ಬೆಂಗಳೂರು ಪ್ರವಾಹ: ದೇಶದಲ್ಲಿ 37,000 ಜಲಮೂಲ ಅತಿಕ್ರಮಣ
ಬೆಂಗಳೂರು, ಸೆಪ್ಟಂಬರ್ 07: ಮಳೆ ಇನ್ನಷ್ಟು ದಿನ ಮುಂದುವರಿಯಲಿರುವ ಕಾರಣ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಉಂಟಾಗಿರುವ ಪ್ರವಾಹ ಸಮಸ್ಯೆಯೂ ಮುಂದುವರಿಯುವ ಸಾಧ್ಯತೆ ಇದೆ. ಈಗಾಗಲೇ ರಸ್ತೆಗಳು, ಬಡಾವಣೆಗಳು ಜಲಾವೃತಗೊಂಡ ಹಿನ್ನೆಲೆಯಲ್ಲಿ ದೈನಂದಿನ ಚಟುವಟಿಕೆಗಳು ಅಸ್ತವ್ಯಸ್ತಗೊಂಡಿದೆ.
ನಗರದಲ್ಲಿ ಅತಿರೇಕವಾಗಿ ಜಲಮೂಲಗಳನ್ನು ಒತ್ತುವರಿ ಮಾಡಲಾಗುತ್ತಿದೆ. ಕೆರೆ, ಕಟ್ಟೆಗಳ ಜಾಗದಲ್ಲಿ ಯೋಜಿತವಲ್ಲದ ಕಟ್ಟಡಗಳು ತಲೆಎತ್ತಿವೆ. ಜಲಾನಯನ ಪ್ರದೇಶಗಳು ಮಳೆ ನೀರು ಹರಿದು ಹೋಗಲು ಮಾರ್ಗವನ್ನು ಕಲ್ಪಿಸಿರುತ್ತವೆ. ಈ ಮಾರ್ಗ ಇಲ್ಲದಿದ್ದಾಗ ಮಾತ್ರ ಮಳೆ ನೀರು ರಸ್ತೆ, ಬಡಾವಣೆಗಳು ಸೇರಿದಂತೆ ವಸತಿ ಪ್ರದೇಶಗಳಿಗೆ ನುಗ್ಗುತ್ತದೆ. ಹೀಗಾಗಿಯೇ ದೇಶದ ಐಟಿ ಕೇಂದ್ರ ಸಹ ಮಳೆ ಸಮಸ್ಯೆ ಎದುರಿಸುತ್ತಿದೆ.
ಕೇಂದ್ರ ಜಲ ಶಕ್ತಿ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಪ್ರಕಾರ, ಕರ್ನಾಟಕ ಸೇರಿದಂತೆ ಭಾರತದಲ್ಲಿ ಸುಮಾರು 37,000 ಜಲಮೂಲಗಳನ್ನು ಅತಿಕ್ರಮಿಸಲಾಗಿದೆ. ಬೆಂಗಳೂರು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಭಾರಿ ಪ್ರಮಾಣದಲ್ಲಿ ಮಳೆಯನ್ನು ಕಂಡಿದೆ. ಅದರಿಂದ ಸಾಕಷ್ಟು ನಷ್ಟವನ್ನು ಅನುಭವಿಸಿದೆ.
ಇತ್ತೀಚೆಗಷ್ಟೆ ಮಳೆ ನೀರಿನಿಂದ ಆವೃತಗೊಂಡಿದ್ದ ರಸ್ತೆಯಲ್ಲಿ ಸ್ಕೂಟಿ ಸ್ಕಿಡ್ ಆಗಿ ಯುವತಿಯೊಬ್ಬಳು ಬಿದ್ದಿದ್ದರು, ಆಸರೆಗಾಗಿ ವಿದ್ಯುತ್ ಕಂಬ ಹಿಡಿದು ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿತ್ತು. ಇದೇ ರೀತಿ ಅನಾಹುತಗಳು ಆಗದಂತೆ ತಡೆಯಲು ರಕ್ಷಣಾ ಸಿಬ್ಬಂದಿ ದೋಣಿಗಳ ಮೂಲಕ ಹಾನಿ ಪ್ರದೇಶದ ನಿವಾಸಿಗಳನ್ನು ಸ್ಥಳಾಂತರಿಸುತ್ತಿದ್ದಾರೆ.
