ಬಿಬಿಎಂಪಿ ಮುಖಭಂಗ : ಸಿದ್ದು ಪದಚ್ಯುತಿ ತಳ್ಳಿಹಾಕಿದ ಕಾಂಗ್ರೆಸ್
ಬೆಂಗಳೂರು, ಆಗಸ್ಟ್ 25 : ಬಿಬಿಎಂಪಿ ಚುನಾವಣೆಯಲ್ಲಿ ನೂರು ದಾಟುವ ಕನಸು ಹೊತ್ತಿದ್ದ ಕಾಂಗ್ರೆಸ್ ಹೀನಾಯವಾಗಿ ಸೋಲು ಅನುಭವಿಸುತ್ತಿದ್ದಂತೆ ಎಲ್ಲ ಲಕ್ಷ್ಯ ಸಹಜವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರತ್ತ ಹೊರಳಿದೆ. ಈ ಸೋಲಿನ ಹೊಣೆ ಅವರ ಮೇಲೆ ಹೊರಿಸಿ ಅವರನ್ನು ಮುಖ್ಯಮಂತ್ರಿ ಪಟ್ಟದಿಂದ ಇಳಿಸಬೇಕಾ ಎಂಬ ಪ್ರಶ್ನೆ ಹಲವರ ಮನದಲ್ಲಿ ಕಾಡುತ್ತಿದೆ.
ಪಕ್ಷದಲ್ಲಿಯೇ ಅವರ ಹಿಂದೆ ಮುಂದೆ ಸಾಕಷ್ಟು ವೈರಿಗಳು ಸುಳಿದಾಡುತ್ತಿದ್ದರೂ, ಸಿದ್ದರಾಮಯ್ಯ ಅವರ ಪದಚ್ಯುತಿಯ ಸಾಧ್ಯತೆಯನ್ನು ಸದ್ಯಕ್ಕೆ ತಳ್ಳಿಹಾಕಲಾಗಿದೆ. ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುಕಂಡರೆ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪಟ್ಟಕ್ಕೇರಿಸಬೇಕೆಂಬ ಮಾತು ಕೇಳಿಬಂದಿತ್ತು. [ಚುನಾವಣೆ ಫಲಿತಾಂಶ : ಯಾರು, ಏನು ಹೇಳಿದರು?]

ಪದಚ್ಯುತಿ ಪ್ರಸ್ತಾಪ ಆಗಿದ್ದು ಇದೇ ಮೊದಲಲ್ಲ
2014ರಲ್ಲಿ ಜರುಗಿದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೂ ಇಂಥದೇ ಪರಿಸ್ಥಿತಿ ಉದ್ಭವಿಸಿತ್ತು. ರಾಜ್ಯದಿಂದ ಹೆಚ್ಚು ಕಾಂಗ್ರೆಸ್ಸಿಗರನ್ನು ಕಳಿಸಲು ವಿಫಲವಾದರೆ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಯಬೇಕು ಎಂಬ ಕೂಗು ಎದ್ದಿತ್ತು. ಆಗ ಕಾಂಗ್ರೆಸ್ ಕೇವಲ 9 ಸ್ಥಾನ ಗಳಿಸಿದ್ದರೂ ಸಿದ್ದುವನ್ನು ಅಲ್ಲಾಡಿಸಲು ಆಗಿರಲಿಲ್ಲ.
ಸಿದ್ದರಾಮಯ್ಯ ಅವರನ್ನು ಪದಚ್ಯುತಿಗೊಳಿಸಲು ಈಗ ಕಾರಣವೇ ಇಲ್ಲ ಎಂದು ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಒನ್ಇಂಡಿಯಾಗೆ ಹೇಳಿಕೆ ನೀಡಿದ್ದಾರೆ. ಬಿಬಿಎಂಪಿ ಚುನಾವಣೆ ಫಲಿತಾಂಶಕ್ಕೂ ರಾಜ್ಯ ಸರಕಾರ ನಡೆಸುತ್ತಿರುವ ಆಡಳಿತಕ್ಕೂ ಸಂಬಂಧವೇ ಇಲ್ಲ ಎಂದು ಕಾಳಪ್ಪ ಕಡ್ಡಿಮುರಿದಂತೆ ಹೇಳಿದ್ದಾರೆ. [ಸಿದ್ದರಾಮಯ್ಯ ರಾಜೀನಾಮೆ ನೀಡಲಿ : ಟ್ವೀಟ್ ಅಭಿಮತ]
ಭ್ರಷ್ಟಾಚಾರದಂಥ ಗಂಭೀರ ಆರೋಪ ಇರದಿದ್ದರೆ ಮುಖ್ಯಮಂತ್ರಿಯನ್ನು ಕೆಳಗಿಳಿಸುವ ಸಂಪ್ರದಾಯ ಕಾಂಗ್ರೆಸ್ಸಿನಲ್ಲಿಲ್ಲ. ಸಿದ್ದು ಅವರ ವಿರುದ್ಧ ಯಾವುದೇ ಇಂಥ ಆರೋಪಗಳಿಲ್ಲ ಮತ್ತು ಹಲವಾರು ಅಡೆತಡೆಗಳ ನಡುವೆ ಸರಕಾರವನ್ನು ಅವರು ಸುಗಮವಾಗಿ ಸಾಗಿಸಿಕೊಂಡು ಹೋಗಿದ್ದಾರೆ. ಆದ್ದರಿಂದ ಪದಚ್ಯುತಿ ಏಕೆ ಎಂದು ಕಾಳಪ್ಪ ಪ್ರಶ್ನಿಸುತ್ತಾರೆ.
ಶುರುವಾಗಿದೆ ಬ್ಲೇಮ್ ಗೇಮ್
ಸೋಲಿನ ಪರಾಮರ್ಶೆಯಲ್ಲಿ ತೊಡಗಿರುವ ಕಾಂಗ್ರೆಸ್ಸಿನಲ್ಲಿ ಈಗಾಗಲೆ ತೆರೆಮರೆಯಲ್ಲಿ ಅವರಿವರನ್ನು ಹೊಣೆಯಾಗಿಸುವ ಕೆಲಸವೂ ಸಾಗಿದೆ. ಸಹಜವಾಗಿ ಬೆಂಗಳೂರಿನ ಶಾಸಕರ ಮೇಲೆ ಬೆರಳು ನೆಟ್ಟಿದ್ದರೂ, ಸಿದ್ದರಾಮಯ್ಯ ಬೆಂಗಳೂರನ್ನು ನಿರ್ಲಕ್ಷಿಸಿದ್ದರಿಂದಲೇ ಸೋಲುಣ್ಣಬೇಕಾಯಿತು ಎಂಬ ಮಾತು ಕೇಳಿಬರುತ್ತಿವೆ.
ಈ ಸೋಲಿಗೆ ರಾಮಲಿಂಗಾ ರೆಡ್ಡಿ, ದಿನೇಶ್ ಗುಂಡೂರಾವ್, ಕೆಜೆ ಜಾರ್ಜ್ ಕೂಡ ಸ್ಪಷ್ಟ ಉತ್ತರ ನೀಡಬೇಕಾಗುತ್ತದೆ. ಇವರ ನಡುವೆ ಹೊಂದಾಣಿಕೆ ಕೊರತೆ ಇದ್ದಿದ್ದರಿಂದಲೇ ಈ ಮುಖಭಂಗ ಅನುಭವಿಸುವಂತಾಯಿತು ಎಂಬ ಮಾತು ಕಾಂಗ್ರೆಸ್ ಕಚೇರಿಯಲ್ಲಿ ಸುಳಿದಾಡುತ್ತಿವೆ.
ಈ ಸಂದರ್ಭವನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಂಡು ಸಿದ್ದರಾಮಯ್ಯ ಅವರನ್ನು ಕುರ್ಚಿಯಿಂದ ಇಳಿಸಿರುವ ಹುನ್ನಾರಗಳೂ ನಡೆಯುತ್ತಿವೆ. ಅಸಲಿ ಸಂಗತಿಯೆಂದರೆ, ಮುಖ್ಯಮಂತ್ರಿ ಪಟ್ಟದ ಆಕಾಂಕ್ಷಿ ಮಲ್ಲಿಕಾರ್ಜುನ ಖರ್ಗೆ ಮತ್ತು ಮತ್ತೊಬ್ಬ ಆಕಾಂಕ್ಷಿ ಜಿ ಪರಮೇಶ್ವರ್ ಅವರು ಸಿದ್ದರಾಮಯ್ಯನವರನ್ನು ಬೆಂಬಲಿಸಿದ್ದು ಕಡಿಮೆಯೆ.












Click it and Unblock the Notifications