ಅರೇಕಾ ಟೀ ಮಾರುಕಟ್ಟೆಗೆ, ನೀವು ಸ್ವಾದ ನೀಡಿದ್ರಾ!
ಬೆಂಗಳೂರು. ಜನವರಿ, 23: ಮೇಕ್ ಇನ್ ಇಂಡಿಯಾ ಎಕ್ಸಲೆನ್ಸ್ ಮತ್ತು ಇನೋವೇಟಿವ್ ಪ್ರಾಡಕ್ಟ್ ಆಫ್ ದಿ ಇಯರ್ 2015 ಪ್ರಶಸ್ತಿಗಳಿಗೆ ಪಾತ್ರವಾಗಿದ್ದ ಕನ್ನಡಿಗ ನಿವೇದನ್ ನೆಂಪೆ ಅಭಿವೃದ್ಧಿಪಡಿಸಿರುವ ಅಡಿಕೆ ಚಹಾ (ಅರೇಕಾ ಟೀ) ಮಾರುಕಟ್ಟೆಗೆ ಅಧಿಕೃತವಾಗಿ ಕಾಲಿರಿಸಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ನೂತನ ಅಡಿಕೆ ಚಹಾವನ್ನು ಲೋಕಾರ್ಪಣೆ ಮಾಡಿದರು. ನಂತರ ಮಾತನಾಡಿದ ಹೆಗ್ಗಡೆ, ಅಡಕೆ ಕುರಿತು ವಿವಿಧ ಸ್ವರೂಪದ ಸಂಶೋಧನೆಗಳು ನಡೆದು ರೈತರಿಗೆ ಹಾಗೂ ಗ್ರಾಹಕರಿಗೆ ಲಾಭ ತರಬೇಕು. ಇದು ದೇಶದ ಅಭಿವೃದ್ಧಿಯಲ್ಲೂ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದು ತಿಳಿಸಿದರು.[ಬೆಳೆಗಾರರಿಗೆ ಹೊಸ ತಾಜಾತನ ನೀಡಲಿದೆಯೇ ಅಡಿಕೆ ಟೀ ?]
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಮಾಜಿ ರಾಜ್ಯಪಾಲ ನ್ಯಾ. ಎಂ. ರಾಮಾಜೋಯಿಸ್ ಮಾತನಾಡಿ, ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ, ರಾಮ್ಜೇ ಇಂಡಸ್ಟ್ರೀಸ್ನ ವೆಂಕಟೇಶ ಕೆದಿಲಾಯ, ಶಾಸಕ ಡಿ.ಎನ್. ಜೀವರಾಜ್, ಎಫ್ ಕೆಸಿಸಿಐ ಅಧ್ಯಕ್ಷ ತಲ್ಲಂ ದ್ವಾರಕಾನಾಥ್, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ರೈತ ಮುಖಂಡ ಕಡಿದಾಳ್ ಶಾಮಣ್ಣ ಮತ್ತಿತರರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ನಿವೇದನ್ ಸಾಹಸ
ಅರೇಕಾ ಹೆಸರಿನಲ್ಲಿ ನಿವೇದನ್ ಮಾರುಕಟ್ಟೆಗೆ ಚಹಾ ಬಿಡುಗಡೆ ಮಾಡಿದ್ದಾರೆ. ಇನ್ನು ಎರಡು ತಿಂಗಳಿನಲ್ಲಿ ಅಡಿಕೆಯ ಇನ್ನೆರಡು ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ನಿವೇದನ್ ತಿಳಿಸಿದ್ದಾರೆ.
ತಂಬಾಕು ಸ್ನೇಹ ಬಿಟ್ಟ ಅಡಿಕೆ
ಗುಟ್ಕಾ ನಿಷೇಧದಿಂದ ಬೆಳೆಗಾರರು ತತ್ತರಿಸಿದ್ದಾರೆ. ಇಂಥ ವೇಳೆ ಅಡಿಕೆ ಚಹಾ ಮಾರುಕಟ್ಟೆಗೆ ಬಂದಿದ್ದು ನಿಜಕ್ಕೂ ಬೆಳೆಗಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಮಾಧ್ಯಮಗಳಿಗೆ ವಂದನೆ
ಕರ್ನಾಟಕದ ಯುವಕನೊಬ್ಬ ನಡೆಸಿರುವ ಸಂಶೋಧನೆ ಎಂಬ ಕಾರಣಕ್ಕೆ ಮಾಧ್ಯಮಗಳು ನೀಡಿದ ಸಹಕಾರದಿಂದಲೇ ಸಂಶೋಧನೆ ಇದೀಗ ಉತ್ಪನ್ನವಾಗುವ ಹಂತಕ್ಕೆ ಬಂದಿದೆ. ಮೇ ವೇಳೆಗೆ ಅಡಕೆ ಬಳಸಿ ತಯಾರಿಸಲಾದ ಮತ್ತೆರಡು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದೇನೆ ಎಂದು ಸಂಶೋಧಲ ನಿವೇದನ್ ನೆಂಪೆ ಹೇಳಿದರು.
ಬ್ಯಾಗ್ ಮಾದರಿಯಲ್ಲಿ ಮಾರುಕಟ್ಟೆಗೆ
ಗ್ರೀನ್ ಟೀ ಬ್ಯಾಗ್ ಮಾದರಿಯಲ್ಲಿಅಡಿಕೆ ಚಹಾ ಬ್ಯಾಗ್ ಮಾರುಕಟ್ಟೆಗೆ ಬರಲಿದ್ದು, 10 ಟೀ ಮಾಡಬಹುದಾದ ಒಂದು ಬ್ಯಾಗ್ಗೆ 75 ರೂ. ದರ ನಿಗದಿಪಡಿಸಲಾಗಿದೆ. ಇದರಲ್ಲಿ ಹಾಲು, ಸಕ್ಕರೆ ಅಗತ್ಯವಿಲ್ಲದೆ ಕೇವಲ ನೀರಿನಿಂದ ಟೀ ಮಾಡಿ ಕುಡಿಯಬಹುದಾಗಿದೆ.