ಕನ್ನಡಿಗರಿಗೆ ಉದ್ಯೋಗ: ಸಿದ್ದರಾಮಯ್ಯ ಸರ್ಕಾರದ ಖಡಕ್ ಆದೇಶ!
ಕನ್ನಡ ಸುಮಾರು 2 ಸಾವಿರ ವರ್ಷಕ್ಕೂ ಹೆಚ್ಚು ಇತಿಹಾಸವನ್ನ ಹೊಂದಿರುವ ಭಾಷೆ. ಹೀಗೆ ಕನ್ನಡ ಜಾಗತಿಕ ಮಟ್ಟದಲ್ಲಿ ಕೂಡ ದೊಡ್ಡ ಗೌರವ ಹೊಂದಿದೆ. ಆದರೂ ಈಗ ಕನ್ನಡಿಗರ ತವರು ಕರ್ನಾಟಕದಲ್ಲೇ ಕನ್ನಡ ಮಾಯ ಆಗುತ್ತಿದೆ, ಕನ್ನಡ ಭಾಷೆಗೆ ಈಗ ಕಂಟಕ ಎದುರಾಗಿದೆ ಎನ್ನುವ ಸಮಯದಲ್ಲೇ ಸಿದ್ದರಾಮಯ್ಯ ಅವರ ಸರ್ಕಾರ ಖಡಕ್ ಕ್ರಮ ಕೈಗೊಂಡಿದೆ. ಅದ್ರಲ್ಲೂ ಈ ಕ್ರಮದಿಂದ ಕನ್ನಡಿಗರ ಉದ್ಯೋಗದ ಮೇಲೆ ಭಾರಿ ಪರಿಣಾಮ ಉಂಟಾಗಲಿದೆ.
ಬೆಂಗಳೂರಲ್ಲಿ ಕನ್ನಡವೇ ಮರೆಯಾಗಿ ಹೋಗುತ್ತಿದೆ ಎನ್ನುವ ಆರೋಪಗಳೂ ಆಗಾಗ ನಮ್ಮ & ನಿಮ್ಮ ಕಿವಿಗೆ ಬೀಳುತ್ತಲೇ ಇರುತ್ತವೆ. ಅದ್ರಲ್ಲೂ ರಾಜಧಾನಿ ಬೆಂಗಳೂರಿನ ಕೆಲ ಪ್ರದೇಶ, ಸಂಪೂರ್ಣ ಪರಭಾಷಿಕರ ಹಿಡಿತಕ್ಕೆ ಸಿಲುಕಿವೆ. ಹೀಗಿದ್ದಾಗ ಐಟಿ ಕಂಪನಿಗಳಲ್ಲೂ ಕನ್ನಡ ಉದ್ಯೋಗಿಗಳು ಕಡಿಮೆ ಎಂಬ ಆರೋಪ ಇದೆ. ಹೀಗಿದ್ದಾಗಲೇ ಕನ್ನಡ ಉದ್ಯೋಗಿಗಳ ಪರವಾಗಿ ರಾಜ್ಯ ಸರ್ಕಾರ ಬೆಂಬಲ ನೀಡಲು ಮುಂದಾಗಿದೆ. ಹಾಗಾದರೆ ಐಟಿ & ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಹಾಗೂ ಮಾಡಲು ಸಿದ್ಧವಾಗಿರುವ ಕನ್ನಡಿಗರಿಗೆ, ಈಗ ಸಿಕ್ಕಿರುವ ಗುಡ್ ನ್ಯೂಸ್ ಏನು ಗೊತ್ತೆ?

ಕನ್ನಡ ಉದ್ಯೋಗಿಗಳ ಬಗ್ಗೆ ಬೋರ್ಡ್!
ಕನ್ನಡಿಗರ ನಾಡು ಕರ್ನಾಟಕದಲ್ಲಿ ಹಾಗೂ ಬೆಂಗಳೂರಲ್ಲಿ, ಕಾರ್ಯ ನಿರ್ವಹಿಸುತ್ತಿರುವ ಬಹುರಾಷ್ಟ್ರೀಯ ಕಂಪನಿಗಳು (MNCs) ಉದ್ಯೋಗ ನೀಡಿರುವ ಕನ್ನಡಿಗರ ಸಂಖ್ಯೆಯನ್ನು ಬಹಿರಂಗವಾಗಿ ಪ್ರದರ್ಶನ ಮಾಡಬೇಕಿದೆ. ಅದರಲ್ಲೂ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಕಚೇರಿಯ ಆವರಣದ ನೋಟಿಸ್ ಬೋರ್ಡ್ನಲ್ಲಿ ಪ್ರದರ್ಶನ ಮಾಡಬೇಕು ಎಂದು ಇದೀಗ ಹೊಸ ರೂಲ್ಸ್ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಕುರಿತು ಕನ್ನಡ & ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಮಾಹಿತಿ ನೀಡಿದ್ದಾರೆ.
