'ಬೇಲೂರಿನಲ್ಲಿ ವೀರಶೈವ ಲಿಂಗಾಯತರಿಗೆ ಟಿಕೆಟ್ ಕೊಡಿ'
ಬೇಲೂರು, ಜನವರಿ 11: ಮುಂಬರುವ ವಿಧಾನಸಭಾ ಚುನಾವಣೆಯಲಿ ಬೇಲೂರು ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ನೀಡುವಂತೆ ವಿಶ್ವ ವೀರಶೈವ ಲಿಂಗಾಯತ ಒಕ್ಕೂಟದ ಅಧ್ಯಕ್ಷ, ಬೆಂಗಳೂರಿನ ನಿವೃತ್ತ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಅವರು ಮೂರು ಪಕ್ಷಗಳಿಗೆ ಎಚ್ಚರಿಕೆ ನೀಡಿದ್ದಾರೆ.
'ಒಂದು ಕಾಲದಲ್ಲಿ ಮೈಸೂರು ಪ್ರಾಂತ್ಯದಲ್ಲಿ 40ಕ್ಕೂ ಅಧಿಕ ವೀರಶೈವ-ಲಿಂಗಾಯತ ಶಾಸಕರಿದ್ದರು, ಆದರೆ, ಈ ಸಂಖ್ಯೆ ಈಗ ಇಳಿಮುಖವಾಗಿದೆ. ನಮ್ಮ ಸಮಾಜದ ಮೇಲೆ ಮೂರು ಪಕ್ಷಗಳು ನಿರ್ಲಕ್ಷ್ಯ ತೋರುತ್ತಿರುವುದು ಸರಿಯಲ್ಲ. ರಾಜಕೀಯವಾಗಿ ಸ್ಥಾನ ಮಾನ ನೀಡಬೇಕು' ಎಂದಿದ್ದಾರೆ.
ಜನವರಿ 22ರಂದು ಬೇಲೂರಿನಲ್ಲಿ ನಡೆಸಲು ಉದ್ದೇಶಿಸಿರುವ ಜನಜಾಗೃತಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಿರ್ಜಿ ಅವರು ಮಾತನಾಡಿ, ರಾಜಕೀಯ ಸ್ವಾರ್ಥಕ್ಕಾಗಿ ವೀರಶೈವ-ಲಿಂಗಾಯತ ಸಮಾಜವನ್ನು ಇಬ್ಭಾಗ ಮಾಡುವ ಸಂಚು ಮಾಡುತ್ತಿದ್ದಾರೆ. ನಮ್ಮದು ಒಂದೇ ಸಮಾಜ, ನಾವೆಲ್ಲ ಒಗ್ಗಟ್ಟಿನಿಂದ ಹೋರಾಟ ಮಾಡಬೇಕಿದೆ ಎಂದು ಹೇಳಿದರು.
ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಸರಿ ಸುಮಾರು 60 ಸಾವಿರಕ್ಕೂ ಅಧಿಕ ಲಿಂಗಾಯತ ವೀರಶೈವ ಒಳ ಪಂಗಡದವರಿದ್ದಾರೆ. ಲಿಂಗಾಯತ ಮತ ಬ್ಯಾಂಕಿಗೆ ನೊಣಬ ಸಮುದಾಯದ ಓಲೈಕೆಯಲ್ಲಿ ಪಕ್ಷಗಳು ತೊಡಗಿವೆ. ಈ ಕ್ಷೇತ್ರವನ್ನು ಜೆಡಿಎಸ್ ಮತ್ತೊಮ್ಮೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸುತ್ತಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ವೈ. ಎನ್ ರುದ್ರೇಶ್ ಗೌಡ (48802) ಅವರು ಜೆಡಿಎಸ್ ನ ಕೆ.ಎಸ್ ಲಿಂಗೇಶ(41273) ವಿರುದ್ಧ 6 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಬಿಜೆಪಿಯ ಶಿವರುದ್ರಪ್ಪ ಅವರು ಮತ್ತೊಮ್ಮೆ ಇಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಜೆಡಿಎಸ್ ನಿಂದ ಎಚ್ ಡಿ ರೇವಣ್ಣ ಹಾಗೂ ಭವಾನಿ ಪುತ್ರ ಪ್ರಜ್ವಲ್ ರೇವಣ್ಣ ಅವರು ಕಣಕ್ಕಿಳಿಯುವ ಸುದ್ದಿಯೂ ಇದೆ. ಪ್ರಜ್ವಲ್ ಅವರು ಕಣಕ್ಕಿಳಿದರೆ ಜೆಡಿಎಸ್ ಗೆಲುವಿನ ಹಾದಿ ಸುಗುಮವಾಗಲಿದೆ.