ಬೆಂಗಳೂರು-ಮೈಸೂರು 6 ಪಥ ರಸ್ತೆ ಕಾಮಗಾರಿ ಡಿಸೆಂಬರ್ನಲ್ಲಿ ಆರಂಭ
ಬೆಂಗಳೂರು, ನವೆಂಬರ್ 15 : ಬೆಂಗಳೂರು-ಮೈಸೂರು ನಡುವೆ 6 ಪಥದ ರಸ್ತೆ ನಿರ್ಮಾಣ ಕಾರ್ಯಕ್ಕೆ ಡಿಸೆಂಬರ್ನಲ್ಲಿ ಚಾಲನೆ ದೊರೆಯಲಿದೆ. 2018ರ ಮಾರ್ಚ್ನಲ್ಲಿಯೇ ಕೇಂದ್ರ ಸರ್ಕಾರ ಯೋಜನೆಗೆ ಒಪ್ಪಿಗೆ ನೀಡಿದ್ದು, ಶಂಕುಸ್ಥಾಪನೆ ಸಹ ಆಗಿದೆ.
ಮೈಸೂರು-ಬೆಂಗಳೂರು ನಡುವಿನ 117 ಕಿ.ಮೀ. ಮಾರ್ಗವನ್ನು ವಿಸ್ತರಣೆ ಮಾಡಿ 8 ಪಥದ ರಸ್ತೆಯನ್ನಾಗಿ ಅಭಿವೃದ್ಧಿ ಮಾಡಲಾಗುತ್ತದೆ. 6 ಪಥದ ರಸ್ತೆ ಮತ್ತು 2 ಸರ್ವೀಸ್ ರಸ್ತೆಯನ್ನು ನಿರ್ಮಾಣ ಮಾಡಲಿದ್ದು, 18 ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 275ರ ಅಭಿವೃದ್ಧಿಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಶೇ 40ರಷ್ಟು ಅನುದಾನ ನೀಡಲಿದೆ. ಉಳಿದ ಹಣವನ್ನು ಯೋಜನೆಯ ಗುತ್ತಿಗೆ ಪಡೆದ ಕಂಪನಿ ಹೂಡಿಕೆ ಮಾಡಲಿದ್ದು, ಟೋಲ್ ಮೂಲಕ ಹಣ ಸಂಗ್ರಹ ಮಾಡಲಿದೆ.
2014ರಲ್ಲಿ ಈ ಯೋಜನೆಗೆ ಒಪ್ಪಿಗೆ ಸಿಕ್ಕಿತ್ತು. 2018ರ ಮಾರ್ಚ್ನಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ವಿವಿಧ ಕಾರಣಗಳಿಗಾಗಿ ವಿಬಂಳವಾಗಿದ್ದ ಯೋಜನೆ ಈಗ ಜಾರಿಗೆ ಬರುತ್ತಿದೆ....

ಮೂಲ ಕೆಲಸ ಆರಂಭ
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಗೆ ಮೂಲ ಕೆಲಸಗಳನ್ನು ಆರಂಭಿಸಲಾಗಿದೆ. ರಸ್ತೆ ಎಲ್ಲಿಯ ತನಕ ಬರಲಿದೆ ಎಂದು ಮಾರ್ಕ್ ಮಾಡಲಾಗಿದೆ. ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಕೆಲವು ಕಡೆ ಮರಗಳನ್ನು ಕಡಿಯಲಾಗುತ್ತಿದೆ. ಗುರತು ಮಾಡಿರುವ ಜಾಗದಲ್ಲಿ ಇರುವ ಡಾಬಾ, ಸಣ್ಣ-ಪುಟ್ಟ ಅಂಗಡಿಗಳನ್ನು ತೆರವುಗೊಳಿಸುವಂತೆ ಸೂಚಿಸಲಾಗಿದೆ. ಡಿಸೆಂಬರ್ನಲ್ಲಿ ಕಾಮಗಾರಿ ಆರಂಭವಾಗಲಿದೆ.

