ಹಿಂದೂ ಸಮುದಾಯ ನಿಂತಿರುವುದು ಬ್ರಾಹ್ಮಣರ 'ಡಿಎನ್ಎ'ದಿಂದ: ನಿತ್ಯಾನಂದ ಸ್ವಾಮಿ
ತಮ್ಮ ವಿಚಿತ್ರ ಹಾವಭಾವ, ವೇಷಭೂಷಣದಿಂದ ಕೆಲವೊಮ್ಮೆ ಹಾಸ್ಯದ ಸರಕಂತಾಗಿರುವ ಬಿಡದಿ ಆಶ್ರಮದ ನಿತ್ಯಾನಂದ ಸ್ವಾಮೀಜಿ, ಬ್ರಾಹ್ಮಣ ಸಮುದಾಯದ ಪರವಾಗಿ ಮಾತನಾಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸ್ವಯಂಘೋಷಿತ ಕೈಲಾಸ ಸೃಷ್ಟಿಕರ್ತ ನಿವಾಸಿ ನಿತ್ಯಾನಂದ ಶ್ರೀ ಬಿಡದಿ ಆಶ್ರಮದಿಂದ, ದೇಶ ಬಿಟ್ಟು ಪರಾರಿಯಾಗಿರುವುದು ಗೊತ್ತಿರುವ ವಿಚಾರ. ಜಗತ್ತಿನ ಅತಿ ದೊಡ್ಡ ಡಿಜಿಟಲ್ ಹಿಂದೂ ದೇಶ ಎನ್ನುವ ಟ್ಯಾಗ್ ಲೈನ್ ಇಟ್ಟು, ಕಳೆದ ವರ್ಷದ ಆಗಸ್ಟ್ ನಲ್ಲಿ ತನ್ನ ದೇಶಕ್ಕೊಂದು ರಿಸರ್ವ್ ಬ್ಯಾಂಕ್ ಮತ್ತು ಕರೆನ್ಸಿ ಆರಂಭಿಸುತ್ತಿರುವುದಾಗಿ ತಿಳಿಸಿದ್ದರು.
ಕೈಲಾಶ್ ಎಸ್ಪಿಎಚ್ ನಿತ್ಯಾನಂದ ಎನ್ನುವ ಹೆಸರಿನಲ್ಲಿ ಯುಟ್ಯೂಬ್ ಚಾನೆಲ್ ಮೂಲಕ ಪ್ರವಚನ ನೀಡುವ ಸ್ವಾಮಿ ನಿತ್ಯಾನಂದ, "ಮೂರು ವರ್ಷದ ಹಿಂದೆ ಬಹುದೊಡ್ಡ ಸಾಮ್ರಾಜ್ಯವನ್ನು ತೊರೆದು ಭಾರತ ಬಿಟ್ಟು ಹೊರಗೆ ಬಂದೆ, ಈ ಮೂರು ವರ್ಷವನ್ನು ಸದ್ವಿನಿಯೋಗ ಮಾಡಿಕೊಂಡಿದ್ದೇವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆಯನ್ನು ಕಾನೂನಾತ್ಮಕವಾಗಿ ಪಡೆದುಕೊಂಡಿದ್ದೇನೆ" ಎಂದು ನಿತ್ಯಾನಂದ ವಿಡಿಯೋದಲ್ಲಿ ಹೇಳಿದ್ದಾರೆ.
ನಿತ್ಯಾನಂದ ಸ್ವಾಮಿಯ 'ಕೈಲಾಸ'ದ ಹಿಂದೆ ಇರುವವರು ಯಾರು?: ಅಚ್ಚರಿ ಮೂಡಿಸುವ ಸಂಗತಿಗಳು
ಬ್ರಾಹ್ಮಣ ಸಮುದಾಯದ ಬಗ್ಗೆ ವಿಡಿಯೋ ಒಂದರಲ್ಲಿ ಮಾತನಾಡುತ್ತಿದ್ದ ಸ್ವಾಮಿ ನಿತ್ಯಾನಂದ, "ಕೆಲವೇ ಕೆಲವು ಬ್ರಾಹ್ಮಣರು ದೇಶ ಬಿಟ್ಟು ವಿದೇಶದಲ್ಲಿ, ಇಂಜಿನಿಯರ್, ಡಾಕ್ಟರ್, ಆಡಿಟರ್ ಎಂದು ನೆಲೆ ಕಂಡುಕೊಂಡಿರಬಹುದು, ಆದರೆ ಬಹುಪಾಲು ಬ್ರಾಹ್ಮಣರು ಸ್ಥಿತಿವಂತರಲ್ಲ, ಅವರ ತ್ಯಾಗ ಬಲುದೊಡ್ಡದು" ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಬಡತನದಲ್ಲಿರುವ ಸಮುದಾಯವೆಂದರೆ ಅದು ಬ್ರಾಹ್ಮಣರು
"ಪ್ರಪಂಚದಲ್ಲಿ ಈಗಿನವರೆಗೂ ಬಡತನದಲ್ಲಿರುವ ಸಮುದಾಯವೆಂದರೆ ಅದು ಬ್ರಾಹ್ಮಣರು. ಕೆಲವರು ಅಮೆರಿಕಾದಲ್ಲಿ ನೆಲೆಕಂಡು ಹಣ ಸಂಪಾದಿಸಿರಬಹುದು. ಇದರ ಅರ್ಥ ಎಲ್ಲಾ ಬ್ರಾಹ್ಮಣರು ಸಿರಿವಂತರು ಎಂದಲ್ಲ. ಬ್ರಾಹ್ಮಣ ಸಮದಾಯದ ಹಿರಿಯಯರ ತ್ಯಾಗ, ಹೊಂದಿರುವ ಅಪಾರವಾದ ಜ್ಞಾನಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ. ಬ್ರಾಹ್ಮಣರ ಮೇಲೆ ನಿರಂತರವಾಗಿ ಅಪವಾದವನ್ನು ಹೊರಿಸಲಾಗುತ್ತಿದೆ, ಇದನ್ನು ಜನರು ಅರಿತುಕೊಳ್ಳಬೇಕು" ಎಂದು ಸ್ವಾಮಿ ನಿತ್ಯಾನಂದ ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ.
