ಶಿವಮೊಗ್ಗದಲ್ಲಿ ಬಿಜೆಪಿ ಆಂತರಿಕ ಕಚ್ಚಾಟ, ಕೋಮುಗಲಭೆಗಳು ಕಾಂಗ್ರೆಸ್ ಗೆಲುವಿಗೆ ಕಾರಣವಾಗಲಿದೆಯೇ?
ಶಿವಮೊಗ್ಗ, ಏಪ್ರಿಲ್. 11: ಕಳೆದ ಮೂರು ದಶಕಗಳಿಂದ ಬಿಜೆಪಿಯ ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟ ಶಿವಮೊಗ್ಗ ವಿಧಾನಸಭಾ ಕ್ಷೇತ್ರವನ್ನು ಗೆಲ್ಲುವುದು ಕೇಸರಿ ಪಕ್ಷಕ್ಕೆ ಈ ಬಾರಿ ಕಷ್ಟವಾಗಬಹುದು ಎನ್ನಲಾಗುತ್ತಿದೆ. ಕಳೆದೆರಡು ವರ್ಷಗಳಿಂದ ಈ ಕ್ಷೇತ್ರದಲ್ಲಿ ಆಗಾಗ್ಗೆ ನಡೆಯುತ್ತಿರುವ ಕೋಮುಗಲಭೆಗಳು ಮತ್ತು ಬಿಜೆಪಿಯ ಆಂತರಿಕ ಕಿತ್ತಾಟ ಇದಕ್ಕೆ ಕಾರಣವಾಗಿದೆ.
2022 ರ ಆರಂಭದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆ, ಮಾಲ್ನಲ್ಲಿ ವೀರ ಸಾವರ್ಕರ್ ಅವರ ಪೋಸ್ಟರ್ ಅನ್ನು ಹಾಕುವುದು ಮತ್ತು ಚಾಕು ಇರಿತದ ಘಟನೆಯ ನಂತರ ಕ್ಷೇತ್ರದಲ್ಲಿ ಪ್ರಮುಖ ಕೋಮುಗಲಭೆಗಳು ನಡೆದಿವೆ. ಈ ಸಮಸ್ಯೆಗಳು ನಗರದಲ್ಲಿ ಆಗಾಗ್ಗೆ ಬಂದ್ಗಳಿಗೆ ಕಾರಣವಾಗಿದೆ. ಇದರಿಂದ ವ್ಯಾಪಾರ ಮಳಿಗೆ ಗಳು ಬಂದ್ ಆಗಿವೆ. ಆರ್ಥಿಕ ವಾತಾವರಣದ ಮೇಲೆ ಗಂಭೀರ ಪರಿಣಾಮ ಬೀರಿದೆ.

ಈ ಬಗ್ಗೆ ಬಿಜೆಪಿ ಎಂಎಲ್ಸಿ ಆಯನೂರು ಮಂಜುನಾಥ್, ಹಾಲಿ ಶಾಸಕ ಕೆ.ಎಸ್.ಈಶ್ವರಪ್ಪ ಅವರು ದ್ವೇಷದ ಪ್ರಚಾರ ಮಾಡುತ್ತಿದ್ದಾರೆ ಮತ್ತು ಕೋಮು ಗಲಭೆಗಳನ್ನು ಆರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಕ್ಷೇತ್ರದಿಂದ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಂಜುನಾಥ್, ಈಶ್ವರಪ್ಪ ಅವರು ಇಲ್ಲಿಂದ ಅಭ್ಯರ್ಥಿಯಾಗುವುದಿಲ್ಲ ಎಂಬ ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈಗಾಗಲೇ ಶಾಸಕ ಕೆ.ಎಸ್ ಈಶ್ವರಪ್ಪ ಚುನಾವಣೆಗೆ ಮುಂಚಿತವಾಗಿ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಇದರ ಬದಲಾಗಿ ಈಶ್ವರಪ್ಪ ಅವರು ತಮ್ಮ ಪುತ್ರ ಕೆ.ಇ.ಕಾಂತೇಶ್ಗೆ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಇದು ಎರಡನೇ ಹಂತದ ನಾಯಕರ ನಿರೀಕ್ಷೆಯ ಮೇಲೆ ಪರಿಣಾಮ ಬೀರಿದೆ ಎಂದು ಮೂಲಗಳು ತಿಳಿಸಿವೆ.
ಕೆ.ಇ. ಕಾಂತೇಶ್ಗೆ ಪಕ್ಷದ ಟಿಕೆಟ್ ನೀಡುವುದನ್ನು ಆಯನೂರು ಮಂಜುನಾಥ್ ಬಹಿರಂಗವಾಗಿಯೇ ಖಂಡಿಸಿದ್ದಾರೆ. ಈಶ್ವರಪ್ಪ ವಂಶ ರಾಜಕಾರಣವನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಬಿಜೆಪಿಯ ಆಂತರಿಕ ಕಲಹ ಕಾಂಗ್ರೆಸ್ನಲ್ಲಿ ಗೆಲುವಿನ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಪಕ್ಷದಲ್ಲಿ 11 ಮಂದಿ ಆಕಾಂಕ್ಷಿಗಳಿದ್ದಾರೆ.

