ಅರವಿಂದ್ ಬೆಲ್ಲದ್ ಸಿಎಂ ಆಗೋದು ಆಲ್ಮೋಸ್ಟ್ ಫೈನಲ್ ಆಗಿತ್ತು: ಆದರೆ, ಕೊನೆಯ ಕ್ಷಣದಲ್ಲಿ..
ಬಸವರಾಜ ಬೊಮ್ಮಾಯಿಯವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ, ದೆಹಲಿಗೆ ಒಂದು ಸುತ್ತಿನ ಪ್ರವಾಸವನ್ನೂ ಮುಗಿಸಿ ಬಂದಿದ್ದಾಗಿದೆ. ಆದರೆ, ಇವರು ಸಿಎಂ ಆಗುವ ಮುನ್ನ ನಡೆದ ಕೊನೆಯ ಕ್ಷಣದ ಬೆಳವಣಿಗೆ ಏನಾದರೂ ಏನು?
ಅರವಿಂದ್ ಬೆಲ್ಲದ್, ಮುರುಗೇಶ್ ನಿರಾಣಿ, ಪ್ರಲ್ಹಾದ್ ಜೋಷಿ, ಬಿ.ಎಲ್.ಸಂತೋಷ್ ಮುಂತಾದವರ ಹೆಸರು ಮುಖ್ಯಮಂತ್ರಿ ಹುದ್ದೆಗೆ ಮಂಚೂಣಿಯಲ್ಲಿ ಕೇಳಿ ಬರುತ್ತಿತ್ತು. ಹಾಗಂತ, ಬಸವರಾಜ ಬೊಮ್ಮಾಯಿಯವರ ಹೆಸರು ಪಟ್ಟಿಯಲ್ಲಿ ಇರಲಿಲ್ಲ ಎಂದಲ್ಲ, ಆದರೆ ಮಂಚೂಣಿಯಲ್ಲಿ ಕೇಳಿ ಬರುತ್ತಿರಲಿಲ್ಲ.
ಬಿಜೆಪಿಯ ಶಾಸಕಾಂಗ ಪಕ್ಷದ ಸಭೆ ನಡೆದ ದಿನ ಕೂಡಾ ಬೆಳಗ್ಗೆ ಅರವಿಂದ್ ಬೆಲ್ಲದ್ ಅವರ ಹೆಸರೇ ಬಹುತೇಕ ಕೇಳಿ ಬರುತ್ತಿತ್ತು. ಸಿಎಂ ಹುದ್ದೆಗಾಗಿ ಅವರು ಪಟ್ಟ ಪರಿಶ್ರಮ ಕೂಡಾ ತುಂಬಾ ಇತ್ತು. ದೆಹಲಿಯಲ್ಲಿ ತಿಂಗಳುಗಳ ಕಾಲ ಲಾಬಿ ನಡೆಸಿದ್ದದ್ದೂ ಗೌಪ್ಯವಾಗಿ ಏನೂ ಉಳಿದಿರಲಿಲ್ಲ.
ದೆಹಲಿಯಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಕೂಡಾ ಬೆಲ್ಲದ್ ಹೆಸರೇ ಅಂತಿಮವಾಗಿತ್ತು, ಆದರೆ, ಯಡಿಯೂರಪ್ಪನವರ ಆಯ್ಕೆಯನ್ನೂ ಪರಿಗಣಿಸುವ ಬಗ್ಗೆ ನಿರ್ಧಾರವಾಗಿತ್ತು ಎಂದು ಹೇಳಲಾಗುತ್ತಿತ್ತು. ಆದರೆ, ನಡೆದದ್ದು ಇನ್ನೊಂದು, ಕುಮಾರಸ್ವಾಮಿ ಈ ಬಗ್ಗೆ ಕೆಲವು ವಿಚಾರಗಳನ್ನು ಮಾಧ್ಯಮಗಳ ಮುಂದೆ ಇಟ್ಟಿದ್ದಾರೆ.

ಎಚ್.ಡಿ.ಕುಮಾರಸ್ವಾಮಿಯವರಿಗಿರುವ ನೆಟ್ವರ್ಕ್ ಅನ್ನು ಒಪ್ಪಿಕೊಳ್ಳಲೇ ಬೇಕು
ಸರಕಾರ ಯಾರದ್ದೇ ಇರಲಿ, ಅಧಿಕಾರ ಯಾರೇ ನಡೆಸುತ್ತಿರಲಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗಿರುವ ನೆಟ್ವರ್ಕ್ ಅನ್ನು ಒಪ್ಪಿಕೊಳ್ಳಲೇ ಬೇಕು. ಆಡಳಿತ ನಡೆಸುವವರಿಗೂ ಗೊತ್ತಿರದ ವಿಚಾರ, ಕುಮಾರಸ್ವಾಮಿಯವರಿಗೆ ತಿಳಿದಿರುತ್ತದೆ. ಅದೇ ರೀತಿ, ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದು, ಅರವಿಂದ್ ಬೆಲ್ಲದ್ ಅವರಿಗೆ ಸಿಎಂ ಹುದ್ದೆ ತಪ್ಪಿದ ಬಗ್ಗೆ ಕುಮಾರಸ್ವಾಮಿ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ.

