ಕೇರಳ ಸಂಪರ್ಕಿಸುವ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಹೈ ಅಲರ್ಟ್
ಬೆಂಗಳೂರು, ಜನವರಿ 06: ಕೊರೊನಾ ಸೋಂಕಿನ ನಡುವೆ ಕೆಲವು ರಾಜ್ಯಗಳಲ್ಲಿ ಹಕ್ಕಿ ಜ್ವರವೂ ಕಾಣಿಸಿಕೊಂಡಿದೆ. ರಾಜಸ್ಥಾನ, ಮಧ್ಯಪ್ರದೇಶ, ಕೇರಳ, ಹಿಮಾಚಲ ಪ್ರದೇಶದಲ್ಲಿ ಹಕ್ಕಿ ಜ್ವರದ ಪ್ರಕರಣಗಳು ಕಂಡುಬಂದಿದ್ದು, ಕರ್ನಾಟಕದಲ್ಲಿಯೂ ಕಟ್ಟೆಚ್ಚರ ವಹಿಸುವಂತೆ ರಾಜ್ಯ ಸರ್ಕಾರ ಅಧಿಕಾರಿಗಳಿಗೆ ಸೂಚಿಸಿದೆ.
ಕೇರಳ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಕೇರಳದಲ್ಲಿ ಹಕ್ಕಿ ಜ್ವರದ ಪ್ರಕರಣಗಳು ಪತ್ತೆಯಾಗುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆ, ಮೈಸೂರು, ಮಡಿಕೇರಿ ಹಾಗೂ ಉಡುಪಿ ಜಿಲ್ಲಾಧಿಕಾರಿಗಳಿಗೆ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಮುಂದೆ ಓದಿ...

ಕೋಳಿ ಸಾಗಣೆ ಬಗ್ಗೆ ಕಟ್ಟೆಚ್ಚರ
ಗಡಿ ಪ್ರದೇಶಗಳಲ್ಲಿ ಕೋಳಿ ಸಾಗಣೆ ಬಗ್ಗೆ ನಿಗಾ ವಹಿಸುವಂತೆ ಜಿಲ್ಲೆಗಳ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತೋಟಗಾರಿಕೆ ಇಲಾಖೆ ಮುಖ್ಯ ಕಾರ್ಯದರ್ಶಿ ಹಾಗೂ ಹೈನುಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯಸ್ಥರೂ ಆಗಿರುವ ರಾಜೇಂದರ್ ಕುಮಾರ್ ಕಟಾರಿಯಾ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಹಕ್ಕಿ ಜ್ವರಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಹೊರಡಿಸಿರುವುದಾಗಿಯೂ ತಿಳಿಸಿದೆ.

ಕೇರಳದಲ್ಲಿ ಕಂಡುಬಂದ ಹಕ್ಕಿ ಜ್ವರ ಪ್ರಕರಣ
ಕೇರಳದಲ್ಲಿ ಈ H5N8 ಹಕ್ಕಿ ಜ್ವರದ ವೈರಸ್ ಬಾತುಕೋಳಿಗಳಲ್ಲಿ ಕಂಡುಬಂದಿತ್ತು. ಸುಮಾರು 12,000 ಬಾತುಕೋತಿಗಳು ಸಾವನ್ನಪ್ಪಿದ್ದು, 48,000 ಹಕ್ಕಿಗಳನ್ನು ಕೊಲ್ಲಲು ಕೇರಳ ಸರ್ಕಾರ ಆದೇಶಿಸಿತ್ತು. ಮಂಗಳವಾರದಿಂದ ಹಕ್ಕಿಗಳನ್ನು ಕೊಲ್ಲುವ ಕಾರ್ಯ ಆರಂಭಗೊಂಡಿದೆ.

ಎಲ್ಲೆಲ್ಲಿ ಪ್ರಕರಣಗಳು ಕಂಡುಬಂದಿವೆ?
ಹರಿಯಾಣದಲ್ಲಿ ಕಳೆದ ಹತ್ತು ದಿನಗಳಲ್ಲಿ ಸುಮಾರು ನಾಲ್ಕು ಲಕ್ಷ ಕೋಳಿಗಳು ಸಾವನ್ನಪ್ಪಿದ್ದು, ಈ ಸಾವಿಗೆ ಹಕ್ಕಿ ಜ್ವರದ ಸೋಂಕು ಕಾರಣವೇ ಎಂಬುದು ತಿಳಿದುಬಂದಿಲ್ಲ. ಮಂಗಳವಾರ ಹಿಮಾಚಲ ಪ್ರದೇಶದಲ್ಲಿ ಸುಮಾರು ಎರಡು ಸಾವಿರ ವಲಸೆ ಹಕ್ಕಿಗಳು ಸಾವನ್ನಪ್ಪಿದ್ದು, ಮಧ್ಯ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ನೂರಾರು ಹಕ್ಕಿಗಳು ಸಾವನ್ನಪ್ಪಿವೆ. ಕೇರಳದಲ್ಲಿ ಬಾತುಕೋಳಿಗಳು ಸಾವನ್ನಪ್ಪಿವೆ.

ಕೇಂದ್ರದಿಂದ ಮಾರ್ಗಸೂಚಿ
ಹಕ್ಕಿ ಜ್ವರದ ಕುರಿತಂತೆ ಕೇಂದ್ರ ಸರ್ಕಾರ ನಿರ್ದಿಷ್ಟ ನಿಯಮಾವಳಿಗಳನ್ನು ಹೊರಡಿಸಿದೆ. ಮನುಷ್ಯರಿಗೆ ಸೋಂಕು ತಗುಲುವ ಸಾಧ್ಯತೆ ಕಡಿಮೆಯಿದ್ದರೂ, ಕೋಳೆ ಸಾಗಣೆ ವೇಳೆ ರಕ್ಷಣಾತ್ಮಕ ದಿರಿಸು ಧರಿಸಲು ಸೂಚಿಸಲಾಗಿದೆ. ಕೋಳಿ ಸಾಕಣೆಯಲ್ಲದೇ ಬೇರೆ ಹಕ್ಕಿಗಳ ನಿರ್ವಹಣೆಗೆ ಮಾರ್ಗಸೂಚಿಗಳನ್ನು ಹೊರಡಿಸುವುದಾಗಿ ತಿಳಿಸಿದೆ.












Click it and Unblock the Notifications