ರಾಜ್ಯದಲ್ಲಿ ನಿಜವಾಗಿಯೂ ಒಂದೇ ದಿನ 5030 ಮಂದಿಗೆ ಸೋಂಕು ಅಂಟಿತ್ತಾ?
ಬೆಂಗಳೂರು, ಜುಲೈ.24: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆ ಮತ್ತು ಸಾವಿನ ಪ್ರಮಾಣವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡುತ್ತಿರುವ ಅಂಕಿ-ಅಂಶಗಳಿಗೂ ವಾಸ್ತವತೆಗೂ ಅಜಗಜಾಂತರ ವ್ಯತ್ಯಾಸವಿದೆ ಎಂಬ ಆರೋಪ ಕೇಳಿ ಬಂದಿದೆ.
Recommended Video
ಕೊರೊನಾವೈರಸ್ ಸೋಂಕಿನಿಂದ ಪ್ರತಿನಿತ್ಯ 60 ರಿಂದ 90ರವರೆಗೂ ಜನರು ಪ್ರಾಣ ಬಿಡುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಬುಲೆಟಿನ್ ನಲ್ಲಿ ಹೇಳುತ್ತಿದೆ. ಆದರೆ ರಾಜ್ಯದಲ್ಲಿ ವಾಸ್ತವ ಸ್ಥಿತಿ ಹಾಗಿಲ್ಲ ಎಂದು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಮಾಜಿ ಕಾರ್ಯದರ್ಶಿ ಎಂ.ಮದನ್ ಗೋಪಾಲ್ ಆರೋಪಿಸಿದ್ದಾರೆ.
ರಾಜ್ಯದಲ್ಲಿ 5 ಸಾವಿರ ಗಡಿ ದಾಟಿದ ಕೊರೊನಾ ಸೋಂಕು; 6 ಜಿಲ್ಲೆಗಳ ಇಂದಿನ ಅಪ್ಡೇಟ್
ಬೆಂಗಳೂರಿನಲ್ಲಿ ಕೊರೊನಾವೈರಸ್ ಸೋಂಕಿತರ ಅಂಕಿ-ಸಂಖ್ಯೆ ಮತ್ತು ಸಾವಿನ ಪ್ರಮಾಣವು ಜನರ ಎದೆಯಲ್ಲಿ ನಡುಕ ಹುಟ್ಟಿಸುತ್ತಿದೆ. ಬಿಬಿಎಂಪಿ ನೀಡಿತ್ತಿರುವ ಮಾಹಿತಿ ಕೇವಲ ಒಂದು ದಿನಕ್ಕೆ ಸಂಬಂಧಿಸಿದ್ದು ಆಗಿರುವುದಿಲ್ಲ ಎಂಬ ಸತ್ಯ ಜನರಿಗೆ ಮನವರಿಕೆ ಆಗಬೇಕಿದೆ.
ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ನಡುವೆ ಸಮನ್ವಯತೆ ಕೊರತೆ
ಸಿಲಿಕಾನ್ ಸಿಟಿಯಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆಯನ್ನು ಗಮನಿಸಿದಾಗ ರಾಜಧಾನಿ ಮಂದಿ ಬೆಚ್ಚಿ ಬೀಳುವಂತಿದೆ. ಪ್ರತಿನಿತ್ಯ 2,000ಕ್ಕಿಂತ ಹೆಚ್ಚು ಸೋಂಕಿತ ಪ್ರಕರಣಗಳು ಮತ್ತು 60ಕ್ಕಿಂತ ಹೆಚ್ಚು ಮಂದಿ ಸಾವನ್ನಪ್ಪಿರುವ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡುವ ಹೆಲ್ತ್ ಬುಲೆಟಿನ್ ನಲ್ಲಿ ಉಲ್ಲೇಖಿಸಲಾಗಿರುತ್ತದೆ. ಆದರೆ ಒಂದೇ ದಿನ ಇಷ್ಟೊಂದು ಸೋಂಕಿತ ಪ್ರಕರಣಗಳು ಪತ್ತೆ ಆಗಿರುವುದಿಲ್ಲ. ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ನಡುವಿನ ಸಮನ್ವಯದ ಕೊರತೆಯಿಂದ ಇಂಥ ಅತಾತುರ್ಯ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಆರೋಗ್ಯ ಇಲಾಖೆ ನೀಡುತ್ತಿರುವುದು ವಾಸ್ತವ ದತ್ತಾಂಶವಲ್ಲ
ಕಳೆದ 10 ದಿನಗಳಲ್ಲಿ ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿನ ಪ್ರಮಾಣದಲ್ಲಿ ಭಾರೀ ಹೆಚ್ಚವಾಗಿದೆ ಎಂದು ಕರ್ನಾಟಕದಾದ್ಯಂತ ಜನರು ಬೆಚ್ಚಿ ಬೀಳುತ್ತಿದ್ದಾರೆ. ಆದರೆ ವಾಸ್ತವ ಪರಿಸ್ಥಿತಿಯೇ ಬೇರೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾಗುತ್ತಿರುವ ಸೋಂಕಿತ ಪ್ರಕರಣಗಳು ಒಂದು ದಿನಕ್ಕೆ ಸಂಬಂಧಿಸಿದ್ದಲ್ಲ. ಬದಲಿಗೆ ಕಳೆದ ಒಂದು ವಾರ ಮತ್ತು ಒಂದು ತಿಂಗಳ ಹಿಂದಿನ ಸೋಂಕಿತ ಪ್ರಕರಣ ಮತ್ತು ಸಾವಿನ ಸಂಖ್ಯೆಯನ್ನು ಇತ್ತೀಚಿನ ಹೆಲ್ತ್ ಬುಲೆಟಿನ್ ನಲ್ಲಿ ಸೇರಿಸಲಾಗುತ್ತಿದೆ ಎಂದು ಎಂ.ಮದನ್ ಗೋಪಾಲ್ ದೂಷಿಸಿದ್ದಾರೆ.
ಕೊರೊನಾವೈರಸ್ ಅಂಕಿ-ಸಂಖ್ಯೆಗಳಿಂದ ಜನರಲ್ಲಿ ಆತಂಕ
ಪ್ರತಿನಿತ್ಯ ನಾಲ್ಕು ಸಾವಿರ, ಐದು ಸಾವಿರದಷ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗುತ್ತಿವೆ ಎನ್ನುವ ಬಗ್ಗೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗುತ್ತಿದೆ. ಇದು ಸಾರ್ವಜನಿಕ ವಲಯದಲ್ಲಿ ಆತಂಕ, ಭಯವನ್ನು ಹುಟ್ಟು ಹಾಕುತ್ತಿದೆ. ದಿನಕ್ಕೆ ಇಬ್ಬರಿಂದ ಮೂವರು ಕೊವಿಡ್-19 ನಿಂದ ಸಾವನ್ನಪ್ಪಿರುತ್ತಾರೆ. ಇದರ ಜೊತೆಗೆ ವಾರದ ಹಿಂದೆ ಮತ್ತು ತಿಂಗಳ ಹಿಂದೆ ಸಾವನ್ನಪ್ಪಿರುವವರನ್ನು ಇಂದಿನ ಪಟ್ಟಿಗೆ ಸೇರಿಸಲಾಗುತ್ತಿದೆ. ಇದರಿಂದ ಸಾವಿನ ಸಂಖ್ಯೆ ಪ್ರತಿನಿತ್ಯ 60ರ ಗಡಿ ದಾಟುತ್ತಿದೆ ಎಂದು ಎಂ.ಮದನ್ ಗೋಪಾಲ್ ಅವರು ಆರೋಪಿಸಿದ್ದಾರೆ.