ದೇಶಾದ್ಯಂತ 37,000 ಜಲಮೂಲ ಅತಿಕ್ರಮಣ
ಭಾರತದಲ್ಲಿ ಸುಮಾರು 37,000 ಜಲಮೂಲ ಅತಿಕ್ರಮಣಗೊಂಡಿದ್ದ ಪೈಕಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು (15,301) ಜಲಮೂಲ ಅತಿಕ್ರಮಗೊಂಡಿದೆ ಎಂದು ಕೇಂದ್ರ ಜಲ ಶಕ್ತಿ ಸಚಿವಾಲಯದ ವರದಿ ತಿಳಿಸಿದೆ. ಈ ವಿಷಯದಲ್ಲಿ ದಕ್ಷಿಣದ ರಾಜ್ಯಗಳು ಹೊರತಾಗಿಲ್ಲ. ತಮಿಳುನಾಡಿನಲ್ಲಿ 8,366, ಆಂಧ್ರ ಪ್ರದೇಶ 3,920, ತೆಲಂಗಾಣ 3,032 ಮತ್ತು ಕರ್ನಾಟಕದಲ್ಲಿ 948 ಹೆಚ್ಚು ಜಲಮೂಲಗಳು ಯಥಾ ಸ್ಥಿತಿಯಲ್ಲಿಲ್ಲ ಎನ್ನಲಾಗಿದೆ.
ಇದನ್ನೇ ಶೇಕಡಾವಾರು ಲೆಕ್ಕದಲ್ಲಿ ನೋಡುವುದಾದರೆ ಶೇ.10 ಪ್ರತಿಶತದಷ್ಟು ಜಲಮೂಲಗಳಲ್ಲಿ ಅತಿಕ್ರಮಿಸುವುದರಲ್ಲಿ ತಮಿಳುನಾಡು (ಶೇ.7.82) ಅಗ್ರ ಸ್ಥಾನದಲ್ಲಿದೆ. ಉತ್ತರ ಪ್ರದೇಶ (ಶೇ.6.24) ಮತ್ತು ತೆಲಂಗಾಣ (ಶೇ.4.73) ಕ್ರಮವಾಗಿ ನಂತರದ ಸ್ಥಾನದಲ್ಲಿವೆ.
ವ್ಯಾಪಕ ನಗರೀಕರಣದಿಂದ ಆಪತ್ತು
ಅತೀ ಮಳೆ, ಮಳೆಯಿಂದ ಪ್ರವಾಹ ಕುರಿತು ಪರಿಸರ ತಜ್ಞರು ಹೇಳುವ ಪ್ರಕಾರ, ಎಲ್ಲೆಡೆ ಅತಿರೇಕದ ನಗರೀಕರಣದಿಂದಾಗಿ ಈ ರೀತಿ ವಿಪತ್ತು ಸಂಭವಿಸುತ್ತಿದೆ. ಜನಸಂಖ್ಯೆ ಹೆಚ್ಚುತ್ತಿದೆ. ಜನಸಂಖ್ಯೆಗೆ ತಕ್ಕಂತೆ ಅವರಿಗೆ ನೆಲೆ ಕಲ್ಪಿಸುವ ಒತ್ತಡದಿಂದಾಗಿ ಜಲಮೂಲಗಳನ್ನು ಒತ್ತುವರಿ ಮಾಡಲಾಗುತ್ತಿದೆ. ಎಷ್ಟೋ ಕಡೆಗಳಲ್ಲಿ ಜಲಮೂಲಗಳೇ ಬತ್ತಿವೆ. ಹಾಗೆಂದು ಅಲ್ಲಿ ಬಡಾವಣೆ ನಿರ್ಮಿಸಿದರೆ, ಮಳೆಗಾಲದಲ್ಲಿ ಮಳೆ ನೀರಿಗೆ ಹರಿವಿಗೆ ಜಾಗವೇ ಇಲ್ಲದಂತಾಗಿ ಬಡಾವಣೆಗಳಿಗೆ ನುಗ್ಗಿತ್ತಿದೆ. ಈಗ ಆಗುತ್ತಿರುವುದು ಅದೇ ಎಂದು ತಜ್ಞರು ಹೇಳಿದ್ದಾರೆ.
