ಹಾವೇರಿ : ನಿಂಗರಾಜ್ ಚಿಕ್ಕಪ್ಪನನ್ನು ಕೊಲೆ ಮಾಡಿ ಓಡಿ ಹೋಗಿದ್ದ!
ಹಾವೇರಿ, ಅ.16 : ರಾಣೆಬೆನ್ನೂರು ಬಸ್ ಡಿಪೋ ಅಗ್ನಿ ದುರಂತ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಡಿಪೋ ಭದ್ರತಾ ಸಿಬ್ಬಂದಿ ನಿಂಗರಾಜ್ ಬೆಳಗುಟ್ಟಿ, ಚಿಕ್ಕಪ್ಪನನ್ನು ಕೊಲೆ ಮಾಡಿ ಬಸ್ಸಿನಲ್ಲಿ ಹಾಕಿ ಸುಟ್ಟಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ಜನವರಿ 1ರಂದು ನಡೆದ ಅಗ್ನಿ ದುರಂತದಲ್ಲಿ ನಿಂಗರಾಜ್ ಸಾವನ್ನಪ್ಪಿದ್ದಾನೆ ಎಂದು ಶಂಕಿಸಲಾಗಿತ್ತು. ಆದರೆ, ಆಗಸ್ಟ್ 14ರಂದು ಆತ ಹುಬ್ಬಳ್ಳಿಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದ. ರಾಣೆಬೆನ್ನೂರು ಠಾಣೆ ಪೊಲೀಸರು ನಿಂಗರಾಜ್ ಬೆಳಗುಟ್ಟಿ ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಕೊಲೆಯಾದವರನ್ನು ಹಿರೇಕೆರೂರು ತಾಲೂಕಿನ ಅಂಗರಗಟ್ಟಿಯ ಚನ್ನಪ್ಪ ಬಸವಣ್ಣೆಪ್ಪ ಎಂದು ಗುರುತಿಸಲಾಗಿದೆ. ಜನವರಿ 1ರಂದು ಚನ್ನಪ್ಪನನ್ನು ಕೊಲೆ ಮಾಡಿದ್ದ ನಿಂಗರಾಜ್, ಆತನ ಕೈಕಾಲು ಕಟ್ಟಿ ಬಸ್ಸಿನೊಳಗೆ ಹಾಕಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ.
ಅವಿವಾಹಿತನಾಗಿದ್ದ ಚನ್ನಪ್ಪ ಸಂಬಂಧಿಯೊಬ್ಬರ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ನಿಂಗರಾಜ್ ಪತ್ನಿ ಜೊತೆಗೂ ಅಸಭ್ಯವಾಗಿ ವರ್ತಿಸುತ್ತಿದ್ದ. ಇದರಿಂದ ಆಕ್ರೋಶಗೊಂಡಿದ್ದ ಲಿಂಗಪ್ಪ ಚಿಕ್ಕಪ್ಪನಿಗೆ ಕುಡಿಸಿ, ಆತನನ್ನು ಕೊಲೆ ಮಾಡಿ ಸುಟ್ಟು ಹಾಕಿದ್ದ.
ಡಿಪೋಗೆ ಬೆಂಕಿ ಬಿದ್ದ ಪ್ರಕರಣದಲ್ಲಿ ಸಾವನ್ನಪ್ಪಿರುವುದು ನಿಂಗರಾಜ್ ಎಂದು ಗುರುತಿಸಲಾಗಿತ್ತು. ಈ ಬಗ್ಗೆ ಪತ್ರಿಕೆಗಳಲ್ಲಿ ಬಂದ ವರದಿ ನೋಡಿದ್ದ ಆತ, ಗೋವಾಕ್ಕೆ ಹೋಗಿ ತಲೆಮರೆಸಿಕೊಂಡಿದ್ದ. ಕೊನೆಗೆ ಹೆಂಡತಿ ಮಕ್ಕಳ ನೆನಪಾಗಿ ಮೊನ್ನೆ ಹುಬ್ಬಳ್ಳಿಗೆ ವಾಪಸ್ ಆಗಿದ್ದ.
ಡಿಪೋದಲ್ಲಿ ಬೆಂಕಿ ಬಿದ್ದು ನಿಂಗರಾಜ್ ಮೃತಪಟ್ಟಿದ್ದಾನೆ ಎಂದು ಕೆಎಸ್ಆರ್ಟಿಸಿಯಿಂದ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ನೀಡಲಾಗಿತ್ತು. ಪರಿಹಾರದ ಹಣವನ್ನು ವಾಪಸ್ ಪಡೆಯಲು ಅಧಿಕಾರಿಗಳು ಪ್ರಕ್ರಿಯೆ ಆರಂಭಿಸಿದ್ದಾರೆ.












Click it and Unblock the Notifications