ಕುಡಿದು ಬುಲೆಟ್ ಓಡಿಸಿದ ಕ್ರಿಕೆಟ್ಟಿಗನ ದಾರುಣ ಅಂತ್ಯ
ಬೆಂಗಳೂರು, ಅ.28: ಶನಿವಾರ ಮಧ್ಯರಾತ್ರಿ. ಅಕ್ಷರಶಃ ಅದು ವೀಕೆಂಡ್ ಮದ್ಯರಾತ್ರಿ. ಕುಡಿದ ಅಮಲಿನಲ್ಲಿ ಬೈಕಿನಲ್ಲಿ ಜಾಲಿ ರೈಡ್ ಮಾಡುವ ಚಟ. ಪರಿಣಾಮ ಕ್ರಿಕೆಟನ್ನೂ ಜತೆಗೆ ತನ್ನ ಜೀವನವನ್ನೂ ಬಾಳಿ ಬೆಳಗಬೇಕಾದ ಯುವ ಪ್ರತಿಭೆ ಮರಳಿ ಬಾರದ ಲೋಕ ಸೇರಿಕೊಂಡಿದೆ.
ರಾಜ್ಯದ ಉದಯೋನ್ಮುಖ ಯುವ ಕ್ರಿಕೆಟಿಗ, ಕುಂದಾಪುರ ಮೂಲದ ಉಮೇಶ್ ಕೂಗ್ಗ ಖಾರ್ವಿ (27) ಬೆಂಗಳೂರಿನಲ್ಲಿ ರಸ್ತೆ ಅಪಘಾತದಲ್ಲಿ ದುರಂತ ಸಾವು ಕಂಡಿದ್ದಾರೆ. ಹೆಲ್ಮೆಟ್ ಧರಿಸದೆ, ಕುಡಿದ ಅಮಲಿನಲ್ಲಿ ವೇಗವಾಗಿ ಬೈಕ್ ಓಡಿಸಿದ್ದೇ ದುರಂತ ಸಂಭವಿಸಲು ಕಾರಣ ಎಂದು ಸಂಚಾರ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಖಾರ್ವಿ, ಖಾಸಗಿ ಕಂಪನಿಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ವೆಸ್ಟ್ ಆಫ್ ಕಾರ್ಡ್ ರೋಡ್ ಮಂಜುನಾಥ ನಗರ ಬಳಿ ನಡೆದ ಈ ಅಪಘಾತದಲ್ಲಿ ಬನಶಂಕರಿ ದತ್ತಾತ್ರೇಯನಗರ ನಿವಾಸಿ, ಪಿಲ್ಲಿಯನ್ ರೈಡರ್ ಮಿಥುನ್ ಕುಮಾರ್ (23) ಕೈ ಮತ್ತು ಮುಖಕ್ಕೆ ಪೆಟ್ಟಾಗಿದೆ.
ಉಮೇಶ್ ಖಾರ್ವಿ ಸ್ನೇಹಿತರೊಂದಿಗೆ ಗಾಯತ್ರಿ ನಗರದಲ್ಲಿ ಮನೆ ಮಾಡಿಕೊಂಡಿದ್ದರು. ಶನಿವಾರ ರಜಾ ದಿನವಾದ್ದರಿಂದ ಸ್ನೇಹಿತ ಮಿಥುನ್ ಜತೆ ಸೇರಿ ಮನೆಯಲ್ಲಿ 'ಗುಂಡು ಪಾರ್ಟಿ' ನಡೆಸಿದ್ದರು. ಬಳಿಕ ರಾಯಲ್ ಎನ್ ಫಿಲ್ಡ್ ಬೈಕ್ ನಲ್ಲಿ ಮಧ್ಯರಾತ್ರಿ 12 ಗಂಟೆ ಸುಮಾರಿನಲ್ಲಿ ಜಾಲಿರೈಡ್ ಹೊರಟಿದ್ದರು.