ವಾಸ್ತವಾಂಶಗಳನ್ನು ಬಿಡುಗಡೆ ಮಾಡುವಂತೆ ಮನವಿ
ಕೊರೊನಾವೈರಸ್ ಸೋಂಕಿತ ಮತ್ತು ಸಾವಿನ ಸಂಖ್ಯೆಗೆ ಸಂಬಂಧಿಸಿದಂತೆ ವಾಸ್ತವಿಕ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಬೇಕಿದೆ. ನಿಜವಾಗಿಯೂ ಒಂದು ದಿನಕ್ಕೆ ಎಷ್ಟು ಮಂದಿಗೆ ಸೋಂಕು ಅಂಟಿಕೊಳ್ಳುತ್ತಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕಿದೆ. ಇಲ್ಲದಿದ್ದರೆ ಜನರಲ್ಲಿ ಸಾಂಕ್ರಾಮಿಕ ಪಿಡುಗಿನ ಬಗ್ಗೆ ಅನಗತ್ಯ ಗೊಂದಲ, ಆತಂಕ ಉಂಟಾಗುತ್ತದೆ. ಈಗ ನೀಡುತ್ತಿರುವ ಮಾಹಿತಿಗೂ ವಾಸ್ತವ ಸ್ಥಿತಿಗೂ ಭಾರಿ ಅಂತರ ಕಂಡು ಬರುತ್ತಿದ್ದು, ಬಿಬಿಎಂಪಿ ವಾಸ್ತವ ಅಂಶಗಳನ್ನು ಕಲೆ ಹಾಕುವಲ್ಲಿ ವಿಫಲವಾಗುತ್ತಿದೆ. ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ನಡುವಿನ ಗೊಂದಲದಿಂದ ಸಮಸ್ಯೆ ಹೆಚ್ಚಾಗುತ್ತಿದೆ ಎನ್ನಲಾಗುತ್ತಿದೆ.
ರಾಜ್ಯದಲ್ಲಿ ಒಂದೇ ದಿನ 5030 ಜನರಿಗೆ ಕೊವಿಡ್-19
ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಎಂತಲೇ ಭಾವಿಸಲಾಗುತ್ತಿದೆ. ಅದರಂತೆ ಕಳೆದ 24 ಗಂಟೆಗಳಲ್ಲಿ 5030 ಜನರಿಗೆ ಸೋಂಕು ಅಂಟಿಕೊಂಡಿರುವ ಬಗ್ಗೆ ವರದಿಯಾಗಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 80863ಕ್ಕೆ ಏರಿಕೆಯಾಗಿದೆ. ಒಂದೇ ದಿನ ಮಹಾಮಾರಿಗೆ 97 ಜನರು ಪ್ರಾಣ ಬಿಟ್ಟಿದ್ದು, ಈವರೆಗೂ 1616 ಜನರು ಕೊವಿಡ್-19ನಿಂದಲೇ ಉಸಿರು ಚೆಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಅಂಕಿ-ಸಂಖ್ಯೆಗಳ ಬಗ್ಗೆ ಅನುಮಾನ ಹುಟ್ಟಿಕೊಳ್ಳುತ್ತಿದ್ದು, ವಾರದ ಹಿಂದೆ ಮೃತಪಟ್ಟ ವ್ಯಕ್ತಿ, ವಾರದ ಹಿಂದೆ ಸೋಂಕಿತನಿಗೆ ನಡೆಸಿದವರ ವರದಿಯ ಫಲಿತಾಂಶ ಇಂದು ಬಂದಿರುವ ಹಿನ್ನೆಲೆ ಪಟ್ಟಿಯಲ್ಲಿ ಸೋಂಕಿತರು ಮತ್ತು ಸಾವಿನ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ ಎನ್ನುವುದು ಎಂ.ಮದನ್ ಗೋಪಾಲ್ ಅವರ ಆರೋಪವಾಗಿದೆ.