ಬಸವರಾಜ ಬೊಮ್ಮಾಯಿ ಜನತಾದಳದ ಪ್ರೊಡಕ್ಟ್, ಅವರು ಜೆಡಿಎಸ್ ಪಕ್ಷದ ಮುಖ್ಯಮಂತ್ರಿ
"ಬಸವರಾಜ ಬೊಮ್ಮಾಯಿ ಜನತಾದಳದ ಪ್ರೊಡಕ್ಟ್, ಅವರು ಜೆಡಿಎಸ್ ಪಕ್ಷದ ಮುಖ್ಯಮಂತ್ರಿ" ಎಂದು ಹೇಳಿದ್ದ ಎಚ್.ಡಿ.ಕುಮಾರಸ್ವಾಮಿಯವರು ಬೊಮ್ಮಾಯಿ ಸಿಎಂ ಆಗಿದ್ದ ಬಗ್ಗೆ ಆಶ್ಚರ್ಯಕರ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಕೊನೆಯ ಕ್ಷಣದಲ್ಲಿ ನಡೆದ ಬದಲಾವಣೆ ಎಂದು ವ್ಯಾಖ್ಯಾನಿಸಿರುವ ಎಚ್ಡಿಕೆ, ಕೊನೆಯ ಕ್ಷಣದ ವರೆಗೂ ಅರವಿಂದ್ ಬೆಲ್ಲದ್ ಸಿಎಂ ಆಗುತ್ತಾರೆ ಎನ್ನುವ ವಿಚಾರ ಆಲ್ಮೋಸ್ಟ್ ಫೈನಲ್ ಆಗಿತ್ತು. ಆದರೆ, ಅವರಿಗೆ ಕೊನೇ ಕ್ಷಣದಲ್ಲಿ ಆ ಸ್ಥಾನ ತಪ್ಪಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಏನೇನು ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವ ಮಾಹಿತಿಗಳನ್ನು ಬೆಲ್ಲದ್ ಪಡೆಯುತ್ತಿದ್ದರು
"ಕೆಲವು ಮಾಧ್ಯಮಗಳು ವರದಿ ಮಾಡಿದ ಪ್ರಕಾರ, ಕಳೆದ ಎರಡು ತಿಂಗಳಿನಿಂದ ಸಿಎಂ ಆಗಿದ್ದ ಯಡಿಯೂರಪ್ಪನವರು ಏನೇನು ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವ ಮಾಹಿತಿಗಳನ್ನು ಬೆಲ್ಲದ್ ಅವರು ಪಡೆಯುತ್ತಿದ್ದರು. ಈ ಸಂಬಂಧ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳನ್ನು ಕರೆಸಿ, ಫೈಲ್ ಅನ್ನು ಅವಲೋಕನ ಮಾಡಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದನ್ನು ನಾನು ಗಮನಿಸಿದ್ದೇನೆ" ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
Recommended Video

ಅರವಿಂದ್ ಬೆಲ್ಲದ್ ಸಿಎಂ ಆಗೋದು ಆಲ್ಮೋಸ್ಟ್ ಫೈನಲ್ ಆಗಿತ್ತು: ಆದರೆ..
ಬೆಲ್ಲದ್ ಅವರು ಸಿಎಂ ಆಗೋದು ಕ್ಲಿಯರ್ ಆಗಿತ್ತು. ಆರ್ಥಿಕವಾಗಿ ಯಡಿಯೂರಪ್ಪನವರು ಏನೇನು ನಿರ್ಧಾರ ತೆಗೆದುಕೊಂಡಿದ್ದರು ಎನ್ನುವ ಮಾಹಿತಿಗಳನ್ನು ಬೆಲ್ಲದ್ ಪಡೆದುಕೊಳ್ಳುತ್ತಿದ್ದರು. ಸ್ವೇಚ್ಛಾಚ್ಚಾರವಾಗಿ ಹಲವು ನಿರ್ಣಯಗಳು ಬಿಎಸ್ವೈ ಅವರು ಸಿಎಂ ಹುದ್ದೆಗೆ ರಾಜೀನಾಮೆ ನೀಡುವ ಮುನ್ನ ಮಾಡಿದ್ದಾರೆ. ಬೊಮ್ಮಾಯಿಯವರು ಬಿಎಸೈ ಶ್ಯಾಡೋದಲ್ಲಿದ್ದಾರೆ. ಬಿಎಸ್ವೈ ಮಾರ್ಗದರ್ಶನದಲ್ಲೇ ಹೋಗುತ್ತೇನೆ ಎಂದು ಬೊಮ್ಮಾಯಿಯವರು ಹೇಳಿದ ನಂತರ, ಈ ಸರಕಾರದ ಬಗ್ಗೆ ಹೆಚ್ಚಿನ ನಿರೀಕ್ಷೆ ಏನೂ ಇಲ್ಲ"ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.












Click it and Unblock the Notifications