ಬೆಸ್ಕಾಂ ಅಧಿಕಾರಿ ಸೋಗಿನಲ್ಲಿ ಮಹಿಳೆ ಬ್ಯಾಂಕ್ ಖಾತೆಯಿಂದ 60 ಸಾವಿರ ರೂ. ಗುಂಜಿದ ಸೈಬರ್ ಕಳ್ಳ
ಬೆಂಗಳೂರು, ಜೂ. 30: ಕೇವಲ ಒಂದು ಲಿಂಕ್ ಜನರೇಟ್ ಮಾಡಿ ಜನರ ಬ್ಯಾಂಕ್ ಖಾತೆಗಳಿಂದ ಹಣ ಎಗರಿಸುವ ಕಲೆ ಕರಗತ ಮಾಡಿಕೊಂಡಿರುವ ಸೈಬರ್ ಕಳ್ಳರು ಇದೀಗ ರಾಜ್ಯದ ಬೆಸ್ಕಾಂ ಗ್ರಾಹಕರಿಗೆ ಗಾಳ ಹಾಕಿದ್ದಾರೆ. ಬಿಲ್ ಪಾವತಿ ಮಾಡದೇ ಬಾಕಿ ಉಳಿಸಿಕೊಂಡಿರುವರಿಗೆ ಬೆಸ್ಕಾಂ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ಬ್ಯಾಂಕ್ ಖಾತೆಗಳಿಂದ ಹಣ ಎಗರಿಸುತ್ತಿದ್ದಾರೆ.
ಬೆಸ್ಕಾಂ ಬಿಲ್ ಪಾವತಿ ಮಾಡದೇ ಬಾಕಿ ಉಳಿಸಿಕೊಂಡಿದ್ದ ರೇಣುಕಾ ಎಂಬ ಮಹಿಳೆಗೆ ಕರೆ ಮಾಡಿದ ಸೈಬರ್ ಕಳ್ಳ, ವಿದ್ಯುತ್ ಸಂಪರ್ಕ ಕಡಿತ ಮಾಡುವುದಾಗಿ ಹೆದರಿಸಿ ಬ್ಯಾಂಕ್ ಖಾತೆಯಿಂದ 60 ಸಾವಿರ ರೂ. ಎಗರಿಸಿದ್ದಾನೆ. ವಿದ್ಯುತ್ ಬಾಕಿ ಬಿಲ್ ಆನ್ಲೈನ್ ಆಪ್ ಮೂಲಕ ಪೇ ಮಾಡುವಂತೆ ನಂಬಿಸಿ ಎರಡೇ ಕ್ಷಣದಲ್ಲಿ ಮಹಿಳೆಯ ಬ್ಯಾಂಕ್ ಖಾತೆಯಲ್ಲಿದ್ದ 60 ಸಾವಿರ ರೂ. ಎಗರಿಸಿದ್ದಾನೆ. ಮೋಸ ಹೋಗಿರುವುದು ಗೊತ್ತಾದ ಕೂಡಲೇ ಇದೀಗ ಮಹಿಳೆ ಬೆಂಗಳೂರು ದಕ್ಷಿಣ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆನ್ಲೈನ್ ಪೇಮೆಂಟ್ ಮಾಡುವಂತೆ ನಂಬಿಸಿ ಮೂರು ನಾಮ
ನಡೆದಿದ್ದೇನು ? ಸೈಬರ್ ವಂಚಕನೊಬ್ಬ 9903613648 ಮೊಬೈಲ್ ನಂಬರ್ ನಿಂದ ರೇಣುಕಾ ಮುಕುಂದನ್ ಅವರಿಗೆ ನಿಮ್ಮದು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದೀರ. ಕೂಡಲೇ ಬಿಲ್ ಪಾವತಿ ಮಾಡಿ ಎಂದು ಸಂದೇಶ ಕಳುಹಿಸಿದ್ದಾನೆ. ಈ ಸಂದೇಶ ಓದಿದ ಕೂಡಲೇ ಮತ್ತೊಂದು ಮೊಬೈಲ್ ನಂಬರ್ 6201654937 ನಿಂದ ಮಹಿಳೆಗೆ ಕರೆ ಬಂದಿದೆ. ನಾವು ಬೆಸ್ಕಾಂ ಅಧಿಕಾರಿಗಳು, ಈ ಕೂಡಲೇ ವಿದ್ಯುತ್ ಬಿಲ್ ಪಾವತಿಸದೇ ಹೋದರೆ ಮನೆ ಸಂಪರ್ಕ ಕಡಿತ ಮಾಡುತ್ತೇವೆ ಎಂದು ಹೆದರಿಸಿದ್ದಾನೆ. ಅಲ್ಲದೇ ಮೊಬೈಲ್ ಆಪ್ ಮೂಲಕ ಬಿಲ್ ಪಾವತಿ ಮಾಡಿ ಎಂದು ಸೂಚಿಸಿ ಟೀಮ್ ವೀವರ್, ಕ್ವಿಕ್ ಸಪೋರ್ಟ್ ಆಪ್ ಅನ್ನು ಡೌನ್ಲೋಡ್ ಮಾಡಿಸಿ ಇದರಿಂದ ಬೇಗ ಬಿಲ್ ಪಾವತಿ ಮಾಡಿ ಎಂದು ಹೇಳಿದ್ದಾನೆ.
