ತನಗೂ ಇಲ್ಲ, ಇನ್ನೊಬ್ಬರಿಗೂ 'ಮಂತ್ರಿಗಿರಿ' ಇಲ್ಲದಂತೆ ಮಾಡಿದ ಸೈನಿಕ ಯೋಗೀಶ್ವರ್
ಪ್ರಮುಖವಾಗಿ ಇಂದಿನ (ಫೆ 6) ಸಚಿವ ಸಂಪುಟ ವಿಸ್ತರಣೆಯಲ್ಲಿ ಮಹೇಶ್ ಕುಮಟಳ್ಳಿಗಿಂತ ಹೆಚ್ಚು ಕಳೆದುಕೊಂಡವರು, ಮೂಲ ಬಿಜೆಪಿಗರು. ಅದರಲ್ಲೂ, ಸಚಿವಸ್ಥಾನ ಸಿಗಬಹುದು ಎನ್ನುವ ಲೆಕ್ಕಾಚಾರ ಇಟ್ಟುಕೊಂಡಿದ್ದ ನಾಲ್ಕೈದು ಜನ.
ಉಮೇಶ್ ಕತ್ತಿ, ಅರವಿಂದ ಲಿಂಬಾವಳಿಗೆ ಸಚಿವಸ್ಥಾನ ಖಚಿತ, ಇವರಿಬ್ಬರ ಜೊತೆಗೆ, ಮತ್ತೊಬ್ಬರಿಗೂ, ಮೂಲ ಬಿಜೆಪಿ ಕೋಟಾದಲ್ಲಿ ಸ್ಥಾನ ಗ್ಯಾರಂಟಿ ಎನ್ನುವ ಲೆಕ್ಕಾಚಾರ ಎಲ್ಲಾ ಉಲ್ಟಾ ಹೊಡೆದದ್ದು ಸೈನಿಕ ಸಿ.ಪಿ.ಯೋಗೀಶ್ವರ್ ಅವರ ಎಂಟ್ರಿಯಿಂದ.
ಕುಮಟಳ್ಳಿ ಅದೇನು ಪಾಪ ಮಾಡಿದ್ರೋ, ಬಿಜೆಪಿ ಕಚೇರಿ ಕಸ ಗುಡ್ಸೋದೆ ಪಕ್ಕಾ ಆಯ್ತಾ?
ಯಡಿಯೂರಪ್ಪನವರನ್ನು ಬಿಟ್ಟು, ರಾಜ್ಯದ ಪ್ರಭಾವಿ ಮುಖಂಡರೊಬ್ಬರ ಮೂಲಕ, ದೆಹಲಿಯಲ್ಲಿ ಲಾಬಿ ನಡೆಸಿ, ಒಂದು ಹಂತಕ್ಕೆ ಯಶಸ್ವಿಯಾಗಿದ್ದ ಯೋಗೀಶ್ವರ್, ಇಂದಿನ ಸಂಪುಟ ವಿಸ್ತರಣೆಯಲ್ಲಿ ಸೇರ್ಪಡೆಯಾಗುವುದು ಬಹುತೇಕ ಖಚಿತ ಎಂದೇ ಹೇಳಲಾಗಿತ್ತು.
ಅವರ ರಾಜಕೀಯ ಕರ್ಮಭೂಮಿಯಲ್ಲಿ 'ಯೋಗೀಶ್ವರ್ ಅವರಿಗೆ ಅಭಿನಂದನೆಗಳು' ಎನ್ನುವ ಬ್ಯಾನರ್ ಗಳೂ ರಾರಾಜಿಸತೊಡಗಿದ್ದವು. ಆದರೆ, ಒಂದೇ ರಾತ್ರಿಯಲ್ಲಿ ನಡೆದ ರಾಜಕೀಯ, ಸಂಪುಟ ವಿಸ್ತರಣೆಯ ಚಿತ್ರಣವನ್ನೇ ಬದಲಾಯಿಸಿತು.