ಕನ್ನಡ ಭಾಷೆಯ ರಕ್ಷಣೆಗೆ ಕ್ರಮ
ಅಷ್ಟಕ್ಕೂ, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕದ ಮೇಲೆ ನಡೆದ ಚರ್ಚೆಯ ವೇಳೆ ಶಿವರಾಜ್ ತಂಗಡಗಿ ಮಾತನಾಡಿದರು. ಕಂಪನಿಗಳ ನೋಟಿಸ್ ಬೋರ್ಡ್ ಮೇಲೆ ಶೇ 60ರಷ್ಟು ಕನ್ನಡ ಕಡ್ಡಾಯ ಮಾಡಿರುವ ಮಸೂದೆ ಇದಾಗಿದೆ. ಕನ್ನಡ ಭಾಷೆಯ ರಕ್ಷಣೆ ಮತ್ತು ಪ್ರಾಧಾನ್ಯತೆಗೆ ಒತ್ತು ನೀಡಲು ರಾಜ್ಯ ಸರ್ಕಾರ ಎಲ್ಲಾ ಪ್ರಯತ್ನ ಮಾಡುತ್ತೆ ಅಂತಾ ಇಂದು, ಸಚಿವರು ಸದನಕ್ಕೆ ಮಾಹಿತಿ ನೀಡಿದರು. ಹಾಗೇ ಕರ್ನಾಟಕದಲ್ಲೀಗ, ಕಾರ್ಯನಿರ್ವಹಿಸುವ ಬಹುರಾಷ್ಟ್ರೀಯ ಕಂಪನಿಗಳು ಸಾಕಷ್ಟು ಸಂಖ್ಯೆಯಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವುದನ್ನು ಖಚಿತ ಪಡಿಸಿಕೊಳ್ಳಲು, ವಿವರ ಪ್ರದರ್ಶಿಸಲು ಸರ್ಕಾರ ಈಗ ಸೂಚಿಸಲಿದೆ ಎಂದಿದ್ದಾರೆ.
ನ್ಯಾಯಾಂಗದಲ್ಲೂ ಕನ್ನಡ ಭಾಷೆಗೆ ಒತ್ತು
ಇನ್ನು ಇದೀಗ ನ್ಯಾಯಾಂಗದಲ್ಲೂ ಕನ್ನಡವನ್ನು ಬಲಪಡಿಸಲು ಸರ್ಕಾರ ಮುಂದಾಗಿದೆ. ನಾವು ಕನ್ನಡ ರಕ್ಷಿಸಲು, ಉತ್ತೇಜಿಸಲು, ಬಲಪಡಿಸಲು ಸಾಕಷ್ಟು ಕ್ರಮ ಕೈಗೊಂಡಿದ್ದೇವೆ. ನ್ಯಾಯಾಂಗದಲ್ಲಿ ಕೂಡ ಕನ್ನಡದಲ್ಲಿ ತೀರ್ಪು ನೀಡಲು & ಕನ್ನಡದಲ್ಲಿ ವಾದ ಮಂಡಿಸಲು ವಕೀಲರನ್ನು ಪ್ರೇರೇಪಿಸಲು ಪ್ರಯತ್ನ ಮಾಡುತ್ತಿದ್ದೇವೆ ಅಂತಲೂ, ಕನ್ನಡ & ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.
ಕನ್ನಡ ಭಾಷೆ ಉಳಿಸಲು ಆ್ಯಪ್!
ಮತ್ತೊಂದು ಕಡೆ ಕನ್ನಡ ಭಾಷೆ ಸಂಬಂಧ ಸರ್ಕಾರ ಆ್ಯಪ್ ಅಭಿವೃದ್ಧಿಪಡಿಸಿದ್ದು ಕನ್ನಡಕ್ಕೆ ಅವಮಾನ ಆಗುವಂತಹ, ಘಟನೆ ಸಂಭವಿಸಿದರೆ ನಾಗರಿಕರು ಆ್ಯಪ್ ಮೂಲಕವೇ ದೂರು ಸಲ್ಲಿಸಬಹುದು ಅಂತಲೂ ಸಚಿವರು ಮಾಹಿತಿ ನೀಡಿದ್ದಾರೆ. ಕನ್ನಡ ಪರ ಹೋರಾಟಗಾರರ ಮೇಲಿನ ಪ್ರಕರಣಗಳ ಹಿಂಪಡೆಯಲು ಮತ್ತು ಕನ್ನಡ ಪರ ಹೋರಾಟಗಾರರಾದ ವಾಟಾಳ್ ನಾಗರಾಜ್ ಅವರನ್ನು, ಕನ್ನಡ ಅಭಿವೃದ್ಧಿ ರಾಜ್ಯ ಮಟ್ಟದ ಸಮಿತಿಗೆ ಸೇರಿಸಲು ನೀಡಿರುವ ಸಲಹೆ ಪರಿಶೀಲಿಸುತ್ತೇವೆ ಅಂತಾ ಕೂಡ ಸಚಿವ ತಂಗಡಗಿ ಭರವಸೆ ನೀಡಿದ್ದಾರೆ.
ಒಟ್ನಲ್ಲಿ ಇಷ್ಟು ದಿನ ಕನ್ನಡಿಗರಿಗೆ ಉದ್ಯೋಗ ಸಿಗಬೇಕು, ಬೆಂಗಳೂರಿನಲ್ಲಿ ಕನ್ನಡಿಗರಿಗೆ ಬೆಂಬಲ ನೀಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಇದೀಗ ರಾಜ್ಯ ಸರ್ಕಾರದಿಂದಲೆ ಈ ಬಗ್ಗೆ ಕ್ರಮಕ್ಕೆ ಚಿಂತನೆ ನಡೆಸಲಾಗಿದೆ. ಹೀಗಾಗಿ ಇದೆಲ್ಲಾ ಮುಂದೆ ಯಾವ ರೀತಿಯ ಬದಲಾವಣೆಗೆ ಕಾರಣವಾಗುತ್ತೆ? ಕನ್ನಡಿಗರಿಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಕೂಡ ಸಿಗುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications