Bengaluru Mysuru Expressway : ಸಚಿವ ಗಡ್ಕರಿಯಿಂದ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇ ಪರಿಶೀಲನೆ
ಬೆಂಗಳೂರು, ಡಿಸೆಂಬರ್ 29: 2023 ರ ಜನವರಿ 5 ರಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಎಕ್ಸ್ಪ್ರೆಸ್ವೇಯನ್ನು ಪರಿಶೀಲಿಸಲು ನಿರ್ಧರಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ ಬುಧವಾರ ವಿಧಾನ ಪರಿಷತ್ತಿಗೆ ಮಾಹಿತಿ ನೀಡಿದರು.
ಅಧಿಕ ಮಳೆ, ಮಳೆ ನೀರು ಚರಂಡಿಗಳ ಒತ್ತುವರಿ, ಹೂಳು ಮತ್ತು ಅವಶೇಷಗಳನ್ನು ತೆಗೆಯದಿರುವುದು ಇತ್ತೀಚೆಗೆ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯ ಭಾಗಗಳಲ್ಲಿ ತೀವ್ರ ಜಲಾವೃತವಾಗಿದೆ ಎಂದು ಅವರು ತಿಳಿಸಿದರು.
ಆರೇ ತಿಂಗಳಲ್ಲಿ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ 77 ಅಪಘಾತಗಳು
ಜೆಡಿಎಸ್ನ ಎಂಎಲ್ಸಿ ಮರಿತಿಬ್ಬೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಾಟೀಲ್, ರಾಜ್ಯದಲ್ಲಿ ವಾಡಿಕೆಗಿಂತ 2 ರಿಂದ 3 ಪಟ್ಟು ಹೆಚ್ಚು ಮಳೆಯಾಗಿರುವುದರಿಂದ ನೀರಿನ ಹರಿವು ಹೆಚ್ಚಾಗಿದ್ದು, ಅತಿಕ್ರಮಣ ಹಾಗೂ ಹೂಳು ತುಂಬಿ ಸಮಸ್ಯೆ ಬಿಗಡಾಯಿಸಿದೆ. ತಾನು ಎರಡು ಸುತ್ತಿನ ತಪಾಸಣೆ ನಡೆಸಿದ್ದೇನೆ ಎಂದು ಹೇಳಿದ ಪಾಟೀಲ್, ಸರ್ಕಾರ ಕ್ರಮಗಳನ್ನು ಕೈಗೊಂಡಿದೆ ಮತ್ತು ಚಾಕ್ ಪಾಯಿಂಟ್ಗಳನ್ನು ತೆರವುಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ ಎಂದು ತಿಳಿಸಿದರು.
ಎಕ್ಸ್ಪ್ರೆಸ್ವೇನಲ್ಲಿ ರಾಮನಗರ, ಚನ್ನಪಟ್ಟಣ, ಮಂಡ್ಯ ಮತ್ತು ಮದ್ದೂರು ಜನರು ತಮ್ಮ ಪಟ್ಟಣಗಳನ್ನು ಈ ಯೋಜನೆಯೊಂದಿಗೆ ಜೋಡಿಸಬೇಕೆಂದು ಬಯಸುತ್ತಾರೆ ಎಂದು ನನಗೆ ತಿಳಿದಿದೆ, ಆದರೆ, ಅದು ಸಾಧ್ಯವಾಗದಿರಬಹುದು ಎಂದರು. ಅದಕ್ಕೆ ಮರಿತಿಬ್ಬೇಗೌಡ ಈ ಭಾಗದ ರೈತರು ತಮ್ಮ ಜಮೀನು ಮತ್ತು ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ. ಈಗ ಎನ್ಎಚ್ಎಐ ರಸ್ತೆಗೆ ಪ್ರವೇಶಿಸದಂತೆ ತಡೆಯುತ್ತಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಕಳೆದ ಆರು ತಿಂಗಳಲ್ಲಿ 77 ಅಪಘಾತಗಳು ನಡೆದಿವೆ ಎಂದು ಪೊಲೀಸ್ ಇಲಾಖೆಯ ಅಂಕಿಅಂಶಗಳು ಈಗಾಗಲೇ ತಿಳಿಸಿವೆ. ಪೊಲೀಸ್ ಮಾಹಿತಿ ಪ್ರಕಾರ, ರಾಮನಗರ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತಗಳು ವರದಿಯಾಗಿದ್ದು, ಒಟ್ಟು 28 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 67 ಜನರು ಅಪಘಾತದಲ್ಲಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
8,453 ಕೋಟಿ ವೆಚ್ಚದ ಯೋಜನೆ
₹ 8,453 ಕೋಟಿ ವೆಚ್ಚದ ಯೋಜನೆಯಾದ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇ ಮುಂದಿನ ವರ್ಷ ಮಾರ್ಚ್ನಲ್ಲಿ ಉದ್ಘಾಟನೆಯಾಗಲಿದೆಯಾದರೂ, ಉಳಿದ ಭಾಗವು ಇನ್ನೂ ಪೂರ್ಣಗೊಳ್ಳದ ಕಾರಣ ಬೆಂಗಳೂರಿನಿಂದ ಮಂಡ್ಯಕ್ಕೆ ವಾಹನಗಳನ್ನು ಓಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅನುಮತಿ ನೀಡಿದ್ದಾರೆ.
