ಮೈತ್ರಿ ಸರಕಾರದ ವಿಶ್ವಾಸಮತದ ವೇಳೆ ಹೊರಬಂದ ಮತ್ತೊಂದು ಸತ್ಯ
ಅಸಲಿಗೆ, ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರಕಾರ ಮುಂದುವರಿಯುವುದು ಹಲವು ಕಾಂಗ್ರೆಸ್ ಮುಖಂಡರಿಗೂ ಇಷ್ಟವಿರಲಿಲ್ಲ. ಹಾಗಾಗಿ, ಕುಮಾರಸ್ವಾಮಿ ನೇತೃತ್ವದ ಸರಕಾರ ಪತನಗೊಂಡಿದ್ದಕ್ಕೆ ಕಾಂಗ್ರೆಸ್ಸಿಗರು ಅಷ್ಟೇನೂ ತಲೆಕೆಡಿಸಿಕೊಂಡಂತೆ ಕಾಣುವುದಿಲ್ಲ.
ಆದರೆ, ಕಾಂಗ್ರೆಸ್ಸಿಗೆ ತೀವ್ರ ಮುಜುಗರ ತಂದದ್ದು ಪಕ್ಷದ ಕೆಲವು ಮುಖಂಡರು ವಿಪ್ ಉಲ್ಲಂಘಿಸಿ, ಮುಂಬೈನಲ್ಲಿ ಜಾಂಡಾ ಹೂಡಿದ್ದು. ಅವರಲ್ಲಿ ಕೆಲವರು ಸಿದ್ದರಾಮಯ್ಯನವರ ಶಿಷ್ಯರು ಎನ್ನುವ ವಿಚಾರ ಚರ್ಚೆಯಲ್ಲಿ ಇದ್ದಿದ್ದರಿಂದ, ಸಿದ್ದರಾಮಯ್ಯನವರನ್ನು ಸಂಶಯದ ಕಣ್ಣಿನಿಂದ ನೋಡುವಂತಾಯಿತು.
ಸ್ಪೀಕರ್ ರಮೇಶ್ ಕುಮಾರ್ ಅವರೇ ಹೇಳುವಂತೆ, ಕಳೆದ ಹತ್ತು ದಿನಗಳಲ್ಲಿ ಸಿದ್ದು ಪಡಬಾರದ ಯಾತನೆಯನ್ನು ಪಟ್ಟರು. ಈಗ, ಕಾಂಗ್ರೆಸ್ಸಿನ ಇನ್ನೋರ್ವ ಪ್ರಭಾವಿ ಮುಖಂಡ ಕೃಷ್ಣ ಭೈರೇಗೌಡ, ಕಳೆದ ಲೋಕಸಭಾ ಚುನಾವಣೆಯಲ್ಲಿನ ಸೋಲಿನ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಯಡಿಯೂರಪ್ಪ ಗದ್ದುಗೆಗೆ ಏರಲು ನಾಲ್ಕು ಮುಹೂರ್ತ ಫಿಕ್ಸ್!
ಸೋಲಿಗೆ, ಮೂವರು ಶಾಸಕರನ್ನು ಭೈರೇಗೌಡ್ರು ದೂರಿದಿದ್ದಾರೆ. ಈ ಬಗ್ಗೆ ತುಂಬಾ ಬೇಸರದಿಂದ ಮಾತನಾಡಿರುವ ಭೈರೇಗೌಡ್ರು, ನನಗೆ ಮತ್ತು ಪಕ್ಷಕ್ಕೆ ಎಸ್ ಟಿ ಸೋಮಶೇಖರ್, ಮುನಿರತ್ನ ಮತ್ತು ಭೈರತಿ ಬಸವರಾಜ್ ಮೋಸ ಮಾಡಿದ್ದಾರೆಂದು ದೂರಿದ್ದಾರೆ.
ಸದನದಲ್ಲಿ ಡಿ ಕೆ ಶಿವಕುಮಾರ್ ಆಕ್ರೋಶಭರಿತ ಮಾತು
ಸದನದಲ್ಲಿ ಡಿ ಕೆ ಶಿವಕುಮಾರ್ ಆಕ್ರೋಶಭರಿತವಾಗಿ ಮಾತನಾಡುತ್ತಿದ್ದಾಗ ಮಧ್ಯಪ್ರವೇಶಿಸಿದ ಭೈರೇಗೌಡ, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಸುತರಾಂ ಇಷ್ಟವಿರಲಿಲ್ಲ. ನನ್ನನ್ನು ಇನ್ನಿಲ್ಲದಂತೇ ಕಣಕ್ಕಿಳಿಯುವಂತೆ ಒತ್ತಾಯಿಸಿದ್ದ ಶಾಸಕರ ಅಸೆಂಬ್ಲಿ ಕ್ಷೇತ್ರದಲ್ಲೇ ನನಗೆ ಲೀಡ್ ಸಿಗಲಿಲ್ಲ ಎಂದು ಅವರು ಬೇಸರ ಪಟ್ಟುಕೊಂಡರು.