ನಿಜ ಇರಬಹುದು ಎಂದು ನಂಬಿ ಅಪ್ ಡೌನ್ಲೋನ್ ಮಾಡಿಕೊಂಡ ಬಳಿಕ ದೂರುದಾರೆ ರೇಣುಕಾ ಮುಕುಂದನ್ ಅವರ ಬ್ಯಾಂಕ್ ಖಾತೆಯಲ್ಲಿದ್ದ 60 ಸಾವಿರ ರೂ. ಹಣವನ್ನು ಎಗರಿಸಿದ್ದಾನೆ. ಇದಾದ ಬಳಿಕ ಪೋನ್ ನಂಬರ್ ಗೆ ಕರೆ ಮಾಡಿದ್ರೆ ಸ್ವಿಚ್ ಆಫ್ ಆಗಿದೆ. ಬೆಸ್ಕಾಂ ಕೇಂದ್ರಕ್ಕೆ ಹೋಗಿ ಕೇಳಿದಾಗ, ಬೆಸ್ಕಾಂ ಅಧಿಕಾರಿಗಳು ಯಾರೂ ಕರೆ ಮಾಡಿಲ್ಲ ಎಂಬುದನ್ನು ಖಚಿತ ಪಡಿಸಿದ್ದಾರೆ.
ಬೆಸ್ಕಾಂ ಗ್ರಾಹಕರಲ್ಲಿ ಆತಂಕ:
ಅನ್ಲೈನ್ ನಲ್ಲಿ ಕಡಿಮೆ ಬೆಲೆಗೆ ವಸ್ತು ಮಾರಾಟ, ಕೆವೈಸಿ ಅಪ್ಡೇಟ್ ಮಾಡಿಸಿ, ಗಿಫ್ಟ್ ಪಾರ್ಸಲ್ ಹೀಗೆ ನಾನಾ ರೂಪದಲ್ಲಿ ಜನರಿಗೆ ಟೋಪಿ ಹಾಕುತ್ತಿರುವ ಸೈಬರ್ ವಂಚಕರು ಇದೀಗ ಬೆಸ್ಕಾಂ ಗ್ರಾಹಕರನ್ನು ಟಾರ್ಗೆಟ್ ಮಾಡಿ ಗಾಳ ಹಾಕುತ್ತಿದ್ದಾರೆ. ಸಾಮಾನ್ಯವಾಗಿ ಒಂದು ತಿಂಗಳ ಬಿಲ್ ಅಂತು ಎಲ್ಲರೂ ಬಾಕಿ ಉಳಿಸಿಕೊಂಡಿರುತ್ತಾರೆ. ಹಾಗಂತ ಯಾರೂ ಬೆಸ್ಕಾಂ ಅಧಿಕಾರಿಗಳು ಬಿಲ್ ಪಾವತಿ ಮಾಡುವುದಕ್ಕೆ ಬಲವಂತ ಮಾಡುವುದಿಲ್ಲ. ಅವಧಿ ಮುಗಿದರೆ ಮಾತ್ರ ಮನೆ ಬಳಿ ಬಂದು ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಾರೆ. ಅಧಿಕೃತ ಅನ್ಲೈನ್ ಪೇಮೆಂಟ್ ಮಾದರಿ ಬಿಟ್ಟು ಬೇರೆ ಆಪ್ ಗಳ ಮೂಲಕ ವಿದ್ಯುತ್ ಬಿಲ್ ಪಾವತಿಗೆ ಅವಕಾಶ ನೀಡಿಲ್ಲ. ಈ ಸತ್ಯ ಅರಿವಿಲ್ಲದೇ ಸೈಬರ್ ವಂಚಕರು ಹಾಕುತ್ತಿರುವ ಗಾಳಕ್ಕೆ ಬೆಸ್ಕಾಂ ಗ್ರಾಹಕರು ಮೋಸ ಹೋಗುತ್ತಿದ್ದಾರೆ.
