ಐಪೋನ್ 'ಆಪಲ್' ಕಂಪನಿಗೆ ಬುದ್ಧಿ ಕಲಿಸಿದ ಚಿಕ್ಕಮಗಳೂರಿನ ಯುವಕ!
ಬೆಂಗಳೂರು, ಮಾ. 04: ವಾರಂಟಿ ಅವಧಿಯಲ್ಲಿ ಕೆಟ್ಟು ಹೋಗಿದ್ದ ಐಪೋನ್ ರಿಪೇರಿ ಮಾಡಲು ನಿರಾಕರಿಸಿದ ಐಪೋನ್ ಕಂಪನಿಗೆ ಚಿಕ್ಕಮಗಳೂರಿನ ಯುವಕ ಸರಿಯಾಗಿ ಬುದ್ಧಿ ಕಲಿಸಿದ್ದಾನೆ.
ವಾರಂಟಿ ಅವಧಿ ಇದ್ದರೂ ಪೋನ್ ನನ್ನು ರಿಪೇರಿ ಮಾಡಿಕೊಡದೇ ಆಪಲ್ ಐಪೋನ್ ವಿರುದ್ಧ ಗ್ರಾಹಕ ವೇದಿಕೆ ನ್ಯಾಯಾಲಯದ ಮೊರೆ ಹೋಗಿ ಚಿಕ್ಕಮಗಳೂರಿನ ಯುವಕ ಜಯ ಗಳಿಸಿದ್ದಾರೆ. ಅರ್ಜಿದಾರನ ವಾದ ಆಲಿಸಿದ ನ್ಯಾಯಾಲಯ, ವಾರಂಟಿ ಅವಧಿ ಇದ್ದರೂ ಐಪೋನ್ ರಿಪೇರಿ ಮಾಡದ ಆಪಲ್ ಇಂಡಿಯಾ ಸಂಸ್ಥೆಯು, ಯುವಕನಿಗೆ ಹೊಸ ಪೋನ್ ಕೊಡಬೇಕು, ಇಲ್ಲವೇ ಅದರ ಪೂರ್ಣ ಮೊತ್ತವನ್ನು ವಾಪಸು ನೀಡಬೇಕು ಎಂದು ಗ್ರಾಹಕ ವೇದಿಕೆ ನ್ಯಾಯಾಲಯ ಆದೇಶ ಮಾಡಿದೆ. ಜತೆಗೆ ಹತ್ತು ಸಾವಿರ ರೂ. ಪರಿಹಾರವನ್ನು ಕೊಡುವಂತೆ ಆದೇಶ ಮಾಡಿದೆ.
ಚಿಕ್ಕಮಗಳೂರು ಮೂಲದ ಅತೀಕ್ ಅಂಜುಮ್ ಎಂಬಾತನಿಗೆ ಬಹ್ರೇನ್ ನಲ್ಲಿರುವ ಆತನ ಸಹೋದರ ಆಪಲ್ ಕಂಪನಿ ಐಪೋನ್ನ್ನು ಉಡುಗೊರೆಯಾಗಿ ನೀಡಿದ್ದ. 2018 ರಲ್ಲಿ ಖರೀದಿ ಮಾಡಿದ್ದ ಇದರ ಬೆಲೆ 92,000 ರೂ. ಆಗಿತ್ತು. ಅಂಜುಮ್ ಪೋನ್ ಖರೀದಿ ಮಾಡುವಾಗ ವಾರಂಟಿ ಅವಧಿಯನ್ನು 2019 ರಿಂದ 2020 ಕ್ಕೆ ಹೆಚ್ಚುವರಿ ಹಣ 4500 ರೂ. ಪಾವತಿಸಿ ಪಡೆಯಲಾಗಿತ್ತು. ಪೋನ್ ಖರೀದಿ ಮಾಡಿದ ವೇಳೆಯಲ್ಲಿ ಟಚ್ ಸ್ಟ್ರೀನ್ ಮತ್ತು ಸ್ವೀಕರ್ ಗೆ ಸಂಬಂಧಿಸಿದಂತೆ ಸಮಸ್ಯೆ ತಲೆದೋರಿತ್ತು. ಅಂಜುಂ ಚಿಕ್ಕಮಗಳೂರಿನಿಂದ ಬೆಂಗಳೂರಿನ ಕೋರಮಂಗಲದಲ್ಲಿರುವ ಆಪಲ್ ಅಧಿಕೃತ ಸರ್ವೀಸ್ ಸೆಂಟರ್ ಆಪಲ್ ಟೆಕ್ನಾಲಜಿಸ್ ಪ್ರೆ. ಲಿ. ಗೆ ನೀಡಿದ್ದ. ಪೋನ್ ರಿಪೇರಿ ಮಾಡಿಕೊಟ್ಟ ಮರು ದಿನವೇ ಮತ್ತೊಂದು ಸಮಸ್ಯೆ ತಲೆದೋರಿತ್ತು. ಇದಾದ ಬಳಿಕ ಪುನಃ ಕೋರಮಂಗಲಕ್ಕೆ ಪ್ರಯಾಣಿಸಿ ಪೋನ್ ರಿಪೇರಿಗೆ ನೀಡಿದ್ದ. ಈ ವೇಳೆ ಇದು ವಾರಂಟಿ ವ್ಯಾಪ್ತಿಗೆ ಬರಲ್ಲ ಎಂದು ಹೇಳಿದ್ದರು. ಅಲ್ಲದೇ 59,000 ರೂ. ಪಾವತಿಸಿ ಪೋನ್ ಬದಲಿಸಿಕೊಳ್ಳಿ ಎಂದು ಆಪಲ್ ಸಂಸ್ಥೆ ಸೂಚಿಸಿತ್ತು.
ಇದರಿಂದ ಬೇಸತ್ತ ಅಂಜುಮ್ , ವಾರಂಟಿ ಇದ್ದರೂ ಪೋನ್ ರಿಪ್ಲೇಸ್ ಮೆಂಟ್ ಬಗ್ಗೆ ಒಪ್ಪದೇ ಹಣ ಪಾವತಿಸಲು ಸೂಚಿಸಿದ್ದ ಆಪಲ್ ಕಂಪನಿ ಹಾಗೂ ಸರ್ವೀಸ್ ಕಂಪನಿಗೆ ವಕೀಲರ ಮೂಲಕ ನೋಟಿಸ್ ಜಾರಿ ಮಾಡಿದ್ದರು. ಇದಕ್ಕೆ ಆಪಲ್ ಐಪೋನ್ ಕಂಪನಿ ತಲೆ ಕೆಡಿಸಿಕೊಂಡಿರಲಿಲ್ಲ. ತನಗಾದ ಅನ್ಯಾಯ ಪ್ರಶ್ನಿಸಿ ಗ್ರಾಹಕ ವೇದಿಕೆ ನ್ಯಾಯಾಲಯದ ಮೊರೆ ಹೋಗಿದ್ದರು. ವಾದ ಪ್ರತಿವಾದ ಆಲಿಸಿದ ಗ್ರಾಹಕ ವೇದಿಕೆ ನ್ಯಾಯಾಲಯ, ಮಹತ್ವದ ಆದೇಶ ನೀಡಿದೆ.
ರಿಪೇರಿಯಾಗಿರುವ ಆಪಲ್ ಪೋನ್ ಗೆ ಬದಲಾಗಿ ಆಪಲ್ ಮತ್ತು ಅಂಪಲ್ ಟೆಕ್ನಾಲಜಿ ಸಂಸ್ಥೆ ಅದೇ ಮೌಲ್ಯದ ಆಪಲ್ ಪೋನ್ ನೀಡಬೇಕು. ಇಲ್ಲವೇ ರಿಪೇರಿಯಾಗಿರುವ ಐಪೋನ್ ಬೆಲೆ 92,000 ಹಣವನ್ನು ಬಡ್ಡಿ ಸಮೇತ ಕಟ್ಟಿಕೊಡಬೇಕು. ಇದರ ಜತೆಗೆ ಅಂಜಮ್ ಗೆ ಪರಿಹಾರವಾಗಿ 10,000 ರೂ., ಹಾಗೂ 10 ಸಾವಿರ ರೂ. ನ್ಯಾಯಾಲಯಕ್ಕೆ ದಂಡ ಪಾವತಿಸುವಂತೆ ಆದೇಶ ಮಾಡಿದೆ. ಸಾಮಾನ್ಯವಾಗಿ ಮೊಬೈಲ್ ಮಾರುವಾಗ ಕೊಡುವ ಆಫರ್ಗಳು ಖರೀದಿಸಿದ ನಂತರ ಇಲ್ಲ ಅಂತಲೇ ಮೊಬೈಲ್ ಕಂಪನಿಗಳು ಯಾಮಾರಿಸುತ್ತವೆ. ಅಂತಹ ಮೊಬೈಲ್ ಕಂಪನಿಗಳಿಗೆ ಮನಸು ಮಾಡಿದರೆ ಕಾನೂನು ಪ್ರಕಾರ ಬುದ್ಧಿ ಕಲಿಸಬಹುದು ಎಂಬುದಕ್ಕೆ ಅಂಜುಂ ಪ್ರಕರಣವೇ ಸಾಕ್ಷಿ.