ರೆಸಾರ್ಟ್ನಲ್ಲಿ ಬಿಜೆಪಿ ಅಸಮಾಧಾನಿತ ನಾಯಕರಿಂದ ಸಭೆ: ಹೋರಾಟ ಕುರಿತು ಮಹತ್ವದ ಚರ್ಚೆ
ಬೆಳಗಾವಿ, ಆಗಸ್ಟ್ 12: ರಾಜ್ಯ ಬಿಜೆಪಿಯಿಂದ ಮುಡಾ ಹಗರಣ ವಿರೋಧಿಸಿ ನಡೆಸಿದ್ದ ಪಾದಯಾತ್ರೆ ಯಶಸ್ವಿಯಾಗಿದೆ. ಇದರ ಬೆನ್ನಲ್ಲೆ ಪಕ್ಷದೊಳಗಿನ ಅಸಮಾಧಾನ ನಾಯಕರು ಜಿಲ್ಲೆಯ ರೆಸಾರ್ಟ್ನಲ್ಲಿ ಒಂದಾಗಿದ್ದಾರೆ. ಎಲ್ಲರು ಕೂಡಿ ಸಭೆ ನಡೆಸಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಈ ಸಭೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ವಿರುದ್ಧ ಅತೃಪ್ತ ನಾಯಕರ ಸಭೆಯಾಗಿದೆ.
ಈ ಸಭೆಯಲ್ಲಿ ಬಿಜೆಪಿಯಿಂದ ಟಿಕೆಟ್, ಸ್ಥಾನ ವಂಚಿತರು ಇದ್ದಾರೆ. ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಮಾತನಾಡಿದ ನಾಯಕರು ಪಾಲ್ಗೊಂಡಿದ್ದಾರೆ.

ಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಂಸದ ಪ್ರತಾಪ್ ಸಿಂಹ್, ಅಣ್ಣಾ ಸಾಹೇಬ್ ಜೊಲ್ಲೆ, ಜಿಎಂ ಸಿದ್ದೇಶ್ವರ, ಮಾಜಿ ಸಚಿವರಾದ ಕುಮಾರ್ ಬಂಗಾರಪ್ಪ, ಅರವಿಂದ್ ಲಿಂಬಾವಳಿ ಮತ್ತು ರಮೇಶ್ ಜಾರಕಿಹೊಳಿ ಹಾಗೂ ಜೆಡಿಎಸ್ ನಾಯಕರಾದ ಸಂತೋಷ್ ಸೇರಿದಂತೆ ಹಲವರು ಸೇರಿ ಒಂದು ಹಂತದ ಸಭೆ ನಡೆಸಿದ್ದಾರೆ. ಮಹತ್ವದ ವಿಷಯಗಳನ್ನು ಚರ್ಚಿಸಿದ್ದು, ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸುವುದಾಗಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮುಡಾ ಹಗರಣ ವಿರುದ್ಧ ಪ್ರತಿಭಟನೆ, ಪಾದಯಾತ್ರೆ ಆಗಿದೆ, ಇದೀಗ ಪರಿಶಿಷ್ಟ ಜಾತಿ ವರ್ಗದವರ ಕಲ್ಯಾಣಕ್ಕಾಗಿ ಹಂಚಿದ್ದ ಹಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿಗಳಿಗೆ ಬಳಕೆ ಮಾಡಿಕೊಂಡಿದೆ. ಅಲ್ಲದೇ ವಾಲ್ಮಿಕಿ ಹಗರಣದಲ್ಲಿ ನಡೆದ ಭ್ರಷ್ಟಾಚಾರ ವಿರುದ್ಧ ಕೂಡಲಸಂಗಮದಿಂದ ಬಳ್ಳಾರಿವರೆಗೆ ಇನ್ನೊಂದು ತಿಂಗಳಲ್ಲಿ ಪಾದಯಾತ್ರೆ ಮಾಡಲಾಗುವುದು ಎಂದರು.
ರಾಜ್ಯವ್ಯಾಪಿ ಹೋರಾಟಕ್ಕಾಗಿ ಸಭೆ, ಪಕ್ಷದ ವಿರುದ್ಧ ಅಲ್ಲ
ಈ ಸಭೆಗೆ ಕೆಲವರು ರೆಕ್ಕೆ ಪುಕ್ಕ ಹಚ್ಚಿ ಮಾತನಾಡಿದ್ದಾರೆ. ಇದು ಅತೃಪ್ತ ನಾಯಕರ ಸಭೆ ಎಂದೆಲ್ಲ ಬಿಂಬಿಸುವ ಕೆಲಸವಾಗುತ್ತಿದೆ. ಅಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಯಡಿಯೂರಪ್ಪ ಅವರ ವಿರುದ್ಧ ಅಸಮಾಧಾನಿತ ನಾಯಕರ ಸಭೆ ಎಂದು ಹೇಳಲಾಗಿದೆ. ಈ ಇಬ್ಬರು ನಾಯಕರ ವಿರುದ್ಧ ಕೇಂದ್ರ ನಾಯಕರಿಗೆ ದೂರು ನೀಡಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ. ಈ ರೀತಿ ಏನು ಇಲ್ಲ, ಇದು ಪಕ್ಷದ ವಿರುದ್ಧ ಚಟುವಟಿಕೆ ಅಲ್ಲ ಎಂದು ನಾಯಕರು ಸ್ಪಷ್ಟಪಡಿಸಿದ್ದಾರೆ.

ಗಣೇಶ್ ಹಬ್ಬದ ನಂತರ ಪಾದಯಾತ್ರೆ
ರಾಜ್ಯ ಸರ್ಕಾರದ ವಿರುದ್ಧ ರಾಜ್ಯವಾಪಿ ಹೋರಾಟವನ್ನು (ಪಾದಯಾತ್ರೆ) ಗಣೇಶ್ ಹಬ್ಬದ ನಂತರ ಹಮ್ಮಿಕೊಳ್ಳಲಾಗುವುದು. ನಾವು ಕೇವಲ ಮೈಸೂರಿಗೆ ಸೀಮಿತವಾಗಿ ಪಾದಯಾತ್ರೆ ಮಾಡುತ್ತಿಲ್ಲ. ಈ ಸಂಬಂಧ ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದೇವೆ. ಈ ವೇಳೆ ಮತ್ತಷ್ಟು ನಾಯಕರು ಸಭೆಗೆ ಆಗಮಿಸಲಿದ್ದು, ಕೇಂದ್ರ ನಾಯಕರನ್ನು ಆಹ್ವಾನಿಸಲು ಯೋಚನೆ ನಡೆಸಿದ್ದೇವೆ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷರು ತಮ್ಮೊಂದಿಗೆ ಚರ್ಚಿಸದೇ ಮೈಸೂರು ಪಾದಯಾತ್ರೆ ಘೋಷಿಸಿದರು. ಆದರೆ ನಾವು ಹಾಗೆ ಮಾಡುವುದಿಲ್ಲ ಎಲ್ಲ ಮುಖಂಡರ ಜೊತೆಗೆ ಚರ್ಚಿಸಿ ಮುಂದಿನ ಪಾದಯಾತ್ರೆ ಬಗ್ಗೆ ನಿರ್ಧರಿಸುತ್ತೇವೆ. ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಲು, ಮುಂದಿನ ಚುನಾವಣೆಗಳ ದೃಷ್ಟಿಯಿಂದ ಸಭೆ, ಪಕ್ಷ ಸಂಘಟನೆಗಾಗಿ ನಾವು ಸಭೆ ಸೇರಿದ್ದೇವೆ ಎಂದು ಅರವಿಂದ್ ಲಿಂಬಾವಳಿ ಪ್ರತಿಕ್ರಿಯಿಸಿದರು.
ವಿಜಯೇಂದ್ರಗೆ ಯತ್ನಾಳ್ ಟಾಂಗ್
ವಿಧಾನಸಭೆಯಲ್ಲಿ ಸೂಲು ಕಂಡ ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲೂ ನಿರೀಕ್ಷೆಯಷ್ಟು ಸೀಟು ಬರಲಿಲ್ಲ. ಇದೆಲ್ಲ ಗಮನಿಸಿ ಸಭೆಯಲ್ಲಿ ಚರ್ಚಿಸಿದ್ದೇವೆ. ನಮ್ಮ ಲೋಪ ಸರಿಪಡಿಸಿಕೊಂಡು ಮುನ್ನಡೆಯುತ್ತೇವೆ ಎಂದು ಲಿಂಬಾವಳಿ ಹೇಳಿದರು. ಇನ್ನೂ ಯತ್ನಾಳ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ನಾವು ಯಾರೋ ಒಬ್ಬರನ್ನು ಹೀರೋ ಮಾಡಲು ಪಾದಯಾತ್ರೆ ಹಮ್ಮಿಕೊಳ್ಳುತ್ತಿಲ್ಲ ಎಂದು ಪರೋಕ್ಷವಾಗಿ ಬಿವೈ ವಿಜಯೇಂದ್ರ ಅವರಿಗೆ ಟಾಂಗ್ ನೀಡಿದರು.












Click it and Unblock the Notifications