CT Ravi Case: ಸಿ.ಟಿ. ರವಿ ಭದ್ರತೆ ವ್ಯವಸ್ಥೆ, ನ್ಯಾಯಾಂಗ ತನಿಖೆಗೆ ರಾಜ್ಯಪಾಲರಿಗೆ ಬಿಜೆಪಿ ಮನವಿ: ಆರ್.ಅಶೋಕ್
ಬೆಂಗಳೂರು, ಡಿಸೆಂಬರ್24: ಪ್ರಾಣರಕ್ಷಣೆ ದೃಷ್ಟಿಯಿಂದ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರಿಗೆ ಸೂಕ್ತವಾದ ಬಂದೋಬಸ್ತ್ ಒದಗಿಸಿ ಕೊಡಬೇಕು. ಈ ತನಿಖೆಯ ನಿಷ್ಪಕ್ಷಪಾತ ನ್ಯಾಯಾಂಗ ತನಿಖೆ ನಡೆಸಲು ಸೂಚಿಸುವಂತೆ ಗೌರವಾನ್ವಿತ ರಾಜ್ಯಪಾಲರಿಗೆ ಮನವಿ ಮಾಡಿರುವುದಾಗಿ ವಿಪಕ್ಷ ನಾಯಕ ಆರ್.ಅಶೋಕ್ ಅವರು ತಿಳಿಸಿದರು.
ರಾಜಭವನಕ್ಕೆ ಬಿಜೆಪಿ ನಿಯೋಗವು ಭೇಟಿ ನೀಡಿದ ಬಳಿಕ ಇಂದು (ಮಂಗಳವಾರ) ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸಿ.ಟಿ.ರವಿ ಅವರ ಬಂಧನದ ಬಳಿಕ ಕ್ಷಣಕ್ಷಣಕ್ಕೂ ಫೋನ್ ಬರುತ್ತಿತ್ತು. ನಾನು ಅಲ್ಲಿದ್ದ ಹಲವು ಗಂಟೆ ಕಾಲ ಕಮೀಷನರ್ ಫೋನ್ ಬಿಟ್ಟೇ ಇಲ್ಲ. ಮುಖ್ಯಮಂತ್ರಿ ಫೋನ್ ಮಾಡಿದ್ದರೇ? ಡಿಸಿಎಂ ಫೋನ್ ಮಾಡುತ್ತಿದ್ದರೇ? ಇದೆಲ್ಲ ಸಾಬೀತಾಗಿ ರಾಜಕೀಯ ಕೇಸೇ ಅಲ್ಲವೇ ಎಂಬುದು ಗೊತ್ತಾಗಬೇಕಿದೆ ಎಂದು ತಿಳಿಸಿದರು.

ನಾನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಜನಾರ್ದನ ರೆಡ್ಡಿ, ಕೇಶವ ಪ್ರಸಾದ್, ಗೋಪಿನಾಥ ರೆಡ್ಡಿ ಮೊದಲಾದವರು ಸುಮಾರು ಅರ್ಧ ಗಂಟೆ ಕಾಲ ಸಿ.ಟಿ.ರವಿ ಅವರ ಬಂಧನ, ಬಳಿಕ ಅವರನ್ನು ನಡೆಸಿಕೊಂಡ ರೀತಿ, ಕೊಟ್ಟ ಚಿತ್ರಹಿಂಸೆ, ಊಟ ಕೊಡದೆ 400- 500 ಕಿಮೀ ಸುತ್ತಾಡಿಸಿದ ಬಗ್ಗೆ ತಿಳಿಸಿದ್ದೇವೆ ಎಂದರು.
