ಕರ್ನಾಟಕ ರಾಜಕಾರಣದಲ್ಲಿ ಬಿಟ್ಕಾಯಿನ್ ಸದ್ದು
ಬೆಂಗಳೂರು, ಅ.29: ಇಷ್ಟು ದಿನಗಳ ಕಾಲ ಸಿಂದಗಿ ಮತ್ತು ಹಾನಗಲ್ ಉಪಚುನಾವಣೆಯ ಮೂಡ್ನಲ್ಲಿದ್ದ ಕರ್ನಾಟಕ ರಾಜಕಾರಣ ಈಗ ಏಕಾಏಕಿ ಬಿಟ್ಕಾಯಿನ್ನತ್ತ ತಿರುಗಿದೆ. ಕಾಂಗ್ರೆಸ್ನ ಎಲ್ಲ ನಾಯಕರು ಬಿಟ್ಕಾಯಿನ್ ವಿಚಾರವಾಗಿ ಬಿಜೆಪಿ ನಾಯಕರತ್ತ ಮುಗಿಬಿದ್ದಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ ಅಸಮರ್ಪಕರ ಉತ್ತರಗಳು ಕಾಂಗ್ರೆಸ್ ನಾಯಕರನ್ನು ಮತ್ತಷ್ಟು ಉತ್ತೇಜಿಸಿವೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ದಿನಗಳ ಹಿಂದೆ ಟ್ವೀಟ್ ಮಾಡಿ, "ಡ್ರಗ್ ಹಾಗೂ ಬಿಟ್ಕಾಯಿನ್ ಹಗರಣದಲ್ಲಿ ರಾಜ್ಯದ ಪ್ರಭಾವಿ ರಾಜಕಾರಣಿಗಳಿದ್ದಾರೆ ಎಂಬ ಮಾಹಿತಿ ಇದೆ. ಇದೇ ಕಾರಣಕ್ಕೆ ತನಿಖಾಧಿಕಾರಿಗಳು ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂಬ ವರದಿ ಕಳವಳಕಾರಿಯಾದುದು" ಎಂದು ಹೇಳಿದ್ದರು. ಅಲ್ಲಿಂದ ಬಿಟ್ಕಾಯಿನ್ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ.
"ಬಿಟ್ಕಾಯಿನ್ ದಂಧೆಯಲ್ಲಿ ಇಬ್ಬರು ಪ್ರಭಾವಿಗಳು ಇದ್ದಾರೆ. ಪ್ರಕರಣದಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಹೀಗೆ ಎಷ್ಟೇ ಪ್ರಭಾವಿಗಳು ಇದ್ದರೂ ಅವರಿಗೆ ಶಿಕ್ಷೆಯಾಗಬೇಕು. ಪ್ರಕರಣವನ್ನು ಸರ್ಕಾರ ಇಡಿಗೆ ರವಾನಿಸಿದ್ದನ್ನು ಸರ್ಕಾರ ಇಷ್ಟು ದಿನ ಮುಚ್ಚಿಟ್ಟಿತ್ತು. ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ಪ್ರಭಾವ ಬೀರುವ ಮೂಲಕ ಯಾರನ್ನೂ ರಕ್ಷಿಸಬಾರದು. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು'' ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಬಿಟ್ಕಾಯಿನ್ ಪ್ರಕರಣ ಆರಂಭವಾಗಿದ್ದು ಯಾವಾಗ?
ಬಿಟ್ಕಾಯಿನ್ ಕ್ರಿಪ್ಟೋಕರೆನ್ಸಿಯಾಗಿದ್ದು, ಇದು ಆಧುನಿಕ ಡಿಜಿಟಲ್ ಯುಗದ ಡಿಜಿಟಲ್ ಕರೆನ್ಸಿ. ಇದಕ್ಕೆ ಮುದ್ರಣ ರೂಪ ಇಲ್ಲ. ಬಿಟ್ ಕಾಯಿನ್ ಎಂಬ ಕರೆನ್ಸಿಯು ಕೇವಲ ಎಲೆಕ್ಟ್ರಾನಿಕ್ ರೂಪದಲ್ಲಿದ್ದು, ರೂಪಾಯಿ, ಡಾಲರ್, ಯುರೋಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಅಲ್ಲದೇ ಇದಕ್ಕೆ ಯಾವುದೇ ದೇಶ, ಭಾಷೆ, ಬ್ಯಾಂಕು ಇದ್ಯಾವುದು ಇರುವುದಿಲ್ಲ. ಇದು ಬಿಟ್ಕಾಯಿನ್ನ ವಾಸ್ತವ. ಆದರೆ, ಕರ್ನಾಟಕದ ರಾಜಕಾರಣದಲ್ಲಿ ಸದ್ಯ ಬಿಟ್ಕಾಯಿನ್ಗೆ ಕಣ್ಣು, ಕಿವಿ, ಬಾಯಿ, ಕೈ, ಮೌಲ್ಯ ಎಲ್ಲವೂ ಬಂದಿವೆ.
ಸರಿಯಾಗಿ ಒಂದು ವರ್ಷದ ಹಿಂದೆ ಅಂದರೆ 2020ರ ನವೆಂಬರ್ನಲ್ಲಿ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಆತನಿಂದ 9 ಕೋಟಿ ಮೌಲ್ಯದ ಬಿಟ್ಕಾಯಿನ್ ವಶಪಡಿಸಿಕೊಳ್ಳಲಾಗಿತ್ತು. ಎರಡು ದಿನಗಳಲ್ಲೇ ಶ್ರೀಕಿ ಪೊಲೀಸರು ಆನ್ಲೈನ್ ಲಿಂಕ್ಗಳ ಮೂಲಕ ವಶಪಡಿಸಿಕೊಂಡಿದ್ದ 9 ಕೋಟಿ ಮೌಲ್ಯದ ಬಿಟ್ಕಾಯಿನ್ ಅನ್ನು ಮಂಗಮಾಯ ಮಾಡಿದ್ದ. ಬಳಿಕ ಸಿಐಡಿ ಸೈಬರ್ ಕ್ರೈಂ ಅಪರಾಧ ತಂಡ ಸಹ ಶ್ರೀಕಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಿತ್ತು. ಶ್ರೀಕಿ ಹಲವು ಹಣಕಾಸು ಸಂಸ್ಥೆಗಳ ಅಕೌಂಟ್ಗಳನ್ನು ಹ್ಯಾಕ್ ಮಾಡುತ್ತಿದ್ದ. ಆ ಮೂಲಕ ಕೋಟಿ ಕೋಟಿ ಹಣ ಇತರೆ ಅಕೌಂಟ್ಗಳಿಗೆ ವರ್ಗಾವಣೆ ಆಗುತ್ತಿತ್ತು. ಈ ಶ್ರೀಕಿಗೆ ಡ್ರಗ್ ನಂಟು ಸಹ ಇತ್ತು.
ಹ್ಯಾಕರ್ ಶ್ರೀಕಿ ಬಿಟ್ಕಾಯಿನ್ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಈಗಾಗಲೇ ದೋಷಾರೋಪಣ ಪಟ್ಟಿ (ಚಾರ್ಜ್ಶೀಟ್) ಸಲ್ಲಿಸಿದ್ದಾರೆ. ವಿವಿಧ ಜಾಲತಾಣಗಳನ್ನು ಹ್ಯಾಕ್ಮಾಡಿ 500 ಬಿಟ್ಕಾಯಿನ್ಗಳನ್ನು ದೋಚಿದ್ದ. ಅದರ ಮಾರುಕಟ್ಟೆ ಮೌಲ್ಯ ಇಂದಿಗೆ ಎರಡು ಸಾವಿರ ಕೋಟಿಗೂ ಅಧಿಕ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಧಾನಿ ಅಮೆರಿಕಾ ಭೇಟಿಯಲ್ಲಿ ಪ್ರಸ್ತಾಪ
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಕೈಗೊಂಡಿದ್ದ ಅಮೆರಿಕಾ ಪ್ರವಾಸದ ವೇಳೆ ಕರ್ನಾಟಕದ ಬಿಟ್ಕಾಯಿನ್ ಪ್ರಕರಣ ಪ್ರಸ್ತಾಪವಾಗಿದೆ ಎನ್ನಲಾಗಿದೆ.
ಅಮೆರಿಕಾದ ಹಣಕಾಸು ನಿಯೋಗವೊಂದು ಪ್ರಧಾನಿಯವರನ್ನು ಭೇಟಿ ಮಾಡಿ, ಬಿಟ್ಕಾಯಿನ್ಗೆ ಸಂಬಂಧಿಸಿದಂತೆ ಅಮೆರಿಕನ್ ಎಕ್ಸ್ಪ್ರೆಸ್ ಬ್ಯಾಂಕ್ಗೆ ಸಾವಿರಾರು ಕೋಟಿ ದುರುಪಯೋಗ ಆಗಿದೆ. ಇದರ ನಂಟು ಕರ್ನಾಟಕದ ಜೊತೆ ಇರುವಂತೆ ಕಾಣುತ್ತಿದೆ. ಈ ಬಗ್ಗೆ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಕೇಳಿತ್ತು. ಇದಕ್ಕೆ ಸಂಬಂಧಿಸಿದಂತೆ ಕೆಲವು ಪೂರಕ ಮಾಹಿತಿಗಳನ್ನೂ ಒದಗಿಸಿತ್ತು ಎನ್ನಲಾಗಿದೆ.
ಬಳಿಕ ಪ್ರಧಾನಿ ಕಚೇರಿಯಿಂದ ವಿವರಣೆ ಕೇಳಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆಯಲಾಗಿತ್ತು. ಬಿಟ್ಕಾಯಿನ್ ತನಿಖೆ ಯಾವ ಹಂತದಲ್ಲಿದೆ ಎಂದು ಸಂಪೂರ್ಣ ಮಾಹಿತಿ ನೀಡಬೇಕು. ತನಿಖೆ ಯಾವ ಹಂತದಲ್ಲಿ ನಡೆಯುತ್ತಿದೆ, ಯಾರು ಯಾರು ಇದ್ದಾರೆ, ಇದುವರೆಗೆ ಯಾರಿಗೆ ಶಿಕ್ಷೆಯಾಗಿದೆ ಎಂಬ ವಿವರಗಳನ್ನು ಕೇಳಿ ಬತ್ರ ಬರೆಯಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ರಾಜ್ಯದ ಡಿಜಿಪಿ ಈಗಾಗಲೇ ಪ್ರಧಾನಿ ಕಚೇರಿಗೆ ಉತ್ತರವನ್ನೂ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.
"ಬಿಟ್ ಕಾಯಿನ್ ದಂಧೆ ಪ್ರಧಾನಿ ಕಾರ್ಯಾಲಯಕ್ಕೆ ಹೋಗಿದ್ದು, ಅಲ್ಲಿಂದ ವರದಿ ಕೇಳಲಾಗಿದೆ. ಈ ಬಿಟ್ ಕಾಯಿನ್ ಪ್ರಕರಣ ಸರ್ಕಾರಕ್ಕೆ ಕಂಟಕವಾಗಬಹುದು ಎಂದು ಭಾವಿಸುತ್ತೇನೆ. ಸಿದ್ದರಾಮಯ್ಯ ಅವರು ಈ ಬಗ್ಗೆ ಟ್ವಿಟ್ ಮಾಡಿದ್ದಾರೆ. ಈ ಪ್ರಕರಣದ ತನಿಖೆ ಸತ್ಯಾಂಶ ಹೊರಬಂದರೆ, ಅನೇಕ ನಾಯಕರ ಕುರ್ಚಿ ಅಲುಗಾಡುತ್ತದೆ. ಶೀಕ್ರಿ ಅವರನ್ನು ಬಂಧಿಸಲು ಸರ್ಕಾರ ಹಿಂದುಮುಂದೆ ನೋಡಿದ್ದು ಯಾಕೆ? ಈ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸಲಾಗುತ್ತಿದೆ. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡೆಸಬೇಕು. ಉಳಿದ ಯಾವುದೇ ತನಿಖಾ ಸಂಸ್ಥೆ ಮೇಲೆ ನಂಬಿಕೆ ಇಲ್ಲವಾಗಿದೆ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಹೆಸರು ಹೇಳಿ: ಸಿಎಂ ಸವಾಲು:
"ಸಿದ್ದರಾಮಯ್ಯ ಅವರು ಬಿಟ್ಕಾಯಿನ್ ಹಾಗೂ ಡ್ರಗ್ ಪ್ರಕರಣದಲ್ಲ ಇಬ್ಬರು ಪ್ರಭಾವಿ ವ್ಯಕ್ತಿಗಳು ಇದ್ದಾರೆ ಎಂದು ಹೇಳಿದ್ದಾರೆ. ಯಾವ ಪ್ರಭಾವಿ ರಾಜಕಾರಣಿಗಳು ಭಾಗಿಯದ್ದಾರೆ ಎಂದು ಅವರ ಹೆಸರು ಹೇಳಲಿ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದಾರೆ.
ಪ್ರಕರಣದ ಸಂಬಂಧ ಈಗಾಗಲೇ ರಾಜ್ಯದ ಎರಡು ತನಿಖಾ ಸಂಸ್ಥೆಗಳು ತನಿಖೆ ನಡೆಸಿ ವರದಿ ನೀಡಿವೆ. ಇದಾದ ಮೇಲೂ ಪ್ರಕರಣವನ್ನು ನಾವೇ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸಿಬಿಐಗೆ ವಹಿಸಿದ್ದೇವೆ. ಯಾರನ್ನೂ ರಕ್ಷಿಸುವ ಉದ್ದೇಶ ಇಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಅಲ್ಲದೆ, ಗೃಹ ಸಚಿವ ಅರಗ ಜ್ಞಾನೇಂದ್ರ ಸಹ ಹೇಳಿಕೆ ನೀಡಿದ್ದು, "ಬಿಟ್ಕಾಯಿನ್ ಸಿಐಡಿ ತನಿಖೆ ನಡೆಯುತ್ತಿದ್ದು, ಇದು ಅತ್ಯಂತ ಪ್ರಮುಖ ವಿಚಾರವಾಗಿದೆ. ಇದರಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಹೀಗೆ ಯಾರೇ ಶಾಮೀಲು ಆಗಿದ್ದರೂ ಅಂತವರಿಗೆ ಶಿಕ್ಷೆ ನೀಡಲಾಗುವುದು. ಪ್ರಕರಣದಲ್ಲಿ ಕಾಂಗ್ರೆಸ್ನವರು ಇರಬಹುದು ಅಥವಾ ಬಿಜೆಪಿಯವರೇ ಇರಬಹುದು. ಅಂತಹವರನ್ನು ಕಾನೂನಿನಡಿ ಶಿಕ್ಷೆಗೆ ಒಳಪಡಿಸಲಾಗುವುದು" ಎಂದು ಹೇಳಿದ್ದಾರೆ.
ಮಗಿಬಿದ್ದ ಕಾಂಗ್ರೆಸ್ ನಾಯಕರು:
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, "ಬಿಟ್ ಕಾಯಿನ್ ಹಗರಣ ದೊಡ್ಡ ಮಟ್ಟದಲ್ಲಿ ನಡೆದಿದ್ದು, ದೊಡ್ಡ ದೊಡ್ಡ ಹೆಸರುಗಳು ಕೇಳಿ ಬರುತ್ತಿವೆ. ಯಾರ್ಯಾರದ್ದೋ ಖಾತೆಗೆ ಹಣ ಬಂದಿದೆ ಎಂದು ಕೇಳಿಬರುತ್ತಿದ್ದು, ನಾನು ಮಾಹಿತಿ ಕಲೆಹಾಕಲು ಪ್ರಯತ್ನಿಸುತ್ತಿದ್ದೇನೆ. ಪೊಲೀಸ್ ಅಧಿಕಾರಿಗಳು, ರಾಜಕೀಯ ನಾಯಕರು, ಉದ್ಯಮಿಗಳ ಹೆಸರು ಕೇಳಿ ಬರುತ್ತಿರುವುದು ಆಘಾತ ತಂದಿದೆ.ಈ ಪ್ರಕರಣವನ್ನು ಖಂಡಿತ ಮುಚ್ಚಿಹಾಕುತ್ತಾರೆ. ಅದೇ ಅವರ ಕೆಲಸ. ಬೇರೆ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು, ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ'' ಎಂದು ಹೇಳಿದ್ದಾರೆ.
Recommended Video