳೆದಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಯಾತ್ರೆ ಸಾಗಲಿದ್ದು, ಅಲ್ಲಿ ಯಾವ ಸವಾಲು ಎದುರಾಗಲಿದೆ? ಎಂಬುದು ಸದ್ಯದ ಪ್ರಶ್ನೆಯಾಗಿದೆ...
ಚಿತ್ರಗಳು: ರಾಜ್ಯದಲ್ಲಿ ಹೊಸ ಅಲೆ ಎಬ್ಬಿಸಲಿರುವ ಬಿಜೆಪಿಯ ಪರಿವರ್ತನಾ ಯಾತ್ರೆ
ಉದ್ಘಾಟನಾ ಸಮಾರಂಭದ ಗೊಂದಲ
ನವೆಂಬರ್ 2ರಂದು ಅಮಿತ್ ಶಾ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಗೆ ಚಾಲನೆ ನೀಡಿದರು. ಆದರೆ, ಈ ಕಾರ್ಯಕ್ರಮಕ್ಕೆ ನಿರೀಕ್ಷಿತ ಮಟ್ಟದಲ್ಲಿ ಜನರು ಬಂದಿರಲಿಲ್ಲ. ಖಾಲಿ ಕುರ್ಚಿಗಳು ನಾಯಕರನ್ನು ಸ್ವಾಗತಿಸಿದ್ದವು. ಇದರಿಂದಾಗಿ ಅಮಿತ್ ಶಾ ರಾಜ್ಯ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಸಮಾವೇಶದ ಆಯೋಜಕರಾದ ಆರ್.ಅಶೋಕ್, ಶೋಭಾ ಕರಂದ್ಲಾಜೆ ಅವರ ನಡುವಿನ ಸಮನ್ವಯದ ಕೊರತೆಯೇ ಇದಕ್ಕೆಲ್ಲ ಕಾರಣ ಎಂಬುದು ಪಕ್ಷದೊಳಗಿನ ಮಾತು.
ತುರುವೇಕೆರೆಯಲ್ಲಿ ಕಲ್ಲು ತೂರಾಟ ನಡೆಯಿತು
ಬೆಂಗಳೂರಿನಿಂದ ಹೊರಟ ಯಾತ್ರೆ ಪಕ್ಕದ ತುಮಕೂರು ತಲುಪುವ ವೇಳೆಗೆ ಮೊದಲ ವಿಘ್ನ ಎದುರಾಯಿತು. ತುರುವೇಕೆರೆ ಕ್ಷೇತ್ರದಲ್ಲಿ ಕಾರ್ಯಕರ್ತರು ಬಿ.ಎಸ್.ಯಡಿಯೂರಪ್ಪ ಕಾರಿನ ಮುಂದೆ ರಸ್ತೆಯಲ್ಲಿ ಮಲಗಿ ಪ್ರತಿಭಟಿಸಿದರು. ಪರಿವರ್ತನಾ ರಥ ಯಾತ್ರೆಯ ಮೇಲೆ ಕಲ್ಲು ತೂರಾಟ ನಡೆಯಿತು. 'ಇತ್ತೀಚೆಗೆ ಪಕ್ಷ ಸೇರಿದವರಿಗೆ ಮಣೆ ಹಾಕಲಾಗುತ್ತಿದೆ. ಮೂಲ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ' ಎಂಬುದು ಕಾರ್ಯಕರ್ತರ ಆರೋಪ ಮಾಡಿದರು.
‘ಕೆಜೆಪಿ ಯಾತ್ರೆ' ಅಂದ್ರು ಸೊಗಡು ಶಿವಣ್ಣ
ಶನಿವಾರ ತುಮಕೂರು ನಗರದಲ್ಲಿ ನಡೆದ ಪರಿವರ್ತನಾ ಯಾತ್ರೆಯ ವೇಳೆಯೂ ಭಿನ್ನಮತ ಬಹಿರಂಗವಾಯಿತು. ಮಾಜಿ ಸಚಿವ ಸೊಗಡು ಶಿವಣ್ಣ ಸಮಾವೇಶದಿಂದ ದೂರ ಉಳಿದರು. ಮೊದಲೇ ಯಡಿಯೂರಪ್ಪ ವಿರೋಧಿ ಬಣದ ನಾಯಕರಲ್ಲಿ ಮುಂಚೂಣಿಯಲ್ಲಿರುವ ಸೊಗಡು ಶಿವಣ್ಣ ಪಕ್ಷದ ಜಿಲ್ಲಾಧ್ಯಕ್ಷ ಜಿ.ಬಿ.ಜ್ಯೋತಿ ಗಣೇಶ್ ವಿರುದ್ಧ ಅಸಮಾಧಾನ ಹೊರಹಾಕಿದರು.
ಹಣ ಕೊಟ್ಟು ಜನರನ್ನು ಕರೆತರಲಾಗಿದೆ
ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ಸೊಗಡು ಶಿವಣ್ಣ ಅವರು, 'ತುಮಕೂರಿನಲ್ಲಿ ನಡೆದ ಸಮಾವೇಶದಲ್ಲಿ ಬಿಜೆಪಿ ಕಾರ್ಯಕರ್ತರು ಇರಲಿಲ್ಲ. 500, 1000 ರೂ. ನೀಡಿ ಕರೆದುಕೊಂಡು ಬಂದ ಜನರಿದ್ದರು. ಜಿಲ್ಲೆಯ ಎಲ್ಲಾ ಮೂಲ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ' ಎಂದು ಅಸಮಾಧಾನ ಹೊರಹಾಕಿದರು. [ಯಡಿಯೂರಪ್ಪ ಜೊತೆ ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷರು]
ತಪ್ಪುಗಳನ್ನು ಸರಿಪಡಿಸುತ್ತೇವೆ
ಎಲ್ಲರೂ ಒಟ್ಟಾಗಿ ಹೋಗಬೇಕು ಎಂದು ಎಂಟು ತಿಂಗಳ ಹಿಂದೆ ಪಕ್ಷದ ಕೇಂದ್ರ ನಾಯಕರು ಸೂಚನೆ ಕೊಟ್ಟಿದ್ದರು. ತಪ್ಪುಗಳನ್ನು ಸರಿಪಡಿಡಸುತ್ತೇವೆ ಎಂದು ಹೇಳಿದ್ದರು. ಆದರೆ, ಆ ಭರವಸೆಗಳು ಈಡೇರಿಲ್ಲ ಎಂದು ಹಲವು ನಾಯಕರು ಹೇಳುತ್ತಿದ್ದಾರೆ.
ಯಡಿಯೂರಪ್ಪ ವಿರುದ್ಧ ಅಸಮಾಧಾನ
ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಜೊತೆ ಇರುವ ನಾಯಕರು ತಮ್ಮ ವರ್ತನೆ ಬದಲಾವಣೆ ಮಾಡಿಕೊಳ್ಳದಿದ್ದರೆ ಯಾತ್ರೆ ಹೋದ ಕಡೆಯಲ್ಲ ಅಸಮಾಧಾನ ಬೀದಿಗೆ ಬರಲಿದೆ ಎಂದು ಪಕ್ಷದ ನಾಯಕರೊಬ್ಬರು ಎಚ್ಚರಿಕೆ ನೀಡಿದ್ದಾರೆ. ಮುಂದೆ ಸರ್ಕಾರ ರಚಿಸುವ ಗುರಿ ಹೊಂದಿರುವ ಬಿಜೆಪಿ ಪಕ್ಷದೊಳಗಿನ ಭಿನ್ನಮತ ಹೇಗೆ ಶಮನ ಮಾಡುತ್ತದೆ? ಕಾದು ನೋಡಬೇಕು.