ಚುನಾವಣೆಗೆ ಸ್ಪರ್ಧಿಸಿ ಸಾಲ ಮಾಡುವಂತಾಯಿತು
ಒಂದು ಕಡೆ ಸೋಲು, ಇನ್ನೊಂದು ಕಡೆ ಚುನಾವಣೆಗೆ ಸ್ಪರ್ಧಿಸಿ ಸಾಲ ಮಾಡುವಂತಾಯಿತು ಎಂದ ಭೈರೇಗೌಡ, ಸಮಯ ಬಂದಾಗ ಮೂವರು ಅತೃಪ್ತ ನಮ್ಮ ಶಾಸಕರು ಮಾಡಿದ ಮೋಸವನ್ನು ಹೊರಗೆಡವುತ್ತೇನೆ ಎಂದಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವುದು ನನ್ನ ಮನೆಯಲ್ಲಿ ಯಾರಿಗೂ ಇಷ್ಟವಿರಲಿಲ್ಲ ಎಂದೂ ಹೇಳಿದ್ದಾರೆ.
ಅತೃಪ್ತರು ಸದನದ ಸದಸ್ಯರೋ, ಅಲ್ಲವೋ ಎಂಬುದು ಸ್ಪಷ್ಟವಾಗಲಿ: ಕೃಷ್ಣಬೈರೇಗೌಡ
ಸೋಮಶೇಖರ್, ಬಸವರಾಜ್ ಮತ್ತು ಮುನಿರತ್ನ
ಭೈರತಿ ಸುರೇಶ್ ಒತ್ತಾಯ ಮಾಡಲು ಬಂದಾಗ, ನನಗೆ ಒತ್ತಡ ತರಬೇಡಿ ಎಂದಿದ್ದೆ. ಆದರೆ, ಸೋಮಶೇಖರ್, ಬಸವರಾಜ್ ಮತ್ತು ಮುನಿರತ್ನ ಹಠಕ್ಕೆ ಬಿದ್ದಂತೆ ನನ್ನನ್ನು ಒತ್ತಾಯಿಸಿದರು. ಈಗ ಆ ಮೂವರು ನಮ್ಮ ಪಕ್ಷಕ್ಕೆ ಮೋಸ ಮಾಡಿ ಹೋದರು. ಜೀವನದಲ್ಲಿ ಯಾವುದೂ ಶಾಸ್ವತವಲ್ಲ, ನಮಗೂ ಕಾಲ ಬರುತ್ತದೆ ಎಂದು ಕೃಷ್ಣ ಭೈರೇಗೌಡ್ರು ಹೇಳಿದ್ದಾರೆ.
ಸಿದ್ದರಾಮಯ್ಯನವರ ಮನೆಯಲ್ಲಿ ಮೈತ್ರಿಪಕ್ಷದ ಮುಖಂಡರ ಸಭೆ
ಸಿದ್ದರಾಮಯ್ಯನವರ ಮನೆಯಲ್ಲಿ ಮೈತ್ರಿಪಕ್ಷದ ಮುಖಂಡರ ಸಭೆ ನಡೆಯುತ್ತಿತ್ತು. ಬೆಂಗಳೂರು ಉತ್ತರ ಲೋಕಸಭಾ ವ್ಯಾಪ್ತಿಯ ಎಲ್ಲಾ ಕಾಂಗ್ರೆಸ್ - ಜೆಡಿಎಸ್ ಶಾಸಕರು ಹಾಜರಿದ್ದರು. ಸೋಮಶೇಖರ್, ಬಸವರಾಜ್ ಮತ್ತು ಮುನಿರತ್ನ ತುಂಬಾ ಒತ್ತಾಯ ಮಾಡಿದ್ದರಿಂದ ಚುನಾವಣೆಗೆ ನಿಂತು, ಸೋಲು ಅನುಭವಿಸಿದೆ ಎಂದು ಕೃಷ್ಣ ಭೈರೇಗೌಡ್ರು ಹೇಳಿದರು.
ಕೃಷ್ಣ ಭೈರೇಗೌಡರಿಗೆ ಸದಾನಂದ ಗೌಡರ ವಿರುದ್ದ ಸೋಲು
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕೃಷ್ಣ ಭೈರೇಗೌಡ, ಸದಾನಂದ ಗೌಡರ ವಿರುದ್ದ 147,518 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಯಶವಂತಪುರ (ಎಸ್ ಟಿ ಸೋಮಶೇಖರ್), ಕೆ ಆರ್ ಪುರಂ (ಭೈರತಿ ಬಸವರಾಜ್) ಮತ್ತು ರಾಜರಾಜೇಶ್ವರಿ ನಗರ (ಮುನಿರತ್ನ) ಅಸೆಂಬ್ಲಿ ಕ್ಷೇತ್ರದಲ್ಲೂ ನನಗೆ ಲೀಡ್ ಸಿಕ್ಕಿಲ್ಲ ಎಂದು ಭೈರೇಗೌಡ್ರು ದೂರಿದ್ದಾರೆ.