2 ಹಂತದಲ್ಲಿ ಕಾಮಗಾರಿ
ಒಟ್ಟು 2 ಹಂತದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತದೆ. ಮೊದಲ ಹಂತದಲ್ಲಿ ಬೆಂಗಳೂರು-ನಿಢ್ಲಘಟ್ಟ (56 ಕಿ.ಮೀ) ಕಾಮಗಾರಿಯನ್ನು 1984 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತದೆ. 2ನೇ ಹಂತದಲ್ಲಿ ನಿಢ್ಲಘಟ್ಟ- ಮೈಸೂರು ನಡುವಿನ (61) ಕಿ.ಮೀ.ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಯೋಜನೆ ಪೂರ್ಣಗೊಂಡ ಬಳಿಕ ಬೆಂಗಳೂರು-ಮೈಸೂರು ನಡುವಿನ ಪ್ರಯಾಣದ ಅವಧಿ 90 ನಿಮಿಷಕ್ಕೆ ಕಡಿಮೆಯಾಗುವ ನಿರೀಕ್ಷೆ ಇದೆ.

ಮೈಸೂರಿನಿಂದ ಆರಂಭ
ಕಾಮಗಾರಿ ಆರಂಭಕ್ಕೂ ಮುನ್ನ ರಸ್ತೆ ಅಗಲೀಕರಣ ಮಾಡಲಾಗುತ್ತದೆ. ಮೈಸೂರಿನಿಂದ ಮಂಡ್ಯದವರೆಗಿನ ರಸ್ತೆಯನ್ನು ಮೊದಲು ಅಗಲೀಕರಣ ಮಾಡಲಾಗುತ್ತದೆ. ಆದರೆ, ಈಗ ಮಂಡ್ಯ ಭಾಗದಲ್ಲಿ ಕಬ್ಬು ಮತ್ತು ಭತ್ತದ ಬೆಳೆಗಳು ಬೆಳೆದು ನಿಂತಿವೆ. 15 ದಿನಗಳಲ್ಲಿ ಕೊಯ್ಲು ಆಗಲಿದ್ದು, ತಕ್ಷಣ ಅಗಲೀಕರಣ ಕಾಮಗಾರಿ ಆರಂಭವಾಗಲಿದೆ.

6400 ಕೋಟಿ ವೆಚ್ಚ
ಬೆಂಗಳೂರು-ಮೈಸೂರು 6 ಪಥದ ರಸ್ತೆ ಕಾಮಗಾರಿಯನ್ನು 6,400 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. 117 ಕಿ.ಮೀ.ರಸ್ತೆಯನ್ನು ಅಗಲೀಕರಣ ಮಾಡಿ, 6 ಪಥದ ರಸ್ತೆ ನಿರ್ಮಾಣ ಮಾಡಲಾಗುತ್ತದೆ. 2 ಸರ್ವೀಸ್ ರಸ್ತೆಗಳನ್ನು ನಿರ್ಮಿಸಲಾಗುತ್ತದೆ. 18 ತಿಂಗಳಿನಲ್ಲಿ ಈ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಎಷ್ಟು ಎಕರೆ ಭೂ ಸ್ವಾಧೀನ
ಯೋಜನೆಯ ವೆಚ್ಚದಲ್ಲಿ 2,246.71 ಕೋಟಿ ಹಣ ಭೂ ಸ್ವಾಧೀನಕ್ಕೆ ಖರ್ಚಾಗಲಿದೆ. ಎನ್ಎಚ್ಎಐ ಈಗಾಗಲೇ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಗುತ್ತಿಗೆ ಪಡೆದ ಕಂಪನಿಗೆ ನೀಡಿದೆ.
ಹೈಬ್ರಿಡ್ ಆನ್ಯುಟಿ ಮಾಡೆಲ್ (ಎಚ್ಎಎಂ) ಮಾದರಿಯಲ್ಲಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಾಣ ಮಾಡುತ್ತಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಎಚ್ಎಎಂ ಮಾದರಿಯನ್ನು ಕರ್ನಾಟಕದಲ್ಲಿ ಜಾರಿಗೆ ತರಲಾಗುತ್ತಿದೆ. ಇದರ ಅನ್ವಯ ಎನ್ಎಚ್ಎಐ ಶೇ 40ರಷ್ಟು ಹಣ ಹೂಡಿಕೆ ಮಾಡಲಿದೆ. ಉಳಿದ ಹಣವನ್ನು ಗುತ್ತಿಗೆ ಪಡೆದ ಕಂಪನಿ ಹೂಡಿಕೆ ಮಾಡಬೇಕು.











Click it and Unblock the Notifications