ಬ್ರಾಹ್ಮಣತ್ವದ ಆಧಾರದ ಮೇಲೆ ನಡೆಯುವ ದೇವಸ್ಥಾನದ ಚೌಕಟ್ಟು
"ಬ್ರಾಹ್ಮಣ ಸಮುದಾಯದಲ್ಲಿ ನಾನು ಜನಿಸದಿದ್ದರೂ, ಬ್ರಾಹ್ಮಣತ್ವದ ಆಧಾರದ ಮೇಲೆ ನಡೆಯುವ ದೇವಸ್ಥಾನದ ಚೌಕಟ್ಟಿನಲ್ಲಿ, ಪೆರುಮುಡಿಗಳ ಸಂಪ್ರದಾಯದಂತೆ ನಾನು ಬೆಳೆದವನು. ಕಳೆದ ನಾಲ್ಕು ನೂರು ವರ್ಷಗಳಲ್ಲಿ ದಿನದಿಂದ ದಿನಕ್ಕೆ ಬ್ರಾಹ್ಮಣರ ಜೀವನ ನಿಧಾನವಾಗಿ ಐಸಿಯುನತ್ತ ಸಾಗುತ್ತಿದೆ. ಇಡೀ ಹಿಂದೂ ಸಮುದಾಯವೇ ನಿಂತಿರುವುದು ಬ್ರಾಹ್ಮಣರ ಡಿಎನ್ಎ ದಿಂದ. ಆ ಡಿಎನ್ಎದಿಂದ ಬಂದ ಜ್ಞಾನ ಈಗ ಎಲ್ಲರಿಗೂ ಪಸರಿಸಿದೆ" ಎಂದು ಸ್ವಾಮಿ ನಿತ್ಯಾನಂದ ಹೇಳಿದ್ದಾರೆ.
ಹೆಚ್ಚಿನ ಸೌಲಭ್ಯ ಸಿಗದೇ, ಮೂಲೆಗುಂಪು ಆಗಿರುವುದು ಬ್ರಾಹ್ಮಣ ಸಮುದಾಯ
"ಜಗತ್ತಿನ ಕಟ್ಟಕಡೆಯ ಬ್ರಾಹ್ಮಣ ಹುಡುಗನಿಂದ ಇಡೀ ವೇದವನ್ನು ನಾನು ಪುನರುಚ್ಚರಿಸುತ್ತೇನೆ, ಕೆಲವೊಂದು ವೇದಗಳನ್ನು ನಮ್ಮ ಜೀವನಘಟ್ಟದಲ್ಲಿ ಕೇಳಿರಲು ಸಾಧ್ಯವಿಲ್ಲ , ಅಂತಹ ಶಕ್ತಿ ಬ್ರಾಹ್ಮಣ ಸಮುದಾಯದಲ್ಲಿದೆ. ಈಗಿನ ಕಾಲಘಟದಲ್ಲಿ ಹೆಚ್ಚಿನ ಸೌಲಭ್ಯ ಸಿಗದೇ, ಮೂಲೆಗುಂಪು ಆಗಿರುವುದು ಬ್ರಾಹ್ಮಣ ಸಮುದಾಯ" ಎಂದು ಬಿಡದಿ ನಿತ್ಯಾನಂದ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ, ಬ್ರಾಹ್ಮಣ ಸಮುದಾಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ.
ಹಿಂದೂ ಸಮುದಾಯವನ್ನು ಕಟ್ಟಲು ಬಹಳಷ್ಟು ಜನರ ಪರಿಶ್ರಮವಿದೆ
"ಹಿಂದೂ ಸಮುದಾಯವನ್ನು ಕಟ್ಟಲು ಬಹಳಷ್ಟು ಜನರ ಪರಿಶ್ರಮವಿದೆ, ಆದರೆ ಇತ್ತೀಚಿನ ದಿನಗಳಲ್ಲಿ ಹಿಂದೂಗಳ ಒಗ್ಗಟ್ಟನ್ನು ಮುರಿಯುವ ಕೆಲಸ ನಡೆಯುತ್ತಿದೆ. ಇದನ್ನು ಅರ್ಥ ಮಾಡಿಕೊಳ್ಳದ ನಮ್ಮವರು ಅಂತಹ ಸಮುದಾಯ ದ್ರೋಹಿಗಳ ಮಾತನ್ನು ಕೇಳುತ್ತಿದ್ದಾರೆ. ಇದಕ್ಕಾಗಿಯೇ, ಸುಭದ್ರವಾದ ಹಿಂದೂ ಸಾಮ್ರಾಜ್ಯವನ್ನು ಕಟ್ಟುವ ನಿರ್ಣಯಕ್ಕೆ ಬಂದಿದ್ದೇನೆ. ಇದಕ್ಕೆ ಸಮಯಾವಕಾಶ ಬೇಕಾಗುತ್ತದೆ ಎನ್ನುವ ಅರಿವು ನನಗಿದೆ" ಎಂದು ನಿತ್ಯಾನಂದ ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ.
Recommended Video