118 ಕಿಲೋಮೀಟರ್ ಉದ್ದದ ರಸ್ತೆ
ಕೆಂಗೇರಿಯಿಂದ ಮೈಸೂರಿಗೆ ಎಕ್ಸ್ಪ್ರೆಸ್ವೇ ಪ್ರಸ್ತುತ 3.5 ಗಂಟೆಗಳ ಪ್ರಯಾಣವನ್ನು ಕೇವಲ 1.5 ಗಂಟೆಗೆ ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ರಸ್ತೆಯು 118 ಕಿಲೋಮೀಟರ್ ಉದ್ದವನ್ನು ಹೊಂದಿದ್ದು, ಉದ್ಘಾಟನೆಗೂ ಮುನ್ನವೇ ವಾಹನಗಳ ಭಾರೀ ಸಂಚಾರಕ್ಕೆ ಸಾಕ್ಷಿಯಾಗಿದೆ. ಎನ್ಎಚ್ಎಐ ಅಧಿಕಾರಿಗಗಳು ಹೇಳುವಂತೆ ಎಕ್ಸ್ಪ್ರೆಸ್ವೇಯಲ್ಲಿ 16 ಅಪಘಾತ ವಲಯಗಳಿದೆ. ಆದರೆ ಅಧಿಕಾರಿಗಳು ಯಾವುದೇ ಸೂಚನಾ ಫಲಕಗಳನ್ನು ಅಳವಡಿಸಿಲ್ಲ.
ನಿರ್ಲಕ್ಷ್ಯದಿಂದಲೇ ಎಲ್ಲ ಅಪಘಾತ
ಹೊಸ ಎಕ್ಸ್ಪ್ರೆಸ್ವೇನಲ್ಲಿ ಅಪಘಾತಗಳ ಹೆಚ್ಚಳವನ್ನು ನಾವು ಗಮನಿಸಿದ್ದೇವೆ. ಅಪಘಾತಗಳನ್ನು ಕಡಿಮೆ ಮಾಡಲು ನಾವು 13 ಅಂಶಗಳ ಸಲಹೆಗಳನ್ನು ಎನ್ಎಚ್ಎಐ ಅಧಿಕಾರಿಗಳಿಗೆ ಕಳುಹಿಸಿದ್ದೇವೆ. ಚಾಲಕರ ನಿರ್ಲಕ್ಷ್ಯದಿಂದಲೇ ಎಲ್ಲ ಅಪಘಾತಗಳು ಸಂಭವಿಸಿವೆ ಎಂದು ರಾಮನಗರ ಎಸ್ಪಿ ಕೆ ಸಂತೋಷ್ ಬಾಬು ತಿಳಿಸಿದ್ದಾರೆ.
ಅತಿ ವೇಗ ಮತ್ತು ನಿರ್ಲಕ್ಷ್ಯವೇ ಕಾರಣ
ಏತನ್ಮಧ್ಯೆ, ಎನ್ಎಚ್ಎಐ ಅಧಿಕಾರಿಗಳಿಗೆ ಪ್ರತಿ 500 ಮೀಟರ್ಗೆ ಸಿಸಿಟಿವಿ ಅಳವಡಿಸಲು ಮತ್ತು ಸೈನ್ಬೋರ್ಡ್ಗಳು ಮತ್ತು ವೇಗ ಮಿತಿಗಳನ್ನು ಅಳವಡಿಸಲು ಪೊಲೀಸರು ಸೂಚಿಸಿದ್ದಾರೆ. ಅಪಘಾತಗಳಿಗೆ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ಕಾರಣ. ಎಕ್ಸ್ಪ್ರೆಸ್ವೇಯಲ್ಲಿ ಗರಿಷ್ಠ ವೇಗವು ಗಂಟೆಗೆ 100ಗೆ ಸೀಮಿತವಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಬಿ ಶ್ರೀಧರ್ ಹೇಳಿದ್ದಾರೆ.