ಯೋಗೀಶ್ವರ್ ಅವರ ಹೆಸರು ಸಂಪುಟ ವಿಸ್ತರಣೆಯಲ್ಲಿ ಇದೆ ಎನ್ನುವ ಮಾಹಿತಿ
ಯೋಗೀಶ್ವರ್ ಅವರ ಹೆಸರು ಸಂಪುಟ ವಿಸ್ತರಣೆಯಲ್ಲಿ ಇದೆ ಎನ್ನುವ ಮಾಹಿತಿ ಖಚಿತವಾಗುತ್ತಿದ್ದಂತೆಯೇ ಧುತ್ತೆಂದು ಮೂಲ ಬಿಜೆಪಿಯ ಒಂದು ಬಣ ಎದ್ದೇಳಿತು. ಈ ಬಣದಿಂದ ತೀವ್ರ ವಿರೋಧ ವ್ಯಕ್ತವಾಗಲು ಆರಂಭವಾಯಿತು. ಪ್ರತ್ಯೇಕ ಸಭೆಯೂ ನಡೆದು ಹೋಯಿತು. ಗಮನಿಸಬೇಕಾದ ವಿಚಾರ ಏನಂದರೆ, ಯೋಗೀಶ್ವರ್ ಸೇರ್ಪಡೆಗೆ ವಿರೋಧ ವ್ಯಕ್ತ ಪಡಿಸಿದ ಮೂಲ ಬಿಜೆಪಿಗರೆಲ್ಲಾ ಯಡಿಯೂರಪ್ಪನವರ ಆಪ್ತವಲಯದಲ್ಲಿ ಗುರುತಿಸಿಕೊಂಡವರು.
ರೇಣುಕಾಚಾರ್ಯ, ರಾಜುಗೌಡ, ಮುರುಗೇಶ್ ನಿರಾಣಿ ಆದಿಯಾಗಿ ಪ್ರತ್ಯೇಕ ಸಭೆ
ರೇಣುಕಾಚಾರ್ಯ, ರಾಜುಗೌಡ, ಮುರುಗೇಶ್ ನಿರಾಣಿ ಆದಿಯಾಗಿ ಪ್ರತ್ಯೇಕ ಸಭೆ ನಡೆಸಿ, ಬಹಿರಂಗವಾಗಿಯೇ ಇವರೆಲ್ಲಾ ತಮ್ಮ ಅಸಮಾಧಾನ (ಯೋಗೀಶ್ವರ್ ಸೇರ್ಪಡೆಯ ವಿರುದ್ದ) ಹೊರಹಾಕಿದರು. ರೆಸಾರ್ಟಿನಲ್ಲಿ ಸಭೆ ಸೇರಿದರೆ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದಂತಾಗುತ್ತದೆ ಎಂದು ವಿಧಾನಸೌಧದಲ್ಲೇ ಇವರು ಸಭೆ ನಡೆಸಿದರು. ಅಲ್ಲಿಗೆ, ಮೂಲ ಬಿಜೆಪಿಗರ ಅಸಮಾಧಾನದ ಹೊಗೆ, ಅಮಿತ್ ಶಾ ಅಂಗಣಕ್ಕೂ ಹೋಯಿತು.
ಸಂಪುಟ ವಿಸ್ತರಣೆ ಕಿರಿಕ್ : ಮೂಲ ಬಿಜೆಪಿಗರ ಅಪಸ್ವರದ ಹಿಂದೆ ಪ್ರಭಾವಿ ಕಾಂಗ್ರೆಸ್ ಮುಖಂಡರ ಕೈವಾಡ?
ನ್ನಡ ಸಮ್ಮೇಳನದ ವೇದಿಕೆಯಲ್ಲೇ ಮುಖ್ಯಮಂತ್ರಿಗಳಿಗೆ ಕರೆಯೊಂದು ಬಂತು
ಕಲಬರುಗಿಯಲ್ಲಿ ಕನ್ನಡ ಸಮ್ಮೇಳನದ ವೇದಿಕೆಯಲ್ಲೇ ಮುಖ್ಯಮಂತ್ರಿಗಳಿಗೆ ಕರೆಯೊಂದು ಬಂತು. ಆ ಕರೆ ಬಂದ ಕೂಡಲೇ ಪತ್ರಿಕಾಗೋಷ್ಠಿ ರದ್ದು ಪಡಿಸಿದ ಯಡಿಯೂರಪ್ಪ ತರಾತುರಿಯಲ್ಲಿ ಬೆಂಗಳೂರಿಗೆ ಹೊರಟರು. ಮುಖ್ಯಮಂತ್ರಿಗಳು ರಾಜಧಾನಿಗೆ ಬರುತ್ತಿದ್ದಂತೆಯೇ 10+3 (ಮೂಲ ಬಿಜೆಪಿಗರಿಗೆ) ಇದ್ದದ್ದು ಬರೀ 10 ಎಂದಾಯಿತು. ಆ ಎಲ್ಲಾ ಹತ್ತು, ಬಿಜೆಪಿ ವಲಸಿಗ ನೂತನ ಶಾಸಕರಿಗೆ ಎನ್ನುವುದು ವರಿಷ್ಠರ ಕ್ಲಿಯರ್ ಕಟ್ ನಿರ್ದೇಶನವಾಗಿತ್ತು.
ಸಚಿವಸ್ಥಾನದ ಆಕಾಂಕ್ಷಿಗಳಲ್ಲಿ ಒಬ್ಬರಾದ ಅರವಿಂದ ಲಿಂಬಾವಳಿ
ಆದರೆ, ಸಚಿವಸ್ಥಾನದ ಆಕಾಂಕ್ಷಿಗಳಲ್ಲಿ ಒಬ್ಬರಾದ ಅರವಿಂದ ಲಿಂಬಾವಳಿಯವರ ಪ್ರಕಾರ, "ಸಚಿವ ಸ್ಥಾನ ಪಟ್ಟಿ ತಯಾರಿಸಿರುವುದು ಹೈಕಮಾಂಡ್ ಅಲ್ಲ ಮುಖ್ಯಮಂತ್ರಿಗಳು. ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿಗಳ ಪರಮಾಧಿಕಾರ, ಅವರೇ ಸಚಿವ ಸ್ಥಾನ ಯಾರಿಗೆ ಕೊಡಬೇಕು ಎಂದು ನಿರ್ಧರಿಸಿದ್ದಾರೆ" ಎಂದು ಹೇಳಿದ್ದಾರೆ. ಮೂಲಗಳ ಪ್ರಕಾರ, ಯೋಗೀಶ್ವರ್ ಸೇರ್ಪಡೆಗೆ ವಿರೋಧ ವ್ಯಕ್ತವಾಗಿದ್ದರಿಂದ, ಮೂಲ ಬಿಜೆಪಿಗರಲ್ಲಿ ಯಾರಿಗೂ ಸ್ಥಾನ ಸದ್ಯಕ್ಕೆ ಬೇಡ ಎನ್ನುವ ನಿರ್ಧಾರಕ್ಕೆ ವರಿಷ್ಠರು ಬಂದರು ಎಂದು ಹೇಳಲಾಗುತ್ತಿದೆ.
ತನಗೂ ಇಲ್ಲ, ಇನ್ನೊಬ್ಬರಿಗೂ ಮಂತ್ರಿ ಸ್ಥಾನ ಇಲ್ಲದಂತೆ ಮಾಡಿದ ಯೋಗೀಶ್ವರ್
ಅಲ್ಲಿಗೆ, ಸಿ.ಪಿಯೋಗೀಶ್ವರ್ ಅವರ ಹೆಸರು ಕೊನೆಯ ಕ್ಷಣದಲ್ಲಿ ಸೇರ್ಪಡೆಗೊಂಡ ನಂತರ, ಮೂಲ ಬಿಜೆಪಿಗರು ಏನು ಮಹದಾಸೆಯನ್ನು ಇಟ್ಟುಕೊಂಡಿದ್ದರೋ, ಅದೆಲ್ಲಾ ನುಚ್ಚುನೂರಾಯಿತು. ಹಾಗಾಗಿ, ತನಗೂ ಇಲ್ಲ, ಇನ್ನೊಬ್ಬರಿಗೂ ಮಂತ್ರಿ ಸ್ಥಾನ ಇಲ್ಲದಂತೆ ಯೋಗೀಶ್ವರ್ ಮಾಡಿದರು ಎಂದು ಮೂಲ ಬಿಜೆಪಿಗರಲ್ಲಿನ ಆಕಾಂಕ್ಷಿಗಳು ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ.