ನಿಲೇಕಣಿ ದಾಕ್ಷಿಣ್ಯದಲ್ಲಿ ಕಾಂಗ್ರೆಸ್ ಪಕ್ಷ: ಕಾರ್ಯಕರ್ತರು ಕಿಡಿ

ಬೆಂಗಳೂರು ದಕ್ಷಿಣ ಭಾಗದ 4 ಶಾಸಕರು, 18 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ನಂದನ್ ನಿಲೇಕಣಿ ಅವರನ್ನು ಕಣಕ್ಕಿಳಿಸುವುದರ ವಿರುದ್ಧ ಸೆಟೆದು ನಿಂತಿದ್ದಾರೆ. ಸ್ಥಳೀಯರಿಗೆ ಮಣೆ ಹಾಕದೆ, ಪಕ್ಷದಲ್ಲಿ ಹಿರಿಯರು, ನಿಷ್ಠಾವಂತರು ಇರುವಾಗ ಹೊರಗಿನವರಿಗೆ ಮಣೆ ಹಾಕಿರುವುದು ಸರ್ವಥಾ ಸಾಧುವಲ್ಲ ಎಂದು ಸ್ಥಳೀಯ ನಾಯಕರು ಅಸಮಾಧಾನಗೊಂಡಿದ್ದಾರೆ.
ಅಷ್ಟೇ ಅಲ್ಲದೆ, ಸ್ಥಳೀಯ ಪ್ರಭಾವಿ ಮುಖಂಡ ಯುಬಿ ವೆಂಕಟೇಶ್ ಅವರಿಗೆ ಲೋಕಸಭಾ ಚುನಾವಣಾ ಟಿಕೆಟ್ ನೀಡಬೇಕು ಎಂದು ಈ ನಾಯಕರು ಪಕ್ಷದೆ ಮೇಲೆ ಒತ್ತಡ ಹೇರಿದ್ದಾರೆ. ಆಹಾರ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಅವರು ಸ್ಥಳೀಯ ನಾಯಕರ ಬೇಡಿಕೆಯನ್ನು ಹೊತ್ತು ದೆಹಲಿಗೆ ತೆರಳಿ, ಹೈಕಮಾಂಡಿಗೆ ಮನವರಿಕೆ ಮಾಡಿಕೊಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ಇದೆಲ್ಲದ ಬಗ್ಗೆ ತಲೆ ಕೆಡಿಸಿಕೊಳ್ಳದ ನಂದನ್ ನಿಲೇಕಣಿ ಅವರು ಈ ಬಾರಿ ಟಿಕೆಟ್ ತಮಗೇ ಎಂದು ಅರ್ಥೈಸಿಕೊಂಡಿದ್ದು, ಚುನಾವಣೆಯತ್ತ ದಾಪುಗಾಲು ಹಾಕಿದ್ದಾರೆ.
Operation Agile ಹೆಸರಿನಲ್ಲಿ ತಜ್ಞರ ತಂಡವೊಂದನ್ನು ರಚಿಸಿಕೊಂಡಿದ್ದು, ಕ್ಷೇತ್ರದಲ್ಲಿ ಚುನಾವಣೆ ಪ್ರಚಾರದ ರೂಪುರೇಷೆ ಸಿದ್ಧಪಡಿಸಿದ್ದಾರೆ ಎಂದು ತಿಳಿದುಬಂದಿದೆ. Operation Agileನಲ್ಲಿ ಐಐಟಿ ತಜ್ಞರು ಇದ್ದಾರೆ. Brand Nilekaniಯನ್ನು ಸಮರ್ಥವಾಗಿ ಮತದಾರರ ಮುಂದೆ ಬಿಂಬಿಸುವುದು Operation Agile ಗುರಿಯಾಗಿದೆ.
corporate sectorನಲ್ಲಿರುವ ಪರಿಣತರನ್ನು ಸಹ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ನಂದನ್ ನಿಲೇಕಣಿ ಲೆಕ್ಕಾಚಾರ ಹಾಕಿದ್ದಾರೆ. ಆದರೆ ಬರೀ IT/IIT ಗಳಿಂದಲೇ ಚುನಾವಣೆ ಗೆಲ್ಲಲಾಗುವುದಿಲ್ಲ. ನಂದನ್ ನೀಲೇಕಣಿ ಸ್ಥಳೀಯವಾಗಿ ಗುರುತಿಸಿಕೊಂಡಿಲ್ಲ. ಹಾಗಾಗಿ ಅವರಿಗೆ ಟಿಕೆಟ್ ನೀಡಬಾರದು ಎಂದು ಯುಬಿ ವೆಂಕಟೇಶ್ ಬೆಂಬಲಿಗರು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ.
ಗಮನಾರ್ಹವೆಂದರೆ KPCC ಚುನಾವಣಾ ಸಮಿತಿಯು ನಂದನ್ ನಿಲೇಕಣಿಗೇ ಟಿಕೆಟ್ ನೀಡುವಂತೆ ಹೈಕಮಾಂಡಿಗೆ ಸಲಹೆ ನೀಡಿದೆ. ಹಾಗಾಗಿ ಅಡಕತ್ತರಿಗೆ ಸಿಲುಕಿರುವ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ಕುತೂಹಲಕಾರಿಯಾಗಿದೆ












Click it and Unblock the Notifications