Bengaluru Rain: ರಾತ್ರಿಯಿಡಿ ಮಳೆ ಅಬ್ಬರ ಬೆಂಗಳೂರು ನಗರ ತತ್ತರ! ಎಲ್ಲಿ, ಎಷ್ಟು ಮಳೆ? ಇಲ್ಲಿದೆ ನೋಡಿ
ಬೆಂಗಳೂರು, ಅಕ್ಟೋಬರ್ 10: ರಾಜ್ಯ ರಾಜಧಾನಿ ಉದ್ಯಾನ ನಗರಿ ಬೆಂಗಳೂರಿನಲ್ಲಿ ಮಳೆ ಅಬ್ಬರ ಕಡಿಮೆಯಾಗುವ ಲಕ್ಷಣಗಳು ಇಲ್ಲ. ಕಳೆದ ಎರಡು ದಿನಗಳಿಂದ ಮಳೆರಾಯನ ಅಬ್ಬರ ಹೆಚ್ಚಾಗಿದ್ದು, ರಾತ್ರಿ ಪೂರ್ತಿ ಗುಡುಗು-ಮಿಂಚು ಸಹಿತ ಅಬ್ಬರಿಸಿದ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಮುಂದಿನ ಮೂರು ದಿನಗಳಲ್ಲೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹೌದು, ಭಾನುವಾರ ಶುರುವಾದ ಮಳೆ, ಸೋಮವಾರ ಸಂಜೆಯಿಂದ ರಾತ್ರಿ ಪೂರ್ತಿ ಗುಡುಗು-ಮಿಂಚಿನ ಅಬ್ಬರದ ಜೊತೆಗೆ ಧಾರಾಕಾರವಾಗಿ ಮಳೆಯಾಗಿದ್ದು, ಮಳೆಯ ಹೊಡೆತಕ್ಕೆ ಬೆಂಗಳೂರು ಜನತೆ ತತ್ತರಗೊಂಡಿದ್ದಾರೆ. ಇನ್ನೂ ಎಡೆಬಿಡದೇ ಸುರಿದ ಮಳೆಗೆ ಪ್ರಮುಖ ರಸ್ತೆಗಳೆಲ್ಲವೂ ಹೊಳೆಯಂತಾಗಿದ್ದು, ಟ್ರಾಫಿಕ್ಜಾಮ್ ಉಂಟಾಗಿ ಕಿ.ಮೀ.ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದು, ಪೋಲಿಸರ ಹರಸಾಹಸ ಪಟ್ಟಿದ್ದಾರೆ.

ಸೋಮವಾರ ಬೆಳಗ್ಗೆಯಿಂದ ಮಳೆ ಆರಂಭವಾಗಿತ್ತು. ಸಂಜೆಯಾಗುತ್ತಿದ್ದಂತೆ ಮಳೆರಾಮನ ಆಗಮನವಾಗಿದ್ದು, ಸಂಜೆ 6 ಗಂಟೆಗೆ ಶುರುವಾದ ಮಳೆ ರಾತ್ರಿ 10 ಗಂಟೆವರೆಗೂ ಅಬ್ಬರಿಸಿತು. ಆ ಬಳಿಕ ರಾತ್ರಿ ಪೂರ್ತಿ ಜಿಟಿ ಜಿಟಿ ಮಳೆಯು ಮುಂದುವರೆಯಿತು. ವರುಣನ ಆರ್ಭಟದಿಂದಾಗಿ ರಸ್ತೆಗಳಲ್ಲಿ ನೀರು ನಿಂತಿದ್ದು, ಹಲವು ರಸ್ತೆಗಳಲ್ಲಿ ವಾಹನಗಳ ಸಂಚಾರ ನಿಧಾನಗತಿಯಲ್ಲಿತ್ತು. ವಾಹನ ದಟ್ಟಣೆ ಉಂಟಾಗಿದ್ದರಿಂದ ಸವಾರರು ಪರದಾಡುವಂತಾಗಿದ್ರೆ, ನಗರದ ಕೆಲವೆಡೆ ಮರಗಳೂ ಧರೆಗುರುಳಿ ಬಿದ್ದವು.
ಇನ್ನೂ ಬೆಂಗಳೂರು ನಗರದ ಚೌಡೇಶ್ವರಿನಗರದಲ್ಲಿ36 ಮಿ.ಮೀ, ಅಟ್ಟೂರು 27 ಮಿ.ಮೀ, ಯಲಹಂಕ 25 ಮಿ.ಮೀ, ಹೊರಮಾವು 40 ಮಿ.ಮೀ , ಬಾಗಲಗುಂಟೆ 43 ಮಿ.ಮೀ, ದೊಡ್ಡಬಿದರಕಲ್ಲು42 ಮಿ.ಮೀ, ಪೀಣ್ಯ ಕೈಗಾರಿಕಾ ಪ್ರದೇಶ 54 ಮಿ.ಮೀ, ಕೆಂಗೇರಿ 65 ಮಿ.ಮೀ, ನಾಗಪುರ 50 ಮಿ.ಮೀ, ಕೊಟ್ಟಿಗೆಪಾಳ್ಯ48 ಮಿ.ಮೀ, ರಾಜಮಹಲ್ ಗುಟ್ಟಹಳ್ಳಿ25 ಮಿ.ಮೀ, ವಿ.ವಿ.ಪುರಂ 20 ಮಿ.ಮೀ, ಆರ್.ಆರ್.ನಗರ 35 ಮಿ.ಮೀ, ಉತ್ತರಹಳ್ಳಿ 27 ಮಿ.ಮೀ, ಎಚ್.ಗೊಲ್ಲಹಳ್ಳಿ62 ಮಿ.ಮೀ, ಹೊರಮಾವು 38 ಮಿ.ಮೀ, ವಿದ್ಯಾಪೀಠ 27 ಮಿ.ಮೀ, ಬಿಟಿಎಂ ಲೇಔಟ್ 30 ಮಿ.ಮೀ, ಕೋಣನಕುಂಟೆ 27 ಮಿ.ಮೀ, ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ28 ಮಿ.ಮೀ ಮಳೆಯಾಗಿದೆ ಎಂದು ತಿಳಿದು ಬಂದಿದೆ.

