ಆಪರೇಷನ್ ಕಮಲ : ಆಡಿಯೋ ಸಿಡಿ ಬಗ್ಗೆ ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ
ಬೆಂಗಳೂರು, ಡಿಸೆಂಬರ್ 05 : ರಾಜ್ಯ ರಾಜಕಾರಣದಲ್ಲಿ ಆಡಿಯೋವೊಂದು ದೊಡ್ಡ ಸದ್ದು ಮಾಡುತ್ತಿದೆ. ಬಿ.ಶ್ರೀರಾಮುಲು ಅವರ ಆಪ್ತ ಸಹಾಯಕ ಎನ್ನಲಾದ ವ್ಯಕ್ತಿ ದುಬೈ ಮೂಲದ ವ್ಯಕ್ತಿಜೊತೆ ಮಾತುಕತೆ ನಡೆಸಿರುವ ಆಡಿಯೋ ವೈರಲ್ ಆಗಿದೆ.
ಕರ್ನಾಟಕದ ಪ್ರತಿಪಕ್ಷ ಬಿಜೆಪಿ ಸೋಮವಾರ ಬಿಡುಗಡೆಯಾದ ಆಡಿಯೋ ಸಿಡಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಸರ್ಕಾರವೇ ನಕಲಿ ಆಡಿಯೋವನ್ನು ಬಿಡುಗಡೆ ಮಾಡಿ, ಜನರ ಅನುಕಂಪ ಗಿಟ್ಟಿಸಲು ಪ್ರಯತ್ನ ನಡೆಸಿದೆ ಎಂದು ದೂರಿದೆ.

ಬಿಜೆಪಿ ವಕ್ತಾರ ಸಿ.ಟಿ.ರವಿ ಅವರು, 'ಸರ್ಕಾರವೇ ನಕಲಿ ಆಡಿಯೋ ಬಿಡುಗಡೆ ಮಾಡಿದೆ. ಆಪರೇಷನ್ ಕಮಲ ನಡೆಸುವ ಅಗತ್ಯ ಬಿಜೆಪಿಗೆ ಇಲ್ಲ. ಆಡಿಯೋ ಸಿಡಿ ಬಗ್ಗೆ ಸರ್ಕಾರ ಬೇಕಾದರೆ ಸಿಬಿಐ ತನಿಖೆಗೆ ಆದೇಶ ಮಾಡಲಿ' ಎಂದು ಸವಾಲು ಹಾಕಿದರು.
ಬಿ.ಶ್ರೀರಾಮುಲು ಅವರು ಕೂಡಾ ಆಡಿಯೋ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. 'ನನ್ನ ಆಪ್ತ ಸಹಾಯಕನಿಗೆ ಹಿಂದಿ ಬರುವುದಿಲ್ಲ. ಹೀಗಾಗಿ ದುಬೈ ಉದ್ಯಮಿಯನ್ನು ಸಂಪರ್ಕಿಸುವ ಪ್ರಶ್ನೆ ಇಲ್ಲ. ಒಂದೊಮ್ಮೆ ಸಂಪರ್ಕಿಸಬೇಕಿದ್ದರೆ ನೇರವಾಗಿಯೇ ಮಾತನಾಡುತ್ತೇವೆ' ಎಂದು ಹೇಳಿದ್ದಾರೆ.
ಶ್ರೀರಾಮುಲು ಅವರ ಆಪ್ತ ಸಹಾಯಕ ಮಂಜುನಾಥ ಎಂಬುವವರು ದುಬೈ ಉದ್ಯಮಿ ಜೊತೆ ನಡೆಸಿದ ಮಾತುಕತೆಯ ಆಡಿಯೋ ಸೋಮವಾರ ಬಹಿರಂಗವಾಗಿತ್ತು. 25 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರಲಿದ್ದಾರೆ, ಅದಕ್ಕೆ ಅಪಾರ ಪ್ರಮಾಣದ ಹಣ ಬೇಕು ಎಂದು ಮಾತುಕತೆ ನಡೆದಿತ್ತು.












Click it and Unblock the Notifications