ಮಂಜುನಾಥ ನಗರದ ಶ್ರೀ ನಿಧಿ ವೈನ್ಸ್ ಮುಂಭಾಗ ಬರುವಾಗ ಜೋಲಿ ತಪ್ಪಿದ ಉಮೇಶ್, ಬೈಕ್ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾರೆ. ಸೀದಾ ಫುಟ್ ಪಾತ್ ಪಕ್ಕದ ಮರಕ್ಕೆ ಗಾಡಿಯನ್ನು ಗುದ್ದಿದ್ದಾರೆ. ಕೆಳಗೆ ಬಿದ್ದ ಉಮೇಶನ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಗಾಯಗೊಂಡ ಮಿಥುನ್ ಅವರನ್ನು ಸಾರ್ವಜನಿಕರು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಆ ವೇಳೆಗೆ ಆತನ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಗಾಯಾಳು ಮಿಥುನ್ ನೀಡಿರುವ ಹೇಳಿಕೆ ಪ್ರಕಾರ ಇಬ್ಬರೂ ಕುಡಿದ ಅಮಲಿನಲ್ಲಿ ಜಾಲಿ ರೈಡ್ ಹೋಗುತ್ತಿದ್ದರು. ಈ ವೇಳೆ ನಿಯಂತ್ರಣ ಕಳೆದುಕೊಂಡ ಬೈಕ್ ಮರಕ್ಕೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ ಎಂದು ವಿಜಯ ನಗರ ಠಾಣೆಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಖಾರ್ವಿ 'ಆಲ್ ರೌಂಡರ್' ಆಗಿ ಮಿಂಚುತ್ತಿದ್ದರು. ಬಲಗೈ ಬ್ಯಾಟ್ಸ್ ಮನ್ ಮತ್ತು ಬಲಗೈ ವೇಗದ ಬೌಲರ್ ಆಗಿ ಹಲವು ಪಂದ್ಯಾವಳಿಗಳನ್ನು ಆಡಿದ್ದರು. 2002-03ರಲ್ಲಿ ಕರ್ನಾಟಕದ 17 ವರ್ಷದೊಳಗಿನ ತಂಡದಲ್ಲಿ ಸ್ಥಾನ ಪಡೆದಿದ್ದರು. 2003-04ರಲ್ಲಿ 19 ವರ್ಷದೊಳಗಿನವರ ಕರ್ನಾಟಕ ತಂಡ ಪ್ರತಿನಿಧಿಸಿದ್ದರು. ಇದೇ ಅವಧಿಯಲ್ಲಿ 17 ವರ್ಷದೊಳಗಿನ ರಾಷ್ಟ್ರೀಯ ಮಟ್ಟದಲ್ಲಿ, 2007-08ರಲ್ಲಿ 22 ವರ್ಷದೊಳಗಿನವರ ರಾಜ್ಯ ತಂಡದಲ್ಲಿ ಆಡುವ ಮೂಲಕ ಭರವಸೆ ಮೂಡಿಸಿದ್ದರು.
ಸದ್ಯ ಬೆಂಗಳೂರಿನ ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್ ಪರ ಆಟವಾಡುತ್ತಿದ್ದರು. ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿ ಮಂಗಳೂರು ಯುನೈಟೆಡ್ ನಲ್ಲೂ ಸ್ಥಾನ ಪಡೆದಿದ್ದರು. ವಿರಾಟ್ ಕೊಹ್ಲಿ, ರಾಬಿನ್ ಉತ್ತಪ್ಪ, ಆರ್ ಅಶ್ವಿನ್ ಜತೆ ಆಡಿರುವ ಇವರು, ಪ್ರಸ್ತುತ ಕರ್ನಾಟಕ 'ಎ' ಡಿವಿಜನ್ ಆಟಗಾರ. ರಣಜಿ ತಂಡದ ಸಂಭವನೀಯ ಆಟಗಾರರಾಗಿ ಹೊರಹೊಮ್ಮಿದ್ದರು.
ಉಮೇಶ್ ಅವರಿಗೆ ತಾಯಿ, ತಂದೆ, ಸಹೋದರ ಹಾಗೂ ಇಬ್ಬರು ಸಹೋದರಿಯರು ಇದ್ದಾರೆ. ಕುಂದಾಪುರ ಮದ್ದುಗುಡ್ಡೆಯ ಕೊಗ್ಗ ಖಾರ್ವಿ ಮತ್ತು ಯಶೋದಾ ಖಾರ್ವಿ ದಂಪತಿಯ ಮಗನಾದ ಉಮೇಶ್, ಬಾಲ್ಯದಿಂದಲೂ ಕ್ರಿಕೆಟಿನತ್ತ ಗಮನಹರಿಸಿದ್ದರು. ಇವರಿಗೆ ಕುಂದಾಪುರದ ಚಕ್ರವರ್ತಿ ಕ್ರಿಕೆಟ್ ಕ್ಲಬ್ ಪ್ರೋತ್ಸಾಹ ನೀಡಿತ್ತು.
ಇವರ ಕ್ರಿಕೆಟ್ ಪ್ರೌಢಿಮೆ ಕಂಡು ಕುಂದಾಪುರದ ಕ್ರೀಡಾ ಪ್ರೋತ್ಸಾಹಕ ಪ್ರಶಾಂತ್ ತೋಳಾರ್ ಸಹಕಾರ ನೀಡಿದ್ದರು. ಕುಂದಾಪುರದ ಬೋರ್ಡ್ ಹೈಸ್ಕೂಲ್ನಲ್ಲಿ ಶಿಕ್ಷಣ ಪಡೆದು ಮುಂದೆ ಕ್ರಿಕೆಟ್ಗೆ ಹೆಚ್ಚಿನ ಆದ್ಯತೆ ನೀಡಿದ್ದ ಇವರು, ಮಂಗಳೂರು ವಿವಿ ವಲಯ ಪರ ಆಡಿದ್ದರು. ಭಾರತದ ಭರವಸೆಯ ವೇಗದ ಬೌಲರ್ ಎಂದೇ ಬಿಂಬಿತಗೊಂಡಿದ್ದ ಇವರಿಗೆ ರಾಬಿನ್ ಸಿಂಗ್ ಬೌಲಿಂಗ್ ಕೋಚ್ ಆಗಿದ್ದರು.












Click it and Unblock the Notifications