ನಕ್ಸಲ್ ಏರಿಯಾವಾದ ಚಿಕ್ಕಮಗಳೂರಿನಿಂದ ಬಂದಿದ್ದು, ಮುಸ್ಲಿಂ ಉಗ್ರವಾದಿಗಳಿಂದ ಅವರಿಗೆ ಬೆದರಿಕೆ ಇದೆ. ಅವರಿಗೆ ಜೀಪ್ ಭದ್ರತೆಯನ್ನೂ ಹಿಂದೆ ನೀಡಲಾಗಿತ್ತು ಎಂದು ಗಮನ ಸೆಳೆದರು. ಅವರನ್ನು ಅಜ್ಞಾತ ಸ್ಥಳಕ್ಕೆ, ಅರಣ್ಯ, ಕ್ವಾರಿ, ಕಬ್ಬಿನಗದ್ದೆಗೆ ಕರೆದುಕೊಂಡು ಹೋದುದು ಅನುಮಾನ ಮೂಡಿಸುವಂತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪೊಲೀಸ್ ಅಧಿಕಾರಿ ಒಬ್ಬ ವ್ಯಕ್ತಿಯನ್ನು ಸುರಕ್ಷಿತವಾಗಿ ಇಡುವ ದೃಷ್ಟಿಯಿಂದ ನಾವು ಕಬ್ಬಿನ ಗದ್ದೆಗೆ, ಫಾರೆಸ್ಟ್ಗೆ ಕರೆದುಕೊಂಡು ಹೋದುದಾಗಿ ಹೇಳಿದ್ದಾರೆ. ಇನ್ಮೇಲೆ ಕಬ್ಬಿನಗದ್ದೆ, ಅರಣ್ಯ ಪ್ರದೇಶ ಸೇಫ್. ಇನ್ನು ಮೇಲೆ ಯಾರನ್ನೇ ಬಂಧಿಸಿದರೂ ಕೂಡ ಸೀದಾ ಕಬ್ಬಿನಗದ್ದೆಗೆ ಕರೆದುಕೊಂಡು ಹೋಗಬೇಕು ಎಂದು ಆರ್.ಅಶೋಕ್ ಅವರು ವ್ಯಂಗ್ಯವಾಡಿದರು. ಪೊಲೀಸ್ ಠಾಣೆ ಸುರಕ್ಷಿತವಲ್ಲ ಎಂದು ತಿಳಿಸಿದರು. ಇದೊಂದು ಬಫೂನ್ ಥರ ಸರಕಾರ ಎಂದು ಟೀಕಿಸಿದರು. ಇಷ್ಟು ಕೆಟ್ಟದಾಗಿ ಯಾರೂ ಸರಕಾರ ನಡೆಸಿಯೇ ಇಲ್ಲ ಎಂದು ಆಕ್ಷೇಪಿಸಿದರು.
ಸಭಾಪತಿ ತೀರ್ಮಾನವೇ ಮುಖ್ಯ, ಅಂತಿಮ: ಬಸವರಾಜ ಬೊಮ್ಮಾಯಿ
ಈ ಪ್ರಕರಣದಲ್ಲಿ ಸದನದ ಅಂದರೆ ವಿಧಾನಪರಿಷತ್ತಿನ ಒಳಗಿನ ವಿಚಾರಗಳಿಗೆ ಸಭಾಪತಿಯ ತೀರ್ಮಾನವೇ ಬಹಳ ಮುಖ್ಯ ಮತ್ತು ಅದುವೇ ಅಂತಿಮ ಎಂದು ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯಪಟ್ಟರು.
ಸಿ.ಟಿ.ರವಿಯವರಿಗೆ ವಿಧಾನಸೌಧದೊಳಗೆ ಹಲ್ಲೆ ಯತ್ನ ಮಾಡಿದ್ದು ಯಾರು? ಧಮಕಿ ಹಾಕಿದ್ದು ಯಾರು? ಪೊಲೀಸರು ಒಳಕ್ಕೆ ಬಂದು ಬಂಧಿಸಲು ಯಾರು ಅನುಮತಿ ಕೊಟ್ಟರು? ಸುತ್ತಾಡಿಸಿದ್ದು, ಚಿತ್ರಹಿಂಸೆ ನೀಡಿದ ಬಗ್ಗೆ ತನಿಖೆ ಆಗಲಿ ಎಂದು ಒತ್ತಾಯಿಸಿದರು.
ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಜನಾರ್ದನ ರೆಡ್ಡಿ, ಶಾಸಕರಾದ ಮುನಿರಾಜು, ಎಸ್.ರಘು, ವಿಧಾನಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಕೇಶವ ಪ್ರಸಾದ್, ಗೋಪಿನಾಥ ರೆಡ್ಡಿ ಮೊದಲಾದವರು ಬಿಜೆಪಿ ನಿಯೋಗದಲ್ಲಿದ್ದರು.












Click it and Unblock the Notifications