ಸೆ.2ರ ಭಾರತ್ ಬಂದ್ : ಕ್ಷಣ-ಕ್ಷಣದ ಮಾಹಿತಿ

ಬೆಂಗಳೂರು, ಸೆ. 02 : ದೇಶದ 10 ಕಾರ್ಮಿಕ ಸಂಘಟನೆಗಳು ಹೊಸ ಕಾರ್ಮಿಕ ನೀತಿ, ರಸ್ತೆ ಸುರಕ್ಷತಾ ಮಸೂದೆಗೆ ವಿರೋಧ ವ್ಯಕ್ತಪಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬುಧವಾರ ಕರೆ ನೀಡಿದ್ದ ರಾಷ್ಟ್ರವ್ಯಾಪಿ ಬಂದ್‌ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಸರ್ಕಾರಿ ಬಸ್ಸುಗಳು ರಸ್ತೆಗಿಳಿಯದೇ ಸಾರ್ವಜನಿಕರು ತೊಂದರೆ ಪಡುವಂತಾಯಿತು.

ಕರ್ನಾಟಕಕ್ಕೂ ಬಂದ್ ಬಿಸಿ ತಟ್ಟಿತ್ತು, ಬೆಂಗಳೂರಿನಲ್ಲಿ ಬಿಎಂಟಿಸಿ ಮತ್ತು ಕೆಎಸ್ಆರ್‌ಟಿಸಿ ಬಸ್ಸುಗಳು ಬೆಳಗ್ಗೆ 6 ಗಂಟೆಯಿಂದಲೇ ಸಂಚಾರ ಸ್ಥಗಿತಗೊಳಿಸಿದ್ದವು. ಆಟೋ ಮತ್ತು ಕ್ಯಾಬ್‌ಗಳ ಸಂಚಾರ ಎಂದಿನಂತೆ ಇತ್ತು. ಬೆಂಗಳೂರಿನಲ್ಲಿ ಖಾಸಗಿ ಬಸ್ಸುಗಳು ಸಂಚಾರ ನಡೆಸಿದವು. [ಬಂದ್ ಏನಿರುತ್ತೆ?, ಏನಿರಲ್ಲ?]

bharat bandh

ಹಲವು ಖಾಸಗಿ ಶಾಲೆಗಳು ರಜೆ ಘೋಷಣೆ ಮಾಡಿದ್ದವು. ಬೆಂಗಳೂರು ನಗರ ವಾಪ್ತಿಯ ಎಲ್ಲಾ ಸರ್ಕಾರಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಮಕ್ಕಳಿಗೆ ತೊಂದರೆ ಆಗದಂತೆ ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸುವ ಅಧಿಕಾರವನ್ನು ಆಯಾ ಜಿಲ್ಲೆಯ ಡಿಡಿಪಿಐಗಳಿಗೆ ಶಿಕ್ಷಣ ಇಲಾಖೆ ನೀಡಿತ್ತು. [ಬೆಂಗಳೂರು ಟ್ಯಾಕ್ಸಿಗಳ ದೂರವಾಣಿ ಸಂಖ್ಯೆ]

ಆಸ್ಪತ್ರೆ, ಚಿತ್ರಮಂದಿರ, ಮಾಲ್, ಹೋಟೆಲ್, ಪೆಟ್ರೋಲ್ ಬಂಕ್‌ಗಳು ಎಂದಿನಂತೆ ತೆರದಿದ್ದವು. ಬುಧವಾರದ ಭಾರತ್ ಬಂದ್‌ನ ಕ್ಷಣ-ಕ್ಷಣದ ಮಾಹಿತಿ ಇಲ್ಲಿದೆ ನೋಡಿ...[ಭಾರತ ಬಂದ್ ಏಕೆ, ಇಲ್ಲಿದೆ ಮಾಹಿತಿ]

ಸಮಯ 12.15 : ಕೊಡಗು ಜಿಲ್ಲೆಯಲ್ಲಿ ಭಾರತ್ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಾಲಾ-ಕಾಲೇಜುಗಳು ತೆರೆದಿವೆ. ಸರ್ಕಾರಿ ಬಸ್ ಸಂಚಾರ ಮಾತ್ರ ಸ್ಥಗಿತಗೊಂಡಿದ್ದು, ಆಟೋ ಮತ್ತು ಖಾಸಗಿ ಬಸ್ ಸಂಚಾರ ಎಂದಿನಂತೆ ಇದೆ.

ಸಮಯ 11.45 : ಪಶ್ವಿಮ ಬಂಗಾಳದಲ್ಲಿ ರಾಷ್ಟ್ರವ್ಯಾಪಿ ಬಂದ್ ವೇಳೆ ಹಿಂಸಾಚಾರ ಸಂಭವಿಸಿದೆ. ಮುಶಿರಾಬಾದ್ ಜಿಲ್ಲೆಯಲ್ಲಿ ಟಿಎಂಸಿ ಮತ್ತು ಸಿಪಿಐಎಂ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.[ಭಾರತ್ ಬಂದ್ ಏಕೆ? ಪ್ರತಿಭಟನೆಗೆ ಕಾರಣವೇನು?]

ಸಮಯ 11.24 : ರಾಷ್ಟ್ರವ್ಯಾಪಿ ಮುಷ್ಕರದ ಹಿನ್ನೆಲೆಯಲ್ಲಿ ಬೆಂಗಳೂರಿನ ಟೌನ್ ಹಾಲ್‌ ಬಳಿಯಿಂದ ವಿವಿಧ ಕಾರ್ಮಿಕ ಸಂಘಟನೆಗಳು ಬೃಹತ್ ಮೆರವಣಿಗೆ ಆರಂಭಿಸಿವೆ. ಕರ್ನಾಟಕ ವರ್ಕರ್ಸ್ ಯೂನಿಯನ್, ಸಿಐಟಿಯು ಸೇರಿದಂತೆ ಹಲವು ಸಂಘಟನೆಗಳ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಸಮಯ 11.05 : 'ವಿವಿಧ ಸಂಘಟನೆಗಳು ಕರೆ ನೀಡಿರುವ ರಾಷ್ಟ್ರವ್ಯಾಪಿ ಬಂದ್‌ಗೆ ಕರ್ನಾಟಕ ಸರ್ಕಾರ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ. ಇದು ರಾಜ್ಯದಲ್ಲಿ ಅರಾಜಕತೆ ಉಂಟು ಮಾಡುವ ಪ್ರಯತ್ನವಾಗಿದೆ. ಜನರು ಬಂದ್‌ ಕರೆಗೆ ಸ್ಪಂದಿಸಬಾರದು' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಿತ್ರದುರ್ಗದಲ್ಲಿ ಗುಡುಗಿದ್ದಾರೆ.

bengaluru

ಸಮಯ 10.30 : ಮೂಡಬಿದಿರೆಯಲ್ಲಿ ಆಳ್ವಾಸ್ ಕಾಲೇಜಿನ ಬಸ್‌ಗೆ ದುಷ್ಕರ್ಮಿಗಳು ಕಲ್ಲು ತೂರಿದ್ದು, ಗಾಜು ಪುಡಿ-ಪುಡಿಯಾಗಿದೆ. ಬಸ್ಸಿನಲ್ಲಿ ವಿದ್ಯಾರ್ಥಿಗಳನ್ನು ಕಾಲೇಜಿಗೆ ಕರೆದುಕೊಂಡು ಬರಲಾಗುತ್ತಿತ್ತು.

ಸಮಯ 10 ಗಂಟೆ : 'ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ನೌಕರರು ಒಂದು ದಿನದ ಮುಷ್ಕರಕ್ಕೆ ಬೆಂಬಲ ಕೊಟ್ಟಿದ್ದು, ಕೆಲಸಕ್ಕೆ ಬಂದಿಲ್ಲ. ಆದ್ದರಿಂದ, ಬಸ್ ಸಂಚಾರ ಸ್ಥಗಿತಗೊಂಡಿದೆ. ಸಂಜೆ ವೇಳೆಗೆ ಸಂಚಾರ ವ್ಯವಸ್ಥೆ ಸಹಜ ಸ್ಥಿತಿಗೆ ಬರಲಿದೆ. ರಸ್ತೆ ಸುರಕ್ಷತಾ ಮಸೂದೆಯಲ್ಲಿ ಕೆಲವು ನ್ಯೂನ್ಯತೆಗಳಿವೆ. ಅದರ ಕುರಿತು ದಕ್ಷಿಣ ಭಾರತದ ರಾಜ್ಯಗಳ ಸಾರಿಗೆ ಸಚಿವರು ಕೇಂದ್ರ ಸರ್ಕಾರಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಿದ್ದೇವೆ' ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಸಮಯ 9.30 : ಮುಷ್ಕರದಿಂದಾಗಿ ಇಂದು ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ಸೆ.12ರ ಶನಿವಾರ ಇಡೀ ದಿನ ತರಗತಿಗಳನ್ನು ನಡೆಸಲಾಗುತ್ತದೆ.

ಸಮಯ 9 ಗಂಟೆ : ಬೆಂಗಳೂರು ನಗರ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ರಜೆ ಘೋಷಿಸುವ ಅಧಿಕಾರವನ್ನು ಡಿಡಿಪಿಐಗಳಿಗೆ ನೀಡಲಾಗಿದೆ ಎಂದು ಶಿಕ್ಷಣ ಇಲಾಖೆ ಆಯುಕ್ತ ಕೆ.ಎಸ್.ಸತ್ಯಮೂರ್ತಿ ಹೇಳಿದ್ದಾರೆ.

