ನಮ್ಮದು ಒತ್ತಾಯದ ಬೇಡಿಕೆಯಲ್ಲ, ಕಳಕಳಿಯ ಮನವಿ
ಬೆಂಗಳೂರು, ನ. 18: ಮೂಢ ನಂಬಿಕೆ ನಿಷೇಧ ಕಾನೂನು ಜಾರಿ, ಮಹಿಳಾ ಸಮಾನತೆ ಮತ್ತು ಸಾಮಾಜಿಕ ತಾರತಮ್ಯ ನಿವಾರಣೆಗೆ ಒತ್ತಾಯಿಸಿ ನಿಡುಮಾಮಿಡಿ ಮಹಾಸಂಸ್ಥಾನ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಉಪವಾಸ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಸೋಮವಾರ ಪ್ರಗತಿಪರ ಮಠಾಧೀಶರ ವೇದಿಕೆ ಆಶ್ರಯದಲ್ಲಿ ಆರಂಭವಾಗಿರುವ ಉಪವಾಸ ಸತ್ಯಾಗ್ರಹದಲ್ಲಿ ಸ್ವಾಮೀಜಿಗಳೊಂದಿಗೆ ಮಾತಾಜಿಗಳು ಭಾಗವಹಿಸಿರುವುದು ವಿಶೇಷ.[ಬೆಂಗಳೂರಿನಲ್ಲಿ ಶ್ರೀಗಳ ಉಪವಾಸ ಸತ್ಯಾಗ್ರಹ ಆರಂಭ]

ಈ ವೇಳೆ ಮಾತನಾಡಿದ ನಿಡುಮಾಮಿಡಿ ಸ್ವಾಮೀಜಿ, ನಮ್ಮದು ಸಚ್ಚಾರಿತ್ರ್ಯದ ಬೇಡಿಕೆ. ಸರ್ಕಾರ ಇದಕ್ಕೆ ಒಪ್ಪಿಕೊಳ್ಳುತ್ತದೆ ಎಂಬ ನಿರೀಕ್ಷೆಯಿದೆ. ನಾಗರಿಕ ಸಮಾಜಕ್ಕೆ ದೊಡ್ಡ ಕೆಡುಕಾಗಿ ಪರಿಣಮಿಸಿರುವ ಅಂಧಾಚಾರಗಳನ್ನು ತೊಡೆದು ಹಾಕಲು ಎಲ್ಲರೂ ಕೈ ಜೋಡಿಸಬೇಕಿದೆ. ಮಾತಾಜಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬಿದೆ ಎಂದು ಹೇಳಿದರು.
ನಮ್ಮ ಹೋರಾಟಕ್ಕೆ ಚಿಂತಕರು, ಸಾಹಿತಿಗಳು, ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. ಅವರೆಲ್ಲರೂ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಇದು ನಮ್ಮ ಬೇಡಿಕೆ ಎನ್ನುವುದಕ್ಕಿಂತ ಕಳಕಳಿಯ ವಿನಂತಿ ಎಂದು ಸರ್ಕಾರ ಭಾವಿಸಬಹುದು ಎಂದು ತಿಳಿಸಿದರು.
ಯಡಿಯೂರು ಶ್ರೀ ತೋಂಟದ ಸಿದ್ದಲಿಂಗಸ್ವಾಮೀಜಿ, ಕಲ್ಬುರ್ಗಿಯ ಶ್ರೀ ಶರಣಬಸವ ಸ್ವಾಮೀಜಿ, ಹುಕ್ಕೇರಿಯ ಶ್ರೀ ಪಂಚಮ ಶಿವಲಿಂಗಸ್ವಾಮೀಜಿ, ಸಾಣೆಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಬೇಲಿ ಮಠದ ಶ್ರೀ ಶಿವರುದ್ರ ಸ್ವಾಮೀಜಿ, ಗುಳೇದಗುಡ್ಡದ ಸ್ವಾಮೀಜಿ, ಊರು ಲಿಂಗ ಬೆಟ್ಟದ ಸ್ವಾಮೀಜಿ, ಊರುಕೊಂಡ ಸ್ವಾಮೀಜಿ, ಅಥಣಿ ಸ್ವಾಮೀಜಿ ಸೇರಿದಂತೆ ನೂರಾರು ಮಾತಾಜಿಗಳು ಪಾಲ್ಗೊಂಡಿದ್ದಾರೆ.
ಸ್ವಾಮೀಜಿಗಳ ಪ್ರಮುಖ ಬೇಡಿಕೆಗಳೇನು?
* ಮೂಢ ನಂಬಿಕೆ ನಿಷೇಧ ಕಾನೂನು ಜಾರಿಯಾಗಬೇಕು
* ವಿಜಾಪುರದಲ್ಲಿ ಮಹಿಳಾ ಸಾರ್ಥಕ ಆಶ್ರಮ ನಿರ್ಮಾಣವಾಗಬೇಕು
* ಅಂಧ ಶ್ರದ್ಧೆಗಳಿಗೆ ಸರ್ಕಾರ ಪ್ರೋತ್ಸಾಹ ನೀಡಬಾರದು.
* ಮಡೆಸ್ನಾನದಂಥ ಹೀನ ಆಚರಣೆಗಳಿಗೆ ತಿಲಾಂಜಲಿ ನೀಡಬೇಕು
* ಹೆಣ್ಣು ಮಕ್ಕಳನ್ನು ಊರ ಹೊರಗಿಡುವಂಥ ಕೆಲಸಕ್ಕೆ ಅಂತ್ಯ ಹಾಡಬೇಕು
* ಬಾಲ್ಯ ವಿವಾಹ, ದೇವದಾಸಿ ಪದ್ಧತಿ, ಬೆತ್ತಲೆ ಸೇವೆ, ಜೀತಪದ್ಧತಿ ಗಳು ಕಂಡುಬಂದರೆ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು
* ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂಥ ಪ್ರಯತ್ನ ಮಾಡುವವರನ್ನು ಬಂಧಿಸಬೇಕು.
ನೂರಾರು ಸ್ವಾಮೀಜಿಗಳು ನಿರಶನದಲ್ಲಿ ತೊಡಗಿದ್ದರೂ ಇಲ್ಲಿಯವರೆಗೆ ಸರ್ಕಾರದ ಯಾವೊಬ್ಬ ಪ್ರತಿನಿಧಿಯೂ ಸಮಸ್ಯೆ ಆಲಿಸಲು ಸ್ಥಳಕ್ಕೆ ತೆರಳಿಲ್ಲ.












Click it and Unblock the Notifications