ಕೊರೊನಾ ಏರಿಕೆ; ಕರ್ನಾಟಕದಲ್ಲಿ 15 ದಿನಗಳವರೆಗೆ ಪಾರ್ಟಿ, ಜಾಥಾಗೆಲ್ಲಾ ಬ್ರೇಕ್
ಬೆಂಗಳೂರು, ಮಾರ್ಚ್ 29: ಕರ್ನಾಟಕದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಮುಂದಿನ ಹದಿನೈದು ದಿನಗಳ ಕಾಲ ಯಾವುದೇ ಪ್ರತಿಭಟನೆ, ಜಾಥಾ ಅಥವಾ ಜನ ಸೇರುವ ಸಮಾರಂಭ ನಡೆಸದಂತೆ ರಾಜ್ಯ ಸರ್ಕಾರ ಆದೇಶಿಸಿದೆ.
ಸೋಮವಾರ ಈ ಆದೇಶ ಹೊರಡಿಸಿದ್ದು, ಇಂದಿನಿಂದ ಮುಂದಿನ ಹದಿನೈದು ದಿನಗಳವರೆಗೆ ಪ್ರತಿಭಟನೆ, ಸಮಾವೇಶ, ಜಾಥಾಗಳಿಗೆ ಅನುಮತಿ ಇಲ್ಲ. ಅಪಾರ್ಟ್ಮೆಂಟ್ಗಳಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿವೆ. ಹೀಗಾಗಿ ಪಾರ್ಟಿ, ಇನ್ನಿತರ ಆಚರಣೆಗೂ ಅವಕಾಶವಿಲ್ಲ ಎಂದು ಸರ್ಕಾರ ಜನರಿಗೆ ತಿಳಿಸಿದೆ. ಮುಂದೆ ಓದಿ...

ಯಾವುದೇ ಕಾರಣಕ್ಕೂ ಲಾಕ್ಡೌನ್ ಮಾಡಲ್ಲ
ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿವೆ. ಬೆಂಗಳೂರಿನಲ್ಲಿ ಗರಿಷ್ಠ ಮಟ್ಟದಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಆದರೆ ಯಾವುದೇ ಕಾರಣಕ್ಕೂ ಲಾಕ್ಡೌನ್ ಮಾಡುವುದಿಲ್ಲ. ಮಾಸ್ಕ್ ಧರಿಸದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸರ್ಕಾರ ಸೂಚಿಸಿದೆ.

ಶಾಲೆ ಕಾಲೇಜುಗಳನ್ನು ಮುಚ್ಚುವುದಿಲ್ಲ
ಕೊರೊನಾ ಏರಿಕೆಯಾಗುತ್ತಿದೆ. ಆದರೆ ನಿಯಂತ್ರಣ ಕೆಲಸವೂ ನಡೆಯುತ್ತಿದೆ. ಹೀಗಾಗಿ ಶಾಲೆ, ಕಾಲೇಜುಗಳನ್ನು ಮುಚ್ಚುವುದಿಲ್ಲ. ಶಾಲೆಗಳನ್ನು ಮುಚ್ಚುವ ಕುರಿತು ಸಲಹೆ ಕೇಳಿದ್ದೆವು. ಪರೀಕ್ಷೆಗಳು ಮುಗಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ. ಕೊರೊನಾ ಪ್ರಕರಣಗಳ ಏರಿಕೆ ಹಾಗೂ ಪರಿಸ್ಥಿತಿಯ ನಿಯಂತ್ರಣಕ್ಕೆ ಸರ್ಕಾರ ಸಮಿತಿ ರಚಿಸಿದೆ. ಬಿಬಿಎಂಪಿ ಆಯುಕ್ತರನ್ನೊಳಗೊಂಡಂತೆ ಎಂಟು ಐಎಎಸ್ ಅಧಿಕಾರಿಗಳು, ಆಡಳಿತಾಧಿಕಾರಿಗಳು ಈ ಸಮಿತಿಯಲ್ಲಿರುವರು ಎಂದು ತಿಳಿದುಬಂದಿದೆ.

ನಾಲ್ಕು ತಿಂಗಳ ನಂತರ ಮೂರು ಸಾವಿರ ಸಮೀಪದಲ್ಲಿ ಕೊರೊನಾ
ನಾಲ್ಕು ತಿಂಗಳ ನಂತರ ಕರ್ನಾಟಕದಲ್ಲಿ ಮೂರು ಸಾವಿರ ಸಮೀಪಕ್ಕೆ ಕೊರೊನಾ ಪ್ರಕರಣಗಳು ದಾಖಲಾಗಿವೆ. ಭಾನುವಾರದ ಪ್ರಕರಣ ಒಳಗೊಂಡಂತೆ ರಾಜ್ಯದಲ್ಲಿ 9.87 ಲಕ್ಷದವರೆಗೆ ಪ್ರಕರಣ ಏರಿಕೆಯಾಗಿದ್ದು, ಕೊರೊನಾದಿಂದ ಇದುವರೆಗೂ 12,504 ಮಂದಿ ಮೃತಪಟ್ಟಿದ್ದಾರೆ. ನವೆಂಬರ್ 5ರಂದು ರಾಜ್ಯದಲ್ಲಿ 3,156 ಪ್ರಕರಣಗಳು ದಾಖಲಾಗಿದ್ದು, ಇದೀಗ ಮತ್ತೆ ಮೂರು ಸಾವಿರಕ್ಕೆ ತಲುಪಿದೆ.
Recommended Video

ರಾಜ್ಯದಲ್ಲಿ 2792 ಜನರಿಗೆ ಕೊವಿಡ್-19 ಸೋಂಕು
ಕರ್ನಾಟಕದಲ್ಲಿ ಸೋಮವಾರ ಒಂದೇ ದಿನ 2792 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 989804ಕ್ಕೆ ಏರಿಕೆಯಾಗಿದ್ದು, 2,3849 ಸಕ್ರಿಯ ಪ್ರಕರಣಗಳಿವೆ. 24 ಗಂಟೆಗಳಲ್ಲಿ 16 ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.












Click it and Unblock the Notifications