ಸಮಯ 8.45 : ಮಂಡ್ಯ, ಕಲಬುರಗಿ, ಚಿಕ್ಕಬಳ್ಳಾಪುರ, ಮೈಸೂರು, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಸ್ಸುಗಳ ಸಂಚಾರ ಸ್ಥಗಿತಗೊಂಡಿದ್ದು, ಕೆಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಸಮಯ 8.15 : ಬಂದ್ ನಡೆಸುತ್ತಿರುವ ಕಾರ್ಮಿಕರ ಬೇಡಿಕೆಗಳು : ಕನಿಷ್ಠ ವೇತನ 15 ಸಾವಿರ ನಿಗದಿಗೊಳಿಸಬೇಕು,
ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದುಗೊಳಿಸಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆ ನೀಡಬೇಕು, ರಸ್ತೆ ಸಾರಿಗೆ ಮತ್ತು ಸುರಕ್ಷಾ ಮಸೂದೆಯನ್ನು ಹಿಂಪಡೆಯಬೇಕು ಎಂಬುದು ಸೇರಿದಂತೆದಂತೆ ಹಲವು ಬೇಡಿಕೆಗಳಿವೆ.

ಸಮಯ 8.10 : ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಖಾಸಗಿ ಬಸ್‍ಗಳ ಸಂಚಾರ ಸ್ಥಗಿತ. ಬೆಂಗಳೂರು ಹೊರವಲಯದ ನೆಲಮಂಗಲ, ಮಾಗಡಿ, ಕುಣಿಗಲ್, ಕನಕಪುರ ಕಡೆಗೆ ತೆರಳುವ ಬಸ್ಸುಗಳು ಸಂಚಾರ ನಡೆಸುತ್ತಿಲ್ಲ. ಖಾಸಗಿ ಬಸ್ ಮಾಲೀಕರ ಸಂಘ ಬಂದ್‌ಗೆ ಬೆಂಬಲ ನೀಡಿಲ್ಲ. ಆದರೆ, ಭದ್ರತಾ ದೃಷ್ಟಿಯಿಂದ ಸಂಚಾರ ಸ್ಥಗಿತಗೊಳಿಸಲಾಗಿದೆ.

auto

ಸಮಯ 7.50 : ಬೆಂಗಳೂರಿನ ಕೆ.ಆರ್.ಸರ್ಕಲ್, ಮಡಿವಾಳ ವೃತ್ತ ಸೇರಿದಂತೆ ನಗರದ ವಿವಿಧ ಭಾಗದಲ್ಲಿ ಸರ್ಕಾರಿ ಬಸ್ಸುಗಳ ಮೇಲೆ ಕಲ್ಲು ತೂರಾಟ. ರಾತ್ರಿ ಪಾಳಿ ಮುಗಿಸಿ ಡಿಪೋಗೆ ತೆರಳುತ್ತಿದ್ದ 2 ಕೆಎಸ್ಆರ್‌ಟಿಸಿ, 8ಕ್ಕೂ ಹೆಚ್ಚು ಬಿಎಂಟಿಸಿ ಬಸ್ಸಿಗೆ ಕಲ್ಲು ತೂರಿದ ದುಷ್ಕರ್ಮಿಗಳು

ಸಮಯ 7.32 : ಆಸ್ಪತ್ರೆ, ಎಟಿಎಂ, ಪೆಟ್ರೋಲ್ ಬಂದ್, ಹೋಟೆಲ್, ಅಂಗಡಿಗಳು ತೆರೆದಿರುತ್ತವೆ

ಸಮಯ 7.30 : ಹಲವು ಬ್ಯಾಂಕುಗಳು ಇಂದು ತೆರೆಯುವುದಿಲ್ಲ. ಅಂಚೆ ಕಚೇರಿಗಳು, ವಿಮಾ ಕಚೇರಿಗಳು ಕಾರ್ಯ ನಿರ್ವಹಣೆ ಮಾಡುವುದಿಲ್ಲ

ಸಮಯ 7.15 : ಮಂಗಳೂರಿನಲ್ಲಿ ಖಾಸಗಿ ಮತ್ತು ಸರ್ಕಾರಿ ಬಸ್ ಸಂಚಾರ ಸ್ಥಗಿತ. ಆಟೋಗಳು ಮಾತ್ರ ಸಂಚಾರ ನಡೆಸುತ್ತಿವೆ.

ಸಮಯ 7 ಗಂಟೆ : ದಾವಣಗೆರೆ, ಮಂಗಳೂರು, ಮೈಸೂರು, ಧಾರವಾಡದಲ್ಲಿಯೂ ಬಂದ್‌ಗೆ ಉತ್ತಮ ಬೆಂಬಲ, ಬಸ್ ಸಂಚಾರ ಸ್ಥಗಿತ

ಸಮಯ 6.45 : ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಂಚಾರ ಸ್ಥಗಿತ. ಆಟೋ, ಕ್ಯಾಬ್ ಮತ್ತು ಖಾಸಗಿ ಬಸ್ಸುಗಳು ಸಂಚಾರ ನಡೆಸುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+