ಖಳನಟ ಸತ್ಯಜಿತ್ ಮೇಲೆ ಹಲವರಿಂದ ಹಲ್ಲೆ
ಹುಬ್ಬಳ್ಳಿ, ಜ. 1: ಖಳ ನಟರು ಸಿನಿಮಾದಲ್ಲಿ ಹೀರೊಗಳಿಂದ ಏಟು ತಿನ್ನುವುದು ಸಾಮಾನ್ಯ. ಆದರೆ, ಕನ್ನಡದ ಖ್ಯಾತ ಖಳನಟ ಸತ್ಯಜಿತ್ ಅಲಿಯಾಸ್ ಸಯ್ಯದ್ ಹೊಸ ವರ್ಷದ ಹೊಸ್ತಿಲಲ್ಲಿ ಜನರಿಂದಲೂ ಏಟು ತಿಂದಿದ್ದಾರೆ.
ಹೊಸ ವರ್ಷದ ಸಂಭ್ರಮಾಚರಣೆ ಮುಗಿಸಿಕೊಂಡು ಮಧ್ಯರಾತ್ರಿ 1 ಗಂಟೆ ಸಮಯದಲ್ಲಿ ಮನೆಗೆ ವಾಪಸ್ ಬರುತ್ತಿದ್ದಾಗ ಹುಬ್ಬಳ್ಳಿಯ ನವನಗರದಲ್ಲಿ ನನ್ನ ಮೇಲೆ ಹಲವರು ದಾಳಿ ನಡೆಸಿದ್ದಾರೆಂದು ನಟ ಸತ್ಯಜಿತ್ ದೂರಿದ್ದಾರೆ.
ಆಗಿದ್ದೇನು ?: ಧಾರವಾಡದಲ್ಲಿ ಸ್ನೇಹಿತರು ಆಯೋಜಿಸಿದ್ದ ಹೊಸ ವರ್ಷದ ಪಾರ್ಟಿಯಲ್ಲಿ ಸತ್ಯಜಿತ್ ಪಾಲ್ಗೊಂಡಿದ್ದರು. ಪಾರ್ಟಿ ಮುಗಿದ ಮೇಲೆ ತಮ್ಮ ಸಹೋದರರೊಂದಿಗೆ ವಾಪಸ್ ಬರುತ್ತಿದ್ದಾಗ ಇವರ ಕಾರಿಗೆ ಮತ್ತೊಂದು ಕಾರು ಗುದ್ದಿದೆ. ಆಗ ಆ ಕಾರಿನಲ್ಲಿದ್ದವರು ಸತ್ಯಜಿತ್ ಅವರನ್ನು ನಿಂದಿಸಿದ್ದಾರೆ. ಮಾತಿಗೆ ಮಾತು ಬೆಳೆದು ಹೊಡೆದಾಟ ಸಂಭವಿಸಿದೆ.
ಅಲ್ಲಿದ್ದ ಕೆಲವರು ಕಲಹ ತಪ್ಪಿಸಲು ಪ್ರಯತ್ನಿಸಿದರು. ಆದರೆ, ಪೊಲೀಸರು ಬಂದು ಹಲವರಿಗೆ ಲಾಠಿ ಏಟು ನೀಡಿದ ಮೇಲೆಯೇ ಜನರೆಲ್ಲ ಚದುರಿದ್ದಾರೆ.
ಸ್ವಲ್ಪ ಹೊತ್ತಿನ ನಂತರ ಸತ್ಯಜಿತ್ ಅವರು ಪೊಲೀಸ್ ಠಾಣೆಗೆ ಬಂದು ತಮ್ಮ ಚಿನ್ನದ ಸರ ಕಾಣೆಯಾಗಿದೆ ಎಂದು ದೂರಿದರು. "ನನ್ನ ಕಾರಿಗೆ ಗುದ್ದಿದವರು ನನ್ನಿಂದ ಚಿನ್ನದ ಸರ ಕಸಿದುಕೊಂಡಿದ್ದಾರೆ. ಅದನ್ನು ವಾಪಸ್ ಕೊಡಿಸಿ" ಎಂದು ಪೊಲೀಸರಲ್ಲಿ ಆಗ್ರಹಿಸಿದರು.
ಆ ಕಾರನ್ನು ಮಹಿಳೆಯೊಬ್ಬರು ಚಲಾಯಿಸುತ್ತಿದ್ದರು. ಜೊತೆಯಲ್ಲಿ ಇನ್ನೂ ಮೂವರು ಇದ್ದರು ಎಂದು ಸತ್ಯಜಿತ್ ತಿಳಿಸಿದ್ದಾರೆ.