ತಾಕತ್ತಿದ್ದರೆ ಸಿಡಿಯಲ್ಲಿರುವ ಧ್ವನಿ ನಮ್ಮದಲ್ಲ ಎನ್ನಿ, ಬಿಜೆಪಿಗರಿಗೆ ಉಗ್ರಪ್ಪ ಸವಾಲ್
Recommended Video

ಬೆಂಗಳೂರು, ಮೇ 21: ಕಾಂಗ್ರೆಸ್ ಬಿಡುಗಡೆ ಮಾಡಿದ 'ಕುದುರೆ ವ್ಯಾಪಾರ'ದ ಸಿಡಿ ನಕಲಿ ಎಂದಿದ್ದ ಬಿಜೆಪಿಯವರಿಗೆ ವಿಧಾನ ಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ಸವಾಲು ಹಾಕಿದ್ದಾರೆ. ಅದರಲ್ಲಿರುವ ಧ್ವನಿ ನಮ್ಮದಲ್ಲ ಎಂದು ತಾಕತ್ತು, ಧಂ ಇದ್ದರೆ ಹೇಳಿ ನೋಡೋಣ ಎಂದು ಅವರು ಚಾಲೆಂಜ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು "ಯಡಿಯೂರಪ್ಪ ವಿಶ್ವಾಸಮತ ಯಾಚನೆ ಮಾಡದೇ ರಾಜೀನಾಮೆ ನೀಡಿರುವುದು ಅಮಿತ್ ಶಾ, ನರೇಂದ್ರ ಮೋದಿಯವರ ಸೋಲು ಮತ್ತು ಪ್ರಜಾಪ್ರಭುತ್ವ, ಜಾತ್ಯಾತೀತತೆಯ ಜಯ. ನಮ್ಮ ಮತ್ತು ಜೆಡಿಎಸ್ ಶಾಸಕರು ಬಿಜೆಪಿಯ ಆಮಿಷಗಳಿಗೆ ಮಣಿಯದೆ ಗಟ್ಟಿಯಾಗಿ ನಿಂತು ದೇಶದಲ್ಲೇ ಬಿಜೆಪಿ ಅವಸಾನಕ್ಕೆ ಮುನ್ನುಡಿ ಬರೆದಿದ್ದಾರೆ ಎಂದು ಭಾವಿಸುತ್ತೇನೆ," ಎಂದರು.
"ಒಂದು ಕಡೆ 104, ಇನ್ನೊಂದು ಕಡೆ 118 ಶಾಸಕರು ಇರುವಾಗ ಬಿಜೆಪಿಗೆ ಸರಕಾರ ರಚನೆ ಮಾಡಲು ಕುದುರೆ ವ್ಯಾಪಾರ ಮಾಡುವುದು ಬಿಟ್ಟು ಬೇರೆ ದಾರಿಯೇ ಇರಲಿಲ್ಲ. ಸ್ವತಃ ಯಡಿಯೂರಪ್ಪನವರೇ ಒಪ್ಪಿಕೊಳ್ಳುತ್ತಾರೆ, ಮನಃ ಸಾಕ್ಷಿಯಂತೆ ಮತ ಹಾಕಿ ಎಂದು ಶಾಸಕರನ್ನು ಸಂಪರ್ಕಿಸಿದ್ದೇವೆ ಎಂದು. ಸಂವಿಧಾನದ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪನವರಿಗೆ ಹೀಗೆ ಮತ ಹಾಕಲು ಆಗುವುದಿಲ್ಲ ಎಂದು ಗೊತ್ತಿಲ್ಲವೇ? ಅಮಿತ್ ಶಾ, ಮೋದಿಗೆ ಗೊತ್ತಿಲ್ಲವೇ?" ಎಂದು ಅವರು ಪ್ರಶ್ನಿಸಿದರು.

ಇದರಿಂದ ಅವರು ಸಂವಿಧಾನದ ವಿರೋಧವಾಗಿ ಆಪರೇಷನ್ ಕಮಲ, ಕುದುರೆ ವ್ಯಾಪಾರ ಮಾಡಲು ಹೊರಟಿದ್ದರು ಎಂಬುದು ಸ್ಪಷ್ಟವಾಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಂತರ ಯಲ್ಲಾಪುರ ಶಾಸಕ ಅರೆಬೈಲ್ ಶಿವರಾಮ್ ಹೆಬ್ಬಾರ್ ಅವರ ಪತ್ನಿಯದ್ದು ಎನ್ನಲಾದ ಸಿಡಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, "ನಾನು ಕಳೆದ 35 ವರ್ಷಗಳಿಂದ ವಕೀಲಿಕೆ ಮಾಡಿಕೊಂಡು ಬಂದಿದ್ದೇನೆ. ನನ್ನ ಬದುಕಿನಲ್ಲಿ ಸೃಷ್ಟಿ ಮಾಡುವಂಥ ನೀಚ ಕೃತ್ಯ ಮಾಡಿಲ್ಲ. ಮಾಡುವುದೂ ಇಲ್ಲ. ತಮ್ಮ ಬಂಡವಾಳ ದೇಶದಲ್ಲಿ ಬಯಲಾಗುತ್ತಿದ್ದಂತೆ ಬಿಜೆಪಿಗರು ಇದು ಸುಳ್ಳು, ನಕಲಿ ಸೃಷ್ಟಿ ಮಾಡಿದ ಸಿಡಿ ಎನ್ನುತ್ತಿದ್ದಾರೆ," ಎಂದು ಕಿಡಿಕಾರಿದರು.
"ನಾನು ಈ ಸಂದರ್ಭದಲ್ಲಿ ಸವಾಲು ಹಾಕುತ್ತಿದ್ದೇನೆ. ತಾಕತ್ತು ಇದ್ದರೆ, ಧಂ ಇದ್ದರೆ ಸಿಡಿಯಲ್ಲಿರುವ ಧ್ವನಿ ಬಿಜೆ ಪುಟ್ಟಸ್ವಾಮಿ, ಬಿ. ವೈ. ವಿಜಯೇಂದ್ರ ಅವರಿದ್ದು ಅಲ್ಲ ಎಂದು ಸಾಬೀತು ಮಾಡಿ. ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡುತ್ತೇನೆ. ಸಾಬೀತಾದರೆ ನಾನು ಸಾರ್ವಜನಿಕ ಬದುಕಿನಲ್ಲಿ 5 ನಿಮಿಷವೂ ಇರುವುದಿಲ್ಲ," ಎಂದು ಸವಾಲೆಸೆದರು.
"ನಾನು ಇದು ಯಾವ ಮಹಿಳೆಯ ಧ್ವನಿ, ಯಾವ ಶಾಸಕರಿಗೆ ಸಂಬಂಧಿಸಿದ್ದು ಎಂದು ಹೇಳಿಲ್ಲ. ಇದು ಕುಟುಕು ಕಾರ್ಯಾಚರಣೆ ಎಂದು ಮೊದಲಿಗೇ ಹೇಳಿದ್ದೇನೆ. ಹೆಸರು ಯಾಕೆ ಬಹಿರಂಗಡಿಸುತ್ತಿಲ್ಲ ಅಂದರೆ ಅವರಿಗೆ ಜೀವ ಬೆದರಿಕೆ ಇದೆ," ಎಂದು ವಿವರಿಸಿದರು.
"ಇನ್ನು ಸಿಡಿಯಲ್ಲಿರುವ ಧ್ವನಿ ಫೇಸ್ಬುಕ್ ನಲ್ಲಿ ಯಾರು ಬರೆದುಕೊಂಡಿದ್ದಾರೋ (ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್) ಅವರ ಧರ್ಮಪತ್ನಿಯದ್ದಲ್ಲ. ಕೊನೆಯ ಕ್ಷಣದಲ್ಲಿ ಬಿಜೆಪಿಯವರು ಹತಾಶರಾಗಿ ಯಾವುದೋ ಚಾನಲ್ ನಲ್ಲಿರುವವರ ಜೊತೆಗೆ ಯಾರಾದರೂ ಇದ್ದರೆ ಹೇಳಿ ಎಂದು ಬಂದಾಗ ಶಾಸಕರ ಶ್ರೀಮತಿ ಎಂದು ಹೇಳಿ ಚಾನಲ್ ನ ರಿಪೋರ್ಟರ್ ಜೊತೆಗೆ ಮಾತನಾಡಿರುವ ಆಡಿಯೋ ಇದು. ಇದು ಕುಟುಕು ಕಾರ್ಯಾಚರಣೆ. ಇದು ನಿಮ್ಮ ಧ್ವನಿ ಅಲ್ಲ ಎಂದು ಹೇಳಲು ಮಿಸ್ಟರ್ ಪುಟ್ಟಸ್ವಾಮಿ ಸಿದ್ಧವಿದ್ದೀರಾ?," ಎಂದು ಉಗ್ರಪ್ಪ ಹರಿಹಾಯ್ದರು.
