ಏರ್ ಶೋ ಅಗ್ನಿ ಆಕಸ್ಮಿಕ : ಯಾರು, ಏನು ಹೇಳಿದರು?
ಬೆಂಗಳೂರು, ಫೆಬ್ರವರಿ 24 : 'ಬೆಂಗಳೂರಿನ ಏರ್ ಶೋ ಸ್ಥಳದಲ್ಲಿ ಸಂಭವಿಸಿದ ಅಗ್ನಿ ಅವಘಡವನ್ನು ಬಿಜೆಪಿ ಅಸ್ತ್ರವಾಗಿ ಮಾಡಿಕೊಳ್ಳಬಾರದು' ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದರು. ಆದರೆ, ಈಗ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ.
ಬೆಂಗಳೂರು ಹೊರವಲಯದ ಯಲಹಂಕದಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ 2019 ನಡೆಯುತ್ತಿದೆ. ಶನಿವಾರ ಏರ್ ಶೋ ಪಾರ್ಕಿಂಗ್ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. 277 ಕಾರುಗಳು ಬೆಂಕಿಗೆ ಆಹುತಿಯಾಗಿತ್ತು.
ಭಾನುವಾರ ಈ ಅವಘಡ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ವಿವಿಧ ಪಕ್ಷದ ನಾಯಕರು ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 'ಈ ಘಟನೆಗೆ ಗೃಹ ಸಚಿವರೇ ಹೊಣೆ, ಅವರೇ ಹೊಣೆ ಹೊರಬೇಕು' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಸಹ ಅಗ್ನಿ ಅವಘಡಕ್ಕೆ ರಾಜ್ಯ ಸರ್ಕಾರವೇ ಕಾರಣ ಎಂದು ಟ್ವೀಟ್ ಮಾಡಿದ್ದಾರೆ. ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ಆರೋಪ ಮಾಡಿದ್ದಾರೆ.

ಬಿಜೆಪಿ ಅಸ್ತ್ರವಾಗಿ ಮಾಡಿಕೊಳ್ಳಬಾರದು
'ಬೆಂಗಳೂರಿನ ಏರ್ ಶೋ ಸ್ಥಳದಲ್ಲಿ ಸಂಭವಿಸಿದ ಅಗ್ನಿ ಅವಘಡವನ್ನು ಬಿಜೆಪಿ ಅಸ್ತ್ರವಾಗಿ ಮಾಡಿಕೊಳ್ಳಬಾರದು. ಏರ್ ಶೋ ಮುನ್ನಾ ದಿನ ಎರಡು ವಿಮಾನಗಳು ಡಿಕ್ಕಿ ಹೊಡೆದವು. ಈಗ ಪಾರ್ಕಿಂಗ್ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡು ವಾಹನಗಳು ಸುಟ್ಟು ಕರಕಲಾಗಿವೆ. ಇವುಗಳನ್ನೇ ನೆಪ ಮಾಡಿಕೊಂಡು ಏರ್ ಶೋ ಸ್ಥಳಾಂತರಿಸಲು ಬಿಜೆಪಿ ಈಗಾಗಲೇ ಪ್ರಯತ್ನ ಮಾಡಿದೆ' ಎಂದು ದಿನೇಶ್ ಗುಂಡೂರಾವ್ ದೂರಿದರು.

ಗೃಹ ಸಚಿವರೇ ಹೊಣೆ
'ಏರ್ ಶೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ 300ಕ್ಕೂ ಹೆಚ್ಚು ಕಾರುಗಳು ಭಸ್ಮವಾಗಿವೆ. ಕಾರಿನ ಜೊತೆಗೆ ಅಮೂಲ್ಯ ವಸ್ತುಗಳು, ದಾಖಲೆಗಳು ಬೆಂಕಿಗೆ ಆಹುತಿಯಾಗಿವೆ. ಇದಕ್ಕೆ ಗೃಹ ಸಚಿವರೇ ಹೊಣೆ, ಅವರೇ ಹೊಣೆ ಹೊರಬೇಕು. ಏರ್ ಶೋನಲ್ಲಿ ಯಾವುದೇ ಅಡ್ಡಿ ಆತಂಕ ಆಗದಂತೆ ವ್ಯವಸ್ಥೆ ಮಾಡುವುದು ಸರ್ಕಾರದ ಜವಾಬ್ದಾರಿ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.

ಭದ್ರತಾ ವೈಫಲ್ಯವೇ ಕಾರಣ
'ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ. ಇದಕ್ಕೆ ತಾಜಾ ಉದಾಹರಣೆ ಅಂದರೆ ಏರ್ ಶೋನಲ್ಲಿ ನಡೆದ ಭದ್ರತಾ ವೈಫಲ್ಯ. ಭದ್ರತಾ ವೈಫಲ್ಯದಿಂದಲೇ ನೂರಾರು ಕಾರುಗಳು ಬೆಂಕಿಗೆ ಆಹುತಿಯಾಗಿವೆ' ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆರೋಪಿಸಿದರು.
|
ಶೋಭಾ ಕರಂದ್ಲಾಜೆ ಟ್ವೀಟ್
'ಏರೋ ಇಂಡಿಯಾ ಪ್ರದರ್ಶನಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ವಿಫಲವಾಗಿದೆ. ಈ ಕಾರ್ಯಕ್ರಮದಿಂದ ಬೆಂಗಳೂರಿಗೆ ವಿಶ್ವಮಟ್ಟದಲ್ಲಿ ಮಾನ್ಯತೆ ಸಿಗುತ್ತಿತ್ತು' ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ.

ಬೆಂಕಿ ಅಪಘಡ ಸೂಕ್ಷ್ಮ ವಿಚಾರ
'ಏರೋ ಇಂಡಿಯಾ ಶೋನಲ್ಲಿ ನಡೆದ ಬೆಂಕಿ ಅವಘಡ ತುಂಬಾ ಸೂಕ್ಷ್ಮ ವಿಚಾರ. ಶೋ ಆಯೋಜನೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹತ್ವದ ಪಾತ್ರವಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಆರೋಪ ಪ್ರತ್ಯಾರೋಪ ಮಾಡಲು ಅವಕಾಶ ಕೊಡಲ್ಲ. ಬೆಂಕಿ ಅವಫಡ ಹೆಚ್ಚಾಗಲು ಒಣಗಿದ ಹುಲ್ಲು ಮತ್ತು ಕಾರುಗಳಲ್ಲಿದ್ದ ಇಂಧನ ಕಾರಣವಾಯಿತು' ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದರು.












Click it and Unblock the Notifications