ಅಪರಿಚಿತ ಲಿಂಕ್, ಕರೆಗೆ ಮಹತ್ವ ಕೊಡಬೇಡಿ
ಬೆಂಗಳೂರಿನ ಮುಗ್ಧ ಜನರಿಗೆ ವಂಚನೆ ಮಾಡುವುದನ್ನೇ ಸೈಬರ್ ವಂಚಕರು ಕಾಯಕ ಮಾಡಿಕೊಂಡಿದ್ದಾರೆ. ಒಂದೊಂದು ಸೈಬರ್ ಠಾಣೆಯಲ್ಲಿ ಅರು ತಿಂಗಳಲ್ಲಿ 600 ಕೇಸು ದಾಖಲಾಗಿವೆ. ಇನ್ನೂ ನೂರಾರು ಕೇಸು ದಾಖಲೇ ಆಗಿಲ್ಲ. ಅಪರಿಚಿತ ಕರೆಗಳಿಗೆ ಹಾಗೂ ಅಪರಿಚಿತರು ಕಳಿಸುವ ಲೀಂಕ್ ಗಳನ್ನು ಸಾರ್ವಜನಿಕರು ಒತ್ತಬಾರದು. ಒಮ್ಮೆ ಹಣ ಕಳೆದುಕೊಂಡರೆ ವಾಪಸು ರೀಕವರಿ ಮಾಡುವುದು ಕಷ್ಟವಾಗಿದೆ. ಹೊರ ರಾಜ್ಯಗಳಲ್ಲಿ ಕೂತು ಸೈಬರ್ ವಂಚಕರು ಮೋಸ ಮಾಡುವ ಕಾರಣ ಅವರನ್ನು ಬಂಧಿಸುವುದು ಕಷ್ಟ ಸಾಧ್ಯ. ಸಾರ್ವಜನಿಕರು ಎಚ್ಚೆತ್ತುಕೊಳ್ಳದ ಹೊರತು ಬೇರೆ ಪರಿಹಾರ ಮಾರ್ಗವಿಲ್ಲ ಎಂದು ಸೈಬರ್ ಪೊಲೀಸ್ ಅಧಿಕಾರಿ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
ಸೈಬರ್ ವಂಚನೆಯಾದ್ರೆ ಒಂದು ತಾಸಿನಲ್ಲಿ ಈ ಕೆಲಸ ಮಾಡಿ:
ಸೈಬರ್ ವಂಚನೆ ಆದ್ರೆ ಗೋಲ್ಡನ್ ಅವರ್ ಬಳಿಸಿ: ಸೈಬರ್ ವಂಚನೆಗೆ ಒಳಗಾದ ಒಂದು ತಾಸಿನ ಒಳಗೆ ಪೊಲೀಸ್ ನಿಯಂತ್ರಣ ಕಚೇರಿಗೆ ಕರೆ ಮಾಡಿ ದೂರು ದಾಖಲಿಸಿದರೆ ಹಣ ವಾಪಸು ಪಡೆಯಲು ಅವಕಾಶವಿರುತ್ತದೆ. ಭಾರತೀಯ ರಿಸರ್ವ ಬ್ಯಾಂಕ್ ನೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಬೆಂಗಳೂರು ಪೊಲೀಸರು ಸೈಬರ್ ವಂಚನೆ ವಹಿವಾಟು ನಡೆದ ಒಂದು ತಾಸಿನ ಒಳಗೆ ದೂರು ಕೊಟ್ಟರೆ ಹಣವನ್ನು ಸೈಬರ್ ವಂಚಕರ ಖಾತೆಗೆ ಹೋಗದಂತೆ ತಡೆಯಲಾಗುತ್ತದೆ. ಆದರೆ, ಸೈಬರ್ ವಂಚನೆಗೆ ಒಳಗಾದವರು ಕೂಡಲೇ ಸೈಬರ್ ವಂಚನೆ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಬೇಕು. ಅನಂತರ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಬೇಕು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.