"ಮೊನ್ನೆಯೇ ಇದನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನಿರ್ದೇಶನದಲ್ಲಿ ತನಿಖೆಯಾಗಬೇಕು ಎಂದು ಹೇಳಿದ್ದೇನೆ. ಈ ಸಿಡಿಯನ್ನೇ ಸುಳ್ಳು ಎನ್ನುತ್ತಿದ್ದಾರೆ. ಅಮಿತ್ ಶಾ ಮತ್ತು ಬಿಜೆಪಿಯವರು ಗೂಬೆಲ್ಸ್ ನ (ಜೋಸೆಫ್ ಗೂಬೆಲ್ಸ್ - ಹಿಟ್ಲರ್ ಸಂಪುಟದ ಸಚಿವ) ಮೊಮ್ಮಕ್ಕಳು," ಎಂದು ವಾಗ್ದಾಳಿ ನಡೆಸಿದರು.
ಕುಟುಕು ಕಾರ್ಯಾಚರಣೆ ಯಾವ ಸಂದರ್ಭದಲ್ಲಿ ಮಾಡಿದರು ಎಂಬುದು ಮುಖ್ಯ ಅಲ್ಲ. ಈ ಘಟನೆ ಗೊತ್ತಾದಾಗ ತಪ್ಪಾಗಿದೆ ಎಂದು ಮೋದಿ ಈ ರಾಜ್ಯದ ಜನರ ಕ್ಷಮೆ ಯಾಚಿಸುತ್ತಾರೆ ಎಂದು ಭಾವಿಸಿದ್ದೆ. ಇದೇ ವೇಳೆ ಬಿಸಿ ಪಾಟೀಲರ ಜೊತೆಗೆ ಮುರಳೀಧರ್ ರಾವ್, ಶ್ರೀರಾಮುಲು, ಯಡಿಯೂರಪ್ಪ ಮಾತನಾಡಿದ್ದಾರೆ. ನಾನೂ ಕ್ರಿಮಿನಲ್ ಎವಿಡೆನಸ್ ಬಗ್ಗೆ ಓದಿಕೊಂಡಿದ್ದೇನೆ. ಹೀಗೆ ಗೂಬೆಲ್ಸ್ ರೀತಿ ಸುಳ್ಳು ಹಬ್ಬಿಸಲು ಹೋಗಬೇಡಿ ಎಂದು ಕಿಡಿಕಾರಿದರು.
"ಇವರಲ್ಲಿ ಜಾವ್ಡೇಕರ್, ಮುರಳೀಧರ್ ರಾವ್, ಯಡಿಯೂರಪ್ಪ, ಸದಾನಂದ ಗೌಡ, ಅನಂತ್ ಕುಮಾರ್, ಬಿಜೆಪಿಯ ಎಲ್ಲರ ಪಾತ್ರ ಇದೆ. ಆದರೆ ಇಲ್ಲಿಯವರೆಗೆ ಉಸಿರೇ ಬಿಡದಿದ್ದನ್ನು ನೋಡಿದರೆ ಇವರನ್ನು ಏನೆಂದು ಹೇಳಬೇಕು?," ಎಂದ ಅವರು, 'ನಾನು ಹೇಳುವುದು ಇಷ್ಟೇ. ಇದು ಬಿಜೆಪಿ ಪತನದ ಆರಂಭ' ಎಂದರು.












Click it and Unblock the Notifications