ಯಡಿಯೂರಪ್ಪ ಮನೆಗೆ ಹೋಗಿದ್ದೇಕೆ; ಹೊರಟ್ಟಿ ಸ್ಪಷ್ಟನೆ
ಬೆಂಗಳೂರು, ಡಿಸೆಂಬರ್ 18 : "ನಾನು ಮೊದಲಿನಿಂದಲೂ ದೇವೇಗೌಡರ ಮನೆಗೆ ಹೆಚ್ಚು ಹೋಗುತ್ತಿರಲಿಲ್ಲ. ನಾವು ಹೋದರೆ ಯಾರ್ಯಾರೋ ಏನೇನೋ ಹೇಳಿ ಬಿಡುತ್ತಿದ್ದರು" ಎಂದು ವಿಧಾನ ಪರಿಷತ್ ಸದಸ್ಯ ಮತ್ತು ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಹೇಳಿದರು.
ಬುಧವಾರ ಬೆಂಗಳೂರಿನಲ್ಲಿ ಮಾತನಾಡಿದ ಬಸವರಾಜ ಹೊರಟ್ಟಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. "ಯಡಿಯೂರಪ್ಪ, ಸಿದ್ದರಾಮಯ್ಯ ಮನೆಗೆ ನಾನು ಜಾಸ್ತಿ ಹೋಗ್ತಾ ಇದ್ದೀನಿ" ಎಂದರು.
"ಅಭಿವೃದ್ಧಿ ಕೆಲಸದ ಜೊತೆಗೆ ರಾಜಕೀಯವನ್ನು ಮಾತನಾಡಿದ್ದೀವಿ. ನಾನು ಎಲ್ಲಿದ್ದರು ನನ್ನ ಕೆಲಸಗಳು ಆಗುತ್ತವೆ. ಅಂದ ಮೇಲೆ ನಾನು ಬೇರೆ ಕಡೆ ಏಕೆ ಹೋಗಬೇಕು?. ನಾನು ಬೇರೆ ಯೋಚನೆ ಮಾಡಿಲ್ಲ, ಜೆಡಿಎಸ್ ಪಕ್ಷದಲ್ಲಿಯೇ ಇರುತ್ತೇನೆ" ಎಂದು ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದರು.

ಯಡಿಯೂರಪ್ಪ ಮನೆಗೆ ಬಸವರಾಜ ಹೊರಟ್ಟಿ ಭೇಟಿ ನೀಡಿದ ಬಗ್ಗೆ ಪ್ರಶ್ನಿಸಿದಾಗ ಎಚ್. ಡಿ. ಕುಮಾರಸ್ವಾಮಿ, "ಯಾರು ಎಲ್ಲಿಗೆ ಬೇಕಾದರೂ ಹೋಗಲಿ. ನಾನೇನು ಮಾಡುವುದಕ್ಕೆ ಆಗುತ್ತದೆ?" ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಕುಮಾರಸ್ವಾಮಿ ಮಾತಿಗೆ ತಿರುಗೇಟು ಕೊಟ್ಟ ಬಸವರಾಜ ಹೊರಟ್ಟಿ, "ಪಾಪ ಎಚ್. ಡಿ. ಕುಮಾರಸ್ವಾಮಿ ಅವರು ಬೇಜಾರಾಗಿದ್ದಾರೆ. ಆದರೆ, ಇಂತಹ ಪರಿಸ್ಥಿತಿಯಲ್ಲಿ ಹೀಗೆಲ್ಲಾ ಮಾತನಾಡಬಾರದು" ಎಂದು ಸಲಹೆ ನೀಡಿದರು.
ಜೆಡಿಎಸ್ ಪಕ್ಷದಲ್ಲಿ ಎಲ್ಲರೂ ಸರಿ ಇಲ್ಲ ಎಂಬುದು ಹಲವು ಬಾರಿ ಸಾಬೀತಾಗಿದೆ. ಅದರಲ್ಲೂ ವಿಧಾನ ಪರಿಷತ್ ಸದಸ್ಯರು ಎಚ್. ಡಿ. ಕುಮಾರಸ್ವಾಮಿ ವಿರುದ್ಧ ಆಕ್ರೋಶಗೊಂಡಿದ್ದಾರೆ. ಮೈತ್ರಿ ಸರ್ಕಾರವಿದ್ದಾಗ ಪರಿಷತ್ ಸದಸ್ಯರಿಗೆ ಸರಿಯಾದ ಸ್ಥಾನಮಾನ ನೀಡಿಲ್ಲ ಎಂಬುದು ಅಸಮಾಧಾನಕ್ಕೆ ಕಾರಣವಾಗಿದೆ.











Click it and Unblock the Notifications