ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರು, ಜುಲೈ 20: ವಿಧಾನಸಭೆಯಲ್ಲಿ ಪ್ರತಿಭಟನೆ ಮಾಡುವಾಗ ಅಸ್ವಸ್ಥರಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಗುರುವಾರ ಮಧ್ಯಾಹ್ನ ಬಿಡುಗಡೆಯಾಗಿದ್ದಾರೆ.
ಬೆಂಗಳೂರಿನಲ್ಲಿ ನಡೆದಿದ್ದ ರಾಜಕೀಯ ವಿರೋಧ ಪಕ್ಷಗಳ ಸಭೆಗೆ ರಾಜ್ಯದ ಐಎಎಸ್ ಅಧಿಕಾರಿಗಳನ್ನು ಆಡಳಿತರೂಢ ಕಾಂಗ್ರೆಸ್ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ಬುಧವಾರ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಅವರಿಗೆ ಬಿಜೆಪಿ ಶಾಸಕರು ಮಸೂದೆಯ ಪ್ರತಿಯನ್ನು ಹರಿದು ಅವರ ಮೇಲೆ ಎಸೆದಿದ್ದರು. ಈ ವೇಳೆ ಅಸ್ವಸ್ಥರಾಗಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು ನಾನು ಸಂಪೂರ್ಣ ಗುಣಮುಖನಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದೇನೆ. ಇನ್ನೆರಡು ದಿನಗಳಲ್ಲಿ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತೇನೆ. ತಮ್ಮೆಲ್ಲರ ಹಾರೈಕೆಗಳಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ, ವಿಧಾನಸಭೆಯಲ್ಲಿ ಬುಧವಾರ ಅಸಭ್ಯ ವರ್ತನೆ ತೋರಿದ್ದಕ್ಕಾಗಿ 10 ಬಿಜೆಪಿ ಶಾಸಕರನ್ನು ಸ್ಪೀಕರ್ ಯುಟಿ ಖಾದರ್ ಅಮಾನತು ಮಾಡಿದ್ದರು.
ಈ ವೇಳೆ ಬಿಜೆಪಿ ಶಾಸಕರು ಸ್ಪೀಕರ್ ನಿರ್ಧಾರದ ವಿರುದ್ಧ ಧರಣಿ ನಡೆಸಿದ್ದರು. ಮಾರ್ಷಲ್ಗಳು ಅಮಾನತುಗೊಂಡ ಶಾಸಕರನ್ನು ವಿಧಾನಸಭೆಯಿಂದ ಹೊರಹಾಕಲು ಪ್ರಯತ್ನಿಸಿದ್ದರು. ಈ ವೇಳೆ ಇತರ ಬಿಜೆಪಿ ಶಾಸಕರು ಅಮಾನತುಗೊಂಡ ಶಾಸಕರ ರಕ್ಷಣೆಗೆ ನಿಂತಿದ್ದರು. ಈ ವೇಳೆ ಗಲಾಟೆ ನಡೆದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಪಿ ಹೆಚ್ಚಾಗಿ ಅಸ್ವಸ್ಥರಾಗಿದ್ದರು. ಆ ಬಳಿಕ ವಿಧಾನಸೌಧದ ವೈದ್ಯರು ಯತ್ನಾಳ್ ಅವರನ್ನು ಉಪಚರಿಸಿದ್ದರು.
ನಂತರ ಆಂಬುಲೆನ್ಸ್ ಮೂಲಕ ಬೆಂಗಳೂರಿನಲ್ಲಿನ ಪೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಈಗ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಯತ್ನಾಳ್ ಅವರು ಆಸ್ಪತ್ರೆಗೆ ದಾಖಲಾದ ವೇಳೆ ಸಿಎಂ ಸಿದ್ದರಾಮಯ್ಯ, ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವಾರು ರಾಜಕೀಯ ನಾಯಕರು ಆಸ್ಪತ್ರೆಗೆ ಭೇಟಿ ಆರೋಗ್ಯ ವಿಚಾರಿಸಿದ್ದರು.
ಯತ್ನಾಳ್ ಅವರು ತಮ್ಮ ಹಿಂದಿನ ಭಾಷಣಗಳಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಸದಾ ಕಿಡಿಕಾರುತ್ತಿದ್ದರು. ಆದರೆ ಅವರಿಗೆ ಮುಸ್ಲಿಂ ಡಾಕ್ಟರೊಬ್ಬರು ಚಿಕಿತ್ಸೆ ನೀಡುತ್ತಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನನಗೆ ಮುಸ್ಲಿಂ ಓಟು ಬೇಡ ಎಂದು ನೇರವಾಗಿ ಹೇಳಿದ್ದ ಶಾಸಕ ಯತ್ನಾಳ್ ಅವರು ಮುಸ್ಲಿಂ ಡಾಕ್ಟರ್ ಅವರಿಂದ ಚಿಕಿತ್ಸೆ ಬೇಡ ಎಂದು ನಿರಾಕರಿಸುತ್ತಾರೆಯೇ? ಎಂದು ಕೆಲವರು ಪ್ರಶ್ನಿಸಿದ್ದರು.
ಅವರಿಗೆ ಚಿಕಿತ್ಸೆ ನೀಡಿದ್ದ ಡಾ. ಅಬ್ದುಲ್ ಖಾದರ್ ಎಂಬುವವರು ಬೆವರುವಿಕೆ ಮತ್ತು ತಲೆಸುತ್ತು ಅಂತ ಬಂದು ಆಸ್ಪತ್ರೆ ದಾಖಲಾದರು. ಸದ್ಯ ಆರೋಗ್ಯ ಸ್ಥಿರವಾಗಿ ಇದೆ. ಅರಾಮಾಗಿ ಮಾತಾಡ್ತಾ ಇದ್ದಾರೆ. ಸ್ವಲ್ಪ ರಕ್ತದೊತ್ತಡ (ಬಿಪಿ) ಹೆಚ್ಚಾಗಿದೆ. ಹೆಚ್ಚಿನ ತಪಾಸಣೆಗೆಂದು ಎಕೋ ಮತ್ತು ಇಸಿಜಿ ಕೂಡ ಮಾಡಲಾಗಿದ್ದು, ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಅನಾರೋಗ್ಯ ಎಂದು ಬಂದಿರುವ ಹಿನ್ನೆಲೆಯಲ್ಲಿ ಅವರನ್ನು 24 ಗಂಟೆ ನಿಗಾದಲ್ಲಿ ಇಡಲಾಗುವುದು. ಸಂಪೂರ್ಣ ಚೇತರಿಸಿಕೊಂಡ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದರು.












Click it and Unblock the Notifications