ಮಹಾಭಾರತ ಬರೆದವರು ಕೆಳಜಾತಿಯ ವಾಲ್ಮೀಕಿ: ಎಡವಟ್ಟು ಮಾಡಿದ ಯತ್ನಾಳ್!
ಬೆಂಗಳೂರು ಮಾರ್ಚ್ 6: ಪ್ರತಿ ಬಾರಿ ಒಂದಲ್ಲಾ ಒಂದು ಹೇಳಿಕೆಗಳನ್ನು ನೀಡಿ, ವಿವಾದವನ್ನು ಮೈ ಮೇಲೆ ಎಳೆದುಕೊಳ್ಳುವಲ್ಲಿ ಬಸನಗೌಡ ಪಾಟೀಲ ಯತ್ನಾಳ್ ಸದಾ ಮುಂದು. ಇತ್ತೀಚೆಗೆಷ್ಟೇ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಬಸನಗೌಡ ಪಾಟೀಲ ಯತ್ನಾಳ್ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದರು.
ಇದೀಗ ಇದೇ ಬಸನಗೌಡ ಪಾಟೀಲ ಯತ್ನಾಳ್ ಇಂದು ಒಂದು ಎಡವಟ್ಟು ಮಾಡಿದ್ದಾರೆ. ''ಮಹಾಭಾರತ ಬರೆದವರು ಕೆಳಜಾತಿಯ ವಾಲ್ಮೀಕಿ'' ಅಂತ ಕಲಾಪ ನಡೆಯುತ್ತಿರುವ ವೇಳೆ ಮಹಾಭಾರತದ ಬರೆದವರ ಕುರಿತು ಬಸನಗೌಡ ಪಾಟೀಲ ಯತ್ನಾಳ್ ತಪ್ಪು ನುಡಿದಿದ್ದಾರೆ.
ಸದಾ ಗೌಡ್ರ ಗದ್ದಲ; ಬಿಜೆಪಿಯ 'ಬಿಸಿ ತುಪ್ಪ' ಯತ್ನಾಳ ಯಾರು?
ಕರ್ನಾಟಕದಲ್ಲಿ ವಿಧಾನ ಮಂಡಲ ಅಧಿವೇಶನ ನಡೆಯುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. ಸದನದ ಕಲಾಪದಲ್ಲಿ ಇಂದು ಸಂವಿಧಾನದ ಕುರಿತ ವಿಶೇಷ ಚರ್ಚೆ ನಡೆಯುತ್ತಿತ್ತು. ಈ ವೇಳೆ ಚರ್ಚೆಯಲ್ಲಿ ಬಸನಗೌಡ ಪಾಟೀಲ ಯತ್ನಾಳ್ ಭಾಗವಹಿಸಿದರು.
ಆರಂಭದಲ್ಲೇ ''ಮಹಾಭಾರತ ಬರೆದವರು ಕೆಳಜಾತಿಯ ವಾಲ್ಮೀಕಿ'' ಅಂತ ಬಸನಗೌಡ ಪಾಟೀಲ ಯತ್ನಾಳ್ ಹೇಳಿಬಿಟ್ಟರು. ಸ್ವಲ್ಪ ಹೊತ್ತಿನ ಬಳಿಕ ತಮ್ಮ ತಪ್ಪನ್ನು ಅರಿತು, ''ಮಹಾಭಾರತ ಬರೆದವರು ವ್ಯಾಸರು'' ಅಂತ ಹೇಳಿ ತಿದ್ದಿಕೊಂಡರು.