ಅಭ್ಯರ್ಥಿಗಳ ಆಯ್ಕೆ ಕಸರತ್ತು, ಯಡಿಯೂರಪ್ಪ ನಿವಾಸದಲ್ಲಿ ಸರಣಿ ಸಭೆ
Recommended Video

ಬೆಂಗಳೂರು, ಮಾರ್ಚ್ 13: ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ವೇಗ ಪಡೆದುಕೊಂಡಿದ್ದು, ಯಡಿಯೂರಪ್ಪ ಅವರ ನಿವಾಸದಲ್ಲಿ ಸರಣಿ ಸಭೆಗಳು ನಡೆಯುತ್ತಿವೆ.
ಕ್ಷೇತ್ರವಾರು ಮುಖಂಡರು ಯಡಿಯೂರಪ್ಪ ಅವರ ನಿವಾಸದಲ್ಲಿ ನಿನ್ನೆಯಿಂದಲೂ ಸಭೆಯಲ್ಲಿ ನಿರತರಾಗಿದ್ದು, ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಈ ಸಭೆಗಳನ್ನು ಕರೆಯಲಾಗುತ್ತಿದೆ.
ಈಗಾಗಲೇ ಒಂದು ಅಭ್ಯರ್ಥಿಗಳ ಪಟ್ಟಿ ತಯಾರಾಗಿದ್ದು, ಇದೇ ಸಭೆಯಲ್ಲಿ ಸ್ಥಳೀಯ ಬಿಜೆಪಿ ಮುಖಂಡರ ಅನುಮೋದನೆಯನ್ನು ಪಡೆಯಲಾಗುತ್ತಿದೆ. ವಿರೋಧಗಳಿದ್ದರೆ ಯಡಿಯೂರಪ್ಪ ಮುಂದಾಳತ್ವದಲ್ಲಿ ಅದನ್ನು ಚರ್ಚಿಸಿ ಬಗೆಹರಿಸಿ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ.

ಮಾರ್ಚ್ 18 ಪಟ್ಟಿ ಬಿಡುಗಡೆ
ಮಾರ್ಚ್ 18 ಕ್ಕೆ ಎಲ್ಲ ರಾಜ್ಯದ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಲಿದೆ ಹಾಗಾಗಿ ಆ ಒಳಗಾಗಿ ಅಭ್ಯರ್ಥಿ ಆಯ್ಕೆಯಲ್ಲಿನ ಎಲ್ಲ ಗೊಂದಲಗಳನ್ನು ತೊಡೆದುಹಾಕಲು ಹೈಕಮಾಂಡ್ ರಾಜ್ಯ ಬಿಜೆಪಿಗೆ ಹೇಳಿದೆ.

ಕ್ಷೇತ್ರವಾರು ಬಿಜೆಪಿ ಮುಖಂಡರ ಸಭೆ
ಹೈಕಮಾಂಡ್ ಆದೇಶದಲ್ಲಿ ಈ ಕ್ಷೇತ್ರವಾರು ಮುಖಂಡರ ಸಭೆಗಳು ನಡೆಯುತ್ತಿದ್ದು, ಅಭ್ಯರ್ಥಿ ಘೋಷಣೆಗೆ ಮೊದಲೇ ಮುಖಂಡರ ನಡುವಿನ ಅಸಮಾಧಾನಗಳನ್ನು ಶಮನಗೊಳಿಸಿ ಪರಸ್ಪರ ಹೊಂದಾಣಿಕೆಯಿಂದ ಚುನಾವಣೆ ಎದುರಿಸುವಂತೆ ಮಾಡುವತ್ತ ರಾಜ್ಯ ಬಿಜೆಪಿ ಚಿತ್ತ ಹರಿಸಿದೆ.

ಅಸಮಾಧಾನ ನಿವಾರಣೆಗೆ ಯತ್ನ
ಇದೊಂದು ಉತ್ತಮ ತಂತ್ರವಾಗಿದೆ. ಕಾಂಗ್ರೆಸ್-ಜೆಡಿಎಸ್ ಸೀಟು ಹಂಚಿಕೆ ಕಾರಣದಿಂದ ಹಲವು ಕ್ಷೇತ್ರಗಳಲ್ಲಿ ತಮ್ಮ ಮುಖಂಡರನ್ನು, ನಿಷ್ಠಾವಂತ ಕಾರ್ಯಕರ್ತರನ್ನು ಕಳೆದುಕೊಳ್ಳುತ್ತಿದೆ. ವಿಶೇಷವಾಗಿ ಹಳೆ ಮೈಸೂರು ಭಾಗದ ಕ್ಷೇತ್ರಗಳಲ್ಲಿ. ಆದರೆ ಬಿಜೆಪಿ ಈ ಅವಸ್ಥೆಗೆ ಬೀಳದಂತೆ ಎಚ್ಚರಿಕೆ ವಹಿಸುತ್ತಿದೆ.

ಆಂತರಿಕ ಸಮೀಕ್ಷೆ ನಡೆಸಲಾಗಿದೆ
ಮುಖಂಡರ, ಕಾರ್ಯಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಆಂತರಿಕ ಸಮೀಕ್ಷೆ ನಡೆಸಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತಿದೆ. ಕೆಲವು ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಲಾಗುತ್ತಿದ್ದು, ಕೆಲವು ಸಂಸದರ ಕ್ಷೇತ್ರಗಳನ್ನು ಬದಲಾಯಿಸಲಾಗುತ್ತಿದೆ.












Click it and Unblock the Notifications