ಕೇಂದ್ರದಿಂದ ಜಲ ಶಕ್ತಿ ಅಭಿಯಾನ
ಕೇಂದ್ರ ಸರ್ಕಾರವು 2019 ರಲ್ಲಿ 'ಜಲ ಶಕ್ತಿ ಅಭಿಯಾನ'ವನ್ನು ಆರಂಭಿಸಿತು. ಹಾಲಿ ಇರುವ ಕೇಂದ್ರದ ಜಲ ಸಂರಕ್ಷಣಾ ಯೋಜನೆಗಳ ಪೈಕಿ 'ಪ್ರಧಾನ ಮಂತ್ರಿ ಕೃಷಿ ಸಿಂಚಯೀ ಯೋಜನೆ - ಹರ್ ಖೇತ್ ಕೋ ಪಾನಿ' ಮತ್ತು 'ಅಟಲ್ ಮಿಷನ್ ಫಾರ್ ರಿಜುವೆನೇಶನ್ ಮತ್ತು ಅರ್ಬನ್ ಟ್ರಾನ್ಸ್ಫಾರ್ಮೇಷನ್ (ಅಮೃತ್) ಅಡಿಯಲ್ಲಿ ರಾಜ್ಯಗಳಿಗೆ ಕೇಂದ್ರ ಹಣಕಾಸಿನ ನೆರವು ನೀಡುತ್ತಿದೆ. ಅದು ಸದ್ಭಳಕೆ ಆಗುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಜಲಮೂಲ ನವೀಕರಣಕ್ಕಾಗಿ ಯೋಜನೆ
ಅಲ್ಲದೇ ಕಳೆದ ಎರಡು ವರ್ಷಗಳ ನಂತರ ದೇಶದ ಎಲ್ಲ ಜಿಲ್ಲೆಗಳಲ್ಲಿ 'ಜಲ ಶಕ್ತಿ ಅಭಿಯಾನ- ಕ್ಯಾಚ್ ದ ರೈನ್' ಯೋಜನೆ ಅನುಸರಿಸಲಾಯಿತು. ಅಭಿಯಾನದಡಿ ಜಲಮೂಲಗಳು, ಕೆರೆ ಕಟ್ಟೆಗಳನ್ನು ನವೀಕರಿಸುವುದು, ಜಲಮೂಲಗಳ ಲೆಕ್ಕ ಮಾಹಿತಿ, ಅತಿಕ್ರಮಣ ತೆರವುಗೊಳಿಸುವುದು, ಹೂಳು ತೆಗೆಯುವುದೇ ಯೋಜನೆ ಮುಖ್ಯ ಉದ್ದೇಶವಾಗಿದೆ. ಇದಾಗದಿದ್ದ ಪಕ್ಷದಲ್ಲಿ ಈ ರೀತಿ ಪ್ರತಿ ಮಳೆಗಾಲದಲ್ಲಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಈ ಸವಾಲು ತಪ್ಪಿಸಲು ಜಲಮೂಲಗಳ ಸಂರಕ್ಷಣೆ ಅತಿ ಮುಖ್ಯವಾಗಿದೆ.