ಪೊಲೀಸ್ ವಾಹನದಲ್ಲಿ ಹಣ ಸಾಗಣೆ, ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು
ಬೆಂಗಳೂರು, ಮೇ 09 : ಲೋಕಸಭಾ ಚುನಾವಣೆ ಸಮಯದಲ್ಲಿ ಕರ್ನಾಟಕದಲ್ಲಿ ಪೊಲೀಸ್ ವಾಹನದಲ್ಲಿ ಹಣ ಸಾಗಣೆ ಮಾಡಲಾಗಿದೆ ಎಂದು ಬಿಜೆಪಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಆಯೋಗ ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬಿಜೆಪಿ ಮನವಿ ಮಾಡಿದೆ.
ಕರ್ನಾಟಕ ಬಿಜೆಪಿ ಉಸ್ತುವಾರಿ ಕೆ.ಮುರಳೀಧರರಾವ್, ಮಾಜಿ ಸಚಿವ ಅರವಿಂದ್ ಲಿಂಬಾವಳಿ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಗುರುವಾರ ಕೇಂದ್ರ ಚುನಾವಣಾ ಆಯೋಗಕ್ಕೆ ಈ ಕುರಿತು ದೂರು ನೀಡಿದ್ದಾರೆ.
ಹಾಸನ ಲೋಕಸಭಾ ಕ್ಷೇತ್ರದಲ್ಲಿ ಏಪ್ರಿಲ್ 18ರಂದು ಮತದಾನ ನಡೆದಿತ್ತು. ಮತದಾನದ ಹಿಂದಿನ ದಿನ ಅಂದರೆ ಏಪ್ರಿಲ್ 17ರಂದು ಹೊಳೆನರಸೀಪುರದ ಚನ್ನಾಂಬಿಕಾ ಚಿತ್ರಮಂದಿರದ ಮುಂಭಾಗದಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಬೆಂಗಾವಲು ಪಡೆ ವಾಹನದಲ್ಲಿ 1.2 ಲಕ್ಷ ಹಣ ಪತ್ತೆಯಾಗಿತ್ತು.
ಚನ್ನಾಂಬಿಕಾ ಚಿತ್ರಮಂದಿರದ ಸಮೀಪವೇ ಎಚ್.ಡಿ.ರೇವಣ್ಣ ನಿವಾಸವಿದೆ. ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿದ್ದರು. ಬಿಜೆಪಿಯಿಂದ ಎ.ಮಂಜು ಅಭ್ಯರ್ಥಿ.
ಹಣ ಪತ್ತೆಯಾದ ಬಗ್ಗೆ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಚುನಾವಣೆ ಮುಗಿದು ಇಷ್ಟು ದಿನದ ಬಳಿಕ ಬಿಜೆಪಿ ನಾಯಕರು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದಾರೆ, ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ...

ಇನ್ನೋವಾ ಕಾರಿನಲ್ಲಿ ಹಣ ಪತ್ತೆ
ಕೆಎ 01, ಎಂಎಚ್ 4477 ಕಾರಿನಲ್ಲಿ ಹೊಳೆನರಸೀಪುರದಲ್ಲಿ 1.2 ಲಕ್ಷ ಹಣ ಪತ್ತೆಯಾಗಿತ್ತು. ಈ ಕಾರು ಬೆಂಗಳೂರು ಪೊಲೀಸರಿಗೆ ಸೇರಿದ್ದಾಗಿತ್ತು. ಏಪ್ರಿಲ್ 16ರಂದು ಹಣ ಸಿಕ್ಕ ಬಗ್ಗೆ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ಕಾರು ಪೊಲೀಸ್ ಇಲಾಖೆ ಹೆಸರಿನಲ್ಲಿ ನೋಂದಣಿಯಾದ ಬಗ್ಗೆಯೂ ದಾಖೆಗಳನ್ನು ಆಯೋಗಕ್ಕೆ ಸಲ್ಲಿಕೆ ಮಾಡಲಾಗಿದೆ.

ಚುನಾವಣಾ ಅಕ್ರಮ
ಲೋಕಸಭಾ ಚುನಾವಣೆಯ ಸಮಯದಲ್ಲಿ ಪೊಲೀಸ್ ವಾಹನವನ್ನು ದುರ್ಬಳಕೆ ಮಾಡಿಕೊಂಡು ಅದರಲ್ಲಿ ಹಣ ಸಾಗಣೆ ಮಾಡುವುದು ಚುನಾವಣಾ ಆಕ್ರಮವಾಗಿದೆ. ಈ ಪ್ರಕರಣದ ಬಗ್ಗೆ ಸೂಕ್ತವಾದ ತನಿಖೆಯಾಗಬೇಕು. ಇದರಲ್ಲಿ ಪೊಲೀಸ್ ಅಧಿಕಾರಿಗಳು ಭಾಗಿಯಾದ ಬಗ್ಗೆ ಅನುಮಾನಗಳಿದ್ದು, ಆ ಕುರಿತು ತನಿಖೆ ನಡೆಯಬೇಕು ಎಂದು ಬಿಜೆಪಿ ದೂರಿನಲ್ಲಿ ಒತ್ತಾಯಿಸಿದೆ.

ಕಾನೂನು ದುರುಪಯೋಗ
ಕರ್ನಾಟಕ ಸರ್ಕಾರ ಚುನಾವಣೆ ಸಮಯದಲ್ಲಿ ಕಾನೂನನ್ನು ದುರ್ಬಳಕೆ ಮಾಡಿಕೊಂಡಿದೆ. ಸರ್ಕಾರಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಚುನಾವಣಾ ಆಕ್ರಮ ನಡೆಸಿದೆ. ಚುನಾವಣೆಯಲ್ಲಿ ಹಣ ಹಂಚಲು ಪೊಲೀಸ್ ವಾಹನ ಬಳಕೆ ಮಾಡಿಕೊಂಡ ಬಗ್ಗೆ ಆಯೋಗ ಸೂಕ್ತವಾದ ತನಿಖೆಯನ್ನು ನಡೆಸಬೇಕು ಎಂದು ಬಿಜೆಪಿ ಮನವಿ ಮಾಡಿದೆ.

ಸ್ವತಂತ್ರ ಸಂಸ್ಥೆಯಿಂದ ತನಿಖೆ ಮಾಡಿಸಿ
ಪೊಲೀಸ್ ವಾಹನದಲ್ಲಿ ಹಣ ಸಾಗಣೆ ಮಾಡಿದ ಬಗ್ಗೆ ಸ್ವತಂತ್ರ ಸಂಸ್ಥೆಯಿಂದ ತನಿಖೆ ಮಾಡಿಸಿ, ಕರ್ನಾಟಕದವರಲ್ಲದ ಪ್ರಾಮಾಣಿಕ ಅಧಿಕಾರಿಗಳಿಂದ ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಬಿಜೆಪಿ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.











Click it and Unblock the Notifications