ಚುಂಚಶ್ರೀ ಹುಟ್ಟೂರಾದ ಬಾನಂದೂರು ಅಭಿವೃದ್ಧಿಗೆ ಕ್ರಮ: ಸಿಎಂ
ಮಂಡ್ಯ,ಜನವರಿ,19: ಆದಿಚುಂಚನಗಿರಿ ಮಠದ ರೂವಾರಿಗಳಾದ ಬಾಲಗಂಗಾಧರನಾಥ ಶ್ರೀಗಳ ಹುಟ್ಟೂರಾದ ರಾಮನಗರ ತಾಲೂಕು ಬಿಡದಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾನಂದೂರು ಗ್ರಾಮವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ನಾಗಮಂಗಲ ತಾಲೂಕು ಶ್ರೀಕ್ಷೇತ್ರ ಆದಿಚುಂಚನಗಿರಿಯಲ್ಲಿ ಆಯೋಜಿಸಿದ್ದ ಪದ್ಮಭೂಷಣ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರ 71ನೇ ಜಯಂತೋತ್ಸವ ಹಾಗೂ ಶ್ರೀ ಗುರುನಮನ - ಭಕ್ತ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.[ಆದಿಚುಂಚನಗಿರಿ ಏಳಿಗೆ ರೂವಾರಿಯೇ ಬಾಲಗಂಗಾಧರರು]
ಪ್ರಾಥಮಿಕ ಶಿಕ್ಷಣದಿಂದ ತಾಂತ್ರಿಕ, ವೈದ್ಯಕೀಯ ಶಿಕ್ಷಣದವರೆಗೆ ಎಲ್ಲಾ ಪ್ರಕಾರ ಶಿಕ್ಷಣವನ್ನು ನೀಡುವ ಆದಿಚುಂಚನಗಿರಿ ಮಠದ ಶೈಕ್ಷಣಿಕ ಸಂಸ್ಥೆಗಳಲ್ಲಿ 1.25 ಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಸಂಸ್ಥೆಗಳಲ್ಲಿ ಜಾತ್ಯಾತೀತ, ಸೀಮಾತೀತವಾಗಿ ಎಲ್ಲಾ ವರ್ಗದ ಮಕ್ಕಳು ಕಲಿಯುತ್ತಿರುವುದೇ ಈ ಸಂಸ್ಥೆಯ ಹೆಗ್ಗಳಿಕೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.[ಕೆಆರ್.ಪೇಟೆ ಸರ್ಕಾರಿ ಶಾಲಾ ಮಕ್ಕಳಿಗೆ ಆಕಾಶವೇ ಸೂರು!]
ಬಾಲಗಂಗಾಧರನಾಥ ಶ್ರೀಗಳಿಗೆ ಪ್ರಕೃತಿ, ನಿಸರ್ಗದ ಬಗ್ಗೆ ಅಪಾರ ಪ್ರೀತಿ ಇತ್ತು. ಜನರಿಗೆ ಧಾರ್ಮಿಕ ಜಾಗೃತಿ, ಶಿಕ್ಷಣ ಸಿಗಬೇಕಾದರೆ ನಿಸರ್ಗದ ಪ್ರೀತಿ ಬೇಕು ಎಂಬುದನ್ನು ಅವರು ತೋರಿಸಿದರು. ಹಸಿರು ಕ್ರಾಂತಿಗೆ ಹೆಚ್ಚು ಒತ್ತು ಕೊಟ್ಟಿದ್ದ ಅವರು 5 ಕೋಟಿ ಗಿಡಗಳನ್ನು ನೆಟ್ಟು ಮರ ಬೆಳೆಸುವುದನ್ನು ಯಜ್ಞದ ರೀತಿಯಲ್ಲಿ ಮಾಡಿದರು ಎಂದು ಹೇಳಿದರು.
ಹಿಂದಿನ ಶ್ರೀಗಳ ಹಾದಿಯಲ್ಲೇ ಪ್ರಸ್ತುತ ಪೀಠಾಧ್ಯಕ್ಷರಾಗಿರುವ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಸಾಗುತ್ತಿದ್ದಾರೆ. ಅವರು ಮಠದ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ, ಮಠ ಜಾತ್ಯಾತೀತವಾಗಿ ಮತ್ತಷ್ಟು ಏಳಿಗೆ ಹೊಂದಲಿ ಎಂದು ಹಾರೈಸಿದ ಮುಖ್ಯಮಂತ್ರಿಗಳು, ಮಠದ ಅಭಿವೃದ್ಧಿಗೆ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದರು.[ಆರ್ ಟಿಇಯಡಿ ಎಲ್ ಕೆಜಿ, ಯುಕೆಜಿ ಪ್ರವೇಶಕ್ಕೆ ತಡೆ ನೀಡಿದ ಹೈಕೋರ್ಟ್]
ಆದಿಚುಂಚನಗಿರಿ ಸೇರಿದಂತೆ ಸುತ್ತಮುತ್ತಲಿನ 125 ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಯೋಜನೆ ಅನುಷ್ಟಾನ ಹಾಗೂ ಮಠದ ಸುತ್ತ ಇರುವ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ಶಾಸಕರಾದ ಎನ್. ಚಲುವರಾಯಸ್ವಾಮಿ ಅವರು ಮನವಿ ಮಾಡಿದ್ದು, ಈ ಯೋಜನೆ ಅನುಷ್ಟಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.