ಆಯನೂರು ಮಂಜುನಾಥ್ ಅವರಿಗೆ ಬಿಜೆಪಿ ಟಿಕೆಟ್ ಸಿಗುವುದಿಲ್ಲ ಎಂಬ ಕಾರಣಕ್ಕೆ ಅವರನ್ನು ಕಾಮಗ್ರೆಸ್ಗೆ ಸೇರುವಂತೆ ಹಲವು ಒತ್ತಾಯಿಸಿದ್ದಾರೆ. ಆದರೆ, "ಬಿಜೆಪಿ ಈ ನಿಲುವು ಪ್ರಕಟ ಮಾಡಿದ ಮೇಲೆ ಬಿಜೆಪಿಯ ಅನೇಕರು ನನ್ನ ನಿಲುವನ್ನು ಬೆಂಬಲಿಸಿದ್ದಾರೆ. ನನ್ನ ನಡೆ ಬಿಜೆಪಿಯಲ್ಲಷ್ಟೇ ಅಲ್ಲ. ಕಾಂಗ್ರೆಸ್ ನಲ್ಲೂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ನನಗೆ ಬಿಜೆಪಿಯಲ್ಲಿ ಟಿಕೆಟ್ ಸಿಗುವುದಿಲ್ಲ ಎಂದು ಖಚಿತವಾಗಿದೆ. ಹಾಗಾಗಿ ಪಕ್ಷೇತರನಾಗಿ ಸ್ಪರ್ಧಿಸುವುದು ನಿಶ್ಚಿತ" ಎಂದು ಮಂಜುನಾಥ್ ತಿಳಿಸಿದ್ದಾರೆ. ಅವರನ್ನು ಪಕ್ಷಕ್ಕೆ ಸೆಳೆಯಲು ಕಾಂಗ್ರೆಸ್ ಕಸರತ್ತು ನಡೆಸಿದೆ.
ರಾಜ್ಯದಲ್ಲಿ ನಡೆದ ಕಳೆದ ಹಲವು ಚುನಾವಣೆಗಳಲ್ಲಿ, ಬಿಜೆಪಿಯು ಪ್ರಮುಖ ಸಮುದಾಯಗಳಾದ ಬ್ರಾಹ್ಮಣರು, ಲಿಂಗಾಯತರು, ಒಕ್ಕಲಿಗರು ಮತ್ತು ಇತರ ಸಣ್ಣ ಸಮುದಾಯಗಳಾದ ಕ್ಷತ್ರಿಯರು, ದಾರ್ಜಿ ಮರಾಠರು, ಮಾರ್ವಾಡಿಗಳು ಮತ್ತು ತಮಿಳರ ಬೆಂಬಲವನ್ನು ಗಳಿಸಲು ಹಿಂದೂ ಧರ್ಮದ ವಿಚಾರವನ್ನು ಬಳಸಿಕೊಂಡಿದೆ. ಶಿವಮೊಗ್ಗ ಕ್ಷೇತ್ರದಲ್ಲಿ ಮುಸ್ಲಿಂ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮತದಾರರು ಗಣನೀಯ ಸಂಖ್ಯೆಯಲ್ಲಿದ್ದಾರೆ.
ಎರಡು ಪಟ್ಟಿಗಳನ್ನು ಬಿಡುಗಡೆ ಮಾಡಿರುವ ಕಾಂಗ್ರೆಸ್ ತಮ್ಮ ಪಕ್ಷದ ವರಿಷ್ಠರು ಅಭ್ಯರ್ಥಿಗಳನ್ನು ಘೋಷಿಸಲು ಕಾಯುತ್ತಿವೆ. ಕಳೆದ ನಾಲ್ಕು ದಶಕಗಳಲ್ಲಿ 1999ರಲ್ಲಿ ಕಾಂಗ್ರೆಸ್ನ ಎಚ್ಎಂ ಚಂದ್ರಶೇಖರಪ್ಪ ಮಾತ್ರ ಇಲ್ಲಿ ಗೆದ್ದಿದ್ದಾರೆ. "ನಮ್ಮ ಪಕ್ಷ ಲಿಂಗಾಯತ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಇಡೀ ಸಮುದಾಯ ನಮ್ಮೊಂದಿಗೆ ಇರುವುದರಿಂದ ಗೆಲುವಿನ ಸಾಧ್ಯತೆ ಹೆಚ್ಚಾಗಿರುತ್ತದೆ" ಎಂದು ಹೆಸರು ಹೇಳಲಿಚ್ಛಿಸದ ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಭವಿಷ್ಯ ನುಡಿದಿದ್ದಾರೆ.












Click it and Unblock the Notifications