ಬಸವ ಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಲಿಂಗೈಕ್ಯ
ಬೆಂಗಳೂರು, ಮಾರ್ಚ್ 14 : ಕೂಡಲಸಂಗಮ ಬಸವ ಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಲಿಂಗೈಕ್ಯರಾಗಿದ್ದಾರೆ. ಹಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.
ಗುರುವಾರ ಸಂಜೆ ಬಸವ ಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ (74) ಅವರು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾದರು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಐಸಿಯೂನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಮಾತೆ ಮಹಾದೇವಿ ವಿರುದ್ಧ ಪ್ರತಿಭಟನೆ
ಮಾತೆ ಮಹಾದೇವಿ ಅವರ ನೂರಾರು ಅನುಯಾಯಿಗಳು ಆಸ್ಪತ್ರೆಯತ್ತ ಧಾವಿಸುತ್ತಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಬೆಂಗಳೂರಿನ ರಾಜಾಜಿನಗರದ ಬಸವ ಮಂಟಪದ ಬಳಿ ಅನುಯಾಯಿಗಳು ಕಣ್ಣೀರಿಡುತ್ತಿದ್ದಾರೆ.
ಸಿದ್ದಗಂಗಾ ಮಠ Vs ಮಾತೆ ಮಹಾದೇವಿ: ಏನಿದು ಕೇಶ ಮುಂಡನ ವಿವಾದ?
ಮಾತೆ ಮಹಾದೇವಿ ಅವರು ಗುರುವಾರ ಸಂಜೆ 4.45ರ ಸುಮಾರಿಗೆ ಕೊನೆಯುಸಿರೆಳೆದರು. ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಸೇರಿದಂತೆ ಹಲವು ನಾಯಕರು ಆಸ್ಪತ್ರೆಗೆ ಆಗಮಿಸಿ ಅಂತಿಮ ನಮನ ಸಲ್ಲಿಸುತ್ತಿದ್ದಾರೆ.
ಮಾರ್ಚ್ 13, 1946ರಂದು ಜನಿಸಿದ್ದ ಮಾತೆ ಮಹಾದೇವಿ ಅವರು ಬಿಎಸ್ಸಿ, ಎಂಎ ಪದವಿ ಪಡೆದಿದ್ದರು. ಬಹರಗಾರರಾಗಿದ್ದ ಅವರು ಉತ್ತಮ ವಾಗ್ಮಿಯಾಗಿದ್ದರು. ಗುರುಲಿಂಗಾನಾಂದ ಅವರಿಂದ ಪ್ರಭಾವಿತರಾಗಿ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದರು.
ಪ್ರಥಮ ಮಹಿಳಾ ಜಗದ್ಗುರು ಎಂಬ ಹೆಗ್ಗಳಿಕೆಯನ್ನು ಮಾತೆ ಮಹಾದೇವಿ ಅವರು ಹೊಂದಿದ್ದರು. ಕೊಡಲಸಂಗಮದ ಬಸವಕಲ್ಯಾಣದಲ್ಲಿ ಪ್ರತಿವರ್ಷ ಶರಣ ಧರ್ಮ ಪ್ರಚಾರಕ್ಕಾಗಿ ಶರಣ ಸಮ್ಮೇಳನವನ್ನು ನಡೆಸುತ್ತಿದ್ದರು.
ಕರ್ನಾಟಕದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಮಾತೆ ಮಹಾದೇವಿ ಅವರು ಪ್ರತ್ಯೇಕ ಧರ್ಮದ ಪರವಾಗಿದ್ದರು. ಶುಕ್ರವಾರ ಕೂಡಲಸಂಗಮದಲ್ಲಿ ಮಾತೆ ಮಹಾದೇವಿ ಅವರ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ.
ಮಾತೆ ಮಹಾದೇವಿ ಅವರು ಚಿತ್ರದುರ್ಗ ಜಿಲ್ಲೆಯ ಸಾಸಲಹಟ್ಟಿಯಲ್ಲಿ ಜನಿಸಿದ್ದರು. ಇವರ ಮೂಲ ಹೆಸರು ರತ್ನ. ಕಿರಿಯ ವಯಸ್ಸಿನಲ್ಲಿಯೇ ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಿದ್ದರು.
ಬಸವತತ್ವ ದರ್ಶನ ಎಂಬ ಬೃಹತ್ ಕೃತಿಯನ್ನು ಮಾತೆ ಮಹಾದೇವಿ ರಚನೆ ಮಾಡಿದ್ದರು. ಧಾರವಾಡದಲ್ಲಿ ಅಕ್ಕಮಹಾದೇವಿ ಆಶ್ರಮವನ್ನು ಸ್ಥಾಪನೆ ಮಾಡಿದ್ದರು. ಕುಂಬಳಗೋಡಿನಲ್ಲಿ ಬಸವಗಂಗೋತ್ರಿ ಆಶ್ರಮ ಮತ್ತು 1975ರಲ್ಲಿ ರಾಜಾಜಿನಗರದಲ್ಲಿ ಬಸವ ಮಂಟಪ ಸ್ಥಾಪನೆ ಮಾಡಿದ್ದರು.