ಡಿಕೆಶಿ ತಾಯಿ, ಪತ್ನಿಗೆ ತಾತ್ಕಾಲಿಕ ನೆಮ್ಮದಿ ನೀಡಿದ ಹೈಕೋರ್ಟ್
Recommended Video
ಬೆಂಗಳೂರು, ಅಕ್ಟೋಬರ್ 30 : ಮಾಜಿ ಸಚಿವ ಡಿ. ಕೆ. ಶಿವಕುಮಾರ್ ತಾಯಿ, ಪತ್ನಿಗೆ ದೆಹಲಿ ಹೈಕೋರ್ಟ್ ತಾತ್ಕಾಲಿಕ ನೆಮ್ಮದಿ ನೀಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಇಬ್ಬರನ್ನು ವಿಚಾರಣೆ ನಡೆಸಲು ಮುಂದಾಗಿದೆ.
ದೆಹಲಿಗೆ ಬರುವಂತೆ ಇಡಿ ಡಿ. ಕೆ. ಶಿವಕುಮಾರ್ ಪತ್ನಿ ಉಷಾ, ತಾಯಿ ಗೌರಮ್ಮಗೆ ಸಮನ್ಸ್ ನೀಡಿತ್ತು. ಇದನ್ನು ಅವರು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನವೆಂಬರ್ 4ಕ್ಕೆ ಮುಂದೂಡಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿ. ಕೆ. ಶಿವಕುಮಾರ್ ಬಂಧನವಾಗಿತ್ತು. ದೆಹಲಿ ಹೈಕೋರ್ಟ್ ಅವರಿಗೆ ಷರತ್ತುಬದ್ಧ ಜಾಮೀನು ನೀಡಿದ್ದು, ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಇದೇ ಪ್ರಕರಣದಲ್ಲಿ ತಾಯಿ, ಪತ್ನಿ ವಿಚಾರಣೆ ನಡೆಸಲು ಇಡಿ ಸಮನ್ಸ್ ನೀಡಿತ್ತು.
ಅಕ್ಟೋಬರ್ 31ರಂದು ಉಷಾ ಮತ್ತು ಗೌರಮ್ಮ ಇಡಿ ವಿಚಾರಣೆಗೆ ಹಾಜರಾಗುವುದು ಬೇಡ ಎಂದು ದೆಹಲಿ ಹೈಕೋರ್ಟ್ ಆದೇಶ ನೀಡಿದೆ. ಅರ್ಜಿಯ ವಿಚಾರಣೆಯನ್ನು ನವೆಂಬರ್ 4ಕ್ಕೆ ಮುಂದೂಡಿದೆ. ಗೌರಮ್ಮ ಅವರ ವಿಚಾರಣೆಯನ್ನು ಬೆಂಗಳೂರಿನಲ್ಲಿಯೇ ನಡೆಸಬೇಕು ಎಂದು ವಕೀಲರು ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ವಿಚಾರಣೆ
ವಯೋಸಹಜ ಕಾರಣಗಳಿಂದಾಗಿ ಗೌರಮ್ಮ ದೆಹಲಿಗೆ ವಿಚಾರಣೆಗೆ ಬರಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿಯೇ ಅವರ ವಿಚಾರಣೆ ನಡೆಸಬೇಕು ಎಂದು ಗೌರಮ್ಮ ಪರ ವಕೀಲರು ದೆಹಲಿ ಹೈಕೋರ್ಟ್ನಲ್ಲಿ ವಾದ ಮಂಡನೆ ಮಾಡಿದ್ದಾರೆ. ಆದರೆ, ಜಾರಿ ನಿರ್ದೇಶನಾಲಯ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.

ಇಡಿಯಿಂದ ಉಷಾ ವಿಚಾರಣೆ ಏಕೆ?
ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಕುಟುಂಬ ಸದಸ್ಯರ ನಡುವೆಯೇ ಹಲವಾರು ಹಣಕಾಸಿನ ವ್ಯವಹಾರಗಳು ನಡೆದಿವೆ ಎಂಬುದು ಇಡಿ ಶಂಕೆ. ಡಿ. ಕೆ. ಶಿವಕುಮಾರ್ಗೆ ಉಷಾ 2.60 ಕೋಟಿ ಸಾಲ ನೀಡಿದ್ದಾರೆ. ಮಾವ ದಿ. ಕೆಂಪೇಗೌಡ, ಅತ್ತೆ ಗೌರಮ್ಮರಿಂದ 15.86 ಕೋಟಿ ಸಾಲ ಪಡೆದಿದ್ದಾರೆ. ಈ ಹಣದ ವ್ಯವಹಾರದ ಬಗ್ಗೆ ಇಡಿ ವಿಚಾರಣೆ ನಡೆಸಲಿದೆ.

ಗೌರಮ್ಮರಿಂದ ಮೊಮ್ಮಗಳಿಗೆ ಉಡುಗೊರೆ
ಡಿ. ಕೆ. ಶಿವಕುಮಾರ್ ತಾಯಿ ಗೌರಮ್ಮ ಮೊಮ್ಮಗಳು ಐಶ್ವರ್ಯಾಗೆ ಬೆಂಗಳೂರಿನ ಉತ್ತರಹಳ್ಳಿಯಲ್ಲಿದ್ದ 3 ಎಕರೆ ಜಮೀನು ಗಿಫ್ಟ್ ನೀಡಿದ್ದಾರೆ. 2002ರಲ್ಲಿ ಹೊಸಕೆರೆಹಳ್ಳಿಯಲ್ಲಿದ್ದ 3 ಎಕರೆ ಜಮೀನು ಗಿಫ್ಟ್ ಮಾಡಿದ್ದಾರೆ. 2018ರ ಜೂನ್ನಲ್ಲಿ ಗೌರಮ್ಮ ಖಾತೆಯಿಂದ ಐಶ್ವರ್ಯಾ ಖಾತೆಗೆ 3 ಕೋಟಿ ಜಮೆ ಆಗಿದೆ. ಆದ್ದರಿಂದ, ಗೌರಮ್ಮ ವಿಚಾರಣೆ ಅಗತ್ಯವಿದೆ ಎಂಬುದು ಇಡಿ ವಾದ.

ಕುಟುಂಬ ಸದಸ್ಯರ ವಿಚಾರಣೆ
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿ. ಕೆ. ಶಿವಕುಮಾರ್ ವಿಚಾರಣೆ ನಡೆಸಿರುವ ಇಡಿ ಈಗ ಉಳಿದ ಕುಟುಂಬ ಸದಸ್ಯರ ವಿಚಾರಣೆಗೆ ಮುಂದಾಗಿದೆ. ಡಿ. ಕೆ. ಸುರೇಶ್, ಐಶ್ವರ್ಯಾ ವಿಚಾರಣೆ ಮುಗಿಸಿರುವ ಇಡಿ, ಗೌರಮ್ಮ ಮತ್ತು ಉಷಾ ವಿಚಾರಣೆಗೆ ಸಮನ್ಸ್ ನೀಡಿದ್ದು, ಇದನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡಲಾಗಿದೆ.












Click it and Unblock the Notifications