ಅಲ್ಲದೇ ನಗರದ ಹಲವೆಡೆ ಭಾರೀ ಮಳೆಯಾಗಿದ್ದು, ಕೆ.ಆರ್.ಮಾರುಕಟ್ಟೆ, ಚಿಕ್ಕಪೇಟೆ, ಮೈಸೂರು ರಸ್ತೆ, ಕನಕಪುರ ರಸ್ತೆ, ಬನ್ನೇರುಘಟ್ಟ ರಸ್ತೆ, ಹೊಸೂರು ರಸ್ತೆ, ಬಳ್ಳಾರಿ ರಸ್ತೆ, ಹೆಬ್ಬಾಳ, ಹೊರವರ್ತುಲ ರಸ್ತೆ, ನಾಯಂಡಹಳ್ಳಿ, ಮಾರತ್ಹಳ್ಳಿ, ಬೆಳ್ಳಂದೂರು, ಎಚ್ಎಸ್ಆರ್ ಲೇಔಟ್, ರಾಜರಾಜೇಶ್ವರಿನಗರ, ಜಯನಗರ, ಯಲಹಂಕ, ತುಮಕೂರು ರಸ್ತೆ ಸೇರಿದಂತೆ ಹಲವೆಡೆ ಹೆಚ್ಚು ಮಳೆಯಾಗಿದೆ.
ಇನ್ನೂ ನಗರದ ಕೆಲವೆಡೆ ಭಾರೀ ಮಳೆಯಿಂದಾಗಿ ರಸ್ತೆಗಳೆಲ್ಲ ಹೊಳೆಯಂತಾಗಿದ್ದು, ಅಂಡರ್ಪಾಸ್ಗಳಲ್ಲಿ ಹೆಚ್ಚಾಗಿ ನೀರು ನಿಂತಿತ್ತು. ಕೆ.ಆರ್.ಮಾರುಕಟ್ಟೆ ಜಂಕ್ಷನ್, ಚಿಕ್ಕಪೇಟೆ ವೃತ್ತ, ಅವೆನ್ಯೂ ರಸ್ತೆ, ಬಿವಿಕೆ ಅಯ್ಯಂಗಾರ್ ರಸ್ತೆ, ಮೈಸೂರು ರಸ್ತೆಯ ಬಿಜಿಎಸ್ ಮೇಲ್ಸೇತುವೆ, ಪಣತ್ತೂರು ರೈಲ್ವೆ ಅಂಡರ್ಪಾಸ್, ಬನ್ನೇರುಘಟ್ಟ ರಸ್ತೆಯ ನಾಗಾರ್ಜುನ ಜಂಕ್ಷನ್, ಎಂ.ಜಿ.ರಸ್ತೆಯ ಅನಿಲ್ ಕುಂಬ್ಳೆ ವೃತ್ತ, ಕಲ್ಯಾಣನಗರ ಮೇಲ್ಸೇತುವೆ, ಹೆಸರಘಟ್ಟ ಕ್ರಾಸ್, ನಾಗವಾರ, ಹೆಣ್ಣೂರು ಜಂಕ್ಷನ್, ಕುಂದಲಹಳ್ಳಿಯ ಸ್ಪೈಸ್ ಗಾರ್ಡನ್, ಕಾಡುಬೀಸನಹಳ್ಳಿ, ಮಾರತ್ಹಳ್ಳಿ, ಹೊರವರ್ತುಲ ರಸ್ತೆಯ ಕಾರ್ತಿಕ್ನಗರ ಜಂಕ್ಷನ್ನಿಂದ ದೇವರಬೀಸನಹಳ್ಳಿ ಜಂಕ್ಷನ್, ದೊಡ್ಡನೆಕ್ಕುಂದಿ, ಕನಕಪುರ ರಸ್ತೆಯ ತಲಘಟ್ಟಪುರ, ಹುಳಿಮಾವು, ರೂಪೇನಅಗ್ರಹಾರ, ಮಾನ್ಯತಾ ಟೆಕ್ಪಾರ್ಕ್, ಮೈಕೋ ಲೇಔಟ್, ಶೇಷಾದ್ರಿಪುರಂ ರೈಲ್ವೆ ಅಂಡರ್ಪಾಸ್, ವಿಜಯನಗರ, ಮೈಸೂರು ರಸ್ತೆಯ ನಾಯಂಡಹಳ್ಳಿ, ಹರಳೂರು ಜಂಕ್ಷನ್, ಹೆಬ್ಬಾಳ ವೃತ್ತದಲ್ಲಿ ಭಾರೀ ಪ್ರಮಾಣದಲ್ಲಿ ನೀರು ನಿಂತಿತ್ತು.